ರಾರಾನಗರದಲ್ಲಿ ಸ್ಪರ್ಧೆಗಿಳಿದಿರುವ 'ಹುಚ್ಚ' ವೆಂಕಟ್ ಆಸ್ತಿಯೆಷ್ಟು?
Recommended Video

ಬೆಂಗಳೂರು, ಏಪ್ರಿಲ್ 24 : ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮೇ 12ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ದೇವಿ ಕೃಪೆಗೆ ಯಾರು ಪಾತ್ರರಾಗಲಿದ್ದಾರೆ? ಗೋಪುರದ ಎದುರೇ ಮೈಸೂರು ರಸ್ತೆ ಕಿತ್ತುಹೋದರೂ ಸಂಪರ್ಕಕ್ಕೆ ಸಿಗದ ಮುನಿರತ್ನಗೆ ಸವಾಲು ಒಡ್ಡುವವರು ಯಾರು?
ಕಾರ್ಪೊರೇಟರುಗಳನ್ನು ತನ್ನ ಬಿಗಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿದ್ದಾರೆ ಎಂಬ ಆರೋಪ ಹೊತ್ತಿರುವ, ಕಾಂಗ್ರೆಸ್ ನಾಯಕ, ಹಾಲಿ ಶಾಸಕ ಮುನಿರತ್ನ ಗೆಲ್ಲುತ್ತಾರಾ ಅಥವಾ ಟಿಕೆಟ್ ಸಿಕ್ಕಿಲ್ಲವೆಂದು ಬಿಜೆಪಿಯಿಂದ ಜೆಡಿಎಸ್ಸಿಗೆ ಹಾರಿರುವ ಜಿಎಚ್ ರಾಮಚಂದ್ರ ಗೆಲ್ಲುತ್ತಾರಾ ಅಥವಾ ಬಿಜೆಪಿಯ ಮುನಿರಾಜು ಅವರ ಗೆಲ್ಲುತ್ತಾರಾ ಅಥವಾ... ಪಕ್ಷೇತರರಾಗಿ ಸ್ಪರ್ಧೆಗಿಳಿದಿರುವ ಎಲ್ ವೆಂಕಟ್ರಾಮ್ ಅವರ ಕೊರಳಿಗೆ ವಿಜಯಮಾಲೆ ಬೀಳಲಿದೆಯಾ?
ಈ ವೆಂಕಟ್ರಾಮ್ ಅವರು ಯಾರೆಂದು ನೀವು ತಲೆ ಕೆಡಿಸಿಕೊಳ್ಳುತ್ತಿರಬಹುದು. ಅವರು ಮತ್ತಾರೂ ಅಲ್ಲ, 'ಕಾವೇರಿ ಪ್ರೀತಿಗೆ ಮತ್ತೆ ಹುಟ್ಟುವೆನು' ಎಂದು ಹೃದಯಕ್ಕೆ ತಟ್ಟುವಂತೆ ಹಾಡಿದ್ದ, ಸ್ವತಂತ್ರಪಾಳ್ಯದಲ್ಲಿ ಮಚ್ಚು ಹಿಡಿದು ರುಂಡ ಚೆಂಡಾಡಿದ್ದ, ನಟಿ ರಮ್ಯಾನೇ ನನ್ನ ಹೆಂಡತಿ ಎಂದು ಹೇಳಿ ಕರ್ನಾಟಕದಾದ್ಯಂತ ಬಿರುಗಾಳಿ ಎಬ್ಬಿಸಿದ್ದ, ಬಿಗ್ ಬಾಸ್ ನಲ್ಲಿ ಸ್ಪರ್ಧಿಯ ಕಪಾಳಕ್ಕೆ ಬಾರಿಸಿದ್ದ, ಮಾತೆತ್ತಿದರೆ ನನ್ ಎಕ್ಕಡಾ ಎಂದು ಅಬ್ಬರಿಸುವ....
ಈಗ ನಿಮಗೆ ಗೊತ್ತಾಗಿರಬಹುದು ಆ ಎಲ್ ವೆಂಕಟ್ರಾಮ್ ಯಾರೆಂದು. ಅವರು ಮತ್ತಾರೂ ಅಲ್ಲ, ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ಸಿಡಿದೇಳುವ, ಕಾವೇರಿ ವಿಷಯಕ್ಕೆ ಬಂದರೆ ಹೋರಾಟಕ್ಕೆ ನಿಲ್ಲುವ, ಕನ್ನಡಿಗರ ರಕ್ಷಣೆಗೆ ಟೊಂಕ ಕಟ್ಟಿರುವ, ನೋಡಲು ಒರಟನಾದರೂ ಆಂತರ್ಯದಲ್ಲಿ ಮಗುವಿನಂತಿರುವ, ನಟ, ನಿರ್ಮಾಪಕ, ನಿರ್ದೇಶಕ, ಹಾಡುಗಾರ, ಸಾಹಿತಿ, ಚಿತ್ರಕತೆಗಾರ, ಸಂಭಾಷಣೆಗಾರ ಎಲ್ಲವೂ ಆಗಿರುವ ದಿ ಒನ್ ಅಂಡ್ ಓನ್ಲಿ ಫೈರಿಂಗ್ ಸ್ಟಾರ್ 'ಹುಚ್ಚ' ವೆಂಕಟ್!

ಬಂದು ವೋಟು ಕೇಳಲ್ಲ, ಮತದ ಭಿಕ್ಷೆ ಬೇಡಲ್ಲ
ಯಸ್, ಹುಚ್ಚ ವೆಂಕಟ್ ಅವರು ಮುನಿರತ್ನರ ವಿರುದ್ಧ ಸೆಡ್ಡು ಹೊಡೆದು ರಾಜರಾಜೇಶ್ವರಿ ನಗರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈಗಾಗಲೆ ತಮ್ಮ ನಾಮಪತ್ರವನ್ನು ಸಲ್ಲಿಸಿರುವ ಅವರ ವಿಶೇಷತೆಯೇನೆಂದರೆ, ಅವರು ಮನೆಮನೆಗೆ ಬಂದು ವೋಟು ಕೇಳಲ್ಲ, ಮತದ ಭಿಕ್ಷೆ ಬೇಡಲ್ಲ. ನಾನು ಶಾಸಕನಾಗಬೇಕಿದ್ದರೆ ನೀವೇ ಬಂದು ನನಗೆ ಮತ ಹಾಕಬೇಕ್ ಎಂದು ಆಜ್ಞೆ ಮಾಡಿದ್ದಾರೆ. ಯಾರಾದ್ರೂ ಕುಕ್ಕರ್ ಗಿಕ್ಕರ್ ಆಮಿಷ ಒಡ್ಡಲು ಬಂದರೆ ಅದೇ ಕುಕ್ಕರಿನಿಂದ ಕೊಡುವವರ ತಲೆಯ ಮೇಲೆಯೇ ಕುಕ್ಕಿ ಎಂದು ಕೂಡ ಆದೇಶ ನೀಡಿದ್ದಾರೆ ಹುಚ್ಚ ವೆಂಕಟ್.

ಅಫಿಡವಿಟ್ಟಿನಲ್ಲಿ ಕೂಡ ಹಲವಾರು ವಿಶೇಷತೆ
ಅವರ ಮಾತು, ನಡೆ ನುಡಿಗಳು ತಮಾಷೆ ಅನ್ನಿಸಬಹುದು. ಆದರೆ, ಅವರು ಇರುವುದೇ ಹಾಗೆ. ಇದ್ದನ್ನು ಇದ್ದಂತೆ ನೇರವಾಗಿ ಎದೆಗೆ ಬಂದು ಗುದ್ದುವ ಹಾಗೆ. ಅವರು ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಕೂಡ ಹಲವಾರು ವಿಶೇಷತೆಗಳಿವೆ. ಯಾವಾಗಲೂ ಡೆನಿಮ್ ಶರ್ಟನ್ನೇ ಹಾಕುವ ನಟ, ನಿರ್ದೇಶಕ ಮತ್ತು ನಿರ್ಮಾಪಕ ಹುಚ್ಚ ವೆಂಕಟ್ ಅವರು ಜೆಪಿ ನಗರದ ಆಕ್ಸ್ ಫರ್ಡ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಲು ಹೋಗಿ ಅರ್ಧಕ್ಕೇ ಬಿಟ್ಟಿದ್ದಾರೆ. ಅವರ ಒಟ್ಟು ಆಸ್ತಿಯ ಮೊತ್ತ 13,08,733 ರುಪಾಯಿಗಳು ಮಾತ್ರ.
ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ

ಪೊರ್ಕಿ ತಿಕ್ಲ ಡಿಕ್ಟೇಟರ್ ದುರಂಕಾರಿ ಹುಚ್ಚ ವೆಂಕಟ್
ಮೆಂಟಲ್ ಮಂಜ ಚಿತ್ರದಲ್ಲಿ ನಟಿಸಿ, ಹುಚ್ಚ ವೆಂಕಟ್, ಪೊರ್ಕಿ ಹುಚ್ಚ ವೆಂಕಟ್, ತಿಕ್ಲ ಹುಚ್ಚ ವೆಂಕಟ್, ಡಿಕ್ಟೇಟರ್ ಹುಚ್ಚ ವೆಂಕಟ್, ದುರಂಕಾರಿ ಹುಚ್ಚ ವೆಂಕಟ್ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ಸಂಗೀತ ನೀಡಿ, ಡೈಲಾಗನ್ನೂ ಬರೆದು, ಪ್ರಮುಖ ಪಾತ್ರದಲ್ಲಿ ನಟಿಸಿ, ಬಿಗ್ ಬಾಸ್ ನಲ್ಲಿಯೂ ಹಲವಾರು ವಾರ ಕಳೆದು, ಇಷ್ಟೊಂದು ಖ್ಯಾತಿ ಗಳಿಸಿರುವ ಹುಚ್ಚ ವೆಂಕಟ್ ಬಳಿ ಇಷ್ಟೇನಾ ಇರುವುದು ಅಚ್ಚರಿಯಾದರೆ ಅದು ನಿಮ್ಮ ತಪ್ಪಲ್ಲ. ಇಷ್ಟೆಲ್ಲ ಮಾಡಲು ಅವರು ತಮ್ಮ ಅಪ್ಪನಿಂದ 1 ಕೋಟಿ 7 ಲಕ್ಷ ರುಪಾಯಿ ಸಾಲ ಪಡೆದಿದ್ದಾರೆ. ಹೀಗಾಗಿ ಅವರು ಒಂದು ರೀತಿ ಬರಿಗೈ ದಾಸ.

ವೆಂಕಟ್ ಬ್ಯಾಂಕಲ್ಲಿ ಎಷ್ಟೆಷ್ಟು ಇಟ್ಟಿದ್ದಾರೆ?
ಇನ್ನು 39 ವರ್ಷದ ವೆಂಕಟ್ ಅವರ ಬ್ಯಾಂಕಲ್ಲಿ ಎಷ್ಟೆಷ್ಟು ಹಣವಿದೆಯೆಂದು ನೋಡೋಣ ಬನ್ನಿ. ಅಂಕಿಅಂಶ ನೋಡುತ್ತಿದ್ದಂತೆ ಬೆಚ್ಚಿಬೀಳಬೇಡಿ. ಅವರ ಕೈಯಲ್ಲಿ ಇರುವುದು ಕೇವಲ 10 ಸಾವಿರ ರುಪಾಯಿ, ಕಾರ್ಪೊರೇಷನ್ ಬ್ಯಾಂಕಲ್ಲಿ 124.42 ರುಪಾಯಿ, ಐಸಿಐಸಿಐ ಬ್ಯಾಂಕಲ್ಲಿ 133.85 ರುಪಾಯಿ, ಎಚ್ಡಿಎಫ್ಸಿ ಬ್ಯಾಂಕಲ್ಲಿ ಸೊನ್ನೆ, ಇಂಡಿಯನ್ ಓವರ್ ಸೀಸ್ ಬ್ಯಾಂಕಲ್ಲಿ 61.06 ರುಪಾಯಿ, ಅವರ ಬಳಿ 1.5 ಲಕ್ಷ ರುಪಾಯಿ ಮೌಲ್ಯದ ಹ್ಯುಂಡೈ ಎಸೆಂಟ್ ಕಾರಿದೆ. ಅವರ ಒಟ್ಟು ಚರಾಸ್ತಿಯ ಮೊತ್ತ 1,60,319 ರುಪಾಯಿಗಳು ಮಾತ್ರ.

ಸ್ಥಿರಾಸ್ತಿಯೂ ಇಲ್ಲ, ಹೆಂಡತಿ ಮಕ್ಕಳೂ ಇಲ್ಲ
ಅವರ ಬಳಿ ಕೃಷಿ ಅಥವಾ ಕೃಷಿಯೇತರ ಯಾವುದೇ ಸ್ಥಿರಾಸ್ತಿ ಇಲ್ಲವೇ ಇಲ್ಲ. ಹೆಂಡತಿಯೂ (ವಿಚ್ಛೇದನ) ಇಲ್ಲ, ಮಕ್ಕಳಂತೂ ಇಲ್ಲವೇ ಇಲ್ಲ. ತಂದೆಯಿಂದ ಯಾವುದೇ ಆಸ್ತಿ ಬಳುವಳಿಯಾಗಿಯೂ ಬಂದಿಲ್ಲ. ಉಳಿದ ರಾಜಕಾರಣಿಗಳಿಂತೆ ಅವರ ಬಳಿ ಕಟ್ಟಡಗಳಾಗಲಿ, ಕೆಜಿಗಟ್ಟಲೆ ತೂಗುವ ಚಿನ್ನ ಬೆಳ್ಳಿಯಾಗಲಿ ಇಲ್ಲ. ಹೆಂಡತಿ ಇದ್ದರೆ ತಾನೆ ಚಿನ್ನ, ಬೆಳ್ಳಿ, ಆಸ್ತಿಪಾಸ್ತಿಯೆಲ್ಲ! ಕೋಟಿಗಟ್ಟಲೆ ಯಾವುದೇ ಬಾಂಡ್ ನಲ್ಲಾಗಲಿ, ಶೇರುಗಳಲ್ಲಾಗಲಿ ಹೂಡಿಲ್ಲ. ಕನ್ನಡಿಗರೇ ಅವರ ದೊಡ್ಡ ಆಸ್ತಿ. ಈ ಚಿತ್ರ ಮಾಡಲು ಅವರು ಯಾವುದೇ ಬ್ಯಾಂಕಲ್ಲಿ ಸಾಲವನ್ನೂ ಪಡೆದಿಲ್ಲ. ಸಾಲ ಪಡೆದಿದ್ದು ಅವರ ತಂದೆ ಲಕ್ಷ್ಮಣ್ ಬಳಿ ಮಾತ್ರ.

ಅಂಬೇಡ್ಕರ್ ಅವಹೇಳನ ಮಾಡಿದ್ದಕ್ಕಾಗಿ ಕೇಸು
ಆದರೆ, ಅನ್ಯಾಯವನ್ನು ನೋಡಿಯೂ ಅವರಿಂದ ಸುಮ್ಮನಿರುವುದು ಸಾಧ್ಯವಿಲ್ಲ. ಬಿಗ್ ಬಾಸ್ ನಲ್ಲಿ ಕಪಾಳಮೋಕ್ಷ ಮಾಡಿದ್ದರಾದರೂ ಕೇಸು ದಾಖಲಾಗಿಲ್ಲ. ಆದರೆ, ಭಾರತದ ಸಂವಿಧಾನದ ಕರ್ತೃ ಡಾ. ಬಿಆರ್ ಅಂಬೇಡ್ಕರ್ ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಕ್ಕಾಗಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಕೇಸನ್ನು ಹಾಕಲಾಗಿದೆ (ಕ್ರೈಂ.ನಂ. 440/2015). ಎಸ್ಸಿ ಎಸ್ಟಿ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಾಗಿರುವುದಲ್ಲದೆ, ಅವರನ್ನು ಪೊಲೀಸರು ಬಂಧಿಸಿದ್ದರು ಕೂಡ. ಇದನ್ನು ಹೊರತುಪಡಿಸಿದರೆ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications