Chaithra Kundapura: ಬಿಗ್ ಬಾಸ್ನಲ್ಲಿ ಪಕ್ಷಪಾತ: ಚೈತ್ರಾ ಕಂಡರೆ ಎಲ್ಲರಿಗೂ ಯಾಕಷ್ಟು ಕೋಪ?
ಬಿಗ್ ಬಾಸ್ ಕನ್ನಡ ಸೀಜನ್ 11 ಅಂತಿಮ ಹಂತಕ್ಕೆ ತಲುಪುತ್ತಿದ್ದು, ಆಟ ಇನ್ನಷ್ಟು ಇಂಟ್ರಸ್ಟಿಂಗ್ ಅನಿಸುತ್ತಿದೆ. ಫೈನಲಿಸ್ಟ್ ಆಗಬೇಕಿದ್ದ ಸ್ಪರ್ಧಿಗಳೇ ಎಲಿಮಿನೇಟ್ ಆಗುತ್ತಿದ್ದು, ಜಗಳ, ಕೂಗಾಟ, ಗಲಾಟೆಗಳು ಕೂಡ ಹೆಚ್ಚಾಗುತ್ತಿದೆ. ಸ್ಪರ್ಧಿಗಳ ಜಗಳದಲ್ಲಿ ಟಾಸ್ಕ್ಗಳು ರದ್ದಾಗುತ್ತಿದ್ದು, ನಾಮಿನೇಷನ್ ಕಾವು ದಿನದಿಂದ ದಿನಕ್ಕೆ ಜೋರಾಗಿದೆ. ಈ ಎಲ್ಲಾ ಬೆಳವಣಿಗೆಯ ಜೊತೆಗೆ ಸ್ಪರ್ಧಿಗಳ ಮೇಲಿದ್ದ ಜನರ ಅಭಿಪ್ರಾಯ ಕೂಡ ಬದಲಾಗುತ್ತಿದೆ.
ಈಗಾಗಲೇ ಅನೇಕ ಸ್ಪರ್ಧಿಗಳ ಮೇಲಿನ ಪ್ರೇಕ್ಷಕರ ಅಭಿಪ್ರಾಯ ಬದಲಾಗಿದ್ದು, ಈ ಪೈಕಿ ಚೈತ್ರಾ ಕುಂದಾಪುರ ಮೇಲಿನ ಪ್ರೇಕ್ಷಕರ ಅಭಿಪ್ರಾಯ ಕೊಂಚಮಟ್ಟಿಗೆ ಬದಲಾಗಿದೆ. ಆದರೆ ಬಿಗ್ ಬಾಸ್ ಮನೆಯೊಳಗಿರುವ ಸ್ಪರ್ಧಿಗಳಿಗೆ ಮಾತ್ರ ಆಕೆಯ ಮೇಲಿನ ಅಭಿಪ್ರಾಯ ಬದಲಾದಂತೆ ಕಾಣುತ್ತಿಲ್ಲ.

ಜೊತೆಗೆ ಪ್ರತಿಯೊಂದು ವಿಚಾರಕ್ಕೂ ಆಕೆಯನ್ನೇ ಟಾರ್ಗೆಟ್ ಮಾಡಲಾಗುತ್ತಿದ್ದು, ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಕೂಡ ಚೈತ್ರಾ ಕುಂದಾಪುರ ಅವರನ್ನು ಲಘುವಾಗಿ ತೆಗೆದುಕೊಂಡು ಪ್ರತಿ ಬಾರಿ ಅವರನ್ನೇ ಟಾರ್ಗೆಟ್ ಮಾಡಿ ಮಾತನಾಡುತ್ತಾರೆ ಎನ್ನುವ ಆರೋಪ ಜೋರಾಗಿದೆ.
ಬಿಗ್ ಬಾಸ್ ಕನ್ನಡ ಸೀಜನ್ 11ರ ಆರಂಭದ ಚೈತ್ರಾ ಕುಂದಾಪುರಗೂ ಈಗಿರುವ ಚೈತ್ರಾ ಕುಂದಾಪುರಗೂ ತುಂಬಾ ವ್ಯತ್ಯಾಸ ಇದೆ ಎನ್ನುವುದು ಪ್ರತಿನಿತ್ಯ ಬಿಗ್ ಬಾಸ್ ವೀಕ್ಷಿಸುವವರಿಗೆ ತಿಳಿದು ಬರುತ್ತದೆ. ಮನೆಯೊಳಗಿರುವ ಇತರ ಸ್ಪರ್ಧಿಗಳು ಆಕೆಯನ್ನು ಸುಲಭದ ಟಾರ್ಗೆಟ್ ಆಗಿ ಮಾಡಿಕೊಳ್ಳುತ್ತಾರೆ. ಪ್ರತಿ ಬಾರಿ ಆಕೆಯನ್ನು ಉಸ್ತುವಾರಿ ಕಳುಹಿಸುವ ಸ್ಪರ್ಧಿಗಳು ಬಳಿಕ ಆಕೆಯ ಉಸ್ತುವಾರಿಯೇ ಸರಿ ಇಲ್ಲ ಎಂದು ಆರೋಪಿಸಿ ಕಳಪೆ ನೀಡುತ್ತಾರೆ. ಬಳಿಕ ಇನ್ನೊಂದು ಟಾಸ್ಕ್ನಲ್ಲಿ ಮತ್ತೆ ಅವರನ್ನೇ ಉಸ್ತುವಾರಿಯಾಗಿ ಕಳುಹಿಸುತ್ತಾರೆ.

ಉಸ್ತುವಾರಿಯಲ್ಲಿ ಚೈತ್ರಾನೇ ಬೆಸ್ಟ್
ಏನೇ ಹೇಳಿ ಬಿಗ್ ಬಾಸ್ ಕನ್ನಡ ಸೀಜನ್ 11ರ ಯಾವುದೇ ಟಾಸ್ಕ್ಗಳನ್ನು ಯಾವುದೇ ವಾರದ ಆಟಗಳನ್ನು ಗಮನಿಸಿ ಚೈತ್ರಾ ಕುಂದಾಪುರ ಉಸ್ತುವಾರಿನೇ ಉತ್ತಮವಾಗಿದೆ. ಎದುರಾಳಿ ತಂಡದ ಆಟವನ್ನು ಸೂಕ್ಷ್ಮವಾಗಿ ಗಮನಿಸುವ ಚೈತ್ರಾ ಉಸ್ತುವಾರಿ ಮೂಲಕವೇ ತಮ್ಮ ತಂಡದ ಗೆಲುವಿಗೆ ನೆರವಾಗುತ್ತಾರೆ. ಆದರೆ ಕಳೆದ ವಾರ ದಿಂಬಿನ ಟಾಸ್ಕ್ನಲ್ಲಿ ಭವ್ಯ ಗೌಡ ಮಾತು ಕೇಳಿ ಗೊಂದಲಕ್ಕೆ ಬಿದ್ದ ಚೈತ್ರಾ ಕುಂದಾಪುರ ಕಳಪೆ ಉಸ್ತುವಾರಿ ಮಾಡಿ ಈವರೆಗೂ ಉಸ್ತುವಾರಿಯಲ್ಲಿ ತಾವು ಗಳಿಸಿಕೊಂಡು ಬಂದಿದ್ದ ಘನತೆಯನ್ನು ಮಣ್ಣುಪಾಲು ಮಾಡಿಕೊಂಡರು.
ಚೆಂಡಿನ ಆಟದ ಸೋಲಿನಲ್ಲಿ ಚೈತ್ರಾ ಪಾಲು ಎಷ್ಟು?
ಕಳೆದ ವಾರ ಎರಡು ತಂಡಗಳಿಗೂ ಕೊನೆಯ ಆಟವಾಗಿ ಮೂರು ಚಂಡನ್ನು ಕೋಲಿನ ಮೂಲಕ ಪಾಸ್ ಮಾಡುವ ಟಾಸ್ಕ್ ನೀಡಲಾಗಿತ್ತು. ರಜತ್ ತಂಡ ಮೂರು ಚಂಡನ್ನು ಪಾಸ್ ಮಾಡಿದರೂ ಸಹ ತ್ರಿವಿಕ್ರಮ್ ತಂಡ ಒಂದು ಚಂಡನ್ನು ಕೂಡ ಪಾಸ್ ಮಾಡಲಾಗಲಿಲ್ಲ. ಈ ಹೀನಾಯ ಸೋಲಿಗೆ ಕಾರಣ ಚೈತ್ರಾ ಕುಂದಾಪುರ ಎನ್ನುವುದು ಎಲ್ಲರ ಆರೋಪವಾಗಿತ್ತು. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಚೈತ್ರಾ ಅವರಷ್ಟೇ ತಪ್ಪು ಗೌತಮಿ ಅವರ ತಪ್ಪು ಕೂಡ ಈ ಟಾಸ್ಕ್ನಲ್ಲಿತ್ತು.
ಯಾಕೆಂದರೆ ಚೈತ್ರಾ ಕುಂದಾಪುರ ಕೊಡುತ್ತಿದ್ದ ಚೆಂಡನ್ನು ಗೌತಮಿ ಸರಿಯಾಗಿ ತಮ್ಮ ಕೋಲಿಗೆ ತೆಗೆದುಕೊಳ್ಳದೇ ಇರುವುದು ಕೂಡ ಈ ಆಟದ ಸೋಲಿಗೆ ಕಾರಣವಾಯಿತು ಎನ್ನುವುದನ್ನು ಕೆಲ ಪ್ರೇಕ್ಷಕರು ಗಮನಿಸಿದ್ದಾರೆ. ಬಳಿಕ ಇದೇ ವಿಚಾರಗಳನ್ನು ತೆಗೆದುಕೊಂಡು ಚೈತ್ರಾಗೆ ಕಳಪೆ ಕೂಡ ನೀಡಲಾಯಿತು. ಒಟ್ಟಾರೆಯಾಗಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯೊಳಗೆ ಎಲ್ಲರ ಪಾಲಿನ ಸುಲಭ ಟಾರ್ಗೆಟ್ ಎನ್ನುವುದು ಕೆಲವರ ಆರೋಪವಾಗಿದೆ.












Click it and Unblock the Notifications