Nayana Nagaraj: ಶೂಟಿಂಗ್ಗಾಗಿ ಈ ಲೆವೆಲ್ಗೆ ಇಳಿದು ಬಿಡ್ತೀರಾ? ಗಿಣಿರಾಮ ಸೆಟ್ನಲ್ಲಿ ಆಗಿದ್ದೇನು?
ಗಿಣಿರಾಮ, ಪಾಪ ಪಾಂಡು ಧಾರಾವಾಹಿ ನಟಿ ನಯನಾ ನಾಗರಾಜ್ ಯಾರಿಗೆ ಗೊತ್ತಿಲ್ಲ ಹೇಳಿ. ಚಂದದ ನಗು, ಪಟ ಪಟ ಮಾತು, ಕೇಳುಗರನ್ನು ಮಂತ್ರ ಮುಗ್ಧಗೊಳಿಸುವ ಧ್ವನಿ.. ಹೀಗೆ ತಮ್ಮದೇ ಆದ ಪ್ರತಿಭೆ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ನಟಿ. ಗಿಣಿರಾಮ ಧಾರಾವಾಹಿಯಲ್ಲಿ ಮಹತಿ ಪಾತ್ರದ ಮೂಲಕ ಜನಪ್ರಿಯತೆಯನ್ನು ಪಡೆದ ನಯನಾ ನಾಗರಾಜ್ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಗಿಣಿರಾಮ ಸೆಟ್ನಲ್ಲಿ ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
ರೆಡಿಯೋ ಸಿಟಿ ಸಂದರ್ಶನಲ್ಲಿ ಮಾತನಾಡಿದ ಅವರು, ಕೋವಿಡ್ ಪಾಸಿಟಿವ್ ಬಂದಾಗಲೂ ನಾನು ಕೆಲಸ ಮಾಡಿದ್ದೇನೆ. ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ನನ್ನ ತಾಯಿಗೂ ನನಗೂ ಇಬ್ಬರಿಗೂ ಕೋವಿಡ್ ಲಕ್ಷಣಗಳಿದ್ದವು. ಗಿಣಿರಾಮ ಟೀಂ ಅವರಿಗೆ ಹೇಳಿದೆ ನನಗೆ ಕೆಮ್ಮು ಇದೆ. ನನ್ನ ತಾಯಿಗೆ ಕೋವಿಡ್ ಇದೆ. ನನಗೂ ಇರಬಹುದು ನಾನು ಶೂಟಿಂಗ್ಗೆ ಬರಲ್ಲ ಸರ್ ಅಂತಾ ಹೇಳಿದೆ ಆದರೆ ಅವರು ಅದನ್ನು ತುಂಬಾ ಲೈಟ್ ಆಗಿ ತೆಗೆದುಕೊಂಡು ಬಾರಮ್ಮ ಏನಾಗಲ್ಲ ಅಂದರು.

ಆದರೆ ಶೂಟಿಂಗ್ಗೆ ಹೋಗೋಕೆ ನನಗೆ ಭಯ ಆಗುತ್ತಿತ್ತು. ಯಾಕೆಂದರೆ ಸೆಟ್ನಲ್ಲಿ ವಯಸ್ಸಾದವರಿದ್ದರು. ಅನಾರೋಗ್ಯ ಇರುವವರೂ ಕೂಡ ಇದ್ದರು. ಬೇರೆಯವರಿಗೆ ಬರುತ್ತೋ ಬಿಡುತ್ತೋ ನಾವು ಜಾಗ್ರತೆಯಿಂದ ಇರುವುದು ಮುಖ್ಯವಾಗಿತ್ತು. ಯಾಕೆಂದರೆ ಅದರ ತೀವ್ರತೆನಾ ನಾವು ಹೊರಗಡೆ ನೋಡುತ್ತಿದ್ದೆವು. ಆದರೆ ಅವರಿಗೆ ಕೆಲಸ ಆಗಬೇಕಿತ್ತು. ಬರಲೇಬೇಕು ಅಂತಾ ತುಂಬಾ ಬಲವಂತ ಮಾಡಿದರು.
ಕೊನಗೆ ನಾನೇ ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ಬಂದರೆ ಬರುತ್ತೇನೆ ಅಂತಾ ಹೇಳಿದೆ. ಅವರು ಆಗಲ್ಲ ಟೆಸ್ಟ್ಗೆ ನಾನು ಒಬ್ಬರನ್ನು ಕಳುಹಿಸುತ್ತೇನೆ ಬೆಳಗ್ಗೆ ಟೆಸ್ಟ್ ಕೊಟ್ಟು ಬಾ ಅಂದು ಬಿಟ್ಟರು. ಒಂದು ಸ್ಯಾಂಪಲ್ ತೆಗೆದುಕೊಂಡು ಹೋಗಿದ್ದಕ್ಕೆ ನಾಲ್ಕು ಸಾವಿರ ತೆಗೆದುಕೊಂಡರು. ಯಾಕೆ ನಾಲ್ಕು ಸಾವಿರ ಅಂದರೆ ಸಂಜೆ ವೇಳೆ ರಿಪೋರ್ಟ್ ಕೊಡುತ್ತಾರೆ ಎನ್ನುವ ಕಾರಣಕ್ಕೆ.
ನನಗೆ ಫುಲ್ ಹುಷಾರಿಲ್ಲ ಅಂದರೂ ಶೂಟಿಂಗ್ಗೆ ಹೋದೆ. ಹಾಗೆ ಜಾಗ್ರತೆಯಾಗಿದ್ದೆ. ಯಾಕೆಂದರೆ ಇವರು ಹಠ ಮಾಡಿದಕ್ಕೆ ನಾನು ಬಂದೆ ನನ್ನಿಂದ ಬೇರೆಯವರಿಗೆ ತೊಂದರೆ ಆಗಬಾರದು ಅಂತಾ. ನಿರ್ದೇಶಕರಿಗೆ ಮೊದಲೇ ಹೇಳಿದ್ದೆ, ನಾನು ಯಾರ ಹತ್ತಿರ ನಿಂತು ಶೂಟಿಂಗ್ ಮಾಡಲ್ಲ. ಟೇಕ್ ಅಂದಾಗ ಮಾತ್ರ ಮಾಸ್ಕ್ ತೆಗೆಯುತ್ತೇನೆ. ತುಂಬಾ ಕ್ಲೋಸ್ ಅಪ್ ಬೇಡ. ಮಾಸ್ಕ್ ಹಾಕಿ ಮೇಕಪ್ ಹೋಗಿರುತ್ತದೆ. ಯಾರ ಹತ್ತಿರ ಇರುವ ಸೀನ್ಗಳನ್ನು ದಯವಿಟ್ಟು ಮಾಡಿಸಬೇಡಿ ಅಂದಿದ್ದೆ.

ಶೂಟಿಂಗ್ ರೂಮ್ಗಳನ್ನು ಸಹ ನಾನು ಬಳಸಿಲ್ಲ. ನಾನು ಮುಟ್ಟಿದ ಜಾಗಕ್ಕೆ ನಾನೇ ಸ್ಪ್ರೇ ಮಾಡುತ್ತಿದ್ದೆ. ನನ್ನ ಹತ್ತಿರ ಯಾರು ಬರುವುದಕ್ಕೂ ನಾನು ಬಿಡುತ್ತಿರಲಿಲ್ಲ. ನಿರ್ದೇಶಕರೂ ಕೂಡ ಅರ್ಥ ಮಾಡಿಕೊಂಡು ದೂರನೇ ನಿಂತು ಶೂಟಿಂಗ್ ಮಾಡಿಸಿದರು. ಸಂಜೆ ನನ್ನ ಕೋವಿಡ್ ರಿಪೋರ್ಟ್ ಪಾಸಿಟಿವ್ ಅಂತಾ ಬಂತು. ಅವಾಗ ಎಲ್ಲರಿಗೂ ಮೀಟರ್ ಆಫ್ ಆಯ್ತು.
ಅಲ್ಲಿ ತನಕ ಲೈಟ್ ಆಗಿ ತಗೊಂಡಿದ್ದವರು ಪಾಸಿಟಿವ್ ಬಂದ ತಕ್ಷಣ ಇಡೀ ಮನೆ ಸ್ಪ್ರೇ ಹಾಕಿಸಿದರು. ಹೊರಡಮ್ಮ ನೀನು ಅಂದರು. ಬರುವಾಗ ಪಿಕ್ ಮಾಡಿದಿರಿ, ಈಗ ಕಾರಲ್ಲೇ ಕಳಿಸಿ ಅಂದೆ. ನನ್ನ ಹುಷಾರಲ್ಲಂತೂ ನಾನಿದ್ದೆ. ಇದರ ಮೇಲೆ ನನಗೆ ಗೊತ್ತಿಲ್ಲ. ನನಗೆ ತುಂಬಾ ಬೇಜಾರು ಆಯ್ತು. ಶೂಟಿಂಗ್ಗೋಸ್ಕರ ನೀವು ಈ ಲೆವೆಲ್ಗೆ ಇಳಿದು ಬಿಡುತ್ತೀರಾ. ಇದೆಲ್ಲಾ ಆಚೆ ಕಡೆ ಗೊತ್ತಾಗಲ್ಲ. ನಿಜವಾಗಿಯೂ ಗೊತ್ತಾಗಲ್ಲ.
ಇದನೆಲ್ಲಾ ಯಾಕೆ ಹೇಳುತ್ತಿದ್ದೀನಿ ಅಂದರೆ ಆ ವ್ಯಕ್ತಿ ನನ್ನ ಲೈಫ್ ಹಾಳು ಮಾಡಲು ಯತ್ನಿಸಿದರು. ಯಾಕೆಂದರೆ ನಾನು ಗಿಣಿರಾಮ ಧಾರಾವಾಹಿಯನ್ನು ಬಿಟ್ಟೆ ಅಂತಾ. ನಾನೇ ಗಿಣಿರಾಮ ಕ್ವಿಟ್ ಮಾಡಿದ್ದು ಅಂತಾ ಆಚೆ ಕಡೆ ಯಾರಿಗೂ ಗೊತ್ತಿಲ್ಲ. ಕಳೆದ ವರ್ಷ ಜೂನ್ನಲ್ಲಿ ಈ ಧಾರಾವಾಹಿ ಮುಗಿಯಿತು. ನಾನು ಡಿಪ್ರೆಷನ್ಗೆ ಹೋಗಿದ್ದೆ ಇವರಿಂದ. ಶೂಟಿಂಗ್ ಇದೆ ಅಂತಾ ಕರೆ ಬಂದಾಗ ಅಳುತ್ತಿದ್ದೆ ಎಂದು ಗಿಣಿರಾಮ ಧಾರಾವಾಹಿ ಚಿತ್ರೀಕರಣದಲ್ಲಿ ನಡೆದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.












Click it and Unblock the Notifications