ನಮ್ಮ ಸಂಸ್ಕೃತಿ ಮುಂದಿನ ಪೀಳಿಗೆಗೂ ದಾಟಬೇಕು: ಶಾಸಕ ದೇವರಾಜ್
Recommended Video

ನಮ್ಮ ಪೀಳಿಗೆಯವರು ಪರಂಪರಾಗತವಾಗಿ ಬಂದ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಅವರಿಗೆ ಅವುಗಳ ಪರಿಚಯ ಮಾಡಿಸಬೇಕು. ಅವುಗಳ ಮಹತ್ವ ತಿಳಿಸಬೇಕು. ಈ ಮೂಲಕ ಭವ್ಯ ಸಂಸ್ಕೃತಿಯ ಸಂಪತ್ತನ್ನು ಉಳಿಸಬೇಕು ಎನ್ನುವುದು ಚಿಕ್ಕಪೇಟೆ ಶಾಸಕ ಆರ್.ವಿ. ದೇವರಾಜ್ ಅವರ ಕನಸು.
ತಮ್ಮ ಕನಸಿನ ಕರ್ನಾಟಕ ಹೇಗಿರಬೇಕು ಎಂಬ ಬಗ್ಗೆ ಒನ್ ಇಂಡಿಯಾದೊಂದಿಗೆ ಕೆಲವು ಮಾತುಗಳನ್ನು ಅವರು ಹಂಚಿಕೊಂಡಿದ್ದಾರೆ.
ಇಂದು ಐಟಿ-ಬಿಟಿ ವೇಗವಾಗಿ ಬೆಳೆದಿದೆ. ಅದರ ಲಾಭ ನಮ್ಮ ಹಳ್ಳಿ ಹುಡುಗರಿಗೆ ಸಿಗುತ್ತಿದೆ. ಈ ಮುಂಚೆ ಹಳ್ಳಿ ಮಕ್ಕಳು ಹೋಟೆಲ್ ಅಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದರು. ಈಗ ಐಟಿ ಹಬ್ಗಳಲ್ಲಿ ದುಡಿಯುತ್ತಿದ್ದಾರೆ. ಅಧಿಕ ಸಂಬಳ ಸಿಗುತ್ತಿದೆ. ಇದು ಖುಷಿ ಕೊಡುವ ವಿಚಾರ ಎನ್ನುತ್ತಾರೆ ದೇವರಾಜ್.

ದೇವಸ್ಥಾನ, ಮಸೀದಿ, ದರ್ಗಾಗಳು ನಮ್ಮ ನೂರಾರು ವರ್ಷದ ಸಂಸ್ಕೃತಿಯನ್ನು ಸಾರುತ್ತವೆ. ಹಳೆಯ ಸಂಸ್ಕೃತಿಯನ್ನು ಬಿಂಬಿಸುವ ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಬೇಕು. ಅವುಗಳ ಬಗ್ಗೆ ಯುವಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಅವರು ಹೇಳಿದ್ದಾರೆ.
ನಮ್ಮದು ಹಸಿರ ವನಸಿರಿ, ಪ್ರಾಣಿ ಪಕ್ಷಿಗಳ ವೈವಿಧ್ಯವಿರುವ ನಾಡು. ಅದನ್ನು ಉಳಿಸುವ ಜವಾಬ್ದಾರಿ ಕೂಡ ನಮ್ಮ ಮೇಲಿದೆ. ಅರಣ್ಯ ಪ್ರದೇಶಗಳನ್ನು ವಿಸ್ತರಿಸಬೇಕು. ಕಾವೇರಿ ಸೇರಿದಂತೆ ಎಲ್ಲ ನದಿಗಳನ್ನು ರಕ್ಷಿಸುವ ಕೆಲಸ ತ್ವರಿತವಾಗಿ ನಡೆಯಬೇಕು ಎನ್ನುತ್ತಾರೆ ಅವರು.
ಬೆಂಗಳೂರಿನಲ್ಲಿ ಕೆಂಪೇಗೌಡರು ಸಾಕಷ್ಟು ಕೆರೆಗಳನ್ನು ನಿರ್ಮಿಸಿದ್ದರು. ನಮ್ಮ ಸರ್ಕಾರ ಬರುವ ಮುನ್ನ ಅನೇಕ ಕೆರೆಗಳನ್ನು ಮುಚ್ಚಿಸಲಾಗಿದೆ. ಕೆರೆ ಮತ್ತು ಕಲ್ಯಾಣಿಗಳ ನಮ್ಮ ಜೀವನಾಡಿಗಳು. ಅವುಗಳ ಪುನರುತ್ಥಾನದ ಕೆಲಸ ಹೆಚ್ಚಾಗಿ ನಡೆಯಬೇಕು. ನಮ್ಮ ಪೂರ್ವಿಕರ ಶ್ರಮ ವ್ಯರ್ಥವಾಗಬಾರದು ಎಂಬ ಬಯಕೆಗಳನ್ನು ಹಂಚಿಕೊಂಡಿದ್ದಾರೆ.
ಎಲ್ಲರಿಗೂ ವಿದ್ಯೆ ಸಿಗಬೇಕು. ಶಿಕ್ಷಣ ಇದ್ದರೆ ಎಲ್ಲಿ ಬೇಕಾದರೂ ಬದುಕಬಹುದು. ಇಂದು ಭಾರತೀಯರು ಅನೇಕ ದೇಶಗಳಲ್ಲಿದ್ದಾರೆ. ವಿದ್ಯೆ ಇಲ್ಲದಿದ್ದರೆ ಎಲ್ಲಿಯೂ ಬದುಕಲು ಆಗುವುದಿಲ್ಲ. ಇಷ್ಟೆಲ್ಲ ಇದ್ದಾರೆ ನಮ್ಮ ಹಳ್ಳಿ, ನಮ್ಮ ನಾಡು ಎಲ್ಲವೂ ಅಭಿವೃದ್ಧಿ ಆಗುತ್ತವೆ ಎಂದು ಹೇಳಿದ್ದಾರೆ.











Click it and Unblock the Notifications