ಸನ್ಯಾಸಿಯಾಗಿ ರಾಜಕಾರಣಕ್ಕೆ ಬರಬಾರದೆಂಬ ಉಲ್ಲೇಖವಿದೆಯೇ?: ಶೀರೂರು ಶ್ರೀ ಸಂದರ್ಶನ
ಮೈಸೂರು, ಮಾರ್ಚ್ 12 : ಉತ್ತರಪ್ರದೇಶ ಸೇರಿದ ಹಾಗೆ ದೇಶದ ವಿವಿಧೆಡೆ ಬೀಸಿದ ಗಾಳಿ ಕರ್ನಾಟಕದಲ್ಲೂ ಬೀಸಿದೆ. ಅಂದರೆ ಸನ್ಯಾಸಿಗಳು ಅರ್ಥಾತ್ ಸರ್ವಸಂಗ ಪರಿತ್ಯಾಗಿಗಳು ಎಂದು ಕರೆಸಿಕೊಳ್ಳುವವರು ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿಯುವ ಮಾತನಾಡಿದ್ದಾರೆ. ಕರಾವಳಿ ಭಾಗದಲ್ಲಷ್ಟೇ ಅಲ್ಲ, ಇಡೀ ಕರ್ನಾಟಕದಲ್ಲಿ ಅದೇ ಮಾತು, ಅದೇ ಸುದ್ದಿ.
ಉಡುಪಿಯ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥರು ರಾಜಕೀಯ ಅಖಾಡಕ್ಕೆ ಇಳಿಯುವುದು ನಿಕ್ಕಿಯಾಗಿದೆ. ಬಿಜೆಪಿಯಿಂದ ಸ್ಪರ್ಧಿಸುವುದು ತಮ್ಮ ಇರಾದೆ. ಒಂದು ವೇಳೆ ಆ ಪಕ್ಷದಿಂದ ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧೆ ಮಾಡುವುದರಲ್ಲಿ ಯಾವ ಅನುಮಾನ ಬೇಡ ಎಂಬುದು ಅವರ ದೃಢ ನಿಲುವು.
ಸಮಾಜದ ನ್ಯೂನತೆಗಳನ್ನು ಯತಿಯಾಗಿ ತಿದ್ದುವುದಕ್ಕಿಂತ ರಾಜಕಾರಣಿಯಾಗಿ ಸರಿಪಡಿಸಬಹುದು ಎಂಬ ಆಶಯವುಳ್ಳ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥರು ರಾಜಕೀಯ ಪ್ರವೇಶದ ಕುರಿತು ಒನ್ಇಂಡಿಯಾ ಕನ್ನಡದಿಂದ ಸುದೀರ್ಘವಾದ ಸಂದರ್ಶನ ಮಾಡಲಾಗಿದೆ. ಹನ್ನೊಂದು ಪ್ರಶ್ನೆಗಳಿಗೆ ನೀಡಿದ ಉತ್ತರದಲ್ಲಿ ಸ್ವಾಮೀಜಿ ತಮ್ಮ ಅಂತರಂಗವನ್ನು ಬಹಿರಂಗಪಡಿಸಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಪ್ರಶ್ನೆ 1: ರಾಜಕಾರಣ ಪ್ರವೇಶದ ಹಿಂದಿನ ನಿರ್ಧಾರದ ಕುರಿತು ವಿವರಿಸುತ್ತೀರಾ?
ಶೀರೂರು ಶ್ರೀ: ಧರ್ಮದಲ್ಲಿ ರಾಜಕೀಯ ಇರಬಾರದು ಎಂಬ ನಿಟ್ಟಿನಲ್ಲಿ ರಾಜಕಾರಣಕ್ಕೆ ಧುಮುಕಬೇಕು ಎಂಬ ಅಪೇಕ್ಷೆಯಿತ್ತು. ನಾನೊಬ್ಬ ರಾಜಕಾರಣಿ ಎನ್ನುವುದಕ್ಕಿಂತ ಸಮಾಜಸೇವಕ ಆಗಬೇಕು. ಬಡವರಿಗೆ ಸಹಕಾರಿಯಾಗಬೇಕು ಎಂಬ ಅಪೇಕ್ಷೆಯಿತ್ತು. ನನ್ನಂತಹ ಕಾವಿಧಾರಿಗಳಿಗೆ ರಾಜಕಾರಣಿಗಳಿಂದ ಅನ್ಯಾಯವಾಗಿದೆ. ಆ ವಿಷಯವನ್ನು ತಿಳಿಸಲು ಇಚ್ಛಿಸುವುದಿಲ್ಲ. ಅದನ್ನು ಸರಿಪಡಿಸಲು ಇರುವ ಮಾರ್ಗ ರಾಜಕಾರಣವೊಂದೇ. ಹಾಗಾಗಿ ಇದು ನನ್ನ ಆಯ್ಕೆ.

ಪ್ರಶ್ನೆ 2: ಉಡುಪಿಯಿಂದಲೇ ಸ್ಫರ್ಧಿಸುತ್ತೀರಾ? ಮತ್ತು ಸ್ಪರ್ಧಿಸುವುದು ಹೌದಾದರೆ ಅಲ್ಲಿಂದಲೇ ಯಾಕೆ?
ಶೀರೂರು ಶ್ರೀ: ಹೌದು. ಇಲ್ಲಿಂದಲೇ ಸ್ಫರ್ಧೆ ಖಚಿತ. ಈ ಸ್ಥಳದ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲೆ. ಸೌಲಭ್ಯವಂಚಿತರನ್ನು ನೋಡಿದ್ದೇನೆ. ಹಾಗಾಗಿ ಇಲ್ಲಿಂದಲೇ ನಿಲ್ಲುತ್ತೇನೆ. ನಿಷ್ಠಾವಂತ ರಾಜಕಾರಣಿಯಾಗುತ್ತೇನೆ ಎಂಬ ದೃಢ ವಿಶ್ವಾಸವಿದೆ. ವ್ಯವಸ್ಥೆ ಸರಿ ಇದ್ದಿದ್ದರೆ ಈ ನಿರ್ಧಾರ ಮಾಡುತ್ತಿರಲಿಲ್ಲ. ಪಕ್ಷೇತರನಾಗಿ ನಿಲ್ಲಬೇಕೆಂಬುದು ನನ್ನ ಮನಸ್ಸು. 15 ದಿನಗಳಿಂದ ಈ ಬಗ್ಗೆ ಚಿಂತನೆ ಮಾಡಿ, ನಿರ್ಧಾರಕ್ಕೆ ಬಂದಿದ್ದೇನೆ.
ಜಿಲ್ಲೆಯಲ್ಲಿ ಸರಕಾರಿ ಅಧಿಕಾರಿಗಳ ದರ್ಪ, ದೌಲತ್ತುಗಳು ಜಾಸ್ತಿಯಾಗಿದೆ. ರಾಜಕೀಯ ಕೂಡ ಜನಪರವಾಗಿಲ್ಲ. ಈ ಕಾರಣದಿಂದ ರಾಜಕೀಯಕ್ಕೆ ಬರುವ ಮನಸ್ಸು ಮಾಡಿದ್ದೇನೆ. ಸನ್ಯಾಸಿಗಳಿಗೆ ರಾಜಕೀಯ ಯಾಕೆ ಬೇಕು ಅಂತ ಜನ, ಮಾಧ್ಯಮಗಳು ಕೇಳಬಹುದು. ರಾಜಕೀಯದಲ್ಲಿ ಧರ್ಮ ಇರಬೇಕು. ಅದು ನಾಶವಾಗಿದೆ. ಎಲ್ಲಿ ಧರ್ಮ ಇಲ್ಲವೋ, ಅಧರ್ಮ ಇದೆಯೋ ಅಲ್ಲಿಗೆ ಮಠಾಧೀಶರು ಬರಬೇಕು. ಸಮಸ್ಯೆಗಳನ್ನು ಸರಿ ಮಾಡಬೇಕು.

ಪ್ರಶ್ನೆ 3 : ನೀವು ಸನ್ಯಾಸಿಯಾಗಿ ಇದ್ದುಕೊಂಡೇ ಸಮಾಜ ಕಾರ್ಯ ಮಾಡಲು ಆಗುವುದಿಲ್ಲವೇ?
ಶೀರೂರು ಶ್ರೀ: ಸನ್ಯಾಸಿಯಾಗಿ ರಾಜಕಾರಣಕ್ಕೆ ಬರಬಾರದೆಂಬ ಉಲ್ಲೇಖವಿದೆಯೇ, ತೋರಿಸಿ. ರಾಜಕಾರಣದಲ್ಲಿ ಧರ್ಮ ಬೆರೆತು ಅಧರ್ಮವಾಗುತ್ತಿದೆ. ನಾನು ಸನ್ಯಾಸಿಯಾದರೆ ಅದು ಒಂದು ಧರ್ಮಕ್ಕೆ ಮಾತ್ರ ಸೀಮಿತ. ಎಲ್ಲರಿಗೂ ಅಲ್ಲವಲ್ಲ. ಹಾಗಾಗಿ ಯತಿಯ ಜೊತೆಗೆ ರಾಜಕಾರಣವೂ ಬೆರೆತರೆ ಎಲ್ಲವೂ ಸರಿಪಡಿಸಬಹುದು ಎಂಬ ಕಾರಣಕ್ಕಷ್ಟೇ ಈ ನಿರ್ಧಾರ.

ಪ್ರಶ್ನೆ 4: ನಿಮ್ಮ ಸ್ಫರ್ಧೆ ಬಿಜೆಪಿಯಿಂದಲೇ ಏಕೆ ?
ಶೀರೂರು ಶ್ರೀ: ನಾನು ಕಾವಿಧಾರಿ. ಕೇಸರಿಮಯವಾಗಿರುವ ನಾನು ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗುವ ಹಂಬಲವಿದೆ. ನಾನು ಹುಟ್ಟು ಬ್ರಾಹ್ಮಣ. ಹಿಂದುತ್ವದಿಂದ ಗೆಲ್ಲಲು ಸಾಧ್ಯ. ಈಗಾಗಲೇ ಪಕ್ಷದವರೊಂದಿಗೆ ಟಿಕೆಟ್ ಕೊಡಿ ಎಂದಿದ್ದೇನೆ. ಇಲ್ಲವಾದಲ್ಲಿ ಪಕ್ಷೇತರನಾಗಿ ನಿಲ್ಲುತ್ತೇನೆ. ಯಡಿಯೂರಪ್ಪನವರೊಂದಿಗೆ ಒಮ್ಮೆ ಮಾತನಾಡಿದ್ದೇನೆ. ನೋಡೋಣ, ಏನಾಗುತ್ತದೆ.

ಪ್ರಶ್ನೆ 5: ಪ್ರಮೋದ್ ಮಧ್ವರಾಜ್ ನಿಮ್ಮ ಶಿಷ್ಯ ಎಂದಿರಿ. ಹಾಗಾದ್ರೆ ನಿಮ್ಮ ಸ್ಫರ್ಧೆ ಅವರ ವಿರುದ್ಧ ಏಕೆ?
ಶೀರೂರು ಶ್ರೀ: ಎಲ್ಲಿಯಾದರೂ ಶಿಷ್ಯನ ವಿರುದ್ಧ ಗುರು ಸ್ಪರ್ಧಿಸಬಾರದೆಂಬ ನಿಯಮವಿದೆಯೇ? ನಾನು ಚುನಾವಣೆಗೆ ಸ್ಫರ್ಧಿಸುವುದು ಪಕ್ಕಾ. ನಾನು ನಿಲ್ಲುತ್ತೇನೆಂದಾಗ ಅವರೇನೂ ಬೇಸರ ವ್ಯಕ್ತಪಡಿಸಿಲ್ಲ. ಇದು ನಿಜವಾದ ಗುರು -ಶಿಷ್ಯರ ಕಾಳಗವಷ್ಟೇ. ಅವರು ಕಾಂಗ್ರೆಸ್, ನಾನು ಕೇಸರಿ ಪಡೆ ಅಷ್ಟೇ. ನಾನು ಗೆಲ್ಲಲಿ- ಬಿಡಲಿ ಪ್ರಮೋದ್ ಮಧ್ವರಾಜ್ ಶಿಷ್ಯರಾಗಿ ಉಳಿಯುತ್ತಾರೆ.

ಪ್ರಶ್ನೆ 6: ನಿಮಗಿರುವುದು ದ್ವಂದ್ವ ನಿಲುವು ಎನಿಸುವುದಿಲ್ಲವೇ ?
ಶೀರೂರು ಶ್ರೀ: ಖಂಡಿತಾ ಇಲ್ಲ. ನಾನು ರಾಜಕೀಯ ಪ್ರವೇಶ ಮಾಡುತ್ತಿರುವುದು ದ್ವಂದ್ವ ನಿಲವಲ್ಲ. ಸ್ಪಷ್ಟ ನಡೆ -ದಿಟ್ಟ ಗುರಿ. ರಾಜಕಾರಣಕ್ಕೆ ಹೋದರೂ ಯತಿಯಾಗಿಯೇ ಮುಂದುವರಿಯುತ್ತೇನೆ. ನನ್ನ ಧೋರಣೆ ಜನರ ಸೇವೆಯಷ್ಟೇ. ಯತಿಯಾಗಿ, ರಾಜಕಾರಣಿಯಾಗಿ ಎರಡನ್ನೂ ನಿಭಾಯಿಸುತ್ತೇನೆ. ಆದರೆ ನಾನು ಎರಡು ದೋಣಿ ಮೇಲೆ ಕಾಲಿಟ್ಟಿಲ್ಲ ಎಂಬುದು ಸತ್ಯ.

ಪ್ರಶ್ನೆ 7: ಹಾಗಾದರೆ ನೀವು ಯೋಗಿ ಆದಿನಾಥ್ ಆಗಲೂ ಹೊರಟ್ಟಿದ್ದೀರಾ ?
ಶೀರೂರು ಶ್ರೀ: ನಾನು ಯೋಗಿಯೇನೋ ಹೌದು. ಆದರೆ ಆದಿತ್ಯನಾಥ್ ಆಗಲಾರೆ. ಅವರು ನನ್ನ ಮಾರ್ಗದರ್ಶಕರು. ನನ್ನ ಯೋಜನೆಯ ನಡೆಗಳು ಅವರ ನಡೆಯೊಂದಿಗೆ ಬೆಸೆದುಕೊಂಡಿವೆ. ಏಕವಾಗಿವೆ. ಅದರಲ್ಲಿ ತಪ್ಪೇನು ?

ಪ್ರಶ್ನೆ 8 : ರಾಜಕಾರಣ ಮಾತ್ರ ಜನಸೇವೆಯೇ? ಸಂತರಾಗಿ ಜನರ ಸೇವೆ ಮಾಡಲು ಸಾಧ್ಯವಿಲ್ಲವೇ?
ಶೀರೂರು ಶ್ರೀ: ಸಂತರಾಗಿ ಜನ ಸೇವೆ ಮಾಡಿದರೆ ದುಡ್ಡು ಯಾರು ಕೊಡುವರು? ರಾಜಕಾರಣ, ಅಭ್ಯುದಯ ಎಂದಾಗ ಸರಕಾರ ದುಡ್ಡು ನೀಡುತ್ತದೆ. ಅದನ್ನು ಸದುಪಯೋಗ ಮಾಡಿಕೊಂಡು ಜನರ ಏಳಿಗೆಗೆ ಬಳಸಿಕೊಳ್ಳುತ್ತೇನೆ.

ಪ್ರಶ್ನೆ 9: ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ನಿಮ್ಮ ರಾಜಕೀಯ ಪ್ರವೇಶಕ್ಕೆ ಒಪ್ಪಿಗೆ ಸೂಚಿಸಿದ್ದಾರೆಯೇ ?
ಶೀರೂರು ಶ್ರೀ: ನನ್ನ ರಾಜಕೀಯ ನಿರ್ಧಾರ ಸ್ಪಷ್ಟ. ನಾನು ಯಾರ ಮಾತು ಕೇಳಿಸಿಕೊಳ್ಳುವುದಿಲ್ಲ. ನಮ್ಮ ಮಠದ ಸಂವಿಧಾನಕ್ಕೆ ಮತ್ತೊಬ್ಬರು ತಲೆ ಹಾಕುವುದಿಲ್ಲ. ನಾನು ಪರತಂತ್ರನಲ್ಲ. ಅಷ್ಟ ಮಠಕ್ಕೂ ನನ್ನ ರಾಜಕೀಯ ಪ್ರವೇಶಕ್ಕೂ ಏನೂ ಸಂಬಂಧ ಇಲ್ಲ. ಸಂಪ್ರದಾಯ ಉಲ್ಲಂಘನೆಯೂ ಆಗುವುದಿಲ್ಲ.

ಪ್ರಶ್ನೆ 10: ನಿಮ್ಮ ಈ ನಿಲವಿನಿಂದ ಮಾಧ್ವ ಸಿದ್ಧಾಂತಕ್ಕೆ ಧಕ್ಕೆ ತರುವಂತೆ ಆಗುವುದಿಲ್ಲವೇ? ಪೂಜೆ ವೇಳೆ, ಪರ್ಯಾಯ, ಜಪ ಎಲ್ಲವನ್ನು ಹೇಗೆ ನಿರ್ವಹಣೆ ಮಾಡುತ್ತೀರಿ ?
ಶೀರೂರು ಶ್ರೀ: ನಾನೊಬ್ಬ ಯತಿ. ನಮ್ಮ ಸಂಪ್ರದಾಯಕ್ಕೆ ಬದ್ಧ. ನಾನು ಅಧಿಕಾರ ಸ್ವೀಕರಿಸಿದ ಮುಂದಿನ 5 ವರ್ಷ ಪರ್ಯಾಯ ನಮ್ಮ ಮಠಕ್ಕೆ ಬರುವುದೂ ಇಲ್ಲ. ಜಪ ಮಾಡಲು ಉಡುಪಿಯೇ ಆಗಬೇಕಿಲ್ಲ, ಅದನ್ನು ನೀವು ಎಲ್ಲಿಯಾದರೂ ಮಾಡಬಹುದು. ರೈಲು ನಿಲ್ದಾಣ, ರಸ್ತೆ, ಕಾರು ಎಲ್ಲೆಡೆ ದೇವರಿದ್ದಾನೆ. ಅವನನ್ನು ಜಪಿಸಬೇಕಾದದ್ದು ಮುಖ್ಯ, ಜಾಗವಲ್ಲ.

ಪ್ರಶ್ನೆ 11: ಚಾತುರ್ಮಾಸ್ಯದ ವೇಳೆಯಲ್ಲಿ ಹೇಗೆ ನಿಭಾಯಿಸುತ್ತೀರಿ ? ದ್ವಂದ್ವ ಮಠ ಸೋದೆಯವರ ಒಪ್ಪಿಗೆ ಕೇಳಿದ್ದೀರಾ ?
ಶೀರೂರು ಶ್ರೀ: ಚಾತುರ್ಮಾಸ್ಯದ 40 ದಿನ ನಿಭಾಯಿಸುತ್ತೇನೆ. ನೀವು ಕುಳಿತ ಜಾಗದಿಂದ ತೆರಳಬಾರದು ಎಂದಿದೆ. ಆದರೆ ಓಡಾಡಬಾರದು ಎಂದೆಲ್ಲೂ ಇಲ್ಲವಲ್ಲ. ನನ್ನ ರಾಜಕೀಯ ವಿಚಾರಕ್ಕೆ ದ್ವಂದ್ವ ಮಠದ ಒಪ್ಪಿಗೆ ಏಕೆ ಬೇಕು, ನಾನು ಪೂಜೆ ಮಾಡುತ್ತೇನಲ್ಲ.












Click it and Unblock the Notifications