Darshan Thoogudeepa: ದರ್ಶನ್ ವಿರುದ್ಧ ಸುಳ್ಳು ಸಾಕ್ಷಿ ಸೃಷ್ಟಿಸಿದ ಪೊಲೀಸರು- ಸ್ನೇಹಮಯಿ ಕೃಷ್ಣ ಬಿಗ್ ಆರೋಪ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನವೆಂಬರ್ 28ಕ್ಕೆ ಹೈಕೋರ್ಟ್ ಮುಂದೂಡಿದೆ. ಈ ನಡುವೆ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ಸ್ನೇಹಮಯಿ ಕೃಷ್ಣ ಅವರ ಪ್ರಕಾರ ದರ್ಶನ್ ತೂಗುದೀಪ ಅವರು ಯಾರು ಮಾಡಬಾರದ ತಪ್ಪೇನು ಮಾಡಿಲ್ಲ. ದರ್ಶನ್ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಜೈಲಿಗೆ ಕಳುಹಿಸಲಾಗಿದೆ. ಎಸಿಪಿ ಚಂದನ್ ಅವರು ದರ್ಶನ್ ವಿರುದ್ಧ ಸುಳ್ಳು ಆರೋಪಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಅವರು ಗಂಭೀರ ಆರೋಪ ಮಾಡಿದ್ದಾರೆ.

ಹೌದು... ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಪ್ರಕರಣದಲ್ಲಿ ದೂರು ದಾಖಲಿಸಿದ್ದ ಸ್ನೇಹಮಯಿ ಕೃಷ್ಣ ಈಗ ದರ್ಶನ್ ಪರ ಹೋರಾಟಕ್ಕೆ ಇಳಿದಿದ್ದಾರೆ. ಪೊಲೀಸರು ಸರ್ವಾಧಿಕಾರ ರೀತಿಯಲ್ಲಿ ನಡೆದುಕೊಂಡು ಆ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಯನ್ನು ಕಾಪಾಡುವ ನಿಟ್ಟಿನಲ್ಲಿ ನಿಜವಾದ ಸಾಕ್ಷಿಗಳನ್ನು ನಾಶಪಡಿಸಿ, ಸುಳ್ಳು ಸಾಕ್ಷಿಗಳನ್ನು ಸೃಷ್ಟಿ ಮಾಡಿರುವುದು ಗಮನಕ್ಕೆ ಬಂದಿದ್ದರಿಂದ ಈ ಒಂದು ಹೋರಾಟದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ಹೇಳಿಕೊಂಡಿದ್ದಾರೆ. ಹಾಗಾದರೆ ದರ್ಶನ್ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣ ಭಾಗಿಯಾಗಲು ಕಾರಣ ಏನು?
ಶಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಸ್ನೇಹಮಯಿ ಕೃಷ್ಣ ಅವರು ನಾನು ಇಂದು ಹಿಂದೆ ಇನ್ನು ಮುಂದೆ ವಿಷ್ಣವರ್ಧನ್ ಅಭಿಮಾನಿ. ನಾನು ದರ್ಶನ್ ಅಭಿಮಾನಿ ಅಲ್ಲ. ಆದರೆ ದರ್ಶನ್ ಅಭಿಮಾನಿಗಳು ನನ್ನ ಬಳಿ ಬಂದು ದರ್ಶನ್ ಅವರ ದೋಷಾರೋಪಣ ಪಟ್ಟಿ ನನ್ನ ಮುಂದೆ ಇಟ್ಟರು. ಇದನ್ನು ಪರಿಶೀಲನೆ ಮಾಡಿ. ಸಾಧ್ಯವಾದರೆ ನ್ಯಾಯ ದೊರಕಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದರಿಂದ ನಾನು ಚಾರ್ಜ್ಶೀಟ್ ಅನ್ನು ಪರಿಶೀಲನೆ ಮಾಡಿದೆ. ಆಗ ನನಗೆ ಅಚ್ಚರಿ ಆಯ್ತು. ಯಾಕೆಂದರೆ ನಡೆದ ಘಟನೆ ಒಂದಾಗಿದ್ದರೆ ಚಾರ್ಜ್ ಶೀಟ್ನಲ್ಲಿ ಸಲ್ಲಿಕೆ ಮಾಡಿರುವ ಘಟನೆಯೇ ಬೇರೆ ಆಗಿತ್ತು ಎಂದು ಸ್ನೇಹಮಯಿ ಕೃಷ್ಣ ಹೇಳಿದರು.

ಎಸಿಪಿ ಚಂದನ್ ಬಗ್ಗೆ ಬಲವಾದ ಸಾಕ್ಷಿ ಇದೆ ಎಂದ ಸ್ನೇಹಮಯಿ ಕೃಷ್ಣ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಸ್ವತ: ಕಾಮಾಕ್ಷಿಪಾಳ್ಯದ ಉಪ ಪೊಲೀಸ್ ನಿರೀಕ್ಷೆಗಾರ ವಿನಯ್ ಮತ್ತು ಪೊಲೀಸ್ ನಿರೀಕ್ಷಕ ಗಿರೀಶ್ ನಾಯಕ್ ಈ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇದರ ಬೆಗ್ಗೆ ಎಲ್ಲೂ ಕೂಡ ಪ್ರಸ್ತಾಪ ಮಾಡದೆ ಸಾಕ್ಷಿಗಳನ್ನು ಮುಚ್ಚಿಟ್ಟು, ಕೆಲವು ಸಾಕ್ಷಿಗಳನ್ನು ಸೃಷ್ಟಿ ಮಾಡಿ, ಎಲ್ಲಾ ಆರೋಪವನ್ನು ದರ್ಶನ್ ಮತ್ತು ಅವರ ಸಂಗಡಿಗರು ಮಾಡಿದ್ದಾರೆ ಅನ್ನೋ ಸುಳ್ಳು ದೋಷಾರೋಪಣ ಪಟ್ಟಿಯನ್ನು ಸಲ್ಲಿಕೆ ಮಾಡಿರುವುದು ಕಂಡು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ನಾನು 18-9-2024 ರಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರನ್ನು ಕೊಟ್ಟಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದ್ದಾರೆ.
ಪೊಲೀಸರಿಗೆ ಹಣ ಹಂಚಿಕೆ
ದೋಷಾರೋಪಣ ಪಟ್ಟಿ ನೋಡಿದಾಗ ಎಸಿಪಿ ಚಂದನ್ ಎಂತಹ ಅಪರಾಧ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಸಬ್ಇನ್ಸೆಕ್ಟರ್ ವಿನಯ್ ಇದರಲ್ಲಿ ಭಾಗಿಯಾಗಿದ್ದಾರೆ. ಆರೋಪಿ ಪ್ರದೋಷ್ ಹಾಗೂ ವಿನಯ್ ಮಧ್ಯರಾತ್ರಿ ಫೋನ್ ಕರೆಯಲ್ಲಿ ಮಾತನಾಡಿದ್ದರು. ಪ್ರದೋಷ್ ದರ್ಶನ್ ನಿಂದ ಪಡೆದ ಮೂವತ್ತು ಲಕ್ಷ ಹಣವನ್ನು ವಿನಯ್ ಅವರಿಗೆ ಕೊಟ್ಟಿದ್ದಾರೆ. ಇದೆಲ್ಲವೂ ಬಹಿರಂಗವಾಗಿ ಗೊತ್ತಾದ ಮೇಲೆ ಎಸಿಪಿ ಚಂದನ್ ಅವರು ತಮ್ಮ ಪೊಲೀಸರನ್ನು ರಕ್ಷಣೆ ಮಾಡಲು ಪ್ರಕರಣವನ್ನು ತಿರುಚುತ್ತಾರೆ. ಇಲ್ಲಸಲ್ಲದ ಆರೋಪಗಳನ್ನು ದರ್ಶನ್ ಮೇಲೆ ಹಾಗೂ ಅವರ ಸಂಗಡಿಗರ ಮೇಲೆ ಹಾಕಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

ರೇಣುಕಾಸ್ವಾಮಿಯನ್ನು ಅಪಹರಣ ಮಾಡಿಲ್ಲ
ಅಲ್ಲದೆ ಸ್ನೇಹಮಯಿ ಕೃಷ್ಣ ಅವರು ಇನ್ನಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ರೇಣುಕಾಸ್ವಾಮಿಯನ್ನು ಅಪಹರಣ ಮಾಡಿಲ್ಲ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದಿರುವ ಕಾರಣ ಏನು ಅಂದರೆ ಆತನಿಂದ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಬಂದಿರುವುದಕ್ಕೆ ಅತನಿಂದ ಕ್ಷಮೆ ಕೇಳಿಸಬೇಕಿತ್ತು ಎನ್ನುವ ಹಿನ್ನಲೆಯಲ್ಲಿ ಕರೆದುಕೊಂಡು ಬಂದಿರುವುದೇ ಹೊರತು, ಕೊಲೆ ಮಾಡಲೇ ಬೇಕು ಎನ್ನುವ ಉದ್ದೇಶದಿಂದ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದಿರುವುದಕ್ಕೆ ಸಾಕ್ಷಿಗಳು ಇಲ್ಲ. ಎಲ್ಲರೂ ಸೇರಿ ಕೊಲೆ ಮಾಡಬೇಕು ಎನ್ನುವ ಸಂಚು ರೂಪಿಸಿರುವುದಕ್ಕೆ ಸಾಕ್ಷಿಗಳಿಲ್ಲ ಎಲ್ಲೂ ಇಲ್ಲ ಎಂದಿದ್ದಾರೆ.
ಅಂದು ಮಧ್ಯಾಹ್ನ ಮೂರು ಗಂಟೆಯವರೆಗೂ ದರ್ಶನ್ ಅವರಿಗೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆ ತಂದಿರುವ ವಿಚಾರ ಗೊತ್ತೇ ಇರುವುದಿಲ್ಲ. ಮಧ್ಯಾಹ್ನ ಮೂರು ಗಂಟೆಗೆ ಪವನ್ ಎಂಬಾತ್ ದರ್ಶನ್ಗೆ ಕರೆ ಮಾಡಿ ರೇಣುಕಾಸ್ವಾಮಿಯನ್ನು ಕರೆತಂದಿರುವುದಾಗಿ ಹೇಳಿದಾಗ ಮಾತ್ರ ದರ್ಶನ್ಗೆ ಈ ವಿಚಾರ ಗೊತ್ತಾಗುತ್ತದೆ.

ಕೊಲೆ ಮಾಡುವ ಉದ್ದೇಶ ಇದ್ದರೆ ಚಿತ್ರದುರ್ಗದಲ್ಲೇ ಮಾಡಬಹುದಿತ್ತು- ಸ್ನೇಹಮಯಿ ಕೃಷ್ಣ
ಕೊಲೆ ಮಾಡುವ ಉದ್ದೇಶ ಇದ್ದರೆ ಚಿತ್ರದುರ್ಗದಲ್ಲೇ ಮಾಡಬಹುದಿತ್ತು. ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರುವ ಅಗತ್ಯ ಇರಲಿಲ್ಲ. ಯಾವುದೇ ಆರೋಪಿಗಳು ಕೊಲೆ ಮಾಡುವ ಉದ್ದೇಶವನ್ನು ಹೊಂದಿದ್ದರೆ ಸಾಕ್ಷಿಗಳನ್ನು ಇರದಂತೆ ನೋಡಿಕೊಳ್ಳುತ್ತಾರೆ. ಆದರೆ ಇಲ್ಲಿ ಶೆಡ್ಡಿಗೆ ಕರೆತಂದಿದ್ದಾರೆ. ಅಲ್ಲಿ ಸಿಸಿಟಿವಿ ಇರೋದು ಅವರಿಗೆ ಗೊತ್ತಿರುತ್ತೆ. ಅಂತಹ ಜಾಗದಲ್ಲಿ ರೇಣುಕಾಸ್ವಾಮಿಯನ್ನು ಕರೆದುಕೊಂಡು ಕೊಲೆ ಮಾಡ್ತಾರೆ ಅಂದರೆ ಅದನ್ನು ಯಾರೂ ಕೂಡ ನಂಬಲು ಸಾಧ್ಯವೇ ಇಲ್ಲ. ಹೀಗಾಗಿ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದಿರುವುದು ಎಚ್ಚರಿಕೆ ನೀಡಲು ವಿನ: ಕೊಲೆ ಮಾಡಲು ಅಲ್ಲ ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ. ಜೊತೆಗೆ ಈ ಸಂದರ್ಭದಲ್ಲಿ ದುಡಿಕಿನಿಂದ ಮಾಡಿದ ಹಲ್ಲೆಯಿಂದ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾರೆ.
ಹೀಗಾಗಿ ಇದು ಭಾರತೀಯ ದಂಡ ಸಂಹಿತೆ ಕಲಂ 304 ಎ ಪ್ರಕಾರ ಅಪರಾಧ ಕೃತ್ಯವಾಗುತ್ತದೆಯೇ ಹೊರತು 302ರ ಪ್ರಕಾರ ಅಪರಾಧ ಕೃತ್ಯ ಆಗುವುದಿಲ್ಲ. ಇಷ್ಟಲ್ಲಾ ಗೊತ್ತಿದ್ದರೂ ಕೂಡ ಎಸಿಪಿ ಚಂದನ್ ಅವರು ಸಂಬಂಧಪಡದ ಕಲಂ ಅನ್ನು ಅನ್ವಯಿಸಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ನಾನು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸಮಗ್ರ ದೂರು ಅರ್ಜಿಯನ್ನು ಕೊಟ್ಟಿದ್ದೇನೆ. ಅವರು ಸರಿಯಾದ ರೀತಿಯಲ್ಲಿ ಪ್ರಕರಣ ತನಿಖೆ ನಡೆಸುತ್ತಿದ್ದಾರೆ.
ಎಸಿಪಿ ಚಂದನ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು- ಸ್ನೇಹಮಯಿ ಕೃಷ್ಣ
ಸಾಕ್ಷಿಗಳು ಸ್ಪಷ್ಟವಾಗಿದ್ದರೂ ಕೂಡ ಆರೋಪಿಗಳಾದ ಕಾಮಾಕ್ಷಿಪಾಳ್ಯದ ಉಪ ಪೊಲೀಸ್ ನಿರೀಕ್ಷೆಗಾರ ವಿನಯ್ ಮತ್ತು ಪೊಲೀಸ್ ನಿರೀಕ್ಷಕ ಗಿರೀಶ್ ನಾಯಕ್ ವಿಚಾರಣೆಗೆ ಒಳಪಡಿಸದೇ ಅವರನ್ನು ಮುಚ್ಚಿಟ್ಟಿದ್ದಾರೆ. ಎಸಿಪಿ ಚಂದನ್ ಮೇಲೆ ಗಂಭೀರ ಆರೋಪ ಮಾಡಲು ಕಾರಣ ಏನು ಅಂದರೆ ಇಲ್ಲಿ ಪ್ರದೋಷ್ ಅನ್ನು ವಿನಯ್ ವಿಚಾರಣೆಗೆ ಒಳಪಡಿಸುತ್ತಾರೆ. ಆದರೆ ದೋಷಾರೋಪ ಪಟ್ಟಿಯಲ್ಲಿ ಈ ಬಗ್ಗೆ ಒಂದೇ ಒಂದು ಸಾಲು ಕೂಡ ಇಲ್ಲ. ವಿನಯ್ ತಿಂಗಳುಗಳ ಕಾಲ ತಲೆಮರಿಸಿಕೊಂಡಿದ್ದರು. ಈ ಕಾರಣದಿಂದ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಇಷ್ಟೆಲ್ಲಾ ಸಾಕ್ಷಿ ಇದ್ದರೂ ಕೂಡ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಹೀಗಾಗಿ ಇದು ತುಂಬಾ ಗಂಭೀರವಾದ ಆರೋಪ ಆಗಿದೆ ಎಂದಿದ್ದಾರೆ ಸ್ನೇಹಮಯಿ ಕೃಷ್ಣ.
ದರ್ಶನ್ ಯಾರೂ ಮಾಡಬಾರದ ಕೃತ್ಯ ಮಾಡಿಲ್ಲ- ಸ್ನೇಹಮಯಿ ಕೃಷ್ಣ
ಸಿಸಿಟಿವಿ ಒಂದೇ ಸಾಕಿತ್ತು. ಆದರೆ ಪೊಲೀಸರು ದರ್ಶನ್ ಸ್ಥಳಕ್ಕೆ ಬಂದ ಎನ್ನುವುದಕ್ಕೆ ಆತನ ಕಾರು ಮಧ್ಯರಾತ್ರಿ ಎಲ್ಲಿಂದ ಎಲ್ಲಿಗೆ ಬಂತು ಎಲ್ಲವನ್ನೂ ತೋರಿಸಿದ್ದಾರೆ. ಜನರ ಗಮನ ತಮ್ಮ ಅಧಿಕಾರಿಗಳ ಕಡೆಗೆ ಹೋಗಬಾರದು ದರ್ಶನ್ ಮೇಲೆ ಹೋಗಬೇಕು ಎನ್ನುವ ಕಾರಣಕ್ಕೆ ಅವರು ಸಂಚು ರೂಪಿಸಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.
ಪೊಲೀಸರನ್ನು ರಕ್ಷಣೆ ಮಾಡಲು ಇಲ್ಲದೆ ಇರುವ ಸಾಕ್ಷಿ ಸೃಷ್ಟಿ!
ಪೊಲೀಸರನ್ನು ರಕ್ಷಣೆ ಮಾಡಲು ಇಲ್ಲದೇ ಇರುವ ಸಾಕ್ಷಿಗಳನ್ನು ಸೃಷ್ಟಿ ಮಾಡಿದ್ದಾರೆ. ಇಲ್ಲಿ ಸತ್ಯ ಗೊತ್ತಾಗಬೇಕು ಅಂದರೆ ಉಪ ಪೊಲೀಸ್ ನಿರೀಕ್ಷೆಗಾರ ವಿನಯ್ ಮತ್ತು ಪೊಲೀಸ್ ನಿರೀಕ್ಷಕ ಗಿರೀಶ್ ನಾಯಕ್ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಚಂದನ್ ಅವರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂದು ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ.
ಕೃತ್ಯಕ್ಕೆ ಪ್ರಚೋದನೆ ನೀಡುವುದು ಅಪರಾಧ
ಚಿತ್ರದುರ್ಗದ ರೇಣುಕಾಸ್ವಾಮಿಗೆ ಎಲ್ಲರೂ ಹೊಡೆದಿದ್ದಾರೆ. ಹೀಗಾಗಿ ಯಾರು ಹೊಡೆತಕ್ಕೆ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾರೆ ಅನ್ನೋದು ಸ್ಪಷ್ಟವಾಗಿಲ್ಲ. ದೊಂಬಿಯಲ್ಲಿ ಆದ ಸಾವಿಗೂ ಒಬ್ಬ ವ್ಯಕ್ತಿ ಉದ್ದೇಶ ಪೂರ್ವಕವಾಗಿ ಮಾಡಿದ ಕೊಲೆಗೂ ತುಂಬಾ ವ್ಯತ್ಯಾಸ ಇದೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ. ನಾನು ದರ್ಶನ್ ತೂಗುದೀಪ ಅವರು ತಪ್ಪ ಮಾಡಿಲ್ಲ ಅಂತ ಎಲ್ಲೂ ಕೂಡ ಹೇಳ್ತಾಯಿಲ್ಲ. ಆದರೆ ದರ್ಶನ್ ಅವರಿಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಹೀಗಾಗಿ ಇಲ್ಲಿ ದರ್ಶನ್ ಹಾಗೂ ಸಂಗಡಿಗರು ಮಾಡುವ ಕೃತ್ಯವೇ ಬೇರೆ ಎಸಿಪಿ ಚಂದನ್ ಮಾಡುವ ಕೃತ್ಯವೇ ಬೇರೆಯದ್ದಾಗಿದೆ ಎಂದು ಸ್ನೇಹಮಯಿ ಕೃಷ್ಣ ವಾದಿಸಿದ್ದಾರೆ.
ರೇಣುಕಾಸ್ವಾಮಿ ಮಾಡಿದ ಕೆಲಸ ಕೃತ್ಯಕ್ಕೆ ಪ್ರಚೋದನೆ ನೀಡಿರುವುದು ಸ್ಪಷ್ಟವಾಗಿದೆ. ಆತ ಕಳುಹಿಸಿರುವ ಫೋಟೋಗಳು ಸ್ಪಷ್ಟವಾಗಿ ಹೇಳುತ್ತವೆ ಕೊಲೆಗೆ ಪ್ರಚೋದನೆ ನೀಡಿರುವುದು ಯಾರು ಎಂದು. ಹೀಗಿರುವಾಗ ಕೋರ್ಟ್ ಕೂಡ ಹೇಳುತ್ತದೆ ಮನುಷ್ಯನ ಸಹಜ ಗುಣಗಳನ್ನು ಸಾಕ್ಷಿಯಾಗಿ ಪರಿಗಣಿಸಬೇಕು ಎಂದು. ಕೃತ್ಯ ಮಾಡಿದವರಿಗಿಂತ ಕೃತ್ಯಕ್ಕೆ ಪ್ರಚೋದನೆ ನೀಡುವುದು ಅಪರಾಧ ಅನ್ನೋದನ್ನು ಕೋರ್ಟ್ ಹೇಳುತ್ತದೆ. ರೇಣುಕಾಸ್ವಾಮಿ ಪ್ರಚೋದನಕಾರಿ ಫೋಟೋ ಸಂದೇಶ ಕಳುಹಿಸಿದ್ದು ತಪ್ಪು. ಇದನ್ನು ಇಲ್ಲಿ ಹೈಲೆಟ್ ಮಾಡಬೇಕಿದೆ. ಅದನ್ನು ಬಿಟ್ಟು ಅಸಿಪಿ ಚಂದನ್ ಅವರು ಸಾಕ್ಷಿಗಳನ್ನು ನಾಶ ಮಾಡಿ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ ಎಂದು ಸ್ನೇಮಯಿ ಆರೋಪ ಮಾಡಿದ್ದಾರೆ.












Click it and Unblock the Notifications