ನಟ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಬಂಧನ: ಕಾರಣ ಇಲ್ಲಿದೆ
ಬೆಂಗಳೂರು, ಸೆಪ್ಟೆಂಬರ್ 10: ಕನ್ನಡ ಚಿತ್ರರಂಗದಲ್ಲಿ ಒಂದಾದ ಮೇಲೊಂದು ಅವಘಡಗಳು ನಡೆಯುತ್ತಲೇ ಇದೆ. ಸಾಮಾನ್ಯ ಜನರಿಗೆ ಮಾದರಿಯಾಗಬೇಕಿದ್ದ ನಟರು ಹಾಗೂ ಅವರ ಆಪ್ತರು ಈಗೀಗ ತಾವೇ ನೂರಾರು ವಿವಾದದಲ್ಲಿ ಸಿಲುಕಿ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದಾರೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಮೂರು ತಿಂಗಳು ಕಳೆಯುತ್ತಿದೆ. ಇದೀಗ ಮತ್ತೊಬ್ಬ ಜನಪ್ರಿಯ ನಟನ ಆಪ್ತನ ಬಂಧನವಾಗಿದೆ.
ವ್ಯಕ್ತಿಯೊಬ್ಬನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಎನ್ನುವಾತನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ಕೆಲ ದಿನಗಳ ಹಿಂದೆ ವಿಚಾರಣೆ ಎದುರಿಸಿದ್ದ ಅಶ್ವಿನ್ನನ್ನು ತನಿಖೆಯ ಮುಂದಿನ ಹಂತವಾಗಿ ಬಂಧಿಸಿದ್ದಾರೆ ಎನ್ನಲಾಗಿದೆ.

ಕಳೆದ ಮೇ 26ರ ರಾತ್ರಿ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಎಂಬಾತನ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಒಬ್ಬೊರಿಗೊಬ್ಬರು ಚೈನ್ ಲಿಂಕ್ ಎನ್ನುವಂತೆ ಇದೀಗ ಹಲ್ಲೆ ಪ್ರಕರಣದಲ್ಲಿ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಬಂಧನವಾಗಿದೆ.
ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲೆ ಹರ್ಷ ಮತ್ತು ಸುಭಾಷ್ ಎನ್ನುವವರು ಹಲ್ಲೆ ಮಾಡಿದ್ದರು. ವೈಯಕ್ತಿಕ ಕಾರಣದಿಂದ ನಾಗೇಂದ್ರ ಎನ್ನುವಾತ ಹರ್ಷ ಮತ್ತು ಸುಭಾಷ್ ಮೂಲಕ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಿಸಿದ್ದ ಎನ್ನಲಾಗಿದೆ. ಈ ನಾಗೇಂದ್ರ ಎನ್ನುವಾತ ಕೆಲವು ದಿನಗಳ ಹಿಂದೆ ಧ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ. ಧ್ರುವ ಸರ್ಜಾ ಕಾರು ಚಾಲಕನಾಗಿ ಕೂಡ ಕೆಲಸ ಮಾಡಿದ್ದ ಎನ್ನುವ ಮಾಹಿತಿ ಇದೆ.
ಈತ ಜಿಮ್ ಟ್ರೈನರ್ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಿಸಿದ್ದು, ಈತನ ಕೃತ್ಯಕ್ಕೆ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಬೆಂಬಲ ಕೊಟ್ಟಿರುವ ಆರೋಪ ಕೇಳಿ ಬಂದಿದೆ. ಇನ್ನು ಪ್ರಶಾಂತ್ ಪೂಜಾರಿ ತನ್ನ ಜಿಮ್ನಲ್ಲಿ ನಟ ಧ್ರುವ ಸರ್ಜಾಗೆ ಕೂಡ ತರಬೇತಿ ನೀಡುತ್ತಿದ್ದರು. ಈ ವೇಳೆ ಇಬ್ಬರ ನಡುವಿನ ಆಪ್ತತೆಯನ್ನು ಕಂಡ ನಾಗೇಂದ್ರ ಹಾಗೂ ಅಶ್ವಿನ್ಗೆ ಸಹಿಸಿಕೊಳ್ಳಲು ಆಗದೇ ಈ ರೀತಿ ಹಲ್ಲೆ ಮಾಡಿಸಿದ್ದಾರೆ ಎನ್ನಲಾಗಿದೆ. ಸದ್ಯ ಅಶ್ವಿನ್ ಬಂಧನವಾಗಿದ್ದು, ವಿಚಾರಣೆ ಮುಂದುವರಿದಿದೆ.












Click it and Unblock the Notifications