Seetha Raama Serial: ಸೀತಾ ರಾಮ ಧಾರಾವಾಹಿ ಮುಕ್ತಾಯ: ನಟಿ ವೈಷ್ಣವಿ ಗೌಡ, ನಟ ಗಗನ್ ಚಿನ್ನಪ್ಪ ಹೇಳಿದ್ದೇನು ?
Seetha Raama Serial: ಕನ್ನಡ ಪ್ರಸಿದ್ಧ ಧಾರಾವಾಹಿಗಳಲ್ಲಿ ಒಂದಾಗಿದ್ದ ಸೀತಾ ರಾಮ ಧಾರಾವಾಹಿ ಮುಕ್ತಾಯವಾಗುತ್ತಿದೆ. ಚಿತ್ರತಂಡವೇ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಳ್ಳುತ್ತಿದ್ದಂತೆಯೇ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ನಟಿ ವೈಷ್ಣವಿ ಗೌಡ ಅವರ ಹೊಸ ಪ್ರಾಜೆಕ್ಟ್ನ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಮೊದ ಮೊದಲು ಕಿರುತೆರೆ ನೋಡುವವರಿಗೆ ಹಾಗೂ ಕನ್ನಡಿಗರಿಗೆ ತುಂಬಾ ಇಷ್ಟವಾಗಿದ್ದ ಸೀತಾ ರಾಮ ಧಾರವಾಹಿಯು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಸ್ವಲ್ಪ ಬೇಸರ ತರಿಸಿತ್ತು. ಸಿಹಿ - ಸುಬ್ಬಿ ಪಾತ್ರಗಳ ಬದಲಾವಣೆ ಹಾಗೂ ಹೊಸ ತಿರುವುಗಳು ಪ್ರೇಕ್ಷಕರು ವಿರೋಧಿಸಿದ್ದೂ ಇದೆ. ಧಾರಾವಾಹಿಯ ಹೊಸ ತಿರುವಿನ ನಂತರ ಸಮಯದ ಬದಲಾವಣೆ ಸಹ ಆಗಿತ್ತು. ಇದರ ನಡುವೆಯೂ 460ಕ್ಕೂ ಹೆಚ್ಚು ಎಪಿಸೋಡ್ಗಳನ್ನು ಸೀತಾ ರಾಮ ಪೂರೈಸಿದೆ.
ಇದೀಗ ಸೀತಾ ರಾಮ ಧಾರಾವಾಹಿಯ ಮುಖ್ಯ ಪಾತ್ರಧಾರಿ ಹಾಗೂ ನಟಿ ಸೀತಾ (ವೈಷ್ಣವಿ ಗೌಡ) ಅವರ ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗುತ್ತಿದ್ದು. ಅವರ ಹೊಸ ಪ್ರಾಜೆಕ್ಟ್ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. ವೈಷ್ಣವಿ ಗೌಡ ಅವರು ಹಾಗೂ ರಾಮ ಪಾತ್ರಧಾರಿ ಗಗನ್ ಚಿನ್ನಪ್ಪ ಅವರು ಹೇಳಿದ್ದು ಏನು ಅಂತ ಇಲ್ಲಿದೆ.

ಸೀತಾ ರಾಮ ಸೀರಿಯಲ್ ಮುಕ್ತಾಯ: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸೀತಾ ರಾಮ ಧಾರಾವಾಹಿ ಮುಕ್ತಾಯವಾಗುತ್ತಿದೆ. ವಿಭಿನ್ನ ಕಥೆಯನ್ನು ಹೊಂದಿದ್ದ ಹಾಗೂ ಬಾಡಿಗೆ ತಾಯಿ - ಭಾವನಾತ್ಮಕ ವಿಚಾರಗಳನ್ನು ಎಳೆ ಎಳೆಯಾಗಿ ಚಿತ್ರಿಸಿದ್ದ ಈ ಧಾರಾವಾಹಿ ಕನ್ನಡ ಧಾರಾವಾಹಿಗಳಲ್ಲಿ ವಿಭಿನ್ನ ಪ್ರಯತ್ನ. ಆದರೆ, ಸೀತಾ ರಾಮ ಧಾರಾವಾಹಿಯಲ್ಲಿ ಮುಖ್ಯ ಪಾತ್ರಧಾರಿ ಸಿಹಿಯ ಸಾವಿನ ಸನ್ನಿವೇಶವನ್ನು ಸೃಷ್ಟಿ ಮಾಡಿದ್ದನ್ನು ಪ್ರೇಕ್ಷಕರು ಒಪ್ಪಿಕೊಳ್ಳಲಿಲ್ಲ. ಸಿಹಿ ಈ ಧಾರಾವಾಹಿಯ ಜೀವಾಳವಾಗಿದ್ದ ಪಾತ್ರ. ಇದಾದ ಮೇಲೆ ಸಿಹಿಯ ಆತ್ಮ ಧಾರಾವಾಹಿಯೊಂದಿಗೆ ಸಾಗುವಂತೆ ಎಪಿಸೋಡ್ಗಳನ್ನು ಪರಿಚಯಿಸಲಾಯಿತು. ಸುಬ್ಬಿ ಎನ್ನುವ ಪಾತ್ರದ ಮೂಲಕ ಸಿಹಿಯ ಪಾತ್ರಕ್ಕೆ ಜೀವ ತುಂಬುವ ಕೆಲಸವಾಗಿತ್ತು. ಎಪಿಸೋಡ್ಗಳು ಸಾಗಿದಂತೆ ಈ ಡಬಲ್ ರೋಲ್ ಅನ್ನು ಕನ್ನಡಿಗರು ಒಪ್ಪಿಕೊಂಡರು ಎಷ್ಟರ ಮಟ್ಟಿಗೆ ಎಂದರೆ ಸಿಹಿ ಆತ್ಮದ ಪಾತ್ರವನ್ನು / ಸೀನ್ಗಳನ್ನು ಮುಗಿಸಬೇಡಿ ಎಂದು ಹೇಳುವಷ್ಟು. ಪುಟ್ಟ ಸಿಹಿ, ಸೀತಾ ರಾಮ ಹಾಗೂ ಆತ್ಮೀಯ ಗೆಳೆಯ ಅಶೋಕ ಸೇರಿ ಇಡೀ ಧಾರಾವಾಹಿಯ ಪಾತ್ರಗಳು ಹಾಗೂ ದೃಶ್ಯಗಳು ಸದಾ ಸ್ಮರಣೆಯಲ್ಲಿ ಉಳಿಯಲಿದೆ ಎನ್ನುತ್ತಿದ್ದಾರೆ ವೀಕ್ಷಕರು.
ವೈಷ್ಣವಿ ಗೌಡ ಹೇಳಿದ್ದೇನು ?
ಸೀತಾ ರಾಮ ಧಾರಾವಾಹಿ ಅಂತ್ಯವಾಗುತ್ತಿರುವ ಬಗ್ಗೆ ಹಾಗೂ ಮುಂದಿನ ಪಯಣದ ಬಗ್ಗೆ ಇನ್ಸ್ಟಾಗ್ರಾಮನಲ್ಲಿ ನಟಿ ವೈಷ್ಣವಿ ಗೌಡ ಅವರು ಹಂಚಿಕೊಂಡಿದ್ದಾರೆ. ಈ ಅಂತ್ಯವು ಮತ್ತೊಂದು ಉತ್ತಮದ ಆರಂಭ ಮಾತ್ರ ❤️ ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಪಾಜೆಕ್ಟ್ಗಳಲ್ಲಿ ಸೀತಾ ರಾಮ ಧಾರಾವಾಹಿಯೂ ಒಂದಾಗಿದೆ. ಈ ಸೀರಿಯಲ್ ಹಾಗೂ ಸಂತೋಷಕ್ಕೆ ಕಾರಣರಾದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ 🙏🏻❤️

ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ಸೀತಾ ಪಾತ್ರಕ್ಕೆ ಶುಭ ಸಹಿ ಹಾಕುತ್ತಿದ್ದೇನೆ 😍 ಆದರೆ ಶೀಘ್ರದಲ್ಲೇ ಅದ್ಭುತವಾದ ಮತ್ತೊಂದು ಪ್ರಾಜೆಕ್ಟ್ನೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಭರವಸೆ ನೀಡುತ್ತೇನೆ 🙏🏻 ಅಂತ ಪೋಸ್ಟ್ ಮಾಡಿದ್ದಾರೆ.
ಗಗನ್ ಚಿನ್ನಪ್ಪ ಸುದೀರ್ಘ ಪೋಸ್ಟ್: ಇನ್ನು ಸೀತಾ ರಾಮ ಧಾರಾವಾಹಿಯ ನಟ ರಾಮ್ / ಗಗನ್ ಚಿನ್ನಪ್ಪ ಅವರು ಧಾರಾವಾಹಿಯ ಅನುಭವದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಈ ಮೆಸೇಜ್ ನಿಮ್ಮೊಂದಿಗೆ ಹಂಚಿಕೊಳ್ಳುವಾಗ ನಾನು ಭಾವುಕ ಹಾಗೂ ಧನ್ಯತಾ ಭಾವದಿಂದ ಕುಳಿತಿದ್ದೇನೆ.
ಸೀತಾರಾಮ ಕೇವಲ ಒಂದು ಧಾರಾವಾಹಿಗಿಂತ ಹೆಚ್ಚಿನದು. - ಇದು ನನ್ನ ಜೀವನವನ್ನು ಬದಲಾಯಿಸಿದ ಪ್ರಯಾಣವಾಗಿದೆ. ನನ್ನನ್ನು ರೂಪಿಸಿದ, ನನಗೆ ಸವಾಲು ಹಾಕಿದ ಮತ್ತು ನಾನು ಒಮ್ಮೆ ನಕ್ಷತ್ರಗಳಿಗೆ ಪಿಸುಗುಟ್ಟಿದ ಕನಸುಗಳನ್ನು ನನಸಾಗಿಸಿದ ಸುಂದರ ಪಯಣವಾಗಿತ್ತು. ಶ್ರೀ ರಾಮ್ ದೇಸಾಯಿ ಪಾತ್ರವನ್ನು ನಿರ್ವಹಿಸುವುದು ನನ್ನ ವೃತ್ತಿಜೀವನದ ಅತ್ಯಂತ ಸುಂದರವಾದ ಅಧ್ಯಾಯವಾಗಿದೆ. ಇದು ನನ್ನ ಹೃದಯದಲ್ಲಿ ಶಾಶ್ವತವಾಗಿ ಭದ್ರವಾಗಿ ಹಾಗೂ ಅಮೂಲ್ಯ ನೆನಪಾಗಿ ಉಳಿಯಲಿದೆ.
ಈ ಪಾತ್ರವು ಒಬ್ಬ ಕಲಾವಿದನಾಗಿ ನಾನು ಆಶಿಸಿದ್ದ ಎಲ್ಲವನ್ನೂ ನನಗೆ ನೀಡಿತ್ತು. ಪ್ರೀತಿ, ಮನ್ನಣೆ, ಪ್ರಗತಿ ಮತ್ತು ನಿಮ್ಮೆಲ್ಲರೊಂದಿಗೆ ಬಾಂಧವ್ಯ ಎಲ್ಲವನ್ನೂ. ಆದರೆ ಅದಕ್ಕಿಂತ ಹೆಚ್ಚಾಗಿ ನನಗೆ ನಿಮ್ಮ ಪ್ರೀತಿ, ಅಚಲ ನಂಬಿಕೆ ಮತ್ತು ವಾತ್ಸಲ್ಯದಿಂದ ನನ್ನೊಂದಿಗೆ ನಿಂತ ಎಲ್ಲರಿಗೂ ಧನ್ಯವಾದ. ಪ್ರತಿಯೊಂದು ಸಂದೇಶ, ಪ್ರತಿಯೊಂದು ಪ್ರೋತ್ಸಾಹ, ಧಾರಾವಾಹಿಯನ್ನು ನೋಡುವ ಪ್ರತಿ ಕ್ಷಣ - ಎಲ್ಲವೂ ಮುಖ್ಯವಾಗಿತ್ತು. ನೀವು ಈ ಪ್ರಯಾಣವನ್ನು ಅರ್ಥಪೂರ್ಣಗೊಳಿಸಿದ್ದೀರಿ ಎಂದಿದ್ದಾರೆ.
ಮುಂದುವರಿದು ನನ್ನನ್ನು ಒಪ್ಪಿಕೊಂಡಿದ್ದಕ್ಕಾಗಿ, ಕಥೆಯಲ್ಲಿ ನಂಬಿಕೆ ಇರಿಸಿದ್ದಕ್ಕಾಗಿ ಮತ್ತು ಶ್ರೀ ರಾಮ್ ದೇಸಾಯಿ ನಿಮ್ಮ ಜೀವನದ ಭಾಗವಾಗಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ @zeekannada ಮತ್ತು #seetharama ತಂಡಕ್ಕೆ ನಾನು ಅನಂತವಾಗಿ ಕೃತಜ್ಞನಾಗಿದ್ದೇನೆ.
ಈ ಅಧ್ಯಾಯಕ್ಕೆ ತೆರೆ ಬೀಳುತ್ತಿದ್ದಂತೆ, ನಿಮ್ಮ ಪ್ರೀತಿಯನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ - ವಿದಾಯವಾಗಿ ಅಲ್ಲ, ಬದಲಾಗಿ ಮುಂದಿನ ದಾರಿ ನನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲೆಲ್ಲಾ ನನ್ನ ಅತ್ಯುತ್ತಮವಾದದ್ದನ್ನು ನೀಡುವ ಭರವಸೆಯೊಂದಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
ಎಂದೆಂದಿಗೂ ನಿಮ್ಮವ ಶ್ರೀ ರಾಮ್ ದೇಸಾಯಿ.... ಅಂತ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.
ಧಾರಾವಾಹಿಯಲ್ಲಿ ಡಾಕ್ಟರ್ ಪಾತ್ರ ಮಾಡಿದ್ದ ನಟಿ ಹಾಗೂ ಗಾಯಕಿ ಶಶಿಕಲಾ ಸುನಿಲ್ ಅವರು, " ಸೀತಾ ರಾಮ " ಧಾರವಾಹಿಯ ಕಡೆಯ ದಿನದ ಶೂಟಿಂಗ್ನಲ್ಲಿ ಪ್ರತಿಯೊಬ್ಬ ಕಲಾವಿದರಿಗೂ ಜೀ ವಾಹಿನಿಯಿಂದ ಪ್ರೀತಿಯ ಗೌರವ... 🙏🏻 ಧನ್ಯವಾದಗಳು ಜೀ ವಾಹಿನಿಗೆ ನನಗೂ ಅರಿವಿರದ ಕಲಾವಿದೆಗೆ ಅದ್ಭುತ ಅವಕಾಶವಿಟ್ಟು ಅದ್ಭುತ ಪಾತ್ರ ನೀಡಿದಕ್ಕೆ... 🙏🏻 ಧನ್ಯವಾದಗಳು ಡೈರೆಕ್ಟರ್ ಮಧುಸೂದನ್ ಸರ್, ಮಂಜು ಸರ್, ವಸಂತ್ ಸರ್, ಮೋಹನ್ ಸರ್, ಸುಧೀಂದ್ರ ಸರ್... 🙏🏻 ಧನ್ಯವಾದಗಳು ಧಾರಾವಾಹಿಯ ಎಲ್ಲಾ ಪ್ರೀತಿಯ ಕಲಾವಿದರಿಗೆ...🙏🏻
ಧನ್ಯವಾದಗಳು ಪಾತ್ರಕ್ಕೆ ಸಾಗರದಷ್ಟು ಪ್ರೀತಿ ಸುರಿದ ಕರುನಾಡ ಕನ್ನಡಿಗರಿಗೆ.... 🙏🏻🫡 ಎಂದು ಸಂತೋಷ ಹಂಚಿಕೊಂಡಿದ್ದಾರೆ.












Click it and Unblock the Notifications