ಜೋಡಿಹಕ್ಕಿ ಧಾರಾವಾಹಿ ಖ್ಯಾತಿಯ ನಟ ತಾಂಡವ್ ರಾಮ್ ಅರೆಸ್ಟ್: ಅಸಲಿ ಕಾರಣ ಇಲ್ಲಿದೆ
ಬೆಂಗಳೂರು, ನವೆಂಬರ್ 19: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ಜೋಡಿಹಕ್ಕಿ, ಭೂಮಿಗೆ ಬಂದ ಭಗವಂತ ಧಾರಾವಾಹಿಗಳು ಸೇರಿದಂತೆ ಹಲವು ಧಾರಾವಾಹಿ ಹಾಗೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟ ತಾಂಡವ್ ರಾಮ್ಅನ್ನು ಪೊಲೀಸರು ಬಂಧಿಸಿದ್ದಾರೆ. ಕನ್ನಡ ಚಿತ್ರರಂಗದ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ನಟ ತಾಂಡವ್ ರಾಮ್ಅನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಟ ತಾಂಡವ್ ರಾಮ್ ವಿರುದ್ಧ ಮುಗಿಲ್ ಪೇಟೆ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಭರತ್ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ನಿನ್ನೆ ( ಅಕ್ಟೋಬರ್ 18) ಸೋಮವಾರ ಸಂಜೆ 6.30ರ ಸುಮಾರಿಗೆ ಬೆಂಗಳೂರಿನ ಚಂದ್ರಾ ಲೇಔಟ್ನಲ್ಲಿ ಈ ಘಟನೆ ನಡೆದಿದೆ. ಹಣಕಾಸು ಹಾಗೂ ಸಿನಿಮಾ ವಿಚಾರವಾಗಿ ಈ ಗುಂಡಿನ ದಾಳಿ ನಡೆದಿದೆ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ನಿರ್ದೇಶಕನ ಮೇಲೆಯೇ ನಟ ಗುಂಡು ಹಾರಿಸಲು ಕಾರಣವೇನು..?
ಮುಗಿಲ್ ಪೇಟೆ ಸಿನಿಮಾ ನಿರ್ದೇಶಕ ಭರತ್ ಹಾಗೂ ನಟ ತಾಂಡವ್ ರಾಮ್ ಜೊತೆಯಾಗಿ ದೇವನಾಂಪ್ರಿಯ ಎನ್ನುವ ಸಿನಿಮಾ ಮಾಡುತ್ತಿದ್ದರು. ಸಿನಿಮಾ ಸೆಟ್ಟೇರಿದ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಕಳೆದ ಎರಡು ವರ್ಷಗಳಿಂದ ಸಿನಿಮಾ ಚಿತ್ರೀಕರಣ ನಡೆಸುತ್ತಿದ್ದರು. ಈ ಸಿನಿಮಾಗೆ ಸರಿಯಾಗಿ ನಿರ್ಮಾಪಕರು ಸಿಗದ ಹಿನ್ನೆಲೆಯಲ್ಲಿ ಚಿತ್ರಕ್ಕಾಗಿ ನಟ ತಾಂಡವ್ ರಾಮ್ ಸ್ವತಃ ಹಂತ ಹಂತವಾಗಿ 6 ಲಕ್ಷ ರೂಪಾಯಿ ಹಣ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.
ಈಗ ಹಾಸನದ ಕುಮಾರಸ್ವಾಮಿ ಎನ್ನುವವರು ದೇವನಾಂಪ್ರಿಯ ಸಿನಿಮಾಗೆ ಹಣ ಹೂಡಿಕೆ ಮಾಡಿದ್ದರು. ಆದರೂ ನಿರ್ದೇಶಕ ಭರತ್ ಸಿನಿಮಾ ಮುಂದುವರಿಸದೇ ಚಿತ್ರೀಕರಣ ನಿಲ್ಲಿಸಿದ್ದಾರೆ. ಭರತ್ ಸಿನಿಮಾ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ತಾಂಡವ್ ರಾಮ್ ಹೂಡಿಕೆ ಮಾಡಿದ್ದ ಆರು ಲಕ್ಷ ರೂಪಾಯಿ ಹಣ ವಾಪಸ್ ಕೇಳಿದ್ದು, ಇದೇ ವಿಚಾರವಾಗಿ ನಿನ್ನೆ ಸಂಜೆ 6.30ರ ವೇಳೆ ಮೂವರು ಮಾತುಕತೆಗೆ ಸೇರಿದ್ದಾರೆ.
ಸಿನಿಮಾ ಮುಗಿಸುವುದು ಅಥವಾ ಹಣ ವಾಪಸ್ ಕೊಡುವುದು ಎನ್ನುವ ವಿಚಾರವಾಗಿ ಮಾತನಾಡುತ್ತಿದ್ದಾಗ ನಿರ್ದೇಶಕ ಭರತ್ ಮೇಲೆ ಕೋಪಗೊಂಡ ನಟ ತಾಂಡವ್ ರಾಮ್ ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣವೇ ಭರತ್ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದು, ಗುಂಡು ಕಚೇರಿಯ ಆರ್ಸಿಸಿಗೆ ತಗುಲಿದೆ ಎನ್ನಲಾಗಿದೆ.
ಕೂಡಲೇ ಭರತ್ ಘಟನೆ ಸಂಬಂಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ಕೈಗೆತ್ತಿಕೊಂಡ ಚಂದ್ರಾ ಲೇಔಟ್ ಪೊಲೀಸರು ಸದ್ಯ ನಟ ತಾಂಡವ್ ರಾಮ್ಅನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.












Click it and Unblock the Notifications