ಆ ಒಂದು ಕಾರಣಕ್ಕೆ ನಟ ದರ್ಶನ್ಗೆ ಇಂದು ಜಾಮೀನು ಸಿಗುವ ಸಾಧ್ಯತೆ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ (Darshan Thoogudeepa) ಅವರ ಜಾಮೀನು ಭವಿಷ್ಯ ಇಂದು ಕೋರ್ಟ್ನಲ್ಲಿ ನಿರ್ಧಾರವಾಗಲಿದೆ. ಹೈಕೋರ್ಟ್ ಅಂಗಳ ತಲುಪಿರುವ ಜಾಮೀನು ಅರ್ಜಿಯ ವಿಚಾರಣೆಯು ದರ್ಶನ್ ಪಾಲಿಗೆ ನಿರ್ಣಾಯಕ ಎನ್ನಲಾಗಿದೆ. ಅಲ್ಲದೆ ಹೈಕೋರ್ಟ್ನಲ್ಲಿ ದರ್ಶನ್ ಜಾಮೀನು ಕೋರಲು ಬಲವಾದ ಕಾರಣ ಕೂಡ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತೀವ್ರ ಬೆನ್ನು ನೋವು ಅವರನ್ನು ಕಾಡುತ್ತಿದ್ದು, ಅವರಿಗೆ ತಕ್ಷಣವೇ ಆಪರೇಷನ್ ಮಾಡಿಸುವ ಅಗತ್ಯವಿದೆ ಎಂದು ದರ್ಶನ್ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದರು. ಇದನ್ನು ಪುರಸ್ಕರಿಸಿದ್ದ ಕೋರ್ಟ್, ದರ್ಶನ್ ಅವರ ಮೆಡಿಕಲ್ ರಿಪೋರ್ಟ್ ಸಲ್ಲಿಸುವಂತೆ ಸೂಚಿಸಿತ್ತು.

ನಟ ದರ್ಶನ್ರ ಮೆಡಿಕಲ್ ರಿಪೋರ್ಟ್ ಸಲ್ಲಿಸುವಂತೆ ಬಳ್ಳಾರಿ ಜೈಲಿನ ಅಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಇಂದಿನ ವಿಚಾರಣೆಗೆ ದರ್ಶನ್ ಆರೋಗ್ಯ ಸ್ಥಿತಿಯ ವರದಿಯನ್ನು ಕೋರ್ಟ್ಗೆ ಸಲ್ಲಿಸಲಿದ್ದಾರೆ. ಇದರ ಆಧಾರದ ಮೇಲೆ ಅವರಿಗೆ ಜಾಮೀನು ಮಂಜೂರು ಮಾಡುವುದಾ? ಇಲ್ಲವಾ? ಎಂಬುದನ್ನು ಕೋರ್ಟ್ ನಿರ್ಧರಿಸಲಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನವಾಗಿ ಬೆಂಗಳೂರು ಜೈಲಿನಿಂದ ಬಳ್ಳಾರಿಗೆ ದರ್ಶನ್ ಶಿಫ್ಟ್ ಆಗಿದ್ದರು. ಮೊದಲಿಗೆ ಸೆಷನ್ಸ್ ಕೋರ್ಟ್ಗೆ ದರ್ಶನ್ ಜಾಮೀನು ಅರ್ಜಿ ಸಲ್ಲಿಸಿದರು. ಹಲವು ಬಾರಿ ಅಲ್ಲಿ ವಿಚಾರಣೆ ನಡೆದರೂ ಜಾಮೀನು ಕೊನೆಗೆ ಸಿಗಲೇ ಇಲ್ಲ. ಬಳಿಕ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ವಿಚಾರಣೆ ನಡೆಯಲಿದೆ.
ದರ್ಶನ್ ಪರ ವಕೀಲರು ಅವರ ಅನಾರೋಗ್ಯ ಕಾರಣವನ್ನು ನೀಡಿ ಹೈಕೋರ್ಟ್ಗೆ ತುರ್ತು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ವಿಚಾರಣೆಯಲ್ಲೇ ಬಳ್ಳಾರಿ ಜೈಲಾಧಿಕಾರಿಗಳಿಗೆ ದರ್ಶನ್ ಮೆಡಿಕಲ್ ರಿಪೋರ್ಟ್ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿ, ಇಂದಿಗೆ ಅರ್ಜಿ ಮುಂದೂಡಿತ್ತು.

ಇನ್ನು ದರ್ಶನ್ಗೆ ಅವರನ್ನು ಇತ್ತೀಚೆಗೆ ರಾತ್ರೋರಾತ್ರಿ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಲಾಗಿತ್ತು. ಹಾಗಾಗಿ ದರ್ಶನ್ ಅವರ ವೈದ್ಯಕೀಯ ಪರೀಕ್ಷೆಗಳು ಮುಗಿದಿದ್ದು, ಬಳ್ಳಾರಿಯ ಬಿಮ್ಸ್ ವೈದ್ಯರು ಜೈಲಾಧಿಕಾರಿಗಳಿಗೆ ವೈದ್ಯಕೀಯ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇಂದು ನಡೆಯಲಿರುವ ವಿಚಾರಣೆಯಲ್ಲಿ ದರ್ಶನ್ ಆರೋಗ್ಯ ಸ್ಥಿತಿಯ ವರದಿಯನ್ನು ಅಧಿಕಾರಿಗಳು ಸಲ್ಲಿಕೆ ಮಾಡಲಿದ್ದಾರೆ.
ಇದನ್ನು ಪುರಸ್ಕರಿಸಿದ್ದೇ ಆದಲ್ಲಿ ದರ್ಶನ್ ಅವರಿಗೆ ಜಾಮೀನು ಸಿಗುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ. ಇತ್ತೀಚೆಗೆ ಬಳ್ಳಾರಿ ಜೈಲಿನಲ್ಲಿ ಕಾಣಿಸಿಕೊಂಡಿದ್ದ ದರ್ಶನ್, ಬ್ಯಾಗ್ ಕೂಡ ಕೈಯಲ್ಲಿ ಎತ್ತಿ ನಡೆಯಲಾರದಷ್ಟು ಬಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಬೆನ್ನು ನೋವಿನಿಂದ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಹಾಗಾಗಿ ಇದೇ ಕಾರಣದಿಂದ ದರ್ಶನ್ ಅವರಿಗೆ ಜಾಮೀನು ಸಿಗುವುದು ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.
ದರ್ಶನ್ ಅವರನ್ನು ಕಾಡುತ್ತಿರುವ ಬೆನ್ನುನೋವಿನ ಸಮಸ್ಯೆಗೆ ಶಸ್ತ್ರಚಿಕಿತೆಯ ಅಗತ್ಯವಿದೆ ಎಂದೇ ವೈದ್ಯರು ಕೂಡ ವರದಿಯಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಈ ಆಪರೇಷನ್ಗೆ ಬಳ್ಳಾರಿಯ ಬಿಮ್ಸ್ನಲ್ಲೇ ಅಗತ್ಯ ಸೌಲಭ್ಯವಿದೆ ಎಂದೂ ಉಲ್ಲೇಖಿಸಿದ್ದಾರಂತೆ.
ದರ್ಶನ್ಗೆ ಚಿಕಿತ್ಸೆಯ ಅನಿವಾರ್ಯತೆ ಕಾರಣದಿಂದಲೇ ಅವರಿಗೆ ಕೋರ್ಟ್ ಜಾಮೀನು ನೀಡುವ ಸಾಧ್ಯತೆ ಇದೆ. ಇಲ್ಲದಿದ್ದರೆ, ಬಳ್ಳಾರಿಯಲ್ಲೇ ದರ್ಶನ್ ಅವರಿಗೆ ಚಿಕಿತ್ಸೆಗೆ ಅವಕಾಶ ಕಲ್ಪಿಸಬಹುದು ಅಥವಾ ದರ್ಶನ್ ಕೋರಿಕೆಯಂತೆ ಬೆಂಗಳೂರಿಗೆ ಶಿಫ್ಟ್ ಮಾಡಿಸಿ, ಇಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಗಳಿವೆ. ಇಂದು ಜಾಮೀನು ಸಿಕ್ಕರೆ ಬರೋಬ್ಬರಿ ಐದು ತಿಂಗಳ ಬಳಿಕ ಜೈಲುವಾಸದಿಂದ ದರ್ಶನ್ ಮುಕ್ತಿ ಪಡೆಯಲಿದ್ದಾರೆ.












Click it and Unblock the Notifications