ರಿಷಬ್ ಶೆಟ್ಟಿ ಹರಕೆ ನೇಮೋತ್ಸವ ವಿವಾದ: ದೈವಸ್ಥಾನದ ಆಡಳಿತ ಸಮಿತಿ ಹೇಳಿದ್ದೇನು?
ಕಾಂತಾರ ಚಾಪ್ಟರ್-1 ಸಿನಿಮಾ ಯಶಸ್ಸಿನ ಹಿನ್ನೆಲೆ ನಟ ರಿಷಬ್ ಶೆಟ್ಟಿ ಅವರು ಮಂಗಳೂರಿನ ಬಾರೆಬೈಲ್ ಜಾರಂದಾಯ ಬಂಟ ಮತ್ತು ವಾರಾಹಿ ಪಂಜುರ್ಲಿ ದೈವಸ್ಥಾನದಲ್ಲಿ ಹರಕೆ ನೇಮೋತ್ಸವ ನೀಡಿದ್ದರು. ಆದರೆ ಇದು ವಿವಾದಕ್ಕೆ ಕಾರಣವಾಗಿತ್ತು. ನೇಮೋತ್ಸವದಲ್ಲಿ ಸಂಪ್ರದಾಯ ಮೀರಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಜಾರಂದಾಯ ಬಂಟ ಮತ್ತು ವಾರಾಹಿ ಪಂಜುರ್ಲಿ ದೈವಸ್ಥಾನದ ಆಡಳಿತ ಸಮಿತಿ ಸ್ಪಷ್ಟನೆ ನೀಡಿದೆ.
ಹಿರಿಯರು ಹೇಳಿದ ಉಪದೇಶದ ಪ್ರಕಾರವೇ ದೈವ ನರ್ತನ ಮಾಡಿದ್ದೇನೆ ಎಂದು ದೈವ ನರ್ತಕ ಮುಖೇಶ್ ಸ್ಪಷ್ಟನೆ ನೀಡಿದ್ದಾರೆ. ಸೇವೆಯನ್ನು ದೈವಗಳು ಒಳ್ಳೆಯ ರೀತಿ ಸ್ವೀಕಾರ ಮಾಡಿವೆ. ಆದರೆ ಮತ್ತೊಂದೆಡೆ ಇದರ ಬಗ್ಗೆ ವಿವಾದ ಹುಟ್ಟುಹಾಕಿದ್ದಾರೆ. ನಾವು ಕಟ್ಟುಕಟ್ಟಳೆ ಪ್ರಕಾರವೇ ನಡೆದುಕೊಂಡಿದ್ದೇವೆ. ಈ ವಿಚಾರದಲ್ಲಿ ದೈವ ನರ್ತಕರ ಮೇಲೆ ನಮಗೆ ಯಾವುದೇ ಸಂಶಯವಿಲ್ಲ. ಎಣ್ಣೆಬೂಳ್ಯದಲ್ಲಿ ದೈವವೇ ನರ್ತನ ಮಾಡುತ್ತದೆ. ನಮ್ಮ ದೈವ ಅಪವಾದದಿಂದ ಮುಕ್ತ ಎಂದು ಸ್ಪಷ್ಟಪಡಿಸಿದೆ.

ಕಳೆದ ವರ್ಷ ಕೂಡ ರಿಷಬ್ ಶೆಟ್ಟಿ ಕುಟುಂಬ ತಮ್ಮ ಮಗನ ಹುಟ್ಟುಹಬ್ಬಕ್ಕಾಗಿ ನೇಮೋತ್ಸವ ಸೇವೆ ಕೊಟ್ಟಿದ್ದರು. ಬೇರೆಲ್ಲೂ ನಡೆಯದ ಚಮತ್ಕಾರ ನಮ್ಮ ಕ್ಷೇತ್ರದಲ್ಲಿ ಆಗಿದೆ ಎಂದು ರಿಷಬ್ ಹೇಳಿದ್ದರು. ದೀಪಾವಳಿ ವೇಳೆ ದೈವದ ಅನುಮತಿ ಕೇಳಿಯೇ ಹರಕೆ ನೇಮಕ್ಕೆ ಒಪ್ಪಿಗೆ ಪಡೆದಿದ್ದೆವು. ಪಂಜುರ್ಲಿ ನೇಮ, ಜಾರಾಂದಾಯಗೆ ತುಡರ ಬಲಿ ನೀಡಲು ದೈವ ಒಪ್ಪಿಗೆ ನೀಡಿತು. ಈ ಸೇವೆಯನ್ನು ದೈವಗಳು ಒಳ್ಳೆಯ ರೀತಿ ಸ್ವೀಕಾರ ಮಾಡಿವೆ. ಆದರೆ ಉದ್ದೇಶಪೂರ್ವಕವಾಗಿ ವಿವಾದ ಹುಟ್ಟುಹಾಕಿದ್ದಾರೆ ಎಂದು ಖಂಡಿಸಿದೆ.
ಪೊಲೀಸರಿಗೆ ದೂರು
ನಮಗೆ ನಮ್ಮ ದೈವ ನರ್ತಕರ ಮೇಲೆ ಯಾವುದೇ ಅನುಮಾನವಿಲ್ಲ. ನಾವು ಭಾವನೆಗಳ ಮೇಲೆ ಆರಾಧನೆ ಮಾಡುತ್ತಿದ್ದೇವೆ. ದೈವಸ್ಥಾನದ ಕಟ್ಟುಕಟ್ಟಳೆ ಪ್ರಕಾರವೇ ನಾವು ನಡೆದುಕೊಂಡಿದ್ದೇವೆ. ಸೋಷಿಯಲ್ ಮೀಡಿಯಾದಲ್ಲಿ ಏನೇನೋ ಚರ್ಚೆಗಳು ನಡೆಯುತ್ತಿವೆ. ಎಣ್ಣೆಬೂಳ್ಯ ಸಂಧರ್ಭದಲ್ಲಿ ದೈವವೇ ನರ್ತನ ಮಾಡುತ್ತದೆ ಎಂಬ ನಂಬಿಕೆ ನಮ್ಮದು. ನಮ್ಮ ದೈವವು ಅಪವಾದಗಳಿಂದ ಮುಕ್ತ ಇದೆ. ಮುಂದಿನ ಫೆಬ್ರವರಿಯಲ್ಲಿ ಮತ್ತೊಂದು ಹರಕೆಯ ನೇಮ ನಡೆಯಲಿದೆ. ಅಲ್ಲದೆ ವಿವಾದ ಹುಟ್ಟು ಹಾಕಿರುವವರ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ಹೇಳಿದೆ.
ಈ ವಿವಾದ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ದೈವದ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ ಚರ್ಚೆಗಳಿಗೆ ದೈವಗಳೇ ಉತ್ತರ ನೀಡುತ್ತವೆ ಎಂದು ದೈವಸ್ಥಾನದವರು ಹೇಳಿದ್ದಾರೆ. ನಟ ರಿಷಬ್ ಶೆಟ್ಟಿ ಹರಕೆ ನೇಮೋತ್ಸವ ವಿವಾದ ಕುರಿತಂತೆ ಮಂಗಳೂರಿನ ಬಾರೆಬೈಲ್ನ ಜಾರಂದಾಯ ಬಂಟ ಮತ್ತು ವಾರಾಹಿ ಪಂಜುರ್ಲಿ ದೈವಸ್ಥಾನದ ಆಡಳಿತ ಸಮಿತಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದೆ.












Click it and Unblock the Notifications