Rakesh Poojary: ಈಡೇರಿತು ರಾಕೇಶ್ ಪೂಜಾರಿ ಕನಸು, ತಂಗಿ ಮದುವೆ ನೆರವೇರಿಸಿದ 'ಕಾಮಿಡಿ ಕಿಲಾಡಿ' ಗೆಳೆಯರು
'ಕಾಮಿಡಿ ಕಿಲಾಡಿಗಳು' ವೇದಿಕೆಯ ಮೂಲಕ ಇಡೀ ನಾಡನ್ನು ನಗಿಸಿದ್ದ ರಾಕೇಶ್ ಪೂಜಾರಿ ಅವರ ಅಕಾಲಿಕ ನಿಧನ ಚಿತ್ರರಂಗಕ್ಕೆ ಮತ್ತು ಅವರ ಅಭಿಮಾನಿಗಳಿಗೆ ತುಂಬಲಾರದ ನಷ್ಟವಾಗಿತ್ತು. ನಗು ಹಂಚುತ್ತಿದ್ದ ಮುಖವೊಂದು ಮೌನವಾಗಿ ಹೋಗಿ ತಿಂಗಳುಗಳೇ ಕಳೆದಿವೆ. ಆದರೆ, ಅವರಿಲ್ಲದ ಹೊತ್ತಲ್ಲಿ ಅವರ ಕುಟುಂಬ ಅನಾಥವಾಗದಂತೆ ಅವರ "ಕಾಮಿಡಿ ಕಿಲಾಡಿಗಳು" ಸ್ನೇಹಿತರು ತೋರಿದ ಕಾಳಜಿ ಇಂದು ಎಲ್ಲರ ಮನಗೆದ್ದಿದೆ. ರಾಕೇಶ್ ಪೂಜಾರಿ ಕಂಡಿದ್ದ ಕನಸು ಕೊನೆಗೂ ಈಡೇರಿದೆ.
ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ರಾಕೇಶ್ ಪೂಜಾರಿ ಅವರಿಗೆ ಒಂದು ದೊಡ್ಡ ಕನಸಿತ್ತು. ತನ್ನ ತಂಗಿ ರಕ್ಷಿತಾ ಪೂಜಾರಿ ಮದುವೆಯನ್ನು ಅತ್ಯಂತ ಸಡಗರದಿಂದ ಮಾಡಬೇಕು, ಅಣ್ಣನಾಗಿ ನಿಂತು ಆಕೆಯ ಬಾಳನ್ನು ಬೆಳಗಬೇಕು ಎಂಬುದು ಅವರ ಹಂಬಲವಾಗಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ತಂಗಿಯ ಮದುವೆಗೆ ಸಿದ್ಧತೆಗಳು ನಡೆಯಬೇಕಿದ್ದ ಸಂದರ್ಭದಲ್ಲೇ ರಾಕೇಶ್ ಹೃದಯಾಘಾತದಿಂದ ಈ ಲೋಕವನ್ನೇ ತೊರೆದರು. ಅವರ ನಿಧನದಿಂದ ಕುಟುಂಬ ಕತ್ತಲಲ್ಲಿ ಮುಳುಗಿತ್ತು, ತಂಗಿಯ ಮದುವೆ ಕನಸು ಅರ್ಧಕ್ಕೆ ನಿಂತುಹೋಗಿತ್ತು.

ಕೊಟ್ಟ ಮಾತಿನಂತೆ ನಡೆದುಕೊಂಡ ಗೆಳೆಯರು
ರಾಕೇಶ್ ಪೂಜಾರಿ ಅವರ ಅಂತ್ಯಕ್ರಿಯೆಗೆ ಬಂದಿದ್ದ ಕಾಮಿಡಿ ಕಿಲಾಡಿಗಳು ತಂಡದ ಸದಸ್ಯರು ಅಕ್ಷರಶಃ ಬಿಕ್ಕಳಿಸಿ ಅತ್ತಿದ್ದರು. ಅಂದು ಕೇವಲ ಕಣ್ಣೀರು ಹಾಕುವುದಷ್ಟೇ ಅಲ್ಲದೆ, "ರಾಕೇಶ್ ಈ ಮನೆಗೆ ಮಗನಾಗಿದ್ದ, ಈಗ ಆತನ ಸ್ಥಾನದಲ್ಲಿ ನಾವಿದ್ದೇವೆ. ಆತನ ತಂಗಿಯ ಮದುವೆಯನ್ನು ನಾವು ಮಾಡುತ್ತೇವೆ" ಎಂದು ಪಣ ತೊಟ್ಟಿದ್ದರು. ಇಂದು ಆ ಭರವಸೆ ಬರಿ ಮಾತಾಗಿ ಉಳಿಯಲಿಲ್ಲ.
ಇತ್ತೀಚೆಗೆ ನಡೆದ ರಾಕೇಶ್ ತಂಗಿ ರಕ್ಷಿತಾ ಅವರ ವಿವಾಹ ಮಹೋತ್ಸವದಲ್ಲಿ ಕಾಮಿಡಿ ಕಿಲಾಡಿಗಳು ತಂಡದ ಗೆಳೆಯರು ಖುದ್ದಾಗಿ ಮುಂದೆ ನಿಂತು ಅಣ್ಣನ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹಾಸ್ಯ ಕಲಾವಿದರಾದ ನಯನಾ, ಪ್ರವೀಣ್ ಜೈನ್, ಅನೀಶ್, ದಿವ್ಯಾ ಸೇರಿದಂತೆ ಹಲವು ಸ್ನೇಹಿತರು ಮದುವೆಯ ಪ್ರತಿಯೊಂದು ಕಾರ್ಯದಲ್ಲೂ ಭಾಗಿಯಾಗಿ, ರಾಕೇಶ್ ಅವರ ಅನುಪಸ್ಥಿತಿ ಕಾಣದಂತೆ ನೋಡಿಕೊಂಡಿದ್ದಾರೆ.
ರಾಕೇಶ್ ತಂಗಿ ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಗೆಳೆಯರೆಲ್ಲರೂ ಸೇರಿ ಮದುಮಗಳಿಗೆ ಅಕ್ಷತೆ ಹಾಕಿ ಹರಸುತ್ತಿರುವ ದೃಶ್ಯಗಳನ್ನು ಕಂಡು ಅಭಿಮಾನಿಗಳು ಭಾವುಕರಾಗಿದ್ದಾರೆ. ಗೆಳೆಯರು ಅಂದರೆ ಹೀಗಿರಬೇಕು, ರಾಕೇಶ್ ಆತ್ಮಕ್ಕೆ ಇಂದು ನಿಜವಾದ ಶಾಂತಿ ಸಿಕ್ಕಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ರಾಕೇಶ್ ಸ್ಥಾನದಲ್ಲಿ ನಿಂತು ಅವರ ತಂಗಿಯ ಶುಭ ಕಾರ್ಯ ನೆರವೇರಿಸಿದ ಈ 'ಕಾಮಿಡಿ ಕಿಲಾಡಿಗಳು' ನಿಜವಾದ ಹೀರೋಗಳಾಗಿ ಹೊರಹೊಮ್ಮಿದ್ದಾರೆ.

ಕಾಂತಾರದಲ್ಲಿ ಮಿಂಚಿದ್ದ ರಾಕೇಶ್
ಮೂಲತಃ ಉಡುಪಿಯವರಾದ ರಾಕೇಶ್ ಪೂಜಾರಿ, 'ಕಾಮಿಡಿ ಕಿಲಾಡಿಗಳು ಸೀಸನ್ 3'ರಲ್ಲಿ ವಿನ್ನರ್ ಆಗಿ ಹೊರಹೊಮ್ಮುವ ಮೂಲಕ ತಮ್ಮ ಅದ್ಭುತ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ಕೇವಲ ರಿಯಾಲಿಟಿ ಶೋಗಳಿಗೆ ಸೀಮಿತವಾಗದ ಇವರು, ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಎಲ್ಲರ ಮನ ಗೆದ್ದಿದ್ದರು. ಅವರ ಹಾಸ್ಯ ಪ್ರಜ್ಞೆ ಅವರಿಗೆ ದೊಡ್ಡ ಅಭಿಮಾನಿ ಬಳಗವನ್ನು ತಂದುಕೊಟ್ಟಿತ್ತು.
ರಾಕೇಶ್ ಪೂಜಾರಿ ಅವರ ಪ್ರತಿಭೆಯನ್ನು ಗುರುತಿಸಿದ್ದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ, ತಮ್ಮ 'ಕಾಂತಾರ ಚಾಪ್ಟರ್-1'ನಲ್ಲಿ ಪ್ರಮುಖ ಪಾತ್ರವೊಂದನ್ನು ನೀಡಿದ್ದರು. ಈ ಸಿನಿಮಾದಲ್ಲೂ ತಮ್ಮ ಪಾತ್ರದ ಮೂಲಕ ರಾಕೇಶ್ ಎಲ್ಲರನ್ನೂ ನಗಿಸಿ ಗಮನ ಸೆಳೆದಿದ್ದರು. ಚಿತ್ರರಂಗದಲ್ಲಿ ಉತ್ತಮ ಭವಿಷ್ಯ ಹೊಂದಿದ್ದ ರಾಕೇಶ್ ಅಲ್ಪ ಕಾಲದಲ್ಲೇ ಬಾರದ ಲೋಕಕ್ಕೆ ಪಯಣ ಬೆಳೆಸಿದರು. ರಾಕೇಶ್ ನಿಧನದ ಬಳಿಕ ರಿಷಬ್ ಶೆಟ್ಟಿ ದಂಪತಿ ಅವರ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬುವ ಮೂಲಕ ಮಾನವೀಯತೆ ಮೆರೆದಿದ್ದರು.













Click it and Unblock the Notifications