ಸ್ಯಾಂಡಲ್ ವುಡ್ ಹಿರಿಯ ನಟಿ ನಿಧನ: ಕ್ಯಾನ್ಸರ್ ವಿರುದ್ಧ ಹೋರಾಡಿ ಕೊನೆಯುಸಿರೆಳೆದ ಕಮಲಶ್ರೀ!
ಬೆಂಗಳೂರು, ಅಕ್ಟೋಬರ್ 01: ನಟ ಯಶವಂತ್ ಸರ್ದೇಶಪಾಂಡೆ ನಿಧನದ ನೋವು ಅರಗಿಸಿಕೊಳ್ಳುವ ಮುನ್ನವೇ, ಸ್ಯಾಂಡಲ್ ವುಡ್ ಹಿರಿಯ ನಟಿ ಹಾಗೂ ಗಟ್ಟಿಮೇಳ, ಕಾವೇರಿ ಕನ್ನಡ ಮೀಡಿಯಂ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಕಮಲಶ್ರೀ ಅವರು ನಿಧನರಾಗಿದ್ದಾರೆ. ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಹಿರಿಯ ನಟಿ ಕಮಲಶ್ರೀ (76) ಅವರು ನಿಧನರಾಗಿದ್ದಾರೆ.
ಕಮಲಶ್ರೀ ಅವರು ಗಟ್ಟಿಮೇಳ ಸೇರಿದಂತೆ ಹಲವಾರು ಹಿಟ್ ಸೀರಿಯಲ್ಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯ ಮಾಡಿದ್ದರು. ನಾಡಿನಾದ್ಯಂತ ಸಾಕಷ್ಟು ಮೆಚ್ಚುಗೆ ಹಾಗೂ ಅಭಿಮಾನಿಗಳನ್ನು ಪಡೆದಿದ್ದರು.
ಹಿರಿಯ ನಟಿ ಕಮಲಶ್ರೀ ಅವರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ನಟಿ ಕಮಲಶ್ರೀ ಅವರಿಗೆ ಕೆಲ ವರ್ಷಗಳಿಂದ ಸ್ತನ ಕ್ಯಾನ್ಸರ್ ಆಗಿತ್ತು. ಈ ರೋಗದ ವಿರುದ್ಧ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಸೆಪ್ಟೆಂಬರ್ 30 ರಂದು ನಿಧನರಾಗಿದ್ದಾರೆ.

ಗಟ್ಟಿಮೇಳ ಧಾರಾವಾಹಿಯ ವೇದಾಂತ್ ಅಜ್ಜಿ ಪಾತ್ರ ಮಾಡಿದ್ದ ನಟಿ ಕಮಲಶ್ರೀ ಅವರ ಅಂತ್ಯಕ್ರಿಯೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಅಕ್ಟೋಬರ್ 1ರಂದು ನಡೆಯಲಿದೆ. ಕಮಲಶ್ರೀ ಅವರಿಗೆ ಗಂಡ, ಮಕ್ಕಳು ಕೂಡ ಇಲ್ಲ. ಅನಾರೋಗ್ಯದ ಕಾರಣಕ್ಕೆ ದುಡಿಯಲು ಆಗದೆ, ಕೊನೆಯ ದಿನಗಳಲ್ಲಿ ಆರ್ಥಿಕವಾಗಿ ಹಿರಿಯ ನಟಿ ಕಮಲಶ್ರೀ ಅವರು ಕಷ್ಟಪಟ್ಟಿದ್ದರು. ಡಾ ರಾಜ್ಕುಮಾರ್ ಬ್ಯಾನರ್ನಲ್ಲಿಯೂ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ, ನಾಟಕದಲ್ಲಿಯೂ ಅಭಿನಯಿಸಿದ್ದಾರೆ. ಕಾವೇರಿ ಕನ್ನಡ ಮೀಡಿಯಂ, ಗಟ್ಟಿಮೇಳ, ಪತ್ತೆದಾರಿ ಪ್ರತಿಭಾ ಹೀಗೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದು, ಸೆಪ್ಟೆಂಬರ್ 30 ರಂದು ನಿಧನರಾಗಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಒಂದು ಚಾನೆಲ್ನಲ್ಲಿ ಮಾತನಾಡಿದ್ದ ಕಮಲಶ್ರೀ ಅವರು, ನನಗೆ ಕ್ಯಾನ್ಸರ್ ಆಗಿದೆ, ನನಗೆ ಸರ್ಜರಿ ಮಾಡೋದಕ್ಕೂ ಆಗಲ್ವಂತೆ, ವಯಸ್ಸಾಗಿದೆ. ಆಮೇಲೆ ಕಿಮೋಥೆರಪಿ ಕೊಟ್ಟರೆ ನಾನು ತಡ್ಕೊಳಲ್ವಂತೆ. ಅದಕ್ಕೆ ಸ್ವಲ್ಪ ದುಬಾರಿ ಮಾತ್ರೆಗಳೆಲ್ಲ ಬರೆದು ಕೊಡ್ತಾರೆ, ತಗೊಳ್ತಾ ಇದೀನಿ. ಆ ಮಾತ್ರೆಯಿಂದ ನನಗೆ ಸ್ವಲ್ಪ 60% ಪರವಾಗಿಲ್ಲ ಅಂತ ಡಾಕ್ಟರ್ ಹೇಳಿದ್ದಾರೆ. ಗಟ್ಟಿಮೇಳ ಧಾರಾವಾಹಿ ಕಲಾವಿದರು ನನಗೆ ತುಂಬ ಸಹಾಯ ಮಾಡಿದ್ದಾರೆ. ಗಿರಿಜಾ ಲೋಕೇಶ್, ಉಮಾಶ್ರೀ, ಗಟ್ಟಿಮೇಳ ಧಾರಾವಾಹಿ ಅಶ್ವಿನಿ ಹೀಗೆ ಸಾಕಷ್ಟು ಜನರು ಧನಸಹಾಯ ಮಾಡಿದ್ದಾರೆ. ಬೇರೆಯವರಿಗೆ ಕಷ್ಟ ಕೊಡೋಕೆ ನನಗೆ ಇಷ್ಟವಿಲ್ಲ. ನನಗೆ ದೇವರು ಏನಾದರೊಂದು ಕಷ್ಟ ಕೊಡುತ್ತಾನೆ, ಅದೇ ಬೇಸರ ಎಂದು ಹೇಳಿದ್ದರು.












Click it and Unblock the Notifications