Darshan Thoogudeepa: ಮಹಿಳೆಯ ರಕ್ಷಣೆಗಾಗಿ ದರ್ಶನ್ ಕೊಲೆ ಮಾಡಿದ್ರು ತಪ್ಪೇನಿದೆ? ಜನ ಹೀಗೂ ಯೋಚಿಸಬಹುದೇ?
ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. ಆದರೆ ಹುಚ್ಚು ಅಭಿಮಾನಿಗಳು ದರ್ಶನ್ ಮಾಡಿದ್ದು ತಪ್ಪೇ ಇಲ್ಲ ಎಂದು ವಾದಿಸುತ್ತಿದ್ದಾರೆ. ಅಭಿಮಾನಿಗಳ ಹುಚ್ಚು ಹೇಳಿಕೆ ಕಾನೂನು ನಿಯಮಗಳಿಗೆ ದೂರವಾಗಿದ್ದು. ಯಾರೊಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಕೊಲೆ ಮಾಡುವ ಹಕ್ಕನ್ನು ಕಾನೂನಿನಲ್ಲಿ ನೀಡಲಾಗಿಲ್ಲ. ಹಾಗೊಂದು ವೇಳೆ ಕೊಲೆ ಮಾಡುವಂತಹ ತಪ್ಪು ವ್ಯಕ್ತಿ ಮಾಡಿದ್ದರೆ ಆತನಿಗೆ ಶಿಕ್ಷೆ ನೀಡುವ ಅಧಿಕಾರ ಇರುವುದು ನ್ಯಾಯಾಧೀಶರಿಗೆ ಮಾತ್ರ.
ಆದರೆ ಅಂಧ ಅಭಿಮಾನಿಗಳಿಗೆ ಈ ಸತ್ಯ ಅರ್ಥವಾಗುತ್ತಲೇ ಇಲ್ಲ. ಎಲ್ಲಾ ಸಮಸ್ಯೆಗಳಿಗೆ ಕೊಲೆಯೊಂದೇ ಪರಿಹಾರ ಅನ್ನೋದಾದರೆ, ಸಮಾಜದಲ್ಲಿ ಪ್ರಾಣಕ್ಕೆ ಬೆಲೆ ಇರುತ್ತಿರಲಿಲ್ಲ. ದರ್ಶನ್ ಕೊಲೆ ಮಾಡಿದ್ದು ಸಾಬೀತಾದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಆ ತಪ್ಪಿಗೆ ಇರುವ ಶಿಕ್ಷೆಯನ್ನೇ ನೀಡಲಾಗುತ್ತದೆ ಹೊರತು ಅವರು ಕೊಲೆ ಮಾಡಿದ್ದಾರೆ ಎಂದ ಮಾತ್ರಕ್ಕೆ ಅವರನ್ನು ಕೊಲೆ ಮಾಡಲಾಗುವುದಿಲ್ಲ. ಈ ಸತ್ಯ ಕುರುಡು ಅಭಿಮಾನಿಗಳಿಗೆ ಅರ್ಥವಾಗುತ್ತಲೇ ಇಲ್ಲ.

ದರ್ಶನ್ ಅದ್ಭುತ ನಟ ಆದರೆ......
ಹೌದು... ದರ್ಶನ್ ತೂಗುದೀಪ ಒಬ್ಬ ಉತ್ತಮ ನಟ. ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರನ್ನು ಹೊಂದಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಆಕ್ಷನ್ ಸಿನಿಮಾಗಳು, ಫ್ಯಾಮಿಲಿ ಓರೆಂಟೆಡ್ ಸಿನಿಮಾಗಳು ಇಂದಿಗೂ ಫೇಮಸ್. ಅವರು ಸಿನಿಮಾ ಹಾಡುಗಳು ಜನಜನಿತವಾಗಿವೆ. ಇಲ್ಲಿ ನಾವು ದರ್ಶನ್ ನಟನೆ ಬಗ್ಗೆ ಆಗಲಿ, ಅವರ ಚಿತ್ರರಂಗದಲ್ಲಿ ಗಳಿಸಿದ ಖ್ಯಾತಿ ಬಗ್ಗೆ ಆಗಲಿ ಮಾತನಾಡುತ್ತಿಲ್ಲ. ಸಮಸ್ಯೆ ಉಂಟಾಗಿರುವುದು ದರ್ಶನ್ ವೈಯಕ್ತಿಕ ಜೀವನದಲ್ಲಿ.
ದರ್ಶನ್ ವೈವಾಹಿಕ ಜೀವನ ಮೊದಲಿನಿಂದಲೂ ಸರಿಯಾಗಿಲ್ಲ ಅನ್ನೋ ಸತ್ಯ ಎಲ್ಲರಿಗೂ ತಿಳಿದಿದೆ. ಅವರು ಈಗಾಗಲೇ ಪತ್ನಿ ವಿಯಜಲಕ್ಷ್ಮಿ ಮೇಲೆ ಹಲ್ಲೆ ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದಿದ್ದಾರೆ. ಒಂದು ಬಾರಿ ಜೈಲೂಟ ತಿಂದವನಿಗೆ ಮತ್ತೊಮ್ಮೆ ಜೈಲು ಅಂದರೆ ಭಯವಿರಬೇಕಿತ್ತು. ಆದರೆ ದರ್ಶನ್ಗೆ ಆ ಭಯವೇ ಇಲ್ಲ. ತಾನು ಮಾಡಿದ್ದೇ ಕೆಲಸ, ನಡೆದಿದ್ದೇ ದಾರಿ ಅಂದುಕೊಂಡು ಬಿಟ್ಟರು. ಹೀಗಾಗಿ ತಪ್ಪುಗಳ ಮೇಲೆ ತಪ್ಪು ಮಾಡುತ್ತಲೇ ಬಂದರು.

ಕುಡಿತ ಮತ್ತಲ್ಲಿ ಮನಸ್ಸಿನ ಹಿಡಿತ ಕಳೆದುಕೊಳ್ಳುವ ದರ್ಶನ್
ಸಿನಿಮಾ ಪರದೆಯಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದ ದರ್ಶನ್ ನಿಜ ಜೀವನದಲ್ಲಿ ವಿಲನ್ ಆಗಿಬಿಟ್ಟಿದ್ದಾರೆ. ಕುಡಿದ ಮತ್ತಿನಲ್ಲಿ ಮನಸ್ಸಿನ ಹಿಡಿತ ಕಳೆದುಕೊಳ್ಳುವ ದರ್ಶನ್ ಕ್ರೂರಿಯಂತೆ ವರ್ತಿಸುತ್ತಾರೆ. ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಫೋಟೋ ಕಳುಹಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವವರನ್ನು ದರ್ಶನ್ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಹೊತ್ತಿದ್ದಾರೆ. ರೇಣುಕಾಸ್ವಾಮಿಯನ್ನು ಕೊಂದಿದ್ದು ದರ್ಶನ್ ಎನ್ನುವುದಕ್ಕೆ ಬಲವಾದ ಸಾಕ್ಷಿಗಳು ಲಭ್ಯವಾಗಿದೆ.
ಈಗಾಗಲೇ ಚಾರ್ಜ್ಶೀಟ್ ಕೂಡ ಸಲ್ಲಿಕೆಯಾಗಿದೆ. ತಪ್ಪಾಯಿತು ಬೇಡ ಅಂತ ರೇಣುಕಾಸ್ವಾಮಿ ಎಷ್ಟೇ ಬೇಡಿಕೊಂಡರು ಕುಡಿತ ಅಮಲಿನಲ್ಲಿದ್ದ ದರ್ಶನ್ ಮನಬಂದತ್ತೆ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಸೊಣಕು ದೇಹ ಹೊಂದಿರುವ ರೇಣುಕಾಸ್ವಾಮಿ ದಷ್ಟಪುಷ್ಟವಾಗಿರುವ ದರ್ಶನ್ ಹೊಡೆತಗಳನ್ನು ಸಹಿಸಲಾಗದೇ ಉಸಿರು ಚೆಲ್ಲಿದ್ದಾರೆ.
ಅಂಧ ಅಭಿಮಾನಿಗಳಿಗೆ ದರ್ಶನ್ ಹೀರೋ
ನಿತ್ಯ ದರ್ಶನ್ ಮಾಡಿದ ತಪ್ಪುಗಳು ಎಳೆಎಳೆಯಾಗಿ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತಿದ್ದರೂ ಕೆಲ ಅಂಧ ಅಭಿಮಾನಿಗಳಿಗೆ ದರ್ಶನ್ ಹೀರೋ ಆಗಿದ್ದಾರೆ. ಅವರನ್ನೇ ಮಾದರಿಯಾಗಿ ಇಟ್ಟುಕೊಳ್ಳುತ್ತೇವೆ ಎಂದು ಮಾತನಾಡುತ್ತಾರೆ. ದೇಹದ ಮೇಲೆ ದರ್ಶನ್ ಕೈದಿ ನಂಬರ್ ಟ್ಯಾಟೂ ಹಾಕಿಸಿಕೊಳ್ಳುವುದು. ಬೈಕ್ ಮೇಲೆ ಕೈದಿ ನಂಬರ್ ಬರೆದುಕೊಳ್ಳುವುದು. ಅವರ ಫೋಟೋ ಹಾಕಿಸಿಕೊಳ್ಳುವುದು. ಮಗುವಿಗೆ ಕೈದಿ ನಂಬರ್ ಬಟ್ಟೆ ಹಾಕಿ ನಾಮಕರಣ ಮಾಡಿರುವುದು ಕೂಡ ಕಂಡು ಬಂದಿದೆ.
'ದರ್ಶನ್ ಬೇಕು ಮದುವೆ ಆಗ್ತೀನಿ' ಎಂದು ಜೈಲಿಗೆ ಬಂದ ಮಹಿಳೆ
ಅಷ್ಟೇ ಯಾಕೆ... ಇಂದು ಮಹಿಳೆಯೊಬ್ಬಳು ದರ್ಶನ್ ಅವರನ್ನು ಮದುವೆ ಆಗ್ತೀನಿ ಅಂತ ಬಳ್ಳಾರಿ ಜೈಲಿಗೆ ಬಂದಿರುವುದು ಸುದ್ದಿಯಾಗಿದೆ. ಈ ಮಹಿಳೆ ಹೇಳುವ ಪ್ರಕಾರ ದರ್ಶನ್ ಮಹಿಳೆಗೆ ರಕ್ಷಣೆ ನೀಡಿದ್ದಾನಂತೆ. ಹೀಗಾಗಿ ಆತ ತನಗೂ ರಕ್ಷಣೆ ನೀಡುತ್ತಾರಂತೆ. ಹೀಗಾಗಿ ತಾನು ಈಗಾಗಲೆ ಮದುವೆ ಆಗಿದ್ದರೂ, ತನಗೆ ಮಕ್ಕಳಿದ್ದರೂ ತನ್ನ ರಕ್ಷಣೆಗಾಗಿ ದರ್ಶನ್ ಬೇಕು. ಹೀಗಾಗಿ ದರ್ಯಶನ್ ಅವರನ್ನು ಮದುವೆ ಆಗೋದಾಗಿ ಹೇಳಿಕೊಂಡು ಜೈಲ ಬಳಿ ರಂಪಾಟ ಮಾಡಿದ್ದಾಳೆ. ಇಂಥಹ ಹುಚ್ಚುತನಕ್ಕೆ ಏನು ಹೇಳಲು ಸಾಧ್ಯ ಹೇಳಿ?
ದರ್ಶನ್ ಒಬ್ಬ ಪ್ರಸಿದ್ಧ ನಟನೇ ಆಗಿದ್ದರೂ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೆ. ಕಾನೂನಿಗಿಂತ ಮಿಗಿಲಾದವರು ಯಾರೂ ಕೂಡ ಇಲ್ಲ. ದರ್ಶನ್ ತಪ್ಪು ಮಾಡಿರುವುದು ಸಾಬೀತಾದರೆ ತಪ್ಪಿಗೆ ಕಾನೂನಿನಲ್ಲಿ ಇರುವ ಶಿಕ್ಷೆಯನ್ನು ನ್ಯಾಯಾಧೀಶರು ವಿಧಿಸುತ್ತಾರೆ. ಇದಕ್ಕೆ ದರ್ಶನ್ ತಲೆ ಬಾಗಲೇಬೇಕು. ಇದನ್ನು ಅಭಿಮಾನಿಗಳು ಸ್ವಾಗತ ಮಾಡಲೇಬೇಕು.
ದರ್ಶನ್ ಒಬ್ಬ ನಟನಾಗಿ ಪ್ರೀತಿ ಮಾಡಿ ಬೇಡ ಅನ್ನೋದಿಲ್ಲ. ಆದರೆ ಆತ ಮಾಡಿದ ಎಲ್ಲಾ ಕಾರ್ಯಗಳೂ ಸರಿ ಎನ್ನುವುದು ಮಾತ್ರ ದೊಡ್ಡ ತಪ್ಪು. ಕಾನೂನನ್ನು ಗೌರವಿಸುವ ಯಾರೂ ಕೂಡ ಹೀಗೆ ಮಾತನಾಡಬಾರದು. ದರ್ಶನ್ ಮಾಡಿದ್ದೇ ಸರಿ ಅಂದರೆ ನ್ಯಾಯಾಂಗ ವ್ಯವಸ್ಥೆ ಯಾಕೆ ಬೇಕು? ರೇಣುಕಾಸ್ವಾಮಿ ತಪ್ಪು ಮಾಡಿದ್ದೇ ನಿಜ ಆಗಿದ್ದರೆ ಅದಕ್ಕೆ ಶಿಕ್ಷೆ ಕೊಡಲು ದರ್ಶನ್ ಯಾರು? ನ್ಯಾಯಾಧೀಶನಾ? ಪೊಲೀಸಾ? ಅಥವಾ ರೇಣುಕಾಸ್ವಾಮಿ ಹುಟ್ಟಿಸಿದ ತಂದೆ-ತಾಯಿನಾ? ತಪ್ಪು ಎಲ್ಲರೂ ಮಾಡ್ತಾರೆ. ಆದರೆ ಆ ತಪ್ಪು ಮತ್ತೊಬ್ಬರ ಜೀವ ತೆಗೆಯೋ ಹಂತಕ್ಕೆ ಇರಬಾರದು.. ನೀವೇನಂತಿರಾ?












Click it and Unblock the Notifications