ಸ್ಯಾಂಡಲ್ವುಡ್ ನಿರ್ದೇಶಕಿ ವಿರುದ್ಧ ದಿಢೀರ್ ಎಫ್ಐಆರ್: ಕಾರಣವೇನು?
ಡಿಯರ್ ಕಣ್ಮಣಿ ಎನ್ನುವ ಕನ್ನಡ ಸಿನಿಮಾದ ನಿರ್ದೇಶಕಿ ವಿಸ್ಮಯಾ ಗೌಡ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಬಸವೇಶ್ವರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹಿಮಾನ್ವಿ ಎನ್ನುವವರು ನೀಡಿದ ದೂರಿನ ಮೆರೆಗೆ ಎಫ್ಐಆರ್ ದಾಖಲು ಮಾಡಲಾಗಿದೆ.
ನಿರ್ದೇಶಕಿ ವಿಸ್ಮಯಾ ಗೌಡ ವಿರುದ್ಧ 6.5 ಲಕ್ಷ ರೂಪಾಯಿ ಸಾಲ ಪಡೆದು ವಾಪಸ್ಸು ನೀಡದೆ ವಂಚಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹಿಮಾನ್ವಿ ಎನ್ನುವವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು, ಸದ್ಯ ನಿರ್ದೇಶಕಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಹಿಮಾನ್ವಿ ನೀಡಿದ ದೂರಿನಲ್ಲಿರುವುದೇನು?
ಇನ್ಸ್ಟಾಗ್ರಾಮ್ನಲ್ಲಿ 2019ರಲ್ಲಿ ಹಿಮಾನ್ವಿ ಹಾಗೂ ವಿಸ್ಮಯ ಗೌಡ ಪರಿಚಯ ಆಗಿದ್ದರು. ನಾನು ಸಿನಿಮಾ ನಿರ್ದೇಶಕಿ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಲೈಫ್ ಕೋಚ್ ಎಂದು ವಿಸ್ಮಯ ಗೌಡ ಪರಿಚಯ ಮಾಡಿಕೊಂಡಿದ್ದರು. ಹಿಮಾನ್ವಿಗೆ ವಿಸ್ಮಯಗೌಡ ಮ್ಯಾನಿಫಸ್ಟೇಷನ್ ಕ್ಲಾಸ್ ತೆಗೆದು ಕೊಂಡಿದ್ದರು. 2024ರಲ್ಲಿ ದೂರುದಾರರ ಮನೆಗೆ ಬಂದ ಸಂದರ್ಭದಲ್ಲಿ ವಿಸ್ಮಯ ಗೌಡ ಹಣಕಾಸಿನ ಸಮಸ್ಯೆ ಇದ್ದು, ಸಹಾಯ ಮಾಡುವಂತೆ ಕೇಳಿದಾಗ ಹಿಮಾನ್ವಿ ತನ್ನ ತಾಯಿಯ ಸಹಾಯದಿಂದ 6.5 ಲಕ್ಷ ರೂಪಾಯಿ ನೀಡಿದ್ದಾರೆ.
ಹಣ ವಾಪಸ್ ಕೇಳಿದಾಗ ವಿಸ್ಮಯ ಗೌಡ ಚೆಕ್ ನೀಡಿದ್ದು, ಆ ಚೆಕ್ ಬ್ಯಾಂಕ್ಗೆ ಕೊಟ್ಟಾಗ ಸಹಿ ಸರಿಯಿಲ್ಲ ಎಂದು ರಿಜೆಕ್ಟ್ ಆಗಿದೆ. ಮೋಸ ಮಾಡುವ ಉದ್ದೇಶದಿಂದ ಚೆಕ್ ನೀಡಿದ್ದಾರೆ ಎಂದು ಮತ್ತೆ ಹಣ ವಾಪಸ್ ಕೇಳಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನು ಎಫ್ಐಆರ್ ದಾಖಲಾಗುತ್ತಿದ್ದಂತೆ ವಿಸ್ಮಯಾ ಗೌಡ ಕೂಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಿಮಾನ್ವಿ ವಿರುದ್ಧ ಆರೋಪ ಮಾಡಿದ್ದಾರೆ.

ಮೈಸೂರು ಮೂಲದ ವಿಸ್ಮಯಾ ಗೌಡ ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ, ಸಾತ್ವಿಕಾ, ಪ್ರವೀಣ್ ಜೊತೆಗೆ ಡಿಯರ್ ಕಣ್ಮಣಿ ಸಿನಿಮಾ ಮಾಡುತ್ತಿರುವ ಬಗ್ಗೆ ಘೋಷಿಸಿದ್ದರು. ಈ ಚಿತ್ರದ ಮುಹೂರ್ತಕ್ಕೆ ಕಿಚ್ಚ ಸುದೀಪ್ ಸಹ ಆಗಮಿಸಿ ಶುಭ ಹಾರೈಸಿದ್ದರು. ಆದರೆ ಚಿತ್ರದ ಮುಂದಿನ ಅಪ್ಡೇಟ್ ಬಗ್ಗೆ ಎಲ್ಲಿಯೂ ಮಾಹಿತಿ ಬಹಿರಂಗಗೊಂಡಿರಲಿಲ್ಲ. ಅಲ್ಲದೇ ಇನ್ನೂ ಈ ಚಿತ್ರ ಬಿಡುಗಡೆ ಕೂಡ ಆಗಿಲ್ಲ. ಹೀಗಾಗಿ ಬಹುಶಃ ಸಿನಿಮಾ ಅರ್ಧಕ್ಕೆ ನಿಂತಿರಬಹುದು ಎನ್ನುವ ಅಭಿಪ್ರಾಯಾಯಗಳು ಕೂಡ ವ್ಯಕ್ತವಾಗುತ್ತಿದೆ.












Click it and Unblock the Notifications