ಬೆಂಗಳೂರಿನ ಯುವತಿಯರು "ಡಗಾರ್" ಮಲಯಾಳಂ ಸಿನಿಮಾ ದೃಶ್ಯ: ಕನ್ನಡಿಗರ ಆಕ್ರೋಶ!
ಬೆಂಗಳೂರಿನಲ್ಲಿ ಪರಭಾಷಿಕರು ಹಾಗೂ ವಲಸಿಗರ ಹಾವಳಿ ಕಡಿಮೆಯಾಗುತ್ತಿಲ್ಲ. ವಾರದಲ್ಲಿ ಒಂದಾದರೂ ವಲಸಿಗರು ಹಾಗೂ ಕನ್ನಡಿಗರ ನಡುವೆ ವಾಗ್ವಾದ, ವಾಕ್ಸಮರಗಳು ನಡೆಯುತ್ತಿವೆ. ಇದರ ನಡುವೆ ಮಲಯಾಳಂ ಭಾಷೆಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಲೋಕಾ ಎನ್ನುವ ಸಿನಿಮಾದಲ್ಲಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ತೋರಿಸಿದ್ದಾರೆ ಎನ್ನುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಬರಹಗಾರ ಹಾಗೂ ಸಿನಿಕರ್ಮಿ "ಎ.ಎಸ್.ಜಿ" ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರ ಬರಹ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ಹಲವು ಕನ್ನಡಿಗರು ಈ ಸಿನಿಮಾದಲ್ಲಿ ಬೆಂಗಳೂರಿನ ಬಗ್ಗೆ ಚಿತ್ರೀಕರಿಸಿರುವ ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎ.ಎಸ್.ಜಿ ಅವರು ಹೇಳುತ್ತಾರೆ ಮೊನ್ನೆ ಮಲಯಾಳಂನ 'ಲೋಕಾ' ಎಂಬ ಚಿತ್ರವನ್ನು ನೋಡಲು ಹೋಗಿ ಕುಳಿತವನಿಗೆ ಸಿನಿಮಾ ಶುರುವಾದ ಸ್ವಲ್ಪ ಹೊತ್ತಿಗೆ ಬಂದ ಒಂದು ದೃಶ್ಯ ದಿಢೀರೆಂದು ಕೋಪ ತರಿಸಿತ್ತು. ಕಾರಣ ಆ ದೃಶ್ಯದಲ್ಲಿದ್ದ ಪಾತ್ರ ಆಡುವಂತಹ ಮಾತು. ಕಥೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಅದರಲ್ಲಿನ ಆ ಪೊಲೀಸ್ ಪಾತ್ರ ಮದುವೆಯ ಬಗ್ಗೆ ತನ್ನ ತಾಯಿಯೊಂದಿಗೆ ಮಾತನಾಡುವಾಗ "ನಾನು ಮದ್ವೆ ಆಗಲ್ಲ ಅಂತ ಹೇಳ್ತಿಲ್ಲ, ಆದರೆ ಈ ಊರಿನ ಹುಡುಗಿಯರನ್ನ ಆಗಲ್ಲ ಅಂತ ಹೇಳ್ತಿರೋದು, ಯಾಕಂದರೆ ಈ ಊರಲ್ಲಿರೋ ಹುಡ್ಗೀರೆಲ್ಲ ಡಗಾರ್ಗಳು" ಎಂದು ಹೇಳಿದ ತಕ್ಷಣ ಕೋಪ ಸರ್ನೆ ಏರಿತ್ತು.
ಇದೇ ಮಲಯಾಳಿಗಳು ತಮ್ಮನ್ನು ಮತ್ತು ತಮ್ಮ ಭಾಷೆಯನ್ನು ಸರಿಯಾಗಿ ಚಿತ್ರಿಸುತ್ತಿಲ್ಲವೆಂದು ಇತ್ತೀಚೆಗಿನ ಹಿಂದಿ ಸಿನಿಮಾ 'ಪರಮ್ ಸುಂದರಿ' ಚಿತ್ರದ ಮೇಲೆ ತಮ್ಮ ಕೋಪ, ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಅದೂ ಕೂಡ ಒಬ್ಬರು ಇಬ್ಬರಲ್ಲದೆ ಸಾಲು ಸಾಲಾಗಿ ರೀಲ್ಸ್ ಮಾಡುವ ಮೂಲಕ ಅದನ್ನು ವಿರೋಧಿಸಿದ್ದರು. ಆ ವಿರೋಧಕ್ಕೆ ನನ್ನ ಅಭಿಮತವೂ ಇದೆ. ಇನ್ನೊಂದು ರಂಗದವರ ತಪ್ಪನ್ನು ವಿರೋಧಿಸುವವರಿಗೆ ಸುಮಾರು ಹತ್ತದಿನೈದು ವರ್ಷಗಳಿಂದ ಬೆಂಗಳೂರಿನಲ್ಲಿ ತಮ್ಮ ಕಥೆಗಳು ನಡೆಯುವಂತ ಸಿನಿಮಾ ಮಾಡುತ್ತಿದ್ದರೂ ಇಲ್ಲಿನ ಬದುಕಿನ ಬಗ್ಗೆ, ಈ ನಗರದ ಬಗ್ಗೆ, ಇಲ್ಲಿನ ಜನಗಳ ಬಗ್ಗೆ ಅರ್ಥವಾಗದಿರುವುದು ನಿಜಕ್ಕೂ ವಿಷಾದಕರ.
ಉದಾಹರಣೆಗೆ ಬಂದರೆ ಇದೆ ಚಿತ್ರದಲ್ಲಿ ಈ ಸಂಭಾಷಣೆಯ ಹೊರತಾಗಿ ಹಲವು ಕನ್ನಡ ಪಾತ್ರಗಳು ಮಾತನಾಡುವ ಕನ್ನಡ ನಿಜಕ್ಕೂ ಅಸಹ್ಯ ಹುಟ್ಟಿಸುತ್ತದೆ. ತಮಿಳುನಾಡಿನಲ್ಲಿ ನಡೆಯುವ ಕಥೆಗೆ ತಮಿಳಿನ ನಟರನ್ನೇ ಆಯ್ದುಕೊಳ್ಳುವ ಇವರಿಗೆ ಬೆಂಗಳೂರಿನಲ್ಲಿ ನಡೆಯುವ ಕಥೆಗಳಿಗೆ ಇಲ್ಲಿನ ಕನ್ನಡ ಗೊತ್ತಿರುವ ನಟರನ್ನು ಹಾಕಿಕೊಳ್ಳುವುದು ಕಷ್ಟವೇ? ಮತ್ತು ಇವರುಗಳು ಕಂಡಿರುವಂತೆ ಬೆಂಗಳೂರು ಎಂಬುದು ಕೋರಮಂಗಲ, ಹೆಚ್ಎಸ್ಆರ್, ವೈಟ್ಫೀಲ್ಡ್ ಇಷ್ಟಕ್ಕೆ ಸೀಮಿತವೇ. ಪಾರ್ಟಿ, ಪಬ್ಬು, ಗಾಂಜಾಸೇವನೆ ಇವಷ್ಟೇ ಇಲ್ಲಿ ಕಾಣುವುದು ? ಇದನ್ನೆಲ್ಲಾ ಗಮನಿಸುವಾಗ ಅಲ್ಲಿನ ಜನ ದಿನನಿತ್ಯ ಈ ರೀತಿ ಚಟಗಳಲ್ಲೇ ಇರುತ್ತಾರೇನೋ ಅದಕ್ಕೆ ಇಲ್ಲಿಯೂ ಅದನ್ನು ಸಾಮಾನ್ಯ ಎಂಬಂತೆ ತೋರಿಸುತ್ತಾರೇನೋ ಎಂಬ ಗಟ್ಟಿಯಾದ ಕೋಪ ತುಂಬಿದ ಪ್ರಶ್ನೆ ಹೊರಬರುತ್ತದೆ ಎಂದಿದ್ದಾರೆ.
ಲೋಕಾ ಸಿನಿಮಾದಲ್ಲಿನ ಪೊಲೀಸ್ ಪಾತ್ರದ ಹೆಸರು "ನಾಚಿಯಪ್ಪಗೌಡ", ಪಾತ್ರ ನಿರ್ವಹಿಸುತ್ತಿರುವ ನಟ ತಮಿಳಿನವರು, ಕನ್ನಡದ ಅರಿವಿರುವ ಒಬ್ಬನೇ ಒಬ್ಬ ನಟ ಎಲ್ಲಿಯೂ ಕಾಣುವುದಿಲ್ಲ. ನೂಲಿನಂತೆ ಬಗೆಹರಿಸಿಕೊಳ್ಳಬಹುದಾದ ಸಮಸ್ಯೆಗಳನ್ನು ತಾತ್ಸಾರದಿಂದ ನೋಡುವುದರಿಂದ ಮತ್ತು ಇಲ್ಲಿನ ಜನಗಳು ಕೂಡ ಏನು ಕೇಳುವುದಿಲ್ಲ ಎಂಬ ದರ್ಪದಿಂದ ಹೀಗೆ ಮಾಡುತ್ತಾರೇನೋ ಎನಿಸುತ್ತದೆ.
ಇವರುಗಳು ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂದು ಚಿತ್ರಿಸಿ ಬರುತ್ತಿರುವ ಎಷ್ಟೋ ಕಥೆಗಳಿಗೆ ಬೆಂಗಳೂರೇ ಬೇಕಾ? ಎಂದು ಪ್ರಶ್ನೆ ಹಾಕಿಕೊಂಡರೆ ಅದಕ್ಕೆ ಉತ್ತರ ಹಾಗೇನಿಲ್ಲ ಎಂಬುದೇ ಸಿಗುತ್ತದೆ. ಆದರೂ ಇವರುಗಳಿಗೆ ಬೆಂಗಳೂರು ಬೇಕೇ ಬೇಕು. ಅಷ್ಟು ಅದರ ಅವಶ್ಯಕತೆ ಇದೆ ಅನ್ನುವಾಗ ಅದಕ್ಕಾಗಿ ಏನು ಮಾಡಬೇಕು ಎಂಬುದನ್ನು ಅರಿತು ಮಾಡಬೇಕು. ಅದು ಬಿಟ್ಟು ತಮ್ಮ ಮೂಗಿನ ನೇರಕ್ಕೆ ಇಲ್ಲಿನ ಬದುಕನ್ನು, ಜನರನ್ನು ತಪ್ಪು ತಪ್ಪಾಗಿ ಚಿತ್ರಿಸುವುದು ಎಂದಿಗೂ ಒಪ್ಪುವಂತದ್ದಲ್ಲ, ಇದನ್ನು ಒಕ್ಕೊರಲಿನಿಂದ ಖಂಡಿಸಲೇಬೇಕು ಎಂದು ಹೇಳಿದ್ದಾರೆ. ಎ.ಎಸ್.ಜಿ ಅವರ ಮಾತನ್ನು ಹಲವು ಕನ್ನಡಿಗರು ಪುನರುಚ್ಚರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯ ಗಂಭೀರ ಚರ್ಚೆಗೆ ಕಾರಣವಾಗಿದೆ.












Click it and Unblock the Notifications