Bigg Boss: 'ನನಗೆ ಅವಮಾನ ಮಾಡಿದವರ ಮುಂದೆ ಬೆಳೆಯೋದು ನನಗೆ ತುಂಬಾ ಇಷ್ಟ'- ಬಿಗ್ಬಾಸ್ ವಿನ್ನರ್
ಬಿಗ್ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆದ ಬಳಿಕ ಗಾಯಕ ಹನುಮಂತ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದ್ದಾರೆ. ಸಾಕಷ್ಟು ಏಳು-ಬೀಳು, ನೋವು-ನಲಿವು, ಕಷ್ಟ, ಸಮಸ್ಯೆಗಳನ್ನೆಲ್ಲಾ ದಾಟಿದ ಹನುಮಂತ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೆ. ಹೀಗೆ ಈ ಹಿಂದೆ ಬಿಗ್ಬಾಸ್ ಕನ್ನಡ ಸೀಸನ್ 6ರಲ್ಲಿ ಶಶಿಕುಮಾರ್ ವಿಜೇತರಾಗಿದ್ದರು. ಅವರೀಗ ಯಾರಿಗೂ ಗೊತ್ತಿಲ್ಲದ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರಿಗಾದ ಅವಮಾನ ಇಂದು ಅವರ ಸಾಧನೆಯ ಮೆಟ್ಟಿಲಾಗಿ ಪರಿವರ್ತನೆಯಾಗಿದೆ. ಹಾಗಾದರೆ ಶಶಿಕುಮಾರ್ ಹೇಳಿದ್ದೇನು?
ಖಾಸಗಿ ವಾಹಿನಿಯೊಂದಿಗಿನ ಸಂದರ್ಶನವೊಂದರಲ್ಲಿ ಮಾತನಾಡಿದ ಶಶಿ ಬಿಗ್ಬಾಸ್ ಮನೆಗೆ ಹೋಗುವ ಮುನ್ನ ಯಾವೆಲ್ಲಾ ರೀತಿ ಸಮಸ್ಯೆಗಳನ್ನು ಅನುಭವಿಸಿದರು ಎನ್ನುವುದನ್ನು ಹಂಚಿಕೊಂಡಿದ್ದಾರೆ. ಆ ಅವಮಾನದಿಂದ ಅವರ ಜೀವನದಲ್ಲಿ ಯಾವೆಲ್ಲಾ ಬದಲಾವಣೆ ಆಯ್ತು ಎನ್ನುವ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. ಹಾಗಾದರೆ ಶಶಿ ಯಾವೆಲ್ಲಾ ಸಮಸ್ಯೆಗಳನ್ನು ಅನುಭವಿಸಿದರು? ಸಾಕಷ್ಟು ಅವಮಾನ ಅನುಭವಿಸಿದ ಬಳಿಕ ಅವರ ಜೀವನ ಈಗ ಹೇಗಿದೆ? ಎಲ್ಲವನ್ನೂ ತಿಳಿಯೋಣ.

ಅವಮಾನವೇ ಸಾಧನೆಯ ಮೆಟ್ಟಿಲು- ಶಶಿಕುಮಾರ್
ಶಶಿಕುಮಾರ್ ಒಬ್ಬ ಆಧುನಿಕ ಮಾದರಿಯ ರೈತರಾಗಿದ್ದಾರೆ. ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದವರಾದ ಶಶಿ ಜಾನಪದ ಕಲಾವಿದರು. ಭೂಮಿಯನ್ನು ಭೋಗ್ಯಕ್ಕೆ ಪಡೆದು ಅದರಲ್ಲಿ ಕೋಳಿ ಹಾಗೂ ಕುರಿ ಸಾಕಾಣಿಕೆ ಮಾಡುವುದೇ ಅವರ ದನಿತ್ಯದ ಕಾರ್ಯ. ಅಲ್ಲದೆ ಜೋಳ ಮತ್ತು ಟೊಮೆಟೊ ಕೂಡ ಬೆಳೆಯುತ್ತಾರೆ. ಇದರೊಂದಿಗೆ ತಂದೆಯ ಟೆಕ್ಸ್ಟೈಲ್ಸ್ ಅಂಗಡಿಯನ್ನೂ ನೋಡಿಕೊಳ್ಳುತ್ತಾರೆ.
ಇಷ್ಟೆಲ್ಲಾ ಮಾಡಿಕೊಂಡು ತಮ್ಮ ಪಾಡಿಗೆ ತಾವು ಜೀವನ ನಡೆಸುತ್ತಿದ್ದರೂ ಕೂಡ ಜನ ಶಶಿ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದರು. ಸ್ನೇಹಿತರು, ಆತ್ಮೀಯರು, ಸಂಬಂಧಿಕರು, ನೆರೆಹೊರೆಯವರಿಂದ ಶಶಿಕುಮಾರ್ ಸಾಕಷ್ಟು ಅವಮಾನವನ್ನು ಅನುಭವಿಸಿದ್ದಾರೆ. ಬಿಗ್ಬಾಸ್ ಮನೆಗೆ ಹೋಗುವ ಮೊದಲು ಶಶಿಕುಮಾರ್ ಅವರು ಕತ್ತೆ ಹಾಗೂ ನಾಯಿ ಸಾಕುತ್ತಿದ್ದರು ಎಂದು ಜನ ಹೀಯಾಳಿಸುತ್ತಿದ್ದರು. ಶಶಿ ಅವರನ್ನ ಅವನೇನೋ ಮಾಡಿಕೊಂಡಿದ್ದಾನೆ ಬಿಡಿ ಅಂತ ಒಂದು ರೀತಿ ಕೀಳಾಗಿ ನೋಡುತ್ತಿದ್ದರು ಜನ.

ಆದರೆ ಇದ್ಯಾವುದಕ್ಕೂ ತಲೆ ಕಡೆಸಿಕೊಳ್ಳದ ಶಶಿ ಸಿನಿಮಾ ಮಾಡಿದರು. 'ಮೆಹಬೂಬಾ' ಸಿನಿಮಾ ರಿಲೀಸ್ ಆಗಲಿಲ್ಲ. ಸಿನಿಮಾ ರಿಲೀಸ್ ಆಗಿಲ್ಲ ಅನ್ನೋದನ್ನೂ ಕೂಡ ಜನ ಕೀಳಾಗಿ ಮಾತನಾಡಲು ಶುರು ಮಾಡಿದರು. ಸಿನಿಮಾ ಮಾಡಿ ಹಿಟ್ ಆಗಿಲ್ಲ ಅಂತಲೂ ಜನ ಅವಮಾನ ಮಾಡಿದರು. ಹಣ ಕಳೆದುಕೊಂಡ, ಸೋತ, ಇನ್ಮುಂದೆ ಮುಂದೆ ಬರೋದೇ ಇಲ್ಲ ಎಂದೆಲ್ಲಾ ಸಂಬಂಧಿಕರು ಮಾತನಾಡಿಕೊಂಡರು. ಆದರೆ ಶಶಿ ತಮ್ಮ ಶ್ರಮವನ್ನು ನಂಬಿದರು. ತಮ್ಮ ಶ್ರಮದ ಫಲ ತಮಗೆ ಸಿಕ್ಕೇಸಿಗುತ್ತೆ ಅನ್ನೋ ಭರವಸೆ ಇಟ್ಟುಕೊಂಡರು.
ಬೀದಿ ಬದಿ ಊಟ, 5 ಸ್ಟಾರ್ ಹೋಟೆಲ್ ಊಟ ತಿನ್ನಲೂ ರೆಡಿ- ಶಶಿ
ಸರಳ ಜೀವನ ಮಾಡಿಕೊಂಡು ಬಂದಿರುವ ಶಶಿ ಶ್ರಮಪಟ್ಟು ಮುಂದೆ ಬಂದವರು. ಅವರನ್ನು ಅವಮಾನಗಳು ಸಿಕ್ಕಾಪಟ್ಟೆ ಕುಗ್ಗಿಸುತ್ತಿದ್ದವು. ಅಷ್ಟೇ ಅಲ್ಲ ತಾಯಿಯ ಬಳಿ ಹೋಗಿ ಸಂಬಂಧಿಕರು, ಸ್ನೇಹಿತರು ಶಶಿ ಹಣ ಕಳೆದುಕೊಂಡು ತುಂಬಾ ತೊಂದರೆಯಲ್ಲಿ ಇದ್ದಾನೆ ಎನ್ನುವ ಮಾತುಗಳನ್ನ ಹೇಳಿಬಿಟ್ಟಿದ್ದರು. ಇದರಿಂದಾಗಿ ಶಶಿ ಅವರಿಗೆ ಸಿಕ್ಕಾಪಟ್ಟೆ ಬೇಸರ ಆಗಿತ್ತು. ಆದರೆ ಜನ ಹೇಳುವಂತೆ ಶಶಿ ಸಮಸ್ಯೆಗಳನ್ನು ಎದುರಿಸುತ್ತಿರಲಿಲ್ಲ. ತಮ್ಮ ತಾಯಿಗೆ ತಾವು ಖರೀದಿ ಮಾಡಿದ ಭೂಮಿ ಎಲ್ಲದರ ಬಗ್ಗೆ ವಿವರಿಸಿ ಸಮಾಧಾನ ಮಾಡಿದ್ದರು. ತಾವು ಮಾಡಿದ ಕೆಲಸ, ಸಂಪಾದಿಸಿದ ಆಸ್ತಿಯನ್ನು ಗೌಪ್ಯವಾಗಿ ಇಟ್ಟಿದ್ದರಂತೆ ಶಶಿ.
ನಮ್ಮ ಸಾಧನೆಗಳನ್ನು ಗುರುತಿಸದವರೂ ಇದ್ದಾರೆ- ಶಶಿ
ಇನ್ನೂ ಮುಂದುವರೆದು ಮಾತನಾಡಿದ ಶಶಿ, 'ಶಶಿ ಅವರಿಗೆ ಸಹಾಯ ಮಾಡಿದವರೆಲ್ಲಾ ಜೀವನದುದ್ದಕ್ಕೂ ನನ್ನಿಂದ ಶಶಿ ಬದುಕುತ್ತಿದ್ದಾನೆ. ನಾನೇ ಅವನನ್ನ ಮೇಲಕ್ಕೆ ತಂದಿದ್ದು' ಎನ್ನುತ್ತಾರೆ. ಆದರೆ ಇಲ್ಲಿ ನಾವು ಮಾಡಿದ ಎಫರ್ಟ್ ಕಾಣಿಸುವುದಿಲ್ಲ. ನಮ್ಮ ಶ್ರಮವನ್ನು ಗುರುತಿಸುವುದೇ ಇಲ್ಲ. ಇದು ಶ್ರಮಜೀವಿಗೆ ತುಂಬಾ ನೋವಾಗುತ್ತದೆ ಎಂದು ಶಶಿ ಹೇಳಿದರು.
'ಇದೆಲ್ಲಾ ನೋವು ಅನುಭವಿಸಿ ಬಿಗ್ಬಾಸ್ ಮನೆಗೆ ಹೋದೆ. ಅಲ್ಲಿ ವಿಜೇತರಾದ ಬಳಿಕ ನನ್ನ ಬದುಕು ಬದಲಾಯಿತು. ಜನ ಈ ಹಿಂದೆ ಮಾತನಾಡುವ ರೀತಿ ಬದಲಾಯಿಸಿಕೊಂಡರು. ನಾವು ತುಂಬಾ ಚೆನ್ನಾಗಿ ಬದುಕಬೇಕು ಅಂತ ಅಂದುಕೊಳ್ಳುತ್ತೇವೆ. ಆದರೆ ಸಮಾಜದಲ್ಲಿ ಹೇಗೆ ಬದುಕಿದರೂ ಕಷ್ಟ. ಆದರೆ ನಾವು ನಾವಾಗಿ ಬದುಕಬೇಕು ಅನ್ನೋದನ್ನು ನನಗೆ ಬಿಗ್ಬಾಸ್ ಕಲಿಸಿಕೊಟ್ಟಿದೆ. ಆ ಪಾಠದಿಂದ ನಾನು ಸಿಕ್ಕಾಪಟ್ಟೆ ಕಲಿತಿದ್ದೇನೆ. ಶ್ರಮಪಟ್ಟು ಮುಂದೆ ಬಂದಿದ್ದೇನೆ. ನನಗಾದ ಅವಮಾನ ನನ್ನ ಜೀವನದ ಸಾಧನೆಗೆ ಮೆಟ್ಟಿಲು' ಎಂದಿದ್ದಾರೆ ಶಶಿ. ಒಟ್ಟಿನಲ್ಲಿ ಇಂದು ಸಾಧನೆಯ ಹಿಂದೆ ಸಾಕಷ್ಟು ಪರಿಶ್ರಮ ಹಾಗೂ ಹೋರಾಟ ಇರುತ್ತದೆ ಅನ್ನೋದಕ್ಕೆ ಬಿಗ್ಬಾಸ್ ವಿನ್ನರ್ ಶಶಿಕುಮಾರ್ ಅವರೇ ಸಾಕ್ಷಿ.












Click it and Unblock the Notifications