Renukaswamy murder case: ತನ್ನ ನೆಚ್ಚಿನ ನಟ ದರ್ಶನ್ ನೋಡಲು ಆಸೆಯಿಂದ ಬಂದು ಬೀದಿಹೆಣವಾದ ರೇಣುಕಾಸ್ವಾಮಿ
ಬೆಂಗಳೂರು, ಜೂನ್. 14: ಸಾವು ಎಲ್ಲಿ ಹೇಗೆ ನಮ್ಮನ್ನು ಕಾಯುತ್ತಿರುತ್ತದೆಯೋ ಗೊತ್ತಿಲ್ಲ. ಆದರೆ, ಕೆಲವರು ಸಾವನ್ನು ಹುಡುಕಿ ಹೋಗುತ್ತಾರೆ ಎನ್ನುತ್ತಾರೆ. ಅವರ ಮಾತಿಗೆ ತಕ್ಕಂಗೆ ನಗರದ ಶೆಡ್ವೊಂದರಲ್ಲಿ ರೇಣುಕಾಸ್ವಾಮಿ ತನ್ನ ಸಾವನ್ನು ಹುಡುಕುತ್ತಾ ಹೋಗಿದ್ದಾರೆ. ಅದು ದರ್ಶನ್ ನೋಡುವ ಆಸೆಯನ್ನು ಮನದಲ್ಲಿ ತುಂಬಿಕೊಂಡು.
ಹೌದು.. ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ (33) ಸ್ವಯಂಪ್ರೇರಣೆಯಿಂದ ಶೆಡ್ಗೆ ಬಂದಿದ್ದರು. ತನ್ನ ನೆಚ್ಚಿನ ನಟ ದರ್ಶನ್ರನ್ನು ಭೇಟಿಯಾಗಲು ಉತ್ಸುಕರಾಗಿದ್ದರು" ಎಂದು ಈಗ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಚಿತ್ರದುರ್ಗದ ದೊಡ್ಡಪೇಟೆ ನಿವಾಸಿ ರಾಘವೇಂದ್ರ (43) ಅವರು ನಟ ದರ್ಶನ್ ಅವರ ಆಪ್ತ ಸಹಾಯಕರಾಗಿದ್ದರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಅವರ ಅಭಿಮಾನಿಗಳ ಸಂಘವನ್ನು ನಡೆಸುತ್ತಿದ್ದರು. ದರ್ಶನ್ ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ ರೇಣುಕಾಸ್ವಾಮಿಯನ್ನು ಪತ್ತೆ ಹಚ್ಚಿದ್ದು ಇದೆ ರಾಘವೇಂದ್ರ.

ದರ್ಶನ್ ಕಟ್ಟಾ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ
"ರೇಣುಕಾಸ್ವಾಮಿ ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿದ್ದರು. ರಾಘವೇಂದ್ರ ಅವರು ರೇಣುಕಾಸ್ವಾಮಿ ಅವರಿಗೆ ದರ್ಶನ್ ಅವರನ್ನು ಮೀಟ್ ಮಾಡಿಸುವುದಾಗಿ ಹೇಳಿ ದಿನಾಂಕ ನೀಡಿದರು. ರೇಣುಕಾಸ್ವಾಮಿ ಉತ್ಸಾಹದಿಂದ ನಟನನ್ನು ಭೇಟಿಯಾಗಲು ಬಂದು ತಾವೇ ಬಲೆಗೆ ಬಿದ್ದಿದ್ದರು" ಎಂದು ಪೊಲೀಸರು ಹೇಳಿದ್ದಾರೆ.
ಆ ದಿನ ರೇಣುಕಾಸ್ವಾಮಿ ತನ್ನ ಸ್ಕೂಟರ್ನಲ್ಲಿ ಚಳ್ಳಕೆರೆ ಗೇಟ್ ಬಳಿ ಬಂದು ರಾಘವೇಂದ್ರನಿಗೆ ಕರೆ ಮಾಡಿದ್ದ. ಸ್ಥಳ ಪರಿಶೀಲನೆಯ ಭಾಗವಾಗಿ, ಪೊಲೀಸರು ಗುರುವಾರ ರಾಘವೇಂದ್ರನನ್ನು ಸ್ಥಳಕ್ಕೆ ಕರೆದೊಯ್ದು, ಆ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ರೇಣುಕಾಸ್ವಾಮಿ ಚಳ್ಳಕೆರೆ ಗೇಟ್ ಕಡೆಗೆ ತಮ್ಮ ಸ್ಕೂಟರ್ನಲ್ಲಿ ಹೋಗುತ್ತಿದ್ದರು ಎಂಬುದು ಕಾಣಿಸಿದೆ.

ಪ್ಲ್ಯಾನ್ ಪ್ರಕಾರ, ರಾಘವೇಂದ್ರ ಅವರು ರವಿ ಓಡಿಸುತ್ತಿದ್ದ ಕ್ಯಾಬ್ ಅನ್ನು ಬಾಡಿಗೆಗೆ ಪಡೆದು ರೇಣುಕಸ್ವಾಮಿಯನ್ನು ಇತರರೊಂದಿಗೆ ಬೆಂಗಳೂರಿಗೆ ಕರೆದೊಯ್ದರು. ಮಾರ್ಗಮಧ್ಯೆ ರಾಘವೇಂದ್ರ ಇತರ ಆರೋಪಿಗಳಿಗೆ ಕರೆ ಮಾಡಿ ರೇಣುಕಾಸ್ವಾಮಿಯೊಂದಿಗೆ ದರ್ಶನ್ ಭೇಟಿಯಾಗಲು ಬರುವುದಾಗಿ ತಿಳಿಸಿದ್ದರು.
ಉಳಿದ ಆರೋಪಿಗಳು ರೇಣುಕಾಸ್ವಾಮಿಯನ್ನು ಬರಮಾಡಿಕೊಂಡು ಪಟ್ಟಣಗೆರೆ ಶೆಡ್ಗೆ ಕರೆದೊಯ್ದು ಚಿತ್ರಹಿಂಸೆ ನೀಡಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಈ ವೇಳೆ ಅಲ್ಲಿ ದರ್ಶನ್ ಕೂಡ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರೇಣುಕಾಸ್ವಾಮಿಯೊಂದಿಗೆ ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದ ಜಗದೀಶ, ಅನು, ರವಿ, ರಾಜು ಎಂಬುವವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕೊಲೆ ಕೇಸ್ನಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪಾತ್ರ?
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಬೆಂಗಳೂರು ನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರನ್ನು ಸಂಪರ್ಕಿಸಿ ಮೃತ ರೇಣುಕಾಸ್ವಾಮಿ ಶವವನ್ನು ವಿಲೇವಾರಿ ಮಾಡಲು ಸಲಹೆ ಕೇಳಿದ್ದರು ಎಂಬ ಮಾಹಿತಿ ಸಿಕ್ಕಿದೆ. ಅವರ ಸಲಹೆಯ ಮೇರೆಗೆ ಆರೋಪಿಗಳು ಜೂನ್ 9 ರಂದು ಮುಂಜಾನೆ ಕಾಮಾಕ್ಷಿಪಾಳ್ಯದಲ್ಲಿನ ಮಳೆನೀರು ಚರಂಡಿಗೆ (ಎಸ್ಡಬ್ಲ್ಯೂಡಿ) ಶವವನ್ನು ಎಸೆದರು ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಮೃತದೇಹವು ಕೊಚ್ಚಿಕೊಂಡು ಹೋಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆರೋಪಿಗಳೊಂದಿಗೆ ಈ ಅಧಿಕಾರಿಗೆ ಇರುವ ಸಂಪರ್ಕವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ, ಪ್ರಕರಣದಲ್ಲಿ ಪೊಲೀಸ್ ಅಧಿಕಾರಿ ಭಾಗಿಯಾಗಿರುವುದನ್ನು ಖಚಿತಪಡಿಸಲು ಹಿರಿಯ ಅಧಿಕಾರಿಗಳು ನಿರಾಕರಿಸಿದ್ದಾರೆ. ದಿನ ಕಳೆದಂತೆ ನಟ ದರ್ಶನ್- ಪವಿತ್ರಾ ಗೌಡ ಕೇಸ್ನಲ್ಲಿ ಒಂದೊಂದೆ ಮಾಹಿತಿಗಳು ಹೊರ ಬರುತ್ತಿವೆ.












Click it and Unblock the Notifications