ಗಿಲ್ಲಿ ಇಂದ ನಾನು ಬೆಳೆದಿಲ್ಲ, ಆವತ್ತು ನಾನು ಅವಕಾಶ ಕೊಡದಿದ್ರೆ ಅವನ ಪ್ರತಿಭೆ ಮುಚ್ಚಿ ಹೋಗ್ತಿತ್ತು: ನಟಿ ಯಶಸ್ವಿನಿ
ಬಿಗ್ಬಾಸ್ ವಿನ್ನರ್ ಗಿಲ್ಲಿ ನಟ ಹಾಗೂ ನಟಿ ಯಶಸ್ವಿನಿ ಅವರ ಕೆಮಿಸ್ಟ್ರಿ ಈ ಹಿಂದೆ 'ಭರ್ಜರಿ ಬ್ಯಾಚುಲರ್ಸ್' ರಿಯಾಲಿಟಿ ಶೋ ಮೂಲಕವೇ ಜನಪ್ರಿಯವಾಗಿತ್ತು. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಯಶಸ್ವಿನಿ, ಗಿಲ್ಲಿ ಇಂದು ಈ ಮಟ್ಟಕ್ಕೆ ಬೆಳೆಯಲು ನಾನು ನೀಡಿದ ಅವಕಾಶವೂ ಒಂದು ಕಾರಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗುತ್ತಿದೆ.
"ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಅಂದು ನಾನು ಗಿಲ್ಲಿಗೆ ಮಾತನಾಡಲು ಅವಕಾಶ ಮಾಡಿಕೊಡದಿದ್ದರೆ, ಅವನಲ್ಲಿದ್ದ ಅದ್ಭುತ ಪ್ರತಿಭೆ ಹೊರಬರುತ್ತಿರಲಿಲ್ಲವೇನೋ. ಅವನಿಗೆ ಒಂದು ಸ್ಪೇಸ್ ಮಾಡಿಕೊಟ್ಟು, ಇಲ್ಲಿಯವರೆಗೆ ಬೆಳೆಯಲು ಸಣ್ಣ ಪ್ರಯತ್ನ ಮಾಡಿದ್ದು ನನಗೆ ಇಂದಿಗೂ ಹೆಮ್ಮೆ ಮತ್ತು ಖುಷಿ ತರುತ್ತದೆ" ಎಂದು ಹೇಳಿದ್ದಾರೆ ಯಶಸ್ವಿನಿ.

ಗಿಲ್ಲಿ ಕ್ರೇಜ್ ಎಲ್ಲೂ ನೋಡಿಲ್ಲ
ಗಿಲ್ಲಿಗೆ ಸಿಗುತ್ತಿರುವ ಜನಪ್ರಿಯತೆಯ ಬಗ್ಗೆ ಮಾತನಾಡಿದ ಯಶಸ್ವಿನಿ, ಇತ್ತೀಚಿನ ದಿನಗಳಲ್ಲಿ ಇಂತಹ ಕ್ರೇಜ್ ಅನ್ನು ತಾವು ನೋಡಿಲ್ಲ ಎಂದು ಶ್ಲಾಘಿಸಿದ್ದಾರೆ. ಗಿಲ್ಲಿ ಇಂದು ಬಹಳ ಎತ್ತರಕ್ಕೆ ಬೆಳೆದಿದ್ದಾನೆ ಮತ್ತು ಜನರು ಅವನನ್ನು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಈ ಯಶಸ್ಸನ್ನು ಅವನು ಹೇಗೆ ಉಳಿಸಿಕೊಂಡು ಹೋಗುತ್ತಾನೆ ಎಂಬುದು ಅವನಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.
ಇದೇ ವೇಳೆ, ಗಿಲ್ಲಿ ನಟಿಸುವ ಸಿನಿಮಾಗಳಲ್ಲಿ ತಮಗೆ ಸೂಕ್ತವಾದ ಪಾತ್ರ ಸಿಕ್ಕರೆ ಖಂಡಿತವಾಗಿಯೂ ನಟಿಸುವುದಾಗಿ ಅವರು ತಿಳಿಸಿದ್ದಾರೆ. ಗಿಲ್ಲಿ ತನ್ನ ಜೊತೆ ಮೊದಲಿನಿಂದಲೂ ಹೇಗೆ ನಡೆದುಕೊಳ್ಳುತ್ತಿದ್ದನೋ, ಈಗಲೂ ಅದೇ ಪ್ರೀತಿ ಮತ್ತು ಗೌರವದಿಂದ ಇದ್ದಾನೆ ಎಂದು ಅವರು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಗಿಲ್ಲಿ ಕೇವಲ ಇರಿಟೇಷನ್ ಕೊಡುವ ವ್ಯಕ್ತಿಯಲ್ಲ, ಅವನಲ್ಲಿ ಬಹಳ ಒಳ್ಳೆಯ ಗುಣಗಳಿವೆ ಎಂದಿದ್ದಾರೆ.
ಗಿಲ್ಲಿ ಬಿಗ್ಬಾಸ್ನಿಂದ ಹೊರಬಂದ ನಂತರ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಟಿ ಯಶಸ್ವಿನಿ, "ಗಿಲ್ಲಿ ಸದ್ಯ ತಮ್ಮ ಕೆಲಸಗಳಲ್ಲಿ ಕಾರ್ಯನಿರತರಾಗಿರುವುದರಿಂದ ನೇರವಾಗಿ ಭೇಟಿಯಾಗಲು ಸಾಧ್ಯವಾಗಿಲ್ಲ. ಆದರೆ ಫೋನ್ ಮೂಲಕ ನಾವು ನಿರಂತರವಾಗಿ ಸಂಪರ್ಕದಲ್ಲಿದ್ದೇವೆ" ಎಂದು ತಿಳಿಸಿದ್ದಾರೆ.ಬಿಗ್ಬಾಸ್ಗೆ ಹೋಗುವ ಮುನ್ನ ಗಿಲ್ಲಿಯ ಜೀವನಶೈಲಿ ಹೇಗಿತ್ತು ಎಂಬುದನ್ನು ಹತ್ತಿರದಿಂದ ಕಂಡಿದ್ದ ಯಶಸ್ವಿನಿ, ಈಗಿನ ಬದಲಾವಣೆಯನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
"ರಿಯಾಲಿಟಿ ಶೋನಿಂದ ಹೊರಬಂದ ಮೇಲೆ ನಿನ್ನ ಬದುಕು ಎಷ್ಟು ಬದಲಾಗಿದೆ ಎಂದು ನಾನು ಅವನನ್ನು ಕೇಳಿದ್ದೆ. ಬಿಗ್ಬಾಸ್ ನಂತರ ಅವನ ವ್ಯಕ್ತಿತ್ವ ಮತ್ತು ಜೀವನದಲ್ಲಿ ಆಗಿರುವ ಬದಲಾವಣೆಗಳನ್ನು ಹಾಗೂ ಅವನ ಇಂದಿನ ಬೆಳವಣಿಗೆಯನ್ನು ಕಂಡು ನನಗೆ ನಿಜಕ್ಕೂ ತುಂಬಾನೇ ಖುಷಿಯಾಗುತ್ತಿದೆ" ಎಂದು ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ನಾನು ಗಿಲ್ಲಿಯಿಂದಲೇ ಬೆಳೆದಿಲ್ಲ
ಗಿಲ್ಲಿಯಿಂದಲೇ ಯಶಸ್ವಿನಿ ಬೆಳೆದರು ಎಂಬ ಮಾತಿಗೆ ಸ್ಪಷ್ಟನೆ ನೀಡಿರುವ ನಟಿ, "ನಾನು ಗಿಲ್ಲಿಯಿಂದ ಮಾತ್ರ ಬೆಳೆದಿದ್ದೇನೆ ಎಂದು ಯಾರಾದರೂ ಭಾವಿಸಿದರೆ ಅದು ತಪ್ಪು. ನಾವಿಬ್ಬರೂ ಸಮಾನವಾಗಿ ಕೆಲಸ ಮಾಡಿದ್ದರಿಂದಲೇ ರಿಯಾಲಿಟಿ ಶೋನಲ್ಲಿ ಆ ಜೋಡಿ ವರ್ಕ್ ಆಯಿತು" ಎಂದು ಹೇಳಿದ್ದಾರೆ. ಆದರೆ, ಈ ಸಂದರ್ಶನದ ಕೆಲವು ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಗಿಲ್ಲಿಯ ಪ್ರತಿಭೆಯನ್ನು ತಾವೇ ಗುರುತಿಸಿದ್ದು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಯಶಸ್ವಿನಿ ಅವರ ಹೇಳಿಕೆಗಳು ಸದ್ಯ ಟ್ರೋಲ್ ಆಗುತ್ತಿವೆ. ಒಬ್ಬರ ಬೆಳವಣಿಗೆಗೆ ಇನ್ನೊಬ್ಬರು ಕಾರಣ ಎಂದು ಹೇಳಿಕೊಳ್ಳುವುದು ಎಷ್ಟು ಸರಿ ಎಂಬ ಬಗ್ಗೆ ನೆಟ್ಟಿಗರು ಪರ-ವಿರೋಧದ ಚರ್ಚೆಯೂ ನಡೆಸುತ್ತಿದ್ದಾರೆ.













Click it and Unblock the Notifications