ಮಧ್ಯರಾತ್ರಿ ಮಾಧ್ಯಮ ಪ್ರತಿನಿಧಿಗಳು ಅಕ್ಷರಶಃ 'ದಾರಿ' ತಪ್ಪಿದ ಮಕ್ಕಳು.!
2018 ರ ವಿಧಾನಸಭೆ ಚುನಾವಣೆಯಿಂದಾಗಿ, ಬರೀ ವಿಧಾನಮಂಡಲದಲ್ಲಿ ಮಾತ್ರ ಅಲ್ಲ. ಮಾಧ್ಯಮಗಳ ಪರಿಸ್ಥಿತಿಯೂ ಅಕ್ಷರಶಃ ಅತಂತ್ರವಾಗಿದೆ. ಯಾವ ಶಾಸಕರು ಯಾರ ಪರ ಇದ್ದಾರೆ... ಯಾರು ಎಲ್ಲಿದ್ದಾರೆ... ಎಂಬ ಕ್ಲಿಯರ್ ಪಿಕ್ಚರ್ ಮಾಧ್ಯಮಗಳಿಗೆ ಸಿಗುತ್ತಿಲ್ಲ. ನಿನ್ನೆ ಮಧ್ಯರಾತ್ರಿ ಕೂಡ ಆಗಿದ್ದು ಇದೇ.!
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ಮೇಲೆ, 'ಆಪರೇಷನ್ ಕಮಲ' ಭೀತಿಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬೆಂಗಳೂರಿನ ಹೋಟೆಲ್ ಹಾಗೂ ರೆಸಾರ್ಟ್ ಬಿಟ್ಟು ಹೊರ ರಾಜ್ಯಕ್ಕೆ ತೆರಳಲು ಮನಸ್ಸು ಮಾಡಿದರು.
ಶಾಸಕರ ಮಿಡ್ ನೈಟ್ ಪ್ರವಾಸ: ಮಾಧ್ಯಮಗಳ ಕಣ್ತಪ್ಪಿಸಲು ಹರಸಾಹಸ.!
'ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ 116 ಶಾಸಕರು ಕೇರಳದ ಕೊಚ್ಚಿಗೆ ತೆರಳಿದ್ದಾರೆ' ಎಂಬ ಬ್ರೇಕಿಂಗ್ ನ್ಯೂಸ್ ನಿನ್ನೆ ಸಂಜೆ ವೇಳೆಗೆ ಬ್ರೇಕ್ ಆಯ್ತು. ಇಲ್ಲಿಯವರೆಗೂ ಬಿಡದಿ ಬಳಿಯ ಈಗಲ್ ಟನ್ ಹಾಗೂ ಶ್ಯಾಂಗ್ರೀಲಾ ಹೋಟೆಲ್ ಗೇಟ್ ಕಾದಿದ್ದ ಮಾಧ್ಯಮ ಹಾಗೂ ಪತ್ರಿಕಾ ಮಿತ್ರರು ಕೂಡ ಕೊಚ್ಚಿಗೆ ತೆರಳಿ, ಅಲ್ಲಿಂದ ಗ್ರೌಂಡ್ ರಿಪೋರ್ಟ್ ನೀಡಲು ತಯಾರಾದರು.
ಕೆಲ ವಾಹಿನಿಯ ಪತ್ರಕರ್ತರು ಯೂನಿಟ್ ಸಮೇತ ಕಾರ್ ನಲ್ಲಿ ಪ್ರಯಾಣ ಮಾಡಿದರೆ, ಇನ್ನೂ ಕೆಲ ಮಾಧ್ಯಮ ಪ್ರತಿನಿಧಿಗಳು ಶಾಸಕರ ಪ್ಲಾನ್ ನಂತೆ ಬೆಂಗಳೂರಿನಿಂದ ಕೊಚ್ಚಿಗೆ ವಿಮಾನದ ಮೂಲಕ ತೆರಳಲು ಫ್ಲೈಟ್ ಬುಕ್ ಮಾಡಿದರು.
ರಾತ್ರಿ 9 ಗಂಟೆ ಸುಮಾರಿಗೆ ಎಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಹೊತ್ತ ಎರಡು ಬಸ್ ಗಳು ಆಗಮಿಸಿದವು. ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ಕೊಚ್ಚಿಗೆ ವಿಶೇಷ ವಿಮಾನದಲ್ಲಿ ಹಾರುವುದು ಅವರ ಪ್ಲಾನ್ ಆಗಿತ್ತು. ಆದ್ರೆ, ಅದಕ್ಕೆ ವಿಮಾನಯಾನ ಸಚಿವಾಲಯ ಬಕೆಟ್ ಗಟ್ಟಲೆ ತಣ್ಣೀರು ಎರಚಿತು. ವಿಶೇಷ ವಿಮಾನ ಕ್ಯಾನ್ಸಲ್ ಆದ್ದರಿಂದ ರಸ್ತೆ ಮಾರ್ಗವಾಗಿ ಬಸ್ ನಲ್ಲಿಯೇ ಕೊಚ್ಚಿ ತಲುಪಲು ಶಾಸಕರು ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಹೊರಬಿತ್ತು. ಆಗ, ಮಾಧ್ಯಮ ಪ್ರತಿನಿಧಿಗಳು ಕೂಡ ಬ್ಯಾಗ್ ಪ್ಯಾಕ್ ಮಾಡಿಕೊಂಡು ರಸ್ತೆಗಿಳಿದರು. ಆಗಲೇ ನೋಡಿ 'ಹೊಸ ಸಿನಿಮಾ ರಿಲೀಸ್ ಆಗಿದ್ದು'.!
ಹೈದರಾಬಾದ್ ನತ್ತ ಶಾಸಕರು? ಅರ್ಥವಾಗದ ನಿಗೂಢ ನಡೆ!
ರಿಪೋರ್ಟರ್ ಗಳು ಅದಾಗಲೇ ಹೊಸೂರು ತಲುಪಿದ್ದರೆ, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಹೊತ್ತಿದ್ದ ಬಸ್ ದೇವನಹಳ್ಳಿ ಬಳಿ ಇತ್ತು. ಈ ಮಧ್ಯೆ ಕೊಚ್ಚಿ ಪ್ಲಾನ್ ಕ್ಯಾನ್ಸಲ್ ಆಗಿದೆ ಎಂಬ ಗುಲ್ಲು ಬೇರೆ! ಹಾಗಾದ್ರೆ, ಬಸ್ ನಲ್ಲಿದ್ದ ಶಾಸಕರೆಲ್ಲ ಎಲ್ಲಿ ಹೊರಟ್ಟಿದ್ದಾರೆ ಅಂತ ಹೊಸೂರು ಬಳಿ ದಿಕ್ಕೆಟ್ಟ ಪತ್ರಕರ್ತರು ತಲೆ ಕೆರ್ಕೊಳ್ತಿದ್ರು. ಆಗ ಬಂತು ನೋಡಿ ಮತ್ತೊಂದು ಮೆಸೇಜು....
''ಎಲ್ರೂ ಪಾಂಡಿಚೇರಿಗೆ ಹೋಗ್ತಿದ್ದಾರೆ'' ಅಂತ ಒಬ್ರು ಹೇಳಿದರೆ, ಮತ್ತೊಬ್ರು ಹೈದರಾಬಾದ್ ಕಡೆ ಬೆಟ್ಟು ಮಾಡಿ ತೋರಿಸ್ತಿದ್ರು. ಹೊಸೂರು ಟೋಲ್ ಕಟ್ಟಿ ಮಧ್ಯರಾತ್ರಿ ಎರಡು ಗಂಟೆವರೆಗೂ ಬೀದಿಯಲ್ಲಿ ಕಾದರೂ ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟ ಚಿತ್ರಣ ಸಿಗಲಿಲ್ಲ.
ಕೊಚ್ಚಿಗೆ ಹೋಗುವುದೋ... ಹೈದರಾಬಾದ್ ಗೆ ಹಾರುವುದೋ... ಇಲ್ಲ ಪಾಂಡಿಚೆರಿ ಕಡೆ ಮುಖ ಮಾಡುವುದೋ.. ಅಂತ ಪತ್ರಕರ್ತರು ತಲೆಗೆ ಹುಳ ಬಿಟ್ಟುಕೊಂಡಿದ್ದಾಗ, ಕಾರ್ ನಲ್ಲಿ ಮೆಲ್ಲನೆ ದನಿಯಲ್ಲಿ ಕೇಳಿಬರುತ್ತಿದ್ದ ಹಾಡು 'ದಾರಿ ಕಾಣದಾಗಿದೆ ರಾಘವೇಂದ್ರನೇ...'