Darshan Beating Video: ರೇಣುಕಾಸ್ವಾಮಿಗೆ ದರ್ಶನ್ ಥಳಿಸ್ತಿರೋ 3 ಸೆಕೆಂಡ್ ದೃಶ್ಯ ಡಿಲೀಟ್!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಗೆದಷ್ಟು ವಿಚಾರಗಳು ಹೊರಬರುತ್ತಲೇ ಇವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲೂಟು ಮಾಡುತ್ತಿದ್ದಾರೆ. ಪವಿತ್ರಾ ಗೌಡ ಹಾಗೂ ದರ್ಶನ್ ಸೇರಿದಂತೆ ಒಟ್ಟು 17 ಜನ ಈ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. ಈ ನಡುವೆ ಭಯಾನಕ ವಿಚಾರವೊಂದು ಬಯಲಾಗಿದ್ದು ರೇಣುಕಾಸ್ವಾಮಿಗೆ ದರ್ಶನ್ ಥಳಿಸುತ್ತಿರುವ ದೃಶ್ಯವನ್ನು ಸ್ಥಳದಲ್ಲಿ ಇದ್ದ ದರ್ಶನ್ ಆಪ್ತರೊಬ್ಬರು ತಮ್ಮ ಐಫೋನ್ನಲ್ಲಿ ಸೆರೆಹಿಡಿದಿರುವುದು ವಿಚಾರಣೆಯಿಂದ ಗೊತ್ತಾಗಿದೆ.
ಹೌದು... ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿನ ಪಟ್ಟಣಗೆರೆ ಶೆಡ್ಡಿಗೆ ಕರೆತರಲಾಗಿತ್ತು. ಆ ವೇಳೆ ದರ್ಶನ್ ಕೂಡ ಶೆಡ್ಡಿಗೆ ಬಂದಿದ್ದಾರೆ ಎನ್ನುವುದಕ್ಕೆ ಪೊಲೀಸರಿಗೆ ಹಲವಾರು ಸಾಕ್ಷಿಗಳು ಲಭ್ಯವಾಗಿವೆ. ಅಲ್ಲಿ ರೇಣುಕಾಸ್ವಾಮಿಯನ್ನು ದರ್ಶನ್ ಥಳಿಸುವ ವೇಳೆ ದರ್ಶನ್ ಶಿಷ್ಯ ಆ ದೃಶ್ಯವನ್ನು ಸೆರೆ ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆಂದು ತಿಳಿದು ಬಂದಿದೆ.

ದರ್ಶನ್ ರೇಣುಕಾಸ್ವಾಮಿಗೆ ಥಳಿಸುತ್ತಿರುವ ದೃಶ್ಯವನ್ನು ದಾಸನ ಶಿಷ್ಯ ಪ್ರದೂಷ್ ರೆಕಾರ್ಡ್ ಮಾಡಿದ್ದರು ಎನ್ನಲಾಗುತ್ತಿದೆ. ಪ್ರದೂಷ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. ಇವರು ಪೊಲೀಸ್ ವಿಚಾರಣೆ ವೇಳೆ ಹಲವಾರು ವಿಷಯಗಳನ್ನು ಬಾಯಿಬಿಟ್ಟಿದ್ದಾರೆ. ಪ್ರದೂಷ್ ಮಾಡಿದ ಮೂರು ಸೆಕೆಂಡ್ಗಳ ವಿಡಿಯೋದಲ್ಲಿ ದರ್ಶನ್ ಕರಾಳತೆ ಇದ್ದು ಆದರೆ ಅದನ್ನು ರೆಕಾರ್ಡ್ ಮಾಡಿದ ಬಳಿಕ ಡಿಲೀಟ್ ಮಾಡಿರುವುದಾಗಿ ವಿಚಾರಣೆ ವೇಲೆ ಹೇಳಿಕೊಂಡಿದ್ದಾರೆ.
ಪ್ರದೂಷ್ ತನ್ನ ಐಫೋನ್ನಲ್ಲಿ ವಿಡಿಯೋ ಮಾಡಿದ್ದರಂತೆ. ಹಲ್ಲೆ ನಡೆಸೋದನ್ನು ವಿಡಿಯೋ ಮಾಡಿ ಎಂದು ದರ್ಶನ್ ಅವರೇ ಸ್ವತ: ಹೇಳಿದ್ದರಂತೆ. ದರ್ಶನ್ ಹೇಳಿದಂತೆ ಪ್ರದೂಷ್ ಅದನ್ನು ಐಫೋನ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ದರ್ಶನ್ ಹೇಳಿದಂತೆ ಪ್ರದೂಷ್ ತಮ್ಮ ಐಫೋನ್ನಲ್ಲಿ ಮೂರು ಸೆಕೆಂಡ್ ದೃಶ್ಯ ರೆಕಾರ್ಡ್ ಮಾಡಿ ಬಳಿಕ ಸ್ಟಾಪ್ ಮಾಡಿ ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.

ಸದ್ಯ ಅದನ್ನು ಮರಳಿ ಪಡೆಯಲು ಪೊಲೀಸರು ಪ್ರಯತ್ನ ನಡೆಸಿದ್ದಾರೆ. ಇದಕ್ಕಾಗಿ ಕಾಮಾಕ್ಷಿಪಾಳ್ಯ ಪೊಲೀಸರು ಸಿಐಡಿ ಟೆಕ್ನಿಕಲ್ ಸೆಲ್ಗೆ ಐಫೋನ್ ರವಾನಿಸಿದ್ದಾರೆ. ಐಫೋನ್ನಿಂದ ವಿಡಿಯೋ ರಿಟ್ರೀವ್ ಮಾಡೋದು ಅಷ್ಟು ಸುಲಭವಲ್ಲ. ಹಾಗಾಗಿ ಹೊಸ ಟೆಕ್ನಾಲಜಿ ಬಳಸಿ ವಿಡಿಯೋ ರಿಟ್ರೀವ್ ಮಾಡಲು ಸಿಐಡಿ ಮುಂದಾಗಿದೆ.
ಒಂದು ವೇಳೆ ಪ್ರದೂಷ್ ಹೇಳಿದಂತೆ ದರ್ಶನ್ ಹಲ್ಲೆ ಮಾಡಿದ ಮೂರು ಸೆಕೆಂಡ್ ವಿಡಿಯೋ ಐಫೋನ್ನಲ್ಲಿ ಸಿಕ್ಕರೆ ದರ್ಶನ್ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಲಿದೆ. ಪೊಲೀಸರಿಗೆ ಮತ್ತೊಂದು ಪ್ರಮುಖ ಸಾಕ್ಷಿ ಸಿಕ್ಕಂತಾಗುತ್ತದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಜನರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ.
ನಿತ್ಯ ಈ ಪ್ರಕರಣದಲ್ಲಿ ಬಗೆದಷ್ಟು ವಿಚಾರಗಳು ಹೊರಬರುತ್ತಲೇ ಇವೆ. ಈಗಾಗಲೇ ಜೈಲೂಟ ಸೇವಿಸಲು ಸಾಧ್ಯವಾಗದೆ ದರ್ಶನ್ ಹತ್ತು ಕೆಜಿ ಸಣ್ಣ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಆರೋಗ್ಯದಲ್ಲೂ ಏರುಪೇರಾಗಿದ್ದು ದಿನ ಕಳೆದಂತೆ ಜೈಲುವಾಸ ದರ್ಶನ್ಗೆ ಕಷ್ಟವಾಗುತ್ತಿದೆ.
ಹೀಗಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರನ್ನು ಜೈಲಿನಿಂದ ಹೊರತರಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ದರ್ಶನ್ ಅವರನ್ನು ಬಿಡಿಸಿಕೊಂಡು ಬರಲು ಅವರಿಗೆ ಸಾಧ್ಯವಾಗುತ್ತಿಲ್ಲ. ದರ್ಶನ್ ಹೊರಬರುವುದು ಸುಲಭವಾಗಿ ಕಾಣಿಸುತ್ತಿಲ್ಲ. ಈ ಪ್ರಕರಣ ಮುಂದೆಲ್ಲಿಗೆ ಹೋಗಿ ನಿಲ್ಲುತ್ತೆ ಕಾದು ನೋಡಬೇಕಿದೆ.











Click it and Unblock the Notifications