ದರ್ಶನ್ & ವಿನೋದ್ ಪ್ರಭಾಕರ್ ನಡುವೆ ಯಾಕಿಷ್ಟು ದೋಸ್ತಿ? ಇಬ್ಬರ ಸ್ನೇಹ ಶುರುವಾಗಿದ್ದು 30 ವರ್ಷಗಳ ಹಿಂದೆ!
ದರ್ಶನ್ ಕೊಲೆ ಆರೋಪದಲ್ಲಿ ಜೈಲು ಸೇರಿ, ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುವ ಸಮಯದಲ್ಲಿ ದರ್ಶನ್ ಭೇಟಿ ಮಾಡಿದ ಏಕೈಕ ಕನ್ನಡದ ನಟ ವಿನೋದ್ ಪ್ರಭಾಕರ್. ದರ್ಶನ್ ಜೊತೆ ಕುಚಿಕು, ಕುಚಿಕು ಅಂತಾ ಬೆನ್ನಿಗೆ ಅಂಟಿಕೊಂಡೇ ಇರುತ್ತಿದ್ದ ಪಟಾಲಂ ಈಗ ಮಾಯ ಆಗೋಗಿದೆ. ಹೀಗಿದ್ದರೂ ದರ್ಶನ್ ನೋಡಲು ಬಂದ ಏಕೈಕ ಕನ್ನಡ ನಟ ಅಂದ್ರೆ ವಿನೋದ್ ಪ್ರಭಾಕರ್. ಹಾಗಾದ್ರೆ ದರ್ಶನ್ & ವಿನೋದ್ ನಡುವೆ ಇರುವ ಸ್ನೇಹ ಎಂತಹದ್ದು ಗೊತ್ತಾ? ಬನ್ನಿ ತಿಳಿಯೋಣ.
ದರ್ಶನ್ ಅವರ ತಂದೆ ತೂಗುದೀಪ್ ಶ್ರೀನಿವಾಸ್ & ವಿನೋದ್ ಪ್ರಭಾಕರ್ ಅವರ ಅಪ್ಪ ಟೈಗರ್ ಪ್ರಭಾಕರ್ ಇಬ್ಬರೂ ಆತ್ಮೀಯ ಸ್ನೇಹಿತರು, ಇಬ್ಬರ ನಡುವೆ ಅನುಬಂಧ ಇತ್ತು. ಕನ್ನಡದ ಹಲವು ಸಿನಿಮಾಗಳಲ್ಲಿ, ವರನಟ ರಾಜ್ಕುಮಾರ್ ಅವರ ಎದುರು ವಿಲನ್ ಆಗಿ ತೂಗುದೀಪ್ ಶ್ರೀನಿವಾಸ್ & ಪ್ರಭಾಕರ್ ಮಿಂಚಿದ್ದರು. ಇದೇ ಕಾರಣಕ್ಕೆ ನಟ ದರ್ಶನ್ ತೂಗುದೀಪ್ & ವಿನೋದ್ ಪ್ರಭಾಕರ್ ಮಧ್ಯೆ ಕೂಡ ಅತ್ಯಂತ ಆತ್ಮೀಯ ಸ್ನೇಹ ಇತ್ತು.

ನಟ ದರ್ಶನ್ ತೂಗುದೀಪ್ & ನಟ ವಿನೋದ್ ಪ್ರಭಾಕರ್ ಇಬ್ಬರೂ ಒಟ್ಟೊಟ್ಟಿಗೆ ಆಟ ಆಡುತ್ತಾ, ಪಾಠ ಓದುತ್ತಾ ಬೆಳೆದವರು. ಹೀಗಿದ್ದಾಗಲೇ ವಿನೋದ್ ಪ್ರಭಾಕರ್ ಅವರ ಅಪ್ಪ ಟೈಗರ್ ಪ್ರಭಾಕರ್ ಅವರಿಗೆ & ಮತ್ತೊಂದು ಕಡೆ ದರ್ಶನ್ ತೂಗುದೀಪ್ರ ತಂದೆ ತೂಗುದೀಪ್ ಶ್ರೀನಿವಾಸ್ ಅವರಿಗೆ ಅನಾರೋಗ್ಯ ಕಾಡತೊಡಗಿತ್ತು. ಅನಾರೋಗ್ಯಕ್ಕೆ ಈ ಇಬ್ಬರೂ ನಟರ ಅಪ್ಪಂದಿರು ಕೊನೆಯುಸಿರು ಎಳೆದು ಜೀವ ಬಿಟ್ಟರು.
ಇಬ್ಬರಿಗೂ ಅಪ್ಪ ಇಲ್ಲದ ಕೊರಗು...
ಹೌದು, ಅಪ್ಪ & ಅಮ್ಮ ಇಲ್ಲದೆ ಬೆಳೆಯುವುದು ಎಷ್ಟು ಕಷ್ಟ ಎಂಬುದು ಜಗತ್ತಿಗೇ ಗೊತ್ತು. ತಂದೆ & ತಾಯಿ ಇದ್ದು ಬೆಳೆಯುವುದೇ ಕಷ್ಟ, ಇನ್ನು ಅಪ್ಪ & ಅಮ್ಮ ಇಲ್ಲದೆ ಜಗತ್ತು ಎದುರಿಸುವುದು ಕಷ್ಟ. ಆದರೆ ದರ್ಶನ್ ತೂಗುದೀಪ್ & ವಿನೋದ್ ಪ್ರಭಾಕರ್ ಇಬ್ಬರೂ ಅಪ್ಪನ ಆಸರೆ ಇಲ್ಲದೆ ಬೆಳೆದು ನಿಂತವರು. ಹೀಗಾಗಿಯೇ ಇಬ್ಬರ ನಡುವೆ ಅನ್ಯೂನ್ಯತೆ ಇತ್ತು ಎಂಬ ಮಾತು ಇದೆ. ಮತ್ತೊಂದು ಕಡೆ ಕನ್ನಡ ಸಿನಿಮಾ ರಂಗದಲ್ಲಿ ವಿನೋದ್ ಪ್ರಭಾಕರ್ ಸಾಲು ಸಾಲು ಸೋಲು ಕಂಡು ನರಳುತ್ತಿದ್ದರು. ಆದರೆ ಆಗಲೇ ನೋಡಿ ದರ್ಶನ್ ತೂಗುದೀಪ್ ಸಹಾಯ ಮಾಡಿದ್ದು.
ದರ್ಶನ್ & ವಿನೋದ್ ಫುಲ್ ಮಿಂಚಿಂಗ್!
'ರಾಬರ್ಟ್' ಸಿನಿಮಾ ಶೂಟಿಂಗ್ ಆರಂಭ ಮಾಡಿದ್ದಾಗ ಕನ್ನಡಿಗರಿಗೆ ಡಬಲ್ ಧಮಾಖ ಸಿಕ್ಕಿತ್ತು. ಯಾಕಂದ್ರೆ ಒಂದು ಕಡೆ 'ಡಿ-ಬಾಸ್' ಎಂದು ಫ್ಯಾನ್ಸ್ ಕಡೆಯಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ದರ್ಶನ್ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದರು. ಮತ್ತೊಂದು ಕಡೆ ವಿನೋದ್ ಪ್ರಭಾಕರ್ ಅವರು ದರ್ಶನ್ ವಿರುದ್ಧ ವಿಲನ್ ಆಗಿ ಮಿಂಚಿದ್ದರು. ಈ 'ರಾಬರ್ಟ್' ಸಿನಿಮಾ ಕಥೆಯಲ್ಲಿ ದರ್ಶನ್ ತೂಗುದೀಪ್ & ವಿನೋದ್ ಪ್ರಭಾಕರ್ ನಡುವೆ ಗಾಢವಾದ ಸ್ನೇಹ ಇರುತ್ತದೆ. ಆದ್ರೆ ಇಬ್ಬರೂ ಹೇಗೆ ವಿರೋಧಿಗಳಾಗಿ ಜೀವನವೇ ಹಾಳು ಮಾಡಿಕೊಳ್ಳುತ್ತಾರೆ? ಎಂಬ ಕಥೆ ತೋರಿಸಲಾಗಿತ್ತು.












Click it and Unblock the Notifications