ಶಿವಣ್ಣ ಪುತ್ರಿ ನಿರ್ಮಿಸಿರುವ 'ಫೈರ್ ಫ್ಲೈ' ಅಬ್ಬರಕ್ಕೆ ದಿನಗಣನೆ!
ಡಾ.ರಾಜ್ ಕುಟುಂಬದ ಮತ್ತೊಬ್ಬರು ಸಿನಿಮಾ ರಂಗದಲ್ಲಿ ನಿರ್ಮಾಣದ ಮೂಲಕ ಅಬ್ಬರ ತೋರುತ್ತಿದ್ದಾರೆ. ಉತ್ತಮ ಸಿನಿಮಾ ಹಾಗೂ ಉತ್ತಮ ಕಥೆಗೆ ಬೆಂಬಲ ನೀಡುತ್ತಿದ್ದಾರೆ. ಈ ಮೂಲಕ ಸ್ಯಾಂಡಲ್ವುಡ್ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಮತ್ತಷ್ಟು ಉತ್ತಮ ಚಿತ್ರ ನೀಡಲು ಸಜ್ಜಾಗಿದ್ದಾರೆ. ಈಗ ಅವರೇ ನಿರ್ಮಾಣ ಮಾಡುತ್ತಿರುವ 'ಫೈರ್ ಫ್ಲೈ' ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಶಿವರಾಜ್ಕುಮಾರ್ ಅವರು ಸಿನಿಮಾ ನಿರ್ಮಾಣಕ್ಕಿಳಿದಿರುವುದು ಗೊತ್ತೇ ಇದೆ. ಶ್ರೀ ಮುತ್ತು ಸಿನಿ ಸರ್ವೀಸ್ ಅಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ. ಹೀಗೆ ಶ್ರೀ ಮುತ್ತು ಸಿನಿ ಸರ್ವೀಸ್ ಸಂಸ್ಥೆಯ ಚೊಚ್ಚಲ ಕೊಡುಗೆ ಫೈರ್ ಫ್ಲೈ. ಪೋಸ್ಟರ್ ಮೂಲಕ ಗಮನ ಸೆಳೆದಿದ್ದ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ ಆಗಿದೆ. ಮೈಸೂರು, ಬೆಂಗಳೂರು ಸುತ್ತಮುತ್ತಲೂ ಈ ಚಿತ್ರದ ಶೂಟ್ ನಡೆದಿದೆ. ಅಕ್ಟೋಬರ್ ತಿಂಗಳ 3ನೇ ವಾರದಿಂದ 2ನೇ ಹಂತದ ಚಿತ್ರೀಕರಣ ಶುರುವಾಗಲಿದೆ.

ಹೊಸ ನಿರ್ದೇಶಕರಿಗೆ ಅವಕಾಶ
ಇನ್ನು 'ಫೈರ್ ಫ್ಲೈ' ಸಿನಿಮಾಗೆ ಯುವ ನಟ ವಂಶಿ ಆಕ್ಷನ್ & ಕಟ್ ಹೇಳುತ್ತಿದ್ದಾರೆ. ಪೂರ್ಣ ಪ್ರಮಾಣದ ನಾಯಕರಾಗಿ ಈ ಮೂಲಕ ವಂಶಿ ಕನ್ನಡ ಚಿತ್ರ ರಂಗಕ್ಕೆ ಪರಿಚಯ ಆಗುತ್ತಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಕಲ್ಲಟ್ಟಿ ಛಾಯಾಗ್ರಹಣ ಇದ್ದು, ಚರಣ್ ರಾಜ್ ಈ ಸಿನಿಮಾಗೆ ಮ್ಯೂಸಿಕ್ ಕೊಡ್ತಿದ್ದಾರೆ. ಹಾಗೇ ರಘು ನಿಡುವಳ್ಳಿ ಸಂಭಾಷಣೆ ಬರೆದಿರುವ 'ಫೈರ್ ಫ್ಲೈ' ಈಗಾಗಲೇ ಕನ್ನಡಿಗರ ಗಮನ ಸೆಳೆದಿದೆ. ಇದೀಗ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಮುಂದಿನ ಹಂತದ ಶೂಟಿಂಗ್ಗೆ ಸಜ್ಜಾಗಿದೆ 'ಫೈರ್ ಫ್ಲೈ' ಚಿತ್ರತಂಡ.
ಈ ಚಿತ್ರದ ನಾಯಕ ಕಂ ನಿರ್ದೇಶಕ ವಂಶಿ ಹಿಂದೆ ಪಿ.ಆರ್.ಕೆ ಸಂಸ್ಥೆಯ ಮಾಯಾಬಜಾರ್ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಗುರು ದೇಶಪಾಂಡೆ ಅವರ ಪೆಂಟಗನ್ ಸಿನಿಮಾದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. ನಾಯಕ & ನಿರ್ದೇಶಕ ವಂಶಿಗೆ ಇಲ್ಲಿ ಜಯ್ ರಾಮ್ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುತ್ತಿದೆ.
ಒಟ್ನಲ್ಲಿ ಬದಲಾದ ಕಾಲಘಟ್ಟದಲ್ಲಿ ಸಿನಿಮಾ ಟ್ರೆಂಡ್ ಕೂಡ ಚೇಂಜ್ ಆಗಿದ್ದು, ಇದೀಗ ಈ ಬದಲಾವಣೆ ಓಟಕ್ಕೆ ತಕ್ಕಂತೆ ಚಂದನವನ ಕೂಡ ಬದಲಾಗುತ್ತಿರುವುದು ಖಷಿ ಕೊಡುವ ವಿಚಾರ. ಈ ಮೂಲಕ ಮತ್ತಷ್ಟು ಉತ್ತಮ ಚಿತ್ರಗಳು ಹಾಗೂ ಹೊಸಬರು ಚಿತ್ರರಂಗಕ್ಕೆ ಎಂಟ್ರಿ ಕೊಡಲಿ ಎಂಬುದೇ ಕನ್ನಡ ಚಿತ್ರರಂಗದ ಅಭಿಮಾನಿಗಳ ಆಶಯ.












Click it and Unblock the Notifications