9 ಗಂಟೆಗೆ ಯಡಿಯೂರಪ್ಪ ಪ್ರಮಾಣವಚನ: ರಾಜಭವನದ ಸುತ್ತ ಬಿಗಿಭದ್ರತೆ
ಬೆಂಗಳೂರು, ಮೇ 17: ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಇಂದು(ಮೇ 17) ಬೆಳಿಗ್ಗೆ 9ಗಂಟೆಗೆ ಕರ್ನಾಟಕ ರಾಜ್ಯದ 24 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಜಭವನದ ಸುತ್ತ ಬಿಗಿಭದ್ರತೆ ಏರ್ಪಡಿಸಲಾಗಿದೆ.
ಯಡಿಯೂರಪ್ಪ ಅವರೊಂದಿಗೆ ಬಿಜೆಪಿ ಮುಖಂಡರಾದ ಶ್ರೀರಾಮುಲು, ಆರ್ ಅಶೋಕ್, ಕೆ ಎಸ್ ಈಶ್ವರಪ್ಪ ಮತ್ತು ಗೋವಿಂದ ಕಾರಜೋಳ ಅವರು ಸಹ ರಾಜಭವನದ ಗ್ಲಾಸ್ ಹೌಸ್ ನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಯಡಿಯೂರಪ್ಪ ಅವರ ಪ್ರಮಾಣ ವಚನಕ್ಕೆ ಸುಪ್ರೀಂನಿಂದ ಗ್ರೀನ್ ಸಿಗ್ನಲ್!
ಸಂಪೂರ್ಣ ಬಹುಮತವಿಲ್ಲದಿದ್ದರೂ ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆಗೆ ಆಮಂತ್ರಿಸಿದ ರಾಜ್ಯಪಾಲರ ನಡೆಯನ್ನು ಖಂಡಿಸಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು. ಬೆಳಗ್ಗಿನ ಜಾವ 1:45 ರಿಂದ ಈ ಕುರಿತು ತುರ್ತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಯಡಿಯೂರಪ್ಪ ಅವರ ಪ್ರಮಾಣವಚನಕ್ಕೆ ತಡೆನೀಡಲು ನಿರಾಕರಿಸಿದೆ. ಈ ಕುರಿತ ಮುಂದಿನ ವಿಚಾರಣೆ ಇಂದು ಬೆಳಿಗ್ಗೆ 10:30 ಕ್ಕೆ ನಡೆಯಲಿದೆಯಾದರೂ ಅದಕ್ಕೂ ಮುನ್ನವೇ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೀಗ ಬಿಜೆಪಿ ಪಾಳೇಯದಲ್ಲಿ ಸಂಭ್ರಮ ಮನೆಮಾಡಿದೆ.
ಮೇ 15 ರಂದು ಹೊರಬಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38, ಇತರರು 2 ಸ್ಥಾನಗಳಲ್ಲಿ ಜಯಗಳಿಸಿದ್ದರು. ಅತಂತ್ರ ವಿಧಾನಸಭೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಮೈತ್ರಿ ಸರ್ಕಾರ ರಚಿಸಲು ಮುಂದಾಗಿದ್ದವು. ಆದರೆ ಅದಕ್ಕೂ ಮುನ್ನವೇ ಸರ್ಕಾರ ರಚಿಸುವ ಕುರಿತಂತೆ ಬಿಜೆಪಿ ರಾಜ್ಯಪಾಲರಿ ವಾಜುಭಾಯ್ ವಾಲಾ ಅವರಿಗೆ ಪತ್ರ ನೀದಿದ್ದರಿಂದ ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದರು.