Rain Alert: ಕರ್ನಾಟಕದ 4 ಜಿಲ್ಲೆಗಷ್ಟೇ ಭಾರೀ ಮಳೆ: ಕೈಕೊಟ್ಟ ಮುಂಗಾರು, ರೈತರಲ್ಲಿ ಹೆಚ್ಚಿದ ಆತಂಕ
ಬೆಂಗಳೂರು: ಸಮುದ್ರ ಮಟ್ಟದಲ್ಲಿ ಹವಾಮಾನ ವೈಪರೀತ್ಯಗಳ ಪ್ರಭಾಗ ತಗ್ಗಿದ ಬೆನ್ನಲ್ಲೆ ಈ ವರ್ಷ ನಿರೀಕ್ಷೆಯಂತೆ ಮುಂಗಾರು ಮಳೆಯ ಪ್ರಭಾವ ಕ್ಷೀಣಿಸಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಭಾರೀ ಮಳೆ ಮರೆಯಾಗಿ ಅಲ್ಲಲ್ಲಿ ಹಗುರ, ಸಾಧಾರಣ ಮಳೆ ಮಾತ್ರವೇ ದಾಖಲಾಗುತ್ತಿದೆ. ಮುಂದಿನ 5 ದಿನಗಳ ಕಾಲ ಇದೇ ರೀತಿಯ ವಾತಾವರಣ ಕಂಡು ಬರಲಿದೆ. ಮಳೆ ಕಡಿಮೆ ಆಗುತ್ತಿದ್ದಂತೆ ಮುಂಗಾರು ಬಿತ್ತನೆ ಮಾಡಿದ ರೈತರಲ್ಲಿ ಆತಂಕ ಹೆಚ್ಚಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದ ಮುನ್ಸೂಚನೆಯಂತೆ ಮುಂಗಾರು ಮಳೆ ದುರ್ಬಲಗೊಂಡಿದೆ. ಉತ್ತರ ಕರ್ನಾಟಕದಲ್ಲಿ ಸಂಪೂರ್ಣ ಮರೆಯಾಗಿದ್ದು, ಬಿರು ಬೇಸಿಗೆಯ ವಾತಾವರಣ ಉಂಟಾಗಿದೆ. ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆ ಆಗಲಿದೆ. ಉಳಿದಂತೆ ಬಿಸಿಲಿನ ವಾತಾವರಣ ತಾತ್ಕಾಲಿಕವಾಗಿ ಮೇಲುಗೈ ಸಾಧಿಸುವ ನಿರೀಕ್ಷೆ ಇದೆ. ಇದೆಲ್ಲದರ ನಡುವೆ ರಾಜ್ಯದ ಯಾವೆಲ್ಲ ಭಾಗಗಳಲ್ಲಿ ಜೋರು, ಹಗುರ ಮಳೆ ನಿರೀಕ್ಷೆ ಇದೆ ಎಂಬ ಮಾಹಿತಿ ಇಲ್ಲಿದೆ.

4 ಜಿಲ್ಲೆಗಳಿಗೆ ಭಾರೀ ಮಳೆ, ಯೆಲ್ಲೋ ಅಲರ್ಟ್
ಇನ್ನು ಉತ್ತರ ಕರ್ನಾಟಕದ 4 ಜಿಲ್ಲೆಗಳಿಗೆ ಮಾತ್ರವೇ ಒಂದು ದಿನ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಹಾವೇರಿ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ಗುಡುಗು ಮಿಂಚು, ಬಿರುಗಾಳಿ ಸಹಿತ ಧಾರಾಕಾರವಾಗಿ ಮಳೆ ಆಗುವ ಸಾಧ್ಯತೆಗಳಿದ್ದು, ಜೂನ್ 20ರ ಅಸುಪಾಸಿಗೆ ಒಂದು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಹಗುರ ಮಳೆ
ಇನ್ನುಳಿದಂತೆ ಬೆಳಗಾವಿ, ವಿಜಯಪುರ, ಧಾರವಾಡ, ಬೀದರ್, ಕಲಬುರಗಿ, ಬಾಗಲಕೋಟೆ, ದಾವಣಗೆರೆ, ವಿಜಯನಗರ, ಚಿತ್ರದುರ್ಗ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಚಾಮರಾಜನಗರ, ಹಾಸನ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಸೇರಿದಂತೆ ಇನ್ನಿತರ ಒಳನಾಡು ಜಿಲ್ಲೆಗಳಲ್ಲಿ ಕೆಲವೆಡೆ ಹಗುರದಿಂದ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ. ಯಾವ ಭಾಗಕ್ಕೂ ಭಾರೀ ಮಳೆ ಎಚ್ಚರಿಕೆ ಸದ್ಯಕ್ಕಿಲ್ಲ. ಅನೇಕ ಜಿಲ್ಲೆಗಳಲ್ಲಿ ಮೋಡ ಕವಿದ ಮಬ್ಬು ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಕರ್ನಾಟಕಕ್ಕೆ ಮಳೆ ಕೊರತೆ, ರೈತರಿಗೆ ತಪ್ಪದ ಆತಂಕ
ಪೆಸಿಫಿಕ್ ಮಹಾಸಾಗರದ ಮೇಲ್ಮೈನಲ್ಲಿ ತಾಪಮಾನದ ಹೆಚ್ಚಳ ವಾತಾವರಣ (ಎಲ್ನಿನೋ) ಪರಿಣಾಮವಾಗಿ ಈ ವರ್ಷ ಮುಂಗಾರು ಮಳೆ ನಿರೀಕ್ಷೆಗಿಂತ ಕಡಿಮೆ ಬರಲಿದೆ ಎಂದು ಹೇಳಲಾಗಿದೆ. ಅದರ ಭಾಗವಾಗಿ ಜೂನ್ ಆರಂಭದಲ್ಲೇ ಮುಂಗಾರು ಮಳೆ ಕ್ಷೀಣಿಸಿದೆ. ಜೂನ್ 16ರಿಂದಲೇ ರಾಜ್ಯದಲ್ಲಿ ಮಳೆ ಮಾಯವಾಗಿದೆ. ಉತ್ತರ ಕರ್ನಾಟಕದಲ್ಲಿ ಕೆಲವು ದಿನಗಳಲ್ಲಿ ಅತ್ಯಧಿಕ ಬಿಸಿಲು ದಾಖಲಾಗುತ್ತಿದೆ. ಜೂನ್ ಮೊದಲ ವಾರ ಖಾರಿಫ್ ಬೆಳೆ ಬಿತ್ತನೆ ಮಾಡಿದ ರೈತರು ಮಳೆಗಾಗಿ ಆಕಾಶ ನೋಡುವಂತಾಗಿದೆ.
ಬಿಸಿಲು ಹೆಚ್ಚುತ್ತಿದ್ದು, ಭೂಮಿಯಲ್ಲಿ ತೇವಾಂಶ ಖಾಲಿಯಾಗುತ್ತಿದೆ. ವಾರ, ಎರಡು ವಾರಗಳ ಹಿಂದಷ್ಟೇ ಬಿತ್ತಿ ಮೊಳಕೆಯೊಡೆದ ಎರಡೆಲೆ ಪೈರು ಮಧ್ಯಾಹ್ನದ ಬಿಸಿಲಿಗೆ ಒಣಗಿದಂತೆ ಕಾಣುತ್ತಿದೆ. ದಾವಣಗೆರೆ, ವಿಜಯಪುರ, ಹಾವೇರಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ ಸೇರಿದಂತೆ ಅನೇಕ ಭಾಗಗಳಲ್ಲಿ ತುರ್ತು ಭಾರೀ ಮಳೆಯ ಅಗತ್ಯತೆ ಇದೆ. ಆದರೆ ಮುನ್ಸೂಚನೆ ಪ್ರಕಾರ ಮಳೆ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಇದು ರೈತರ ಆತಂಕ ಹೆಚ್ಚಿಸಿದೆ. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ಮುಂಗಾರು ಬೆಳೆಯೂ ರೈತರಿಗೆ ಕೈಕೊಡಲಿದೆ...!













Click it and Unblock the Notifications