ಗಂಡನನ್ನು ನೆನೆದು ಕಣ್ಣೀರಿಡುವುದ್ಯಾಕೆ ನಟಿ ಜಾನ್ವಿ: ವಿಚ್ಛೇದನದ ಬಳಿಕ ಆಗಿದ್ದೇನು?
ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಪ್ರವೇಶಿಸಿದ ಜನಪ್ರಿಯ ನಿರೂಪಕಿ ಜಾನ್ವಿ ಈಗ ಕನ್ನಡ ಚಿತ್ರರಂಗದ ನಟಿ. ಜಾನ್ವಿ ನಾಯಕಿಯಾಗಿ ನಟಿಸಿರುವ ಅಧಿಪತ್ರ ಸಿನಿಮಾ ಫೆಬ್ರವರಿ 7ರಂದು ತೆರೆಕಾಣಲಿದೆ. ಜಾನ್ವಿ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಜೊತೆಯಾಗಿ ಅಧಿಪತ್ರ ಚಿತ್ರದಲ್ಲಿ ನಟಿಸಿದ್ದು, ಸದ್ಯ ಜಾನ್ವಿ ಸಿನಿಮಾ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ.
ಗಿಚ್ಚಿ ಗಿಲಿಗಿಲಿ ಸೀಸನ್ 2, ಫ್ಯಾಮಿಲಿ ಗ್ಯಾಂಗ್ಸ್ಟರ್ ಮತ್ತು ಸವಿರುಚಿ ಕಾರ್ಯಕ್ರಮಗಳಲ್ಲಿ ಮಿಂಚಿದ ಜಾನ್ವಿ ಸೋಶಿಯಲ್ ಮೀಡಿಯಾ ಸೇರಿದಂತೆ ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಆದರೆ ಜಾನ್ವಿ ಜೀವನದಲ್ಲಿ ಇತ್ತೀಚಿಗೆ ಕಹಿ ಘಟನೆಯೊಂದು ನಡೆದಿದ್ದು, ಜಾನ್ವಿ ತಮ್ಮ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದೀಗ ವಿಚ್ಛೇದನದ ಬಳಿಕ ಜೀವನ ಹೇಗಿದೆ ಎನ್ನುವುದರ ಬಗ್ಗೆ ಸ್ವತಃ ಜಾನ್ವಿ ಮಾತನಾಡಿದ್ದಾರೆ.

ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ ಅವರು, 'ಮೊದಲು ಏನೇ ಮಾಡಬೇಕು ಅಂದರೂ ಇಬ್ಬರು ಯೋಚನೆ ಮಾಡಬೇಕಿತ್ತು. ಸಂಪಾದನೆ ಕೂಡ ಶೇರ್ ಆಗುತ್ತಿತ್ತು. ಮನೆಯ ಪ್ರತಿಯೊಂದು ವಿಚಾರವು ಕೂಡ ನಾವಿಬ್ಬರು ಸೇರಿಯೇ ನಿರ್ಧಾರ ಮಾಡಬೇಕಿತ್ತು. ಮುಖ್ಯವಾಗಿ ನನಗೇನೋ ಇಷ್ಟವಿದ್ದು, ಅವರಿಗೆ ಇಷ್ಟ ಇಲ್ಲ ಅಂದರೆ ಅದನ್ನು ಮಾಡಲು ಆಗುತ್ತಿರಲಿಲ್ಲ. ಒಂದಿಷ್ಟು ಭಿನ್ನಾಭಿಪ್ರಾಯಗಳು, ಜಗಳಗಳು ಸಾಮಾನ್ಯವಾಗಿ ಇರುತ್ತಿತ್ತು'.
'ಕುಟುಂಬ ಅಂತಾ ಬಂದಾಗ ಭವಿಷ್ಯದ ಯೋಚನೆಗಳು ಕೂಡ ಇದ್ದೇ ಇರುತ್ತದೆ. ಈಗ ನಾನೊಬ್ಬಳೆ ಇರುವುದು ಹೀಗಾಗಿ ಮಗನ ಭವಿಷ್ಯ ರೂಪಿಸುವ ಜವಾಬ್ದಾರಿ ಇರುತ್ತದೆ. ಅವನ ಕಾಲಮೇಲೆ ಅವನು ನಿಲ್ಲಬೇಕು ಎನ್ನುವ ಆಲೋಚನೆ ಎಲ್ಲಾ ಇರುತ್ತದೆ. ಆದರೆ ದೂರ ಆದ ಮೇಲೆ ಎಷ್ಟೇ ಸ್ಟ್ರಾಂಗ್ ವ್ಯಕ್ತಿಯಾದರೂ ಕೂಡ ನೋವಿರುತ್ತದೆ' ಎಂದರು.
'ನನಗೆ ತುಂಬಾ ಒತ್ತಡ ಅನಿಸಿ ಮಲಗಿದಾಗ ಥಟ್ಟನೆ ಎಚ್ಚರ ಆಗುತ್ತದೆ. ಹದಿನಾಲ್ಕು ವರ್ಷ ಜೊತೆಯಲ್ಲಿದ್ದು, ದೂರಾಗಿ ಬಿಟ್ವಾ? ಅಯ್ಯೋ ಅಂತಾ ಒಂಥರಾ ಸಂಕಟ ತರ ಅನಿಸುತ್ತದೆ. ಆಗ ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ. ನಾವೆಲ್ಲಾ ಮನುಷ್ಯರು ಈ ರೀತಿ ಎಲ್ಲಾ ಆಗೇ ಆಗುತ್ತದೆ. ಡಿವೋರ್ಸ್ ಆಗುತ್ತದೆ ಎಂದು ನಾವು ಅಂದುಕೊಂಡೆ ಇರಲಿಲ್ಲ. ಹೀಗೆಲ್ಲಾ ಆಯ್ತಾ? ಇಷ್ಟೆಲ್ಲಾ ನಡೆದು ಹೋಯ್ತಾ? ಅಂತಾ ಅನಿಸಿಬಿಡುತ್ತದೆ' ಎಂದು ಹೇಳಿದರು.

'ಸಂಕಟ ಆದಾಗ ನಾನು ಅತ್ತರೆ ಅಮ್ಮನಿಗೆ ಬೇಸರ ಆಗುತ್ತದೆ ಎಂದು ನಾನು ಯಾರೂ ಇಲ್ಲದಾಗ ಅಳುತ್ತೇನೆ. ಸ್ನಾನ ಮಾಡುವಾಗ ಅಳುತ್ತೇನೆ, ಇಲ್ಲ ರಾತ್ರಿ ಎಲ್ಲರೂ ಮಲಗಿದ ಮೇಲೆ ಅಳುತ್ತೇನೆ. ಈಗಲೂ ಅಳು ಬರುತ್ತದೆ. ಅರ್ಹ ಅಲ್ಲದ ವ್ಯಕ್ತಿಗಾಗಿ ಅಳಬಾರದು ಅಂತಾ ಅಂದುಕೊಳ್ಳುತ್ತೇವೆ ಆದರೆ ಅವರಿಗೋಸ್ಕರ ಅಲ್ಲದೇ ಇದ್ದರೂ ಆ ಹದಿನಾಲ್ಕು ವರ್ಷದ ಜೀವನವನ್ನು ನೆನೆಸಿಕೊಂಡು ಭಾವುಕರಾಗುತ್ತೇವೆ'.
'ಆ ಹದಿನಾಲ್ಕು ವರ್ಷದಲ್ಲಿ ಎಷ್ಟೇ ನೆಗೆಟಿವ್ ಇದ್ದರೂ ಒಂದೊಂದಾರೂ ಒಳ್ಳೆಯದು ಇದ್ದೇ ಇರುತ್ತದೆ. ಅದೆಲ್ಲಾ ನೆಪಿಸಿಕೊಂಡಾಗ ಖಂಡಿತಾ ಅಳು ಬರುತ್ತದೆ. ಆದರೆ ಮರು ದಿನವೇ ಅಥವಾ ಮರು ಕ್ಷಣವೇ ಸರಿಹೋಗಿ ಬಿಡುತ್ತೇನೆ. ಯಾವಾಗ ಯಾವಾಗ ನೆನಪಿಗೆ ಬರುತ್ತದೆ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಸವಿ ರುಚಿ ಶೂಟಿಂಗ್ ಸಮಯದಲ್ಲಿ ನೆನಪಾಗುತ್ತದೆ. ಆಗ ನನಗೆ ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ' ಎಂದು ನಟಿ ಜಾನ್ವಿ ಹೇಳಿದರು.












Click it and Unblock the Notifications