ಕರ್ನಾಟಕ ಚುನಾವಣೆ : ಸಹೋದರರ ಸವಾಲಿನಲ್ಲಿ ಗೆದ್ದವರು, ಸೋತವರು
ಬೆಂಗಳೂರು, ಮೇ 15 : ಮಂಗಳವಾರ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 104 ಸ್ಥಾನಗಳನ್ನು ಪಡೆದು ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 78, ಜೆಡಿಎಸ್ 38 ಸ್ಥಾನಗಳಲ್ಲಿ ಜಯಗಳಿಸಿದೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಕರ್ನಾಟಕದ ಈ ಬಾರಿಯ ಚುನಾವಣೆಯ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿತ್ತು. ಅಪ್ಪ-ಮಕ್ಕಳು, ಸಹೋದರರು ಚುನಾವಣಾ ಕಣದಲ್ಲಿ ಇದ್ದರು. ಕೆಲವರು ಸೋಲು ಕಂಡರೆ, ಉಳಿದ ಕೆಲವರು ಗೆದ್ದು ಬೀಗಿದ್ದಾರೆ.
'ಸಹೋದರರ ಕಾಳಗ'ದಲ್ಲಿ ಗೆಲುವು ಕಂಡ ಕುಮಾರ ಬಂಗಾರಪ್ಪ
ಮೂರು ಕ್ಷೇತ್ರಗಳಲ್ಲಿ ಒಡ ಹುಟ್ಟಿದ ಸಹೋದರರು ಬೇರೆ-ಬೇರೆ ಪಕ್ಷದಿಂದ ಕಣದಲ್ಲಿದ್ದರು. ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ.ರೇವಣ್ಣ ಅವರು ಬೇರೆ-ಬೇರೆ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರು. ಇಬ್ಬರು ಗೆದ್ದಿದ್ದು, ಒಟ್ಟಿಗೆ ವಿಧಾನಸಭೆ ಪ್ರವೇಶಿಸಲಿದ್ದಾರೆ.
ಕರ್ನಾಟಕ ಚುನಾವಣಾ ಫಲಿತಾಂಶ : ಅಪ್ಪ-ಮಕ್ಕಳಲ್ಲಿ ಗೆದ್ದವರು, ಸೋತವರು
ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪ ಕಣದಲ್ಲಿದ್ದರು. ಕುಮಾರ್ ಬಂಗಾರಪ್ಪ ಅವರು ಗೆದ್ದಿದ್ದು, ಮಧು ಬಂಗಾರಪ್ಪ ಅವರು ಸೋಲು ಅನುಭವಿಸಿದ್ದಾರೆ. ಸಹೋದರರ ಸವಾಲ್ನಲ್ಲಿ ಗೆದ್ದವರು, ಸೋತವರು ಯಾರು? ಇಲ್ಲಿದೆ ಮಾಹಿತಿ......
ಕುಮಾರ್/ಮಧು ಬಂಗಾರಪ್ಪ
ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರ ಸತತ ಮೂರು ವಿಧಾನಸಭಾ ಚುನಾವಣೆಗಳಿಂದ ಸಹೋದರರ ಸವಾಲಿಗೆ ಸಾಕ್ಷಿಯಾಗಿದೆ. ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಪುತ್ರರಾದ ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ ಅವರು ಈ ಚುನಾವಣೆಯಲ್ಲಿಯೂ ಎದುರಾಳಿಗಳಾಗಿದ್ದರು.
2004ರಲ್ಲಿ ಕುಮಾರ್ ಬಂಗಾರಪ್ಪ (ಕಾಂಗ್ರೆಸ್), 2013ರಲ್ಲಿ ಮಧು ಬಂಗಾರಪ್ಪ (ಜೆಡಿಎಸ್) ಜಯಗಳಿಸಿದ್ದರು. 2018ರ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ಕುಮಾರ್ ಬಂಗಾರಪ್ಪ ಪಡೆದ ಮತಗಳು 72091, ಮಧು ಬಂಗಾರಪ್ಪ ಪಡೆದ ಮತ 58805.
ಕೃಷ್ಣ ಕುಮಾರ್, ಡಿ.ನಾಗರಾಜಯ್ಯ
ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರ ಸಹ ಸಹೋದರರ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಜೆಡಿಎಸ್ನಿಂದ ಡಿ.ನಾಗರಾಜಯ್ಯ, ಬಿಜೆಪಿಯಿಂದ ಕೃಷ್ಣಕುಮಾರ್ ಅವರು ಅಭ್ಯರ್ಥಿಗಳಾಗಿದ್ದರು. ಇಬ್ಬರು ಸಹ ಸೋಲು ಕಂಡಿದ್ದಾರೆ.
ಕಾಂಗ್ರೆಸ್ನ ಡಾ.ಎಚ್.ಡಿ.ರಂಗನಾಥ್ ಅವರು 58,697 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ನಿಂದ ಸ್ಪರ್ಧಿಸಿದ್ದ ಡಿ.ನಾಗರಾಜಯ್ಯ ಅವರು 44,476 ಮತ ಪಡೆದು ಸೋತಿದ್ದರೆ, ಬಿಜೆಪಿಯಿಂದ ಕಣಕ್ಕಿಳಿದಿದ್ದ ಡಿ.ಕೃಷ್ಣ ಕುಮಾರ್ ಅವರು 53,097 ಮತಗಳನ್ನು ಪಡೆದು ಸೋತಿದ್ದಾರೆ.
ಆನಂದ್ ಸಿಂಗ್/ದೀಪಕ್ ಸಿಂಗ್
ಬಳ್ಳಾರಿ ಜಿಲ್ಲೆಯ ವಿಜಯನಗರ (ಹೊಸಪೇಟೆ) ಕ್ಷೇತ್ರ ಸಹೋದರರ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಕಾಂಗ್ರೆಸ್ನಿಂದ ಆನಂದ್ ಸಿಂಗ್, ಜೆಡಿಎಸ್ನಿಂದ ದೀಪಕ್ ಸಿಂಗ್ ಅಭ್ಯರ್ಥಿಯಾಗಿದ್ದರು.
ಕಾಂಗ್ರೆಸ್ನ ಆನಂದ್ ಸಿಂಗ್ 83,214 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಜೆಡಿಎಸ್ ನಿಂದ ಕಣಕ್ಕೆ ಇಳಿದಿದ್ದ ದೀಪಕ್ ಸಿಂಗ್ ಅವರು 3835 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಕುಮಾರಸ್ವಾಮಿ/ರೇವಣ್ಣ
ಒಂದೇ ಪಕ್ಷದಿಂದ ಎಚ್.ಡಿ.ರೇವಣ್ಣ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ ಕಣಕ್ಕಿಳಿದಿದ್ದರು. ಸಹೋದರರಿಬ್ಬರು ಗೆಲುವು ಸಾಧಿಸಿದ್ದು, ಒಟ್ಟಿಗೆ ವಿಧಾನಸೌಧ ಪ್ರವೇಶಿಸಲಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ, ಚನ್ನಪಟ್ಟಣದಿಂದ ಸ್ಪರ್ಧಿಸಿದ್ದರು. ರಾಮನಗರದಲ್ಲಿ 92626 ಮತ, ಚನ್ನಪಟ್ಟಣದಲ್ಲಿ 66465 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದಿಂದ ಎಚ್.ಡಿ.ರೇವಣ್ಣ ಅವರು ಅಭ್ಯರ್ಥಿಯಾಗಿದ್ದರು. 108541 ಮತಗಳನ್ನು ಪಡೆದು ಅವರು ಜಯಗಳಿಸಿದ್ದಾರೆ.