Darshan Thoogudeep: ದರ್ಶನ್ ಆರೋಗ್ಯದ ಬಗ್ಗೆ ವೈದ್ಯರ ಮಹತ್ವದ ನಿರ್ಧಾರ
ನಟ ದರ್ಶನ್ ತೂಗುದೀಪ್ ಸದ್ಯ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ದರ್ಶನ್ಗೆ ಈಗಾಗಲೇ ಹಲವು ಪರೀಕ್ಷೆಗಳನ್ನು ಮಾಡಲಾಗಿದ್ದು, ಸದ್ಯ ಬೆನ್ನು ನೋವು ಕಡಿಮೆ ಮಾಡಲು ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ದರ್ಶನ್ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದು, ಇನ್ನೆರಡು ದಿನದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ದರ್ಶನ್ ಸದ್ಯ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲಾ ವರದಿಗಳನ್ನು ಪರಿಶೀಲನೆ ಮಾಡಿರುವ ವೈದ್ಯರು ದರ್ಶನ್ಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ನಿರ್ಧಾರ ಮಾಡಿರುವುದಾಗಿ ವರದಿಯಾಗಿದೆ. ಶಸ್ತ್ರ ಚಿಕಿತ್ಸೆ ಬಳಿಕ ದರ್ಶನ್ ಸುದೀರ್ಘ ವಿಶ್ರಾಂತಿ ಪಡೆಯಲು ಸೂಚನೆ ನೀಡುವ ಸಾಧ್ಯತೆ ಇದೆ.

ದರ್ಶನ್ಗೆ ಬೆನ್ನುಹುರಿಯಲ್ಲಿ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ. ಇದರಿಂದಲೇ ಅವರಿಗೆ ಸರಿಯಾಗಿ ನಡೆಯಲು ಕೂಡ ಕಷ್ಟವಾಗಿದೆ. ಅವರ ಎಡಗಾಲು ಜೋಮು ಹಿಡಿದಂತಾಗುತ್ತಿದ್ದು, ನಡೆಯುವಾಗ ಅವರು ಕಷ್ಟಪಡುವುದನ್ನು ವಿಡಿಯೋದಲ್ಲಿ ನೋಡಿದ್ದೇವೆ. ಸತತವಾಗಿ ತಪಾಸಣೆ ಬಳಿಕ ಸರ್ಜರಿ ಮಾಡಲು ನಿರ್ಧರಿಸಲಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ದರ್ಶನ್ರ ನೋವು ನಿವಾರಣೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ದರ್ಶನ್ಗೆ ಶಸ್ತ್ರಚಿಕಿತ್ಸೆ ನೀಡಲು ಸಮ್ಮತಿ
ಇನ್ನು ದರ್ಶನ್ಗೆ ಸರ್ಜರಿ ನಡೆಸಲು ಪತ್ನಿ ವಿಜಯಲಕ್ಷ್ಮೀ ಒಪ್ಪಿಗೆ ಕೊಟ್ಟಿದ್ದಾರೆ ಎನ್ನಲಾಗಿದೆ. ಬೆನ್ನುಹುರಿ ಶಸ್ತ್ರಚಿಕಿತ್ಸೆ ತುಂಬಾನೆ ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಸರ್ಜರಿ ಮುಗಿದ ಬಳಿಕ ದೀರ್ಘ ವಿಶ್ರಾಂತಿ ಪಡೆಯುವಂತೆ ಸೂಚನೆ ಕೊಡುವ ಸಾಧ್ಯತೆ ಇದೆ. ವೈದ್ಯರು ಎಷ್ಟು ದಿನ ವಿಶ್ರಾಂತಿ ಪಡೆಯಲು ಹೇಳುತ್ತಾರೆ ಎನ್ನುವುದು ಶಸ್ತ್ರಚಿಕಿತ್ಸೆ ಬಳಿಕ ತಿಳಿಯಲಿದೆ.
ದರ್ಶನ್ಗೆ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಹೈಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. ಈಗಾಗಲೇ ಒಂದು ವಾರ ಕಳೆದಿದ್ದು ಇನ್ನು ಐದು ವಾರಗಳಲ್ಲಿ ಅವರ ಮಧ್ಯಂತರ ಜಾಮೀನು ಅವಧಿ ಮುಕ್ತಾಯವಾಗಲಿದೆ, ಬಳಿಕ ಅವರು ಮರಳಿ ಜೈಲಿಗೆ ಹೋಗುವ ಸಾಧ್ಯತೆ ಇದೆ.
ನವಗ್ರಹ ಮರುಬಿಡುಗಡೆ
ದರ್ಶನ್ ಆಸ್ಪತ್ರೆಯಲ್ಲಿದ್ದರೂ ಅವರ ಅಭಿಮಾನಿಗಳಿ ಅವರ ಸಿನಿಮಾ ನೋಡುವ ಅವಕಾಶ ಸಿಕ್ಕಿದೆ. ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾ ನವಗ್ರಹ ಮರುಬಿಡುಗಡೆಗೆ ಸಜ್ಜಾಗಿದೆ. ನವೆಂಬರ್ 8ರಂದು ನವಗ್ರಹ ಮರುಬಿಡುಗಡೆಯಾಗಲಿದ್ದು, ಈಗಾಗಲೇ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಮರುಬಿಡುಗಡೆಯಲ್ಲಿ ನವಗ್ರಹ ಹೊಸ ದಾಖಲೆ ಬರೆಯಲಿದೆ ಎಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದಾರೆ. ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಮುಂಜಾನೆ 7.30ಕ್ಕೆ ಪ್ರದರ್ಶನ ಆರಂಭವಾಗಲಿದ್ದು, ಈಗಾಗಲೇ ಈ ಶೋನ ಟಿಕೆಟ್ಗಳು ಮಾರಾಟವಾಗಿದೆ.












Click it and Unblock the Notifications