ನವಿಲಿನಂತೆ ಗರಿ ಬಿಚ್ಚಿ ಡ್ಯಾನ್ಸ್ ಮಾಡಿದ ಕಿಶನ್-ನಿವೇದಿತಾ ಗೌಡ: ದಾಖಲಾಯ್ತು ಕೇಸ್
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಬಿಗ್ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಹಾಗೂ ನಟಿ ನಿವೇದಿತಾ ಗೌಡ ಅವರು ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಕೆಲವು ದಿನಗಳ ಹಿಂದೆ ಇವರಿಬ್ಬರು ನವಿಲು ಗರಿಗಳಿಂದ ವಿನ್ಯಾಸಗೊಳಿಸಲಾದ ವಿಶೇಷ ಉಡುಪುಗಳನ್ನು ಧರಿಸಿ ಮಾಡಿದ್ದ ರೀಲ್ಸ್ ವಿಡಿಯೋ ಈಗ ಅವರ ಬೆನ್ನಿಗೆ ಕಾನೂನು ಸಂಕಷ್ಟವನ್ನು ತಂದಿಟ್ಟಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿ ನೈಜ ನವಿಲು ಗರಿಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಇಬ್ಬರ ವಿರುದ್ಧವೂ ಅರಣ್ಯ ಇಲಾಖೆಗೆ ದೂರು ಸಲ್ಲಿಕೆಯಾಗಿದೆ.
ವನ್ಯಜೀವಿ ಕಾಯ್ದೆ ಉಲ್ಲಂಘನೆ ಆರೋಪ
ಬೆಂಗಳೂರು ಪ್ರಾದೇಶಿಕ ನಗರ ವಿಭಾಗದ ವ್ಯಾಪ್ತಿಗೆ ಬರುವ ಕಗ್ಗಲಿಪುರ ಅರಣ್ಯ ವಲಯ ಅಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬುವವರು ಈ ಸಂಬಂಧ ಲಿಖಿತ ದೂರು ನೀಡಿದ್ದಾರೆ. ನಮ್ಮ ರಾಷ್ಟ್ರಪಕ್ಷಿಯಾದ ನವಿಲಿನ ನಿಜವಾದ ಗರಿಗಳನ್ನು ಬಳಸಿ ಬಟ್ಟೆ ತಯಾರಿಸಿ, ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಿರುವುದು ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಅಡಿಯಲ್ಲಿ ಗಂಭೀರ ಅಪರಾಧ ಮತ್ತು ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

ಆರೋಪ ನಿಜವಾದ್ರೆ ಬಂಧನ ಸಾಧ್ಯತೆ?
ತಾರೆಯರಿಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋ ಹಾಗೂ ಛಾಯಾಚಿತ್ರಗಳ ತಾಂತ್ರಿಕ ಪರಿಶೀಲನೆ ನಡೆಸಬೇಕು. ಉಡುಪಿನಲ್ಲಿ ಬಳಸಿರುವುದು ಅಸಲಿ ನವಿಲು ಗರಿಗಳೇ ಅಥವಾ ಕೃತಕವಾಗಿ ತಯಾರಿಸಿದ ಗರಿಗಳೇ ಎಂಬುದನ್ನು ವೈಜ್ಞಾನಿಕವಾಗಿ ಪತ್ತೆಹಚ್ಚಬೇಕು. ಒಂದು ವೇಳೆ ತನಿಖೆಯಲ್ಲಿ ಅವು ನೈಜ ನವಿಲು ಗರಿಗಳೆಂದು ಸಾಬೀತಾದರೆ, ನಟ ಕಿಶನ್ ಮತ್ತು ನಿವೇದಿತಾ ಗೌಡ ಬಳಸಿರುವ ಆ ಉಡುಪುಗಳನ್ನು ಅರಣ್ಯ ಇಲಾಖೆ ತಕ್ಷಣವೇ ತನ್ನ ವಶಕ್ಕೆ ಪಡೆಯಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ರಾಜಕೀಯ ಒತ್ತಡಕ್ಕೆ ಮಣಿಯಬಾರದು
ದೂರಿನ ಹಿನ್ನೆಲೆ ಈ ಗರಿಗಳು ಎಲ್ಲಿಂದ ಬಂದವು? ಯಾರು ಮಾರಾಟ ಮಾಡಿದ್ದಾರೆ? ಇದರ ಸಾಗಣೆ ಮತ್ತು ಸಂಗ್ರಹಣೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಿ, ಈ ಜಾಲದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು. ನವಿಲು ಗರಿಗಳನ್ನು ಪಡೆಯುವ ಸಲುವಾಗಿ ಯಾವುದೇ ರೀತಿಯ ಅಕ್ರಮ ಬೇಟೆ, ವನ್ಯಜೀವಿ ಕಳ್ಳಸಾಗಣೆ ಅಥವಾ ಅಪರಾಧ ಕೃತ್ಯಗಳು ನಡೆದಿವೆಯೇ ಎಂಬುದನ್ನು ಪತ್ತೆಹಚ್ಚಲು ತನಿಖೆಯಾಗಬೇಕು ಎಂದೂ ತಿಳಿಸಿದ್ದಾರೆ. ಯಾವುದೇ ರಾಜಕೀಯ ಒತ್ತಡ ಅಥವಾ ಪ್ರಭಾವಕ್ಕೆ ಮಣಿಯದೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಪ್ರಕರಣದಲ್ಲಿ ಪಾರದರ್ಶಕವಾಗಿ ತನಿಖೆ ನಡೆಸಲು ಕಗ್ಗಲಿಪುರ ಅರಣ್ಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದೂ ದಿನೇಶ್ ಆಗ್ರಹಿಸಿದ್ದಾರೆ.
ದೂರು ಬೆನ್ನಲ್ಲೇ ವಿಡಿಯೋ ಡಿಲೀಟ್
ಅತ್ತ ಅರಣ್ಯ ಇಲಾಖೆಗೆ ದೂರು ಸಲ್ಲಿಕೆಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕಿಶನ್ ಬಿಳಗಲಿ ಮತ್ತು ನಿವೇದಿತಾ ಗೌಡ ಜೋಡಿ, ವಿವಾದಕ್ಕೆ ಕಾರಣವಾಗಿದ್ದ ತಮ್ಮ 'ನವಿಲು ಡ್ಯಾನ್ಸ್' ರೀಲ್ಸ್ ವಿಡಿಯೋವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ತಕ್ಷಣವೇ ಡಿಲೀಟ್ ಮಾಡಿದ್ದಾರೆ. ಆದರೆ, ಅದಾಗಲೇ ವಿಡಿಯೋದ ಸ್ಕ್ರೀನ್ಶಾಟ್ಗಳು ಹಾಗೂ ಕ್ಲಿಪ್ಗಳು ವೈರಲ್ ಆಗಿದ್ದು, ಅರಣ್ಯ ಇಲಾಖೆಯ ಮುಂದಿನ ಕ್ರಮ ಏನಿರಲಿದೆ ಎಂಬುದನ್ನು ಕಾದುನೋಡಬೇಕಿದೆ. ಈ ಹಿಂದೆ ಹುಲಿ ಉಗುರು ಧರಿಸಿದ್ದ ಪ್ರಕರಣದಲ್ಲಿ ಬಿಗ್ಬಾಸ್ ಮನೆಯಲ್ಲಿದ್ದ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ನೇರವಾಗಿ ಅಲ್ಲಿಂದಲೇ ಬಂಧಿಸಿ ಕರೆದೊಯ್ಯಲಾಗಿತ್ತು. ಇದೀಗ ಬಿಗ್ಬಾಸ್ ಮಾಜಿ ಸ್ಪರ್ಧಿಗಳಾದ ಕಿಶನ್ ಹಾಗೂ ನಿವೇದಿತಾ ಗೌಡ ಅವರಿಗೂ ಢವಢವ ಶುರುವಾಗಿದೆ.













Click it and Unblock the Notifications