ಶನಿವಾರ ವಿಶ್ವಾಸಮತಯಾಚನೆ : ವಿಜಯನಗರದ ಆನಂದ್ ಸಿಂಗ್ ಎಲ್ಲಿ?
ಬೆಂಗಳೂರು, ಮೇ 18 : ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಎಲ್ಲಿ?. ಚುನಾವಣೆ ಫಲಿತಾಂಶ ಪ್ರಕಟವಾದ ದಿನದಿಂದ ಎದ್ದಿರುವ ಪ್ರಶ್ನೆ ಇದು. ಶನಿವಾರ ವಿಶ್ವಾಸಮತಯಾಚನೆ ನಡೆಯಲಿದೆ. ಆನಂದ್ ಸಿಂಗ್ ಅವರು ಯಾರಿಗೆ ಬೆಂಬಲಿಸುತ್ತಾರೆ? ಎಂದು ಕಾದು ನೋಡಬೇಕಿದೆ.
ಆನಂದ್ ಸಿಂಗ್ ಕಾಂಗ್ರೆಸ್ ಬೆಂಬಲಿಸುತ್ತಾರೆ. ಪಕ್ಷವನ್ನು ಬೆಂಬಲಿಸುವುದಾಗಿ ಅವರು ಪತ್ರ ಬರೆದಿದ್ದಾರೆ ಎಂದು ದೆಹಲಿಯ ಕಾಂಗ್ರೆಸ್ ನಾಯಕರು ಗುರುವಾರ ಹೇಳಿದ್ದರು. ಆದರೆ, ಆನಂದ್ ಸಿಂಗ್ ಅವರು ಪತ್ರ ಬರೆದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಮೌನ ಮುರಿದ ಆನಂದ್ ಸಿಂಗ್!
2008, 2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿಜಯನಗರ ಕ್ಷೇತ್ರದಲ್ಲಿ ಆನಂದ್ ಸಿಂಗ್ ಗೆದ್ದಿದ್ದರು. ಆದರೆ, 2018ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಈ ಬಾರಿಯ ಚುನಾವಣೆಯಲ್ಲಿಯೂ ಜಯಗಳಿಸಿದ್ದಾರೆ. ಹಿಂದಿನ ಬಿಜೆಪಿ ನಂಟಿನ ಕಾರಣ ಬಿಜೆಪಿ ಬೆಂಬಲಿಸಬಹುದು ಎಂಬುದು ಸದ್ಯ ಹರಡಿರುವ ಸುದ್ದಿ.
ಬಿಜೆಪಿ ಸಂಪರ್ಕದಲ್ಲಿರುವ ಕಾಂಗ್ರೆಸ್ ಜೆಡಿಎಸ್ ಶಾಸಕರು ಯಾರು?
ಆನಂದ್ ಸಿಂಗ್ ಮೇ 16ರ ಬಳಿಕ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅವರು ಕಾಂಗ್ರೆಸ್ ನಾಯಕರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ನಾಯಕರು ಹೇಳುತ್ತಿದ್ದಾರೆ. ಹಾಗಾದರೆ ಆನಂದ್ ಸಿಂಗ್ ಎಲ್ಲಿ?, ಅವರು ಶನಿವಾರ ಯಾರನ್ನು ಬೆಂಬಲಿಸಲಿದ್ದಾರೆ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ......
ವಿಜಯೋತ್ಸವದಲ್ಲಿ ಭಾಗಿ
ಮೇ 15ರಂದು ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿತ್ತು. ವಿಜಯನಗರ (ಹೊಸಪೇಟೆ) ಕ್ಷೇತ್ರದಲ್ಲಿ ಆನಂದ್ ಸಿಂಗ್ ಅವರು 83,214 ಮತಗಳನ್ನು ಪಡೆದು ಜಯಗಳಿಸಿದ್ದರು. ಬಳಿಕ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಅಂದು ಅವರು ಬಳ್ಳಾರಿಯಲ್ಲಿಯೇ ಇದ್ದರು.
ಬೆಂಗಳೂರಿನ ಹೊರಟ ಆನಂದ್ ಸಿಂಗ್
ಮೇ 15ರಂದು ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಆನಂದ್ ಸಿಂಗ್ ಅವರಿಗೆ ಕರೆ ಮಾಡಿದ್ದರು. ಬೆಂಗಳೂರಿಗೆ ಬರುವಂತೆ ಸೂಚಿಸಿದ್ದರು. ಮೇ 16ರಂದು ಆನಂದ್ ಸಿಂಗ್ ಬೆಂಗಳೂರಿಗೆ ಹೋಗುವುದಾಗಿ ಹೇಳಿ ತೋರಣಗಲ್ ವಿಮಾನನಿಲ್ದಾಣದಿಂದ ಹೊರಟಿದ್ದರು. ಆದರೆ, ಅವರು ಬೆಂಗಳೂರು ತಲುಪಿಲ್ಲ. ಯಾವ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೂ ಸಿಕ್ಕಿಲ್ಲ.
ಕಾಂಗ್ರೆಸ್ಗೆ ಬೆಂಬಲ ನೀಡುವರು
ಗುರುವಾರ ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜಿವಾಲಾ, ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಅವರಿಗೆ ವಿಜಯನಗರ (ಹೊಸಪೇಟೆ) ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಗುರುವಾರ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಸದ್ಯದ ಮಾಹಿತಿ ಪ್ರಕಾರ ಆನಂದ್ ಸಿಂಗ್ ಅವರು ಕಾಂಗ್ರೆಸ್ ನಾಯಕರಿಗೆ ಪತ್ರ ಬರೆದಿಲ್ಲ.
ರಾಜನಾಥ್ ಸಿಂಗ್ ಸಂಪರ್ಕದಲ್ಲಿ
ಆನಂದ್ ಸಿಂಗ್ ಬಿಜೆಪಿ ಬೆಂಬಲಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿದೆ. ಬಿಜೆಪಿ ನಾಯಕ ರಾಜನಾತ್ ಸಿಂಗ್ ಅವರ ಜೊತೆ ಅವರು ಸಂಪರ್ಕದಲ್ಲಿದ್ದಾರೆ?, ದೆಹಲಿಯಲ್ಲಿ ಅವರು ಇರಬಹುದು ಎಂಬುದು ಶುಕ್ರವಾರ ಸಿಕ್ಕಿರುವ ಮಾಹಿತಿ. ಆದರೆ, ಬಿಜೆಪಿ ನಾಯಕರು ಈ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಶನಿವಾರ ಆನಂದ್ ಸಿಂಗ್ ನೇರವಾಗಿ ವಿಧಾನಸೌಧಕ್ಕೆ ಆಗಮಿಸುವ ಸಾಧ್ಯತೆ ಇದೆ.
ಸಂತೋಷ್ ಲಾಡ್
ಆನಂದ್ ಸಿಂಗ್ ಕಾಂಗ್ರೆಸ್ ಸೇರುವಾಗ ಸಂತೋಷ್ ಲಾಡ್ ಅವರ ಜೊತೆಗಿದ್ದರು. ಆದರೆ, ಈಗ ಆನಂದ್ ಸಿಂಗ್ ಅವರು ಲಾಡ್ ಸಂಪರ್ಕಕ್ಕೂ ಸಿಗತ್ತಿಲ್ಲ ಎಂದು ತಿಳಿದುಬಂದಿದೆ.
ಆನಂದ್ ಸಿಂಗ್ ಎಲ್ಲಿದ್ದಾರೆ?. ಶನಿವಾರ ವಿಧಾನಸೌಧಕ್ಕೆ ಆಗಮಿಸುವರೋ? ಇಲ್ಲವೋ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಶನಿವಾರ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ವಿಶ್ವಾಸ ಮತಯಾಚನೆ ನಡೆಯಲಿದೆ.