ತೆಲುಗು-ತಮಿಳು ಸಿನಿಮಾಗಳನ್ನು ಮೆರೆಸುವ ಅಬ್ಬರದಲ್ಲಿ ಕನ್ನಡಕ್ಕೆ ದ್ರೋಹ ಮಾಡಿದ್ಯಾರು?
ಕನ್ನಡ ಚಿತ್ರರಂಗದಲ್ಲಿ ವಾರಕ್ಕೆ ಮೂರರಿಂದ ನಾಲ್ಕು ಸಿನಿಮಾಗಳು ತೆರೆಕಂಡರೂ ತಿಂಗಳಲ್ಲಿ ಒಂದು ಹೆಚ್ಚೆಂದರೆ ಎರಡು ಸಿನಿಮಾ ಯಶಸ್ಸು ಕಾಣುತ್ತಿದೆ. ಉಳಿದ ಚಿತ್ರಗಳು ಹೆಸರಿಲ್ಲದಂತೆ ಹೋಗುತ್ತಿದೆ. ಇದಕ್ಕೆ ಪರ ಭಾಷೆಯ ಚಿತ್ರಗಳ ಅಬ್ಬರವೂ ಪ್ರಮುಖ ಕಾರಣ. ಕರ್ನಾಟಕದಲ್ಲಿ ಕನ್ನಡಕ್ಕಿಂತ ಇತರ ಭಾಷೆಯ ಸಿನಿಮಾಗಳಿಗೆ ನೀಡುತ್ತಿರುವ ಪ್ರಾಮುಖ್ಯತೆಯೇ ಕನ್ನಡ ಸಿನಿಮಾಗಳ ಸೋಲಿಗೆ ಕಾರಣವಾಗುತ್ತಿದೆ. ಇದಕ್ಕೆ ನಮ್ಮವರೇ ಕಾರಣ. ಈ ಬಗ್ಗೆ ಮೊದಲ ಬಾರಿಗೆ ನಟ ರಂಗಾಯಣ ರಘು ಮೌನ ಮುರಿದಿದ್ದಾರೆ.
ಗ್ಯಾಸ್ ಫಿಲ್ಮಿ ಕಲ್ಟ್ ಯೂಟ್ಯೂಬ್ ಚಾನೆಲ್ ಜೊತೆಗೆ ಮಾತನಾಡಿದ ಅವರು, 'ಒಂದು ಸಿನಿಮಾ ಮಾಡುತ್ತೇವೆ. ಒಂದು ಸಿನಿಮಾ ಹೀಗಿದೆ ಎಂದು ಜನರಿಗೆ ತಲುಪಿಸದೇ ಇದ್ದರೆ ಅದು ನಮ್ಮ ತಪ್ಪು. ಸಿನಿಮಾ ಶೂಟಿಂಗ್ ಮುಗಿದ ತಕ್ಷಣ ಎಲ್ಲರೂ ರಿಲ್ಯಾಕ್ಸ್ ಆಗುತ್ತಾರೆ. ಕೆಲವೊಮ್ಮೆ ಡೈರೆಕ್ಟರ್ಗಳಿಗೆ ಇರುತ್ತದೆ. ಆದರೆ ನಿರ್ಮಾಪಕರಿಗೆ ಜವಾಬ್ದಾರಿ ಬೇಕು. ನಾನು ಒಂದು ಸಿನಿಮಾ ಮಾಡಿದ್ದೇನೆ. ಇದನ್ನು ಜನರಿಗೆ ತಲುಪಿಸಬೇಕು ಎನ್ನುವ ಜವಾಬ್ದಾರಿ ನಿರ್ಮಾಪಕರಿಗೆ ಇರಬೇಕು' ಎಂದರು.

'ಚಿತ್ರೀಕರಣ ಮುಗಿದ ಮೇಲೆನೇ ನಿಜವಾದ ಸಿನಿಮಾ ಕೆಲಸ ಶುರುವಾಗುವುದು. ಈ ರೀತಿ ಸಿನಿಮಾ ಮಾಡಿದ್ದೇವೆ ಎಂದು ಜನರಿಗೆ ತಲುಪಿಸಬೇಕು. ಇನ್ನು ವಿತರಕರ ವಿಚಾರ ಬಂದಾಗ ನಮ್ಮ ಕರ್ನಾಟಕದ ಎಲ್ಲಾ ಮಹಾನೀಯರೇ ತೆಲುಗು ಸಿನಿಮಾಗಳನ್ನು, ತಮಿಳು ಸಿನಿಮಾಗಳನ್ನು ವ್ಯಾಪಿಸಿಕೊಂಡು ಕುಳಿತಿದ್ದಾರೆ. ನಮ್ಮವರೇ ಇದನ್ನು ಮಾಡುತ್ತಿರುವುದು. ಬೇರೆ ಯಾರೋ ಅಲ್ಲ. ನಮ್ಮ ಜನನೇ ಇದನ್ನು ಮಾಡುತ್ತಿರುವುದು' ಎಂದು ನಟ ರಂಗಾಯಣ ರಘು ಬೇಸರ ವ್ಯಕ್ತಪಡಿಸಿದರು.
'ಇದಕ್ಕೆ ವ್ಯಾಪಾರ ಎನ್ನುತ್ತಾರೆ. ವ್ಯಾಪಾರ ಎನ್ನುವ ಲೇಪನ ಹಾಕುತ್ತಾರೆ. ಮಾಡಲಿ ಬೇಡ ಎನ್ನಲ್ಲ. ಈ ವ್ಯಾಪಾರ ಮಾಡಬೇಡಿ ಎಂದು ಯಾರೂ ಹೇಳುವುದಿಲ್ಲ. ಆದರೆ ಅಲ್ಲಿ ನಮ್ಮ ಪ್ರಾಮುಖ್ಯತೆ. ಆಂಧ್ರದಲ್ಲಿ, ತಮಿಳುನಾಡಿನಲ್ಲಿ ನಮ್ಮ ಕನ್ನಡ ಸಿನಿಮಾಗಳಿಗೆ ಪ್ರಾಮುಖ್ಯತೆ ಇದೆಯಾ? ಅಲ್ಲಿ ಕನ್ನಡದ ಒಂದು ಪೇಪರ್ ಕೂಡ ಸಿಗುವುದಿಲ್ಲ. ಒಂದು ನಂದಿನಿ ಹಾಲು ಸಿಗಲ್ಲ ಅಲ್ಲಿ. ಆದರೆ ಇಲ್ಲಿ ಕಿತ್ತಾಡುತ್ತಾರೆ.
ನಾವೇ ಎಲ್ಲಾ ಕೊಟ್ಟಿದ್ದೇವೆ. ನಾವು ಹೇಗೆ ಅಂದುಕೊಂಡಿದ್ದೇವೆ ಅಂದರೆ ಇದು ಸಿನಿಮಾಕ್ಕೆ ಮಾತ್ರ. ನನಗೇನೂ ತೊಂದರೆ ಇಲ್ಲ ಅಂದುಕೊಂಡಿದ್ದೇವೆ. ನಾಳೆ ದಿನ ಎಲ್ಲರಿಗೂ ಬರುತ್ತದೆ ಈ ಸಮಸ್ಯೆ. ಮೊದಲು ಸ್ವಲ್ಪ ಕ್ಷೇತ್ರಕ್ಕೆ ಮಾತ್ರ ಪ್ಯಾನ್ ಇಂಡಿಯಾ ಇತ್ತು. ಈಗ ಶಿಕ್ಷಣಕ್ಕೆ ಬಂದಿದೆ. ಸಾಂಸ್ಕೃತಿಕವಾಗಿ ಬಂದಿದೆ. ರಾಜಕೀಯಕ್ಕೆ ಬರುತ್ತದೆ' ಎಂದರು.
'ವ್ಯಾಪಾರ ವ್ಯಾಪಾರ ಎನ್ನುತ್ತಾರಲ್ಲ ಹೈದ್ರಾಬಾದ್ನಲ್ಲಿ ಸಿನಿಮಾ ಟಿಕೆಟ್ ಒಂದು ಸಾವಿರ ರೂಪಾಯಿ ಮಾಡಲು ಆಗುವುದಿಲ್ಲ. ತಮಿಳು ನಾಡಿನಲ್ಲಿ ಒಂದು ಸಾವಿರ ರೂಪಾಯಿ ಟಿಕೆಟ್ ಮಾಡಲು ಆಗುವುದಿಲ್ಲ. ಆದರೆ ಇಲ್ಲಿ ನಮ್ಮ ಕರ್ನಾಟಕದಲ್ಲಿ ಎರಡು ಸಾವಿರ ಮಾಡಬಹುದು. ತಮಿಳು ತೆಲುಗಿನವರಿಗೆ ಆಸೆ ಜಾಸ್ತಿ ಇಲ್ಲಿ. ಅವರಿಗೆ ಏನು ಬೇಕಾದರೂ ಮಾಡಬಹುದು ಇಲ್ಲಿ' ಎಂದು ನಟ ರಂಗಾಯಣ ರಘು ಹೇಳಿದ್ದಾರೆ.












Click it and Unblock the Notifications