Dhruva Sarja: ಮಾರ್ಟಿನ್ ನೋಡಿದ ಅಭಿಮಾನಿಗಳಿಂದ ಧ್ರುವ ಸರ್ಜಾಗೆ ವಿಶೇಷ ಮನವಿ
ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ದೇಶಾದ್ಯಂತ ಮಾತ್ರವಲ್ಲದೆ ಹಲವು ಹೊರದೇಶಗಳಲ್ಲಿ ಕೂಡ ಬಿಡುಗಡೆಯಾಗಿದೆ. ಬಿಡುಗಡೆಗೆ ಮುನ್ನ ಭಾರಿ ನಿರೀಕ್ಷೆ ಮೂಡಿಸಿದ್ದ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬರೋಬ್ಬರಿ 2021ರಲ್ಲಿ ಪೊಗರು ಸಿನಿಮಾ ಬಿಡುಗಡೆಯಾದ ಮೂರು ವರ್ಷಗಳ ಬಳಿಕ ಧ್ರುವ ಸರ್ಜಾ ಅವರ ಸಿನಿಮಾ ಬಿಡುಗಡೆಯಾಗಿದೆ. ಸುದೀರ್ಘ ಅವಧಿಯ ಶೂಟಿಂಗ್, ಗ್ರಾಫಿಕ್ಸ್ ಎಂದೆಲ್ಲಾ ಸಿನಿಮಾ ತಂಡ ಹೇಳಿದ್ದರಿಂದ ಸಹಜವಾಗಿಯೇ ಏನೋ ವಿಶೇಷವಾಗಿ ಮಾಡಿದ್ದಾರೆ ಎನ್ನುವ ನಿರೀಕ್ಷೆ ಇತ್ತು. ಈಗ ಸಿನಿಮಾ ನೋಡಿದ ಅಭಿಮಾನಿಗಳು ಧ್ರುವ ಸರ್ಜಾ ಅವರಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.
ಹೌದು, ಸಿನಿಮಾ ನೋಡಿದ ಅಭಿಮಾನಿಗಳು ಮಾರ್ಟಿನ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಸಿನಿಮಾ ನಿರೀಕ್ಷೆಗೆ ತಕ್ಕಂತೆ ಚನ್ನಾಗಿಲ್ಲ ಎನ್ನುವುದು ಒಂದೆಡೆಯಾದರೆ, ಪ್ಯಾನ್ ಇಂಡಿಯಾ ಸಿನಿಮಾ ಹೆಸರಿನಲ್ಲಿ ಒಂದು ಸಿನಿಮಾ ಮಾಡಲು ಮೂರ್ನಾಲ್ಕು ವರ್ಷ ತೆಗೆದುಕೊಳ್ಳುತ್ತಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಮಾರ್ಟಿನ್ ಸಿನಿಮಾ ನೋಡಿ ಬಂದ ಅಭಿಮಾನಿಗಳು, ಧ್ರುವ ಸರ್ಜಾ ಅವರಿಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಹೆಸರಿನಲ್ಲಿ ಮೂರ್ನಾಲ್ಕು ವರ್ಷ ಅಮೂಲ್ಯವಾದ ಸಮಯ ಹಾಳು ಮಾಡಿಕೊಂಡು ಇಂತಹ ಸಿನಿಮಾ ಮಾಡುವ ಬದಲು, ಕನ್ನಡ ಪ್ರೇಕ್ಷಕರಿಗಾಗಿಯೇ ಉತ್ತಮ ಕಥೆಯುಳ್ಳ ಸಿನಿಮಾ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಅದ್ದೂರಿ, ಬಹದ್ದೂರ್ ರೀತಿ ಕನ್ನಡದ ಪ್ರೇಕ್ಷಕರಿಗೆ ಮಾತ್ರವೇ ಮಾಡಿದ್ದ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಕೆಜಿಎಫ್ ಸಿನಿಮಾ ಎಲ್ಲಾ ಭಾಷೆಗಳಲ್ಲಿ ಸೂಪರ್ ಹಿಟ್ ಆದ ಬಳಿಕ ಕನ್ನಡ ಸಿನಿಮಾರಂಗದಲ್ಲಿ ಅನೇಕ ಸ್ಟಾರ್ ಹೀರೋಗಳು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೋಗಿ ಮುಗ್ಗರಿಸಿದ್ದಾರೆ. ಕಾಂತಾರಾ ಸಿನಿಮಾ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ ಭಾರಿ ಯಶಸ್ಸು ಗಳಿಸಿದ ಬಳಿಕವೇ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು.
ಸಿನಿಮಾ ಚನ್ನಾಗಿದ್ದರೆ ಎಲ್ಲಾ ಭಾಷೆಯ ಜನ ಮೆಚ್ಚಿಕೊಳ್ಳುತ್ತಾರೆ, ಅದಕ್ಕೆ ಪ್ಯಾನ್ ಇಂಡಿಯಾ ಎನ್ನುವ ಲೇಬಲ್ ಬೇಕಿಲ್ಲ ಎನ್ನುವುದನ್ನು ಕಾಂತಾರ ತೋರಿಸಿಕೊಟ್ಟಿದೆ. ಕನ್ನಡದ ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಮಾಡಿದ ಸಿನಿಮಾ ಬಳಿಕ ಎಲ್ಲಾ ಭಾಷೆಗಳಲ್ಲೂ ಸೂಪರ್ ಹಿಟ್ ಆಗಿತ್ತು.
ಧ್ರುವ ಸರ್ಜಾ ಕೂಡ ಉತ್ತಮ ಕಥೆಯುಳ್ಳು ಗುಣಮಟ್ಟದ ಸಿನಿಮಾಗಳನ್ನು ಮಾಡಿದರೆ ತಾನಾಗಿಯೇ ವಿವಿಧ ಭಾಷೆ ಪ್ರೇಕ್ಷಕರ ಗಮನ ಸೆಳೆಯಬಹುದು. ಮಾರ್ಟಿನ್ ಅವರಿಗೆ ಪಾಠವಾಗಲಿ, ಇನ್ನು ಮುಂದಾದರೂ ಪ್ಯಾನ್ ಇಂಡಿಯಾ ಸಹವಾಸ ಬಿಟ್ಟು, ವರ್ಷಕ್ಕೆರಡು ಉತ್ತಮ ಕನ್ನಡ ಸಿನಿಮಾಗಳನ್ನು ಕೊಡಲಿ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.
ಈಗ ಬೇರೆ ಭಾಷೆಗಳ ಕೆಲವು ಪ್ರೇಕ್ಷಕರು, ವಿಮರ್ಶಕರು ಮಾರ್ಟಿನ್ ಸಿನಿಮಾವನ್ನು ಟ್ರೋಲ್ ಮಾಡುತ್ತಿದ್ದು, ಧ್ರುವ ಸರ್ಜಾ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಕೆಟ್ಟ ಗ್ರಾಫಿಕ್ಸ್, ಹಿನ್ನಲೆ ಸಂಗೀತ, ಸಂಬಂಧವಿಲ್ಲದ ಸಂಭಾಷಣೆಗಳು ನೋಡುಗನ ತಾಳ್ಮೆ ಪರೀಕ್ಷೆ ಮಾಡುತ್ತದೆ ಎನ್ನುವುದು ಸಿನಿಮಾ ನೋಡಿದ ಬಹುತೇಕರ ಅಭಿಪ್ರಾಯ. ಧ್ರುವ ಸರ್ಜಾ ಕನ್ನಡದ ಭರವಸೆಯ ನಟ, ಈವರೆಗೆ 5 ಸಿನಿಮಾಗಳನ್ನು ಮಾತ್ರ ಮಾಡಿದ್ದರೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನು ಮುಂದಾದರೂ ಅವರು ಜನ ಮೆಚ್ಚುವ ಸಿನಿಮಾ ಮಾಡಲಿ ಎಂದು ಪ್ರೇಕ್ಷಕರು ಒತ್ತಾಯಿಸಿದ್ದಾರೆ.












Click it and Unblock the Notifications