ಕಡೂರಿನಲ್ಲಿ ಗೆಲುವಿನ ನಗೆ ಬೀರುವರೇ 'ಗ್ರಾಮೀಣ ಗಾಂಧಿ' ವೈ.ಎಸ್.ವಿ.ದತ್ತಾ?
ಕಡೂರು ವಿಧಾನಸಭಾ ಕ್ಷೇತ್ರ ಚಿಕ್ಕಮಗಳೂರು ಜಿಲ್ಲೆಯ ತಾಲೂಕು ಕೇಂದ್ರವಾದರೂ ಚಿಕ್ಕಮಗಳೂರಿನ ಹಸಿರಿನ ಸೊಬಗಾಗಲೀ, ಕಾಫಿ ತೋಟವಾಗಲೀ, ಹರಿವ ನೀರಿನ ಝರಿಯಾಗಲೀ ಕಾಣದ ಬಯಲುಸೀಮೆ. ಕಡೂರು, ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ. ಕಡೂರಿನ ಜನತೆಯ ರಾಜಕೀಯ ಪ್ರಾಜ್ಞತೆಯನ್ನು ಇಡೀ ರಾಜ್ಯ ಜನರೇ 2013ರ ವಿಧಾನಸಭೆಯ ಚುನಾವಣಾ ಫಲಿತಾಂಶವನ್ನು ಕಂಡು ಕೊಂಡಾಡಿದ್ದರು.
ಜಾತಿ, ಹಣ ಹಾಗು ತೋಳ್ಬಲಗಳೆಲ್ಲವನ್ನು ಮೀರಿ ತಮ್ಮ ಪ್ರತಿನಿಧಿಯನ್ನು 2013ರಲ್ಲೇ ಆರಿಸಿಕೊಂಡವರು. ಅತ್ಯಂತ ಸರಳ ವ್ಯಕ್ತಿತ್ವ, ಪ್ರಾಮಾಣಿಕ, ಸಜ್ಜನಿಕೆಯ ರಾಜಕಾರಣಿ ಹಾಗು ರಾಜ್ಯದಲ್ಲೇ ಮಾದರಿ ಎನ್ನುವಂಥ ಶಾಸಕ ಕಡೂರಿನ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ. ಸಂಕ್ಷಿಪ್ತವಾಗಿ ವೈ.ಎಸ್.ವಿ. ದತ್ತಾ ಎಂದೇ ಹೆಸರುವಾಸಿ.
ಕಡೂರಿನ ಚುನಾವಣಾ ಇತಿಹಾಸ:
ಕಡೂರಿನ ಹುಲಿಯೆಂದೇ ಖ್ಯಾತರಾಗಿದ್ದ ಕಡೂರು ಕೃಷ್ಣಮೂರ್ತಿ (ಕೆ.ಎಂ.ಕೆ), ಕಡೂರಿನಿಂದ ವಿಧಾನಸಭೆಗೆ 7 ಬಾರಿ ಸ್ಪರ್ಧಿಸಿ, 4 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದವರು. 3 ಬಾರಿ ಸತತವಾಗಿ ಆಯ್ಕೆಯಾಗಿದ್ದ ಕೆಎಂಕೆ, ಸಿದ್ದರಾಮಯ್ಯನವರ ಅನುಯಾಯಿಯಾಗಿದ್ದವರು. ತಮ್ಮ 7ನೇ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯರೊಂದಿಗೆ ಕಾಂಗ್ರೆಸ್ ಸೇರಿ 2008ರಲ್ಲಿ ಸ್ಪರ್ಧಿಸಿ, ಜೆಡಿಎಸ್ ನ ವೈ ಎಸ್ ವಿ ದತ್ತಾ ಎದುರು ಅತ್ಯಂತ ಕಡಿಮೆ ಅಂತರದಿಂದ ಜಯಗಳಿಸಿದರು.
2010ರಲ್ಲಿ ಕೆಎಂಕೆ ಅವರ ಅಕಾಲಿಕ ಮರಣದಿಂದ ಸೃಷ್ಟಿಯಾದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ವೈ.ಸಿ. ವಿಶ್ವನಾಥ್ ರನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಉಪಚುನಾವಣೆಯಲ್ಲೂ ದತ್ತಾ ಕಡಿಮೆ ಅಂತರದಿಂದ ಸೋಲುಂಡರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
2013ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿದ್ದ ಜೆಡಿಎಸ್ ನ ವೈ.ಎಸ್.ವಿ. ದತ್ತಾ ತಮ್ಮ ಸಮೀಪದ ಪ್ರತಿಸ್ಪರ್ಧಿಯಾಗಿದ್ದ ಕೆಜೆಪಿಯ ಬೆಳ್ಳಿ ಪ್ರಕಾಶ್ ಗಿಂತ 42,433 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದರು.

ಜೆಡಿಎಸ್ ಪಕ್ಷಕ್ಕೆ ಒಕ್ಕಲಿಗರೇ ಇಲ್ಲದ ಕ್ಷೇತ್ರವಿದು
ಕಡೂರು ಕ್ಷೇತ್ರದಲ್ಲಿ ಕುರುಬ ಮತ್ತು ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಉಳಿದಂತೆ ಉಪ್ಪಾರರು, ತೆಲುಗು ಗೌಡ, ಮುಸಲ್ಮಾನರು, ಗೊಲ್ಲರು, ಬೋವಿ ಜನಾಂಗದವರು, ಮಾದಿಗರು, ರೆಡ್ಡಿ ಲಿಂಗಾಯಿತರು, ವಿಶ್ವಕರ್ಮ ಸಮುದಾಯದವರಿದ್ದಾರೆ.
ಈ ಬಾರಿ ಕಾಂಗ್ರೆಸ್ ಕುರುಬ ಜನಾಂಗದ ಕೆ.ಎಸ್. ಆನಂದ್ ಗೆ ಮಣೆಹಾಕಿದ್ದು, ಬಿಜೆಪಿ ಲಿಂಗಾಯತ ಸಮುದಾಯದ ಬೆಳ್ಳಿ ಪ್ರಕಾಶ್ ಗೆ ಟಿಕೆಟ್ ನೀಡಿದೆ. ಇನ್ನು ಜೆಡಿಎಸ್ ನಿಂದ ಹಾಲಿ ಶಾಸಕ ವೈ.ಎಸ್.ವಿ. ದತ್ತಾ ಸ್ಪರ್ಧಿಸುತ್ತಿದ್ದಾರೆ. ಮತ್ತೋರ್ವ ಕುರುಬ ಜನಾಂಗದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಧನಂಜಯ್, ಟಿಕೆಟ್ ಸಿಗದಿದ್ದಕ್ಕೆ ಆಕ್ರೋಶಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಒಕ್ಕಲಿಗರ ಪಕ್ಷವೆಂದು ಹಣೆಪಟ್ಟಿ ಹೊಂದಿರುವ ಜೆಡಿಎಸ್ ಪಕ್ಷಕ್ಕೆ ಒಕ್ಕಲಿಗರೇ ಇಲ್ಲದ ಕ್ಷೇತ್ರವಿದು. ಬ್ರಾಹ್ಮಣ ಅಭ್ಯರ್ಥಿ ವೈ.ಎಸ್.ವಿ.ದತ್ತಾರಿಗೆ ಮತಹಾಕಲು ಒಂದು ಸಾವಿರ ಬ್ರಾಹ್ಮಣ ಮತಗಳಿದ್ದರೆ ಹೆಚ್ಚೆಚ್ಚು. ಬರೀ ಬ್ರಾಹ್ಮಣರನ್ನೇ ನೆಚ್ಚಿಕೊಂಡಿದ್ದರೆ ಪ್ರತಿ ಬಾರಿ ಸೋಲು ಕಟ್ಟಿಟ್ಟ ಬುತ್ತಿಯಾಗಿರುತ್ತಿತ್ತು. ಇವೆಲ್ಲವನ್ನೂ ಮೀರಿ ಕಡೂರಿನ ಎಲ್ಲ ಜಾತಿ, ಸಮುದಾಯಕ್ಕೆ ಸೇರಿದ ಜನ ದತ್ತಾರನ್ನು ಆಯ್ಕೆ ಮಾಡಿ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದರು.

ನಾಮಪತ್ರ ಸಲ್ಲಿಕೆಯಲ್ಲೇ ಜನತೆಯ ಮನಸ್ಥಿತಿ ವ್ಯಕ್ತ
ಇದೇ ಏಪ್ರಿಲ್ 24ರಂದು ನಾಮಪತ್ರ ಸಲ್ಲಿಕೆಗೂ ಮುನ್ನ ತಾಲೂಕಿನ ಯಗಟಿ ಗ್ರಾಮದಲ್ಲಿ ತಮ್ಮ ಮನೆ ದೇವರ ದರ್ಶನ ಪಡೆದು, ಪಟ್ಟಣದ ಎಪಿಎಂಸಿ ಯಾರ್ಡಿನ ಮುಂದೆ ಸೇರಿದ್ದ ಜನಸ್ತೋಮವನ್ನು ಕಂಡ ವೈ.ಎಸ್.ವಿ. ದತ್ತಾ. ಎಂದಿನಂತೆ ಎಲ್ಲರೊಂದಿಗೆ ಬೆರೆತು ಮುಗುಳ್ನಗುತ್ತ, ತಮ್ಮ ಅಭಿಮಾನಿಗಳತ್ತ ಕೈ ಬೀಸುತ್ತಾ, ಎತ್ತಿನಗಾಡಿಯೊಂದನ್ನು ಏರಿ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿ, ಚುನಾವಣಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಸುಮಾರು 20 ಸಾವಿರಕ್ಕೂ ಅಧಿಕ ಜನರೊಂದಿಗೆ ಮೆರವಣಿಗೆಯಲ್ಲಿ ಸಾಗಿ, ಜಯಘೋಷಗಳನ್ನು ಕೂಗುತಿದ್ದದ್ದು ಸಾಮಾನ್ಯವಾಗಿತ್ತು ಮತ್ತು ಅವರ ಜನಪ್ರಿಯತೆಗೆ ಕನ್ನಡ ಹಿಡಿದಿತ್ತು.

ಕಾಂಗ್ರೆಸ್ಸಿನಲ್ಲಿ ಭುಗಿಲೆದ್ದ ಅಸಮಾಧಾನದ ಹೊಗೆ
ಧನಂಜಯ್ ರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿದ ಕಾರಣಕ್ಕೆ ಕಾಂಗ್ರೆಸ್ ನ ಕಡೂರು ಹಾಗು ಬೀರೂರಿನ ಬ್ಲಾಕ್ ಕಾಂಗ್ರೆಸ್ ನ ವಿವಿಧ ಪದಾಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಹಾಗು ಕಾಂಗ್ರೆಸ್ ನ ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ರಾಜೀನಾಮೆ ಪ್ರಹಸನಕ್ಕೆ ತೇಪೆ ಹಚ್ಚಲು ಬಿ.ಎಲ್. ಶಂಕರ್ ನಡೆಸಿದ ಸಂಧಾನ ಹೇಚ್ಚೇನೂ ಫಲಪ್ರದವಾಗಿಲ್ಲವೆಂದೂ ತಿಳಿದುಬಂದಿದೆ.

ಹೆಚ್ಚು ಅನುದಾನ ತಂದ ದತ್ತಾ ಬಗ್ಗೆ ಅಭಿಮಾನ
ವಿರೋಧಪಕ್ಷದಲ್ಲಿದ್ದರೂ ಅತಿ ಹೆಚ್ಚು ಅನುಧಾನ ತರುವಲ್ಲಿ ಯಶಸ್ವಿಯಾಗಿರುವ ವೈ.ಎಸ್.ವಿ.ದತ್ತಾರ ಬಗ್ಗೆ ಮತದಾರನಿಗೆ ಅಭಿಮಾನ ಹೆಚ್ಚಿರುವಂತೆ ಕಾಣುತ್ತಿದೆ. ಜಾತಿ, ಧರ್ಮವನ್ನು ಮೀರಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ವಿದ್ಯಾವಂತರು, ಕೃಷಿ ಕಾರ್ಮಿಕರು, ಹೆಣ್ಣುಮಕ್ಕಳು ಎಲ್ಲ ವರ್ಗದಲ್ಲೂ ಎಲ್ಲ ಜಾತಿಯವರು ದತ್ತರ ಬೆನ್ನಿಗೆ ನಿಂತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಿದ್ದರಾಮಯ್ಯರ ಅಥವಾ ಯಡಿಯೂರಪ್ಪರ ಕಾರ್ಯಕ್ರಮಕ್ಕೂ ಮೀರಿಸುವ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕ್ರಮಕ್ಕೆ ಜನ ಸೇರುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.
ಮುಸ್ಲಿಂ ಸಮುದಾಯದ ಆಟೋ ಚಾಲಕರ ಗುಂಪೊಂದು, ಬ್ರಾಹ್ಮಣರಾದ ದತ್ತಣ್ಣನಿಗೆ ವೋಟ್ ಹಾಕ್ತೀವಿ ಎಂದು ಹರ್ಷದಿಂದ ಅಭಿಮಾನವನ್ನು ವ್ಯಕ್ತಪಡಿಸಿದರು. ಕುರುಬ ಸಮುದಾಯದ ಮತದಾರರ ಪೈಕಿ ಹೆಚ್ಚಿನವರು ಕಾಂಗ್ರೆಸ್ ಪರವಾಗಿದ್ದು ಹಾಗು ಲಿಂಗಾಯತ ಸಮುದಾಯದ ಹೆಚ್ಚಿನವರು ಬಿಜಿಪಿ ಪರವಾಗಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿವೆ.

ಒಗ್ಗಟ್ಟಿಲ್ಲದ ಲಿಂಗಾಯತ ಪಂಗಡಗಳು
ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಆನಂದ್ ಬದಲಿಗೆ ಕುರುಬ ಜನಾಂಗದ ಬೇರೊಬ್ಬರಿಗೆ ಟಿಕೆಟ್ ನೀಡಿದ್ದರೆ ಕಾಂಗ್ರೆಸ್ ಕಾರ್ಯಕರ್ತರು ಮತ್ತಷ್ಟು ಕ್ರಿಯಾಶೀಲರನ್ನಾಗಿ ಮಾಡುತಿತ್ತು ಎಂಬುದು ಕಾಂಗ್ರೆಸ್ಸಿಗರಿಂದಲೇ ಕೇಳಿಬರುತ್ತಿರುವ ಅಭಿಪ್ರಾಯಗಳು. ಇನ್ನು ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳು ಒಂದಾಗಿ, ಒಗ್ಗಟ್ಟಾಗಿ ಮತಹಾಕಿದ ಉದಾಹರಣೆ ಕಡೂರಿನ ಇತಿಹಾಸದಲ್ಲಿ ಕಂಡುಬಂದಿಲ್ಲ. ಈ ಬಾರಿಯೂ ಅದರ ಮುನ್ಸೂಚನೆಗಳು ಕಾಣಿಸತೊಡಗಿದೆ.
ದತ್ತರ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ರಸ್ತೆಯುದ್ದಕ್ಕೂ ಎಲ್ಲ ಸಮುದಾಯಕ್ಕೆ ಸೇರಿದ ಅಭಿಮಾನಿಗಳು, ಕಾರ್ಯಕರ್ತರು, ಲಂಬಾಣಿ ಜನಾಗಕ್ಕೆ ಸೇರಿದ ಹೆಣ್ಣುಮಕ್ಕಳು ನೃತ್ಯ ಮಾಡುತ್ತಾ, ನೂರಾರು ಎತ್ತಿನಗಾಡಿಯಲ್ಲಿ ರೈತರು ಸ್ವಯಂ ಪ್ರೇರಿತವಾಗಿ ಬಂದಿದ್ದನ್ನು ಕಂಡರೆ, ಕಡೂರಿನ ಜನತೆ ತಮ್ಮ ಮನದಾಳದ ತೀರ್ಪನ್ನು ಅಂತಿಮಗೊಳಿಸಿದ್ದಾರೆಂದು ಗೋಚರಿಸುತ್ತಿತ್ತು.












Click it and Unblock the Notifications