ಒನ್ ಇಂಡಿಯಾ ಸಮೀಕ್ಷೆ : ಶಿವಮೊಗ್ಗದಲ್ಲಿ ಈಶ್ವರಪ್ಪಗೆ ಗೆಲುವು
ಶಿವಮೊಗ್ಗ, ಮೇ 02 : ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಒನ್ ಇಂಡಿಯಾ ಕನ್ನಡ ರಾಜ್ಯದ ಹಲವು ಕ್ಷೇತ್ರಗಳ ಹಣಾಹಣಿ ಬಗ್ಗೆ ಫೇಸ್ಬುಕ್ ಸಮೀಕ್ಷೆ ನಡೆಸಿದೆ.
ಶಿವಮೊಗ್ಗ ನಗರದ ಕ್ಷೇತ್ರ ಟಿಕೆಟ್ ಘೋಷಣೆ ಸಮಯದಿಂದಲೂ ಕುತೂಹಲ ಕೆರಳಿಸಿದೆ. ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ನಿಂದ ಹಾಲಿ ಶಾಸಕ ಪ್ರಸನ್ನ ಕುಮಾರ್, ಜೆಡಿಎಸ್ನಿಂದ ನಿರಂಜನ್ ಕಣದಲ್ಲಿದ್ದಾರೆ.
ಶಿವಮೊಗ್ಗದಲ್ಲಿ ನನಗೆ ಎದುರಾಳಿಗಳೇ ಇಲ್ಲ : ಕೆ.ಎಸ್.ಈಶ್ವರಪ್ಪ ಸಂದರ್ಶನ
ಒನ್ ಇಂಡಿಯಾ ಕನ್ನಡ ಶಿವಮೊಗ್ಗ ನಗರ ಕ್ಷೇತ್ರದ ಹಣಾಹಣಿ ಬಗ್ಗೆ ಫೇಸ್ಬುಕ್ನಲ್ಲಿ ಸಮೀಕ್ಷೆ ನಡೆಸಿತು. ಸಮೀಕ್ಷೆಯಲ್ಲಿ ಪಾಲ್ಗೊಂಡು ಮತದಾನ ಮಾಡಿ ಎಲ್ಲಾ ಓದುಗರಿಗೆ ಒನ್ ಇಂಡಿಯಾ ಅಭಿನಂದನೆ ಸಲ್ಲಿಸುತ್ತದೆ.
ಸಮೀಕ್ಷೆಯ ಫಲಿತಾಂಶ : 'ಶಿವಮೊಗ್ಗದಲ್ಲಿ ಯಾರಿಗೆ ಗೆಲುವು?' ಎಂಬ ಶೀರ್ಷಿಕೆಯಡಿ ಸಮೀಕ್ಷೆ ನಡೆಸಲಾಯಿತು. ಈ ಸಮೀಕ್ಷೆಯನ್ನು 57 ಸಾವಿರ ಜನರ ವೀಕ್ಷಣೆ ಮಾಡಿದ್ದಾರೆ. 3.8ಲೈಕ್, 83 ಶೇರ್ ಆಗಿದೆ. 2.8 ಸಾವಿರ ಜನರು ಸಮೀಕ್ಷೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಈ ಸಮೀಕ್ಷೆಯಲ್ಲಿ ಮೂರು ಆಯ್ಕೆಗಳನ್ನು ನೀಡಲಾಗಿತ್ತು. ಕ್ಷೇತ್ರದ ಲೈವ್ ಪೋಲ್ ನಲ್ಲಿ ಮೂವರು ಪ್ರಮುಖ ಅಭ್ಯರ್ಥಿಗಳಿಗೂ ಪ್ರತ್ಯೇಕ ಚಿಹ್ನೆ(ಎಮೋಜಿ) ಬಳಸಲಾಗಿತ್ತು. ವೀಕ್ಷಕರು ತಮ್ಮ ಆಯ್ಕೆಯ ಅಭ್ಯರ್ಥಿಗೆ ಸರಿ ಹೊಂದುವ ಎಮೋಜಿಯನ್ನು ಒತ್ತುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಕ್ಷೇತ್ರ ಪರಿಚಯ : ಶಿವಮೊಗ್ಗ ನಗರದಲ್ಲಿ ಈ ಬಾರಿ ಕಮಲ ಅರಳುವುದೇ?
ಕೆ.ಎಸ್.ಈಶ್ವರಪ್ಪ (ಬಿಜೆಪಿ), ಕೆ.ಬಿ.ಪ್ರಸನ್ನ ಕುಮಾರ್ (ಕಾಂಗ್ರೆಸ್), ನಿರಂಜನ್ (ಜೆಡಿಎಸ್) ಮೂರು ಆಯ್ಕೆಗಳನ್ನು ನೀಡಲಾಗಿತ್ತು. ಓದುಗರು ಈ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ನೆಚ್ಚಿನ ಅಭ್ಯರ್ಥಿ ಗೆಲ್ಲಿಸಲು ಕೊನೆ ಕ್ಷಣದ ತನಕ ಓದುಗರು ಪ್ರಯತ್ನ ನಡೆಸಿದರು.
ಸಮೀಕ್ಷೆಯ ಫಲಿತಾಂಶ : ಸಮೀಕ್ಷೆಯ ಪ್ರಕಾರ ಕೆ.ಎಸ್.ಈಶ್ವರಪ್ಪ 877, ಕೆ.ಬಿ.ಪ್ರಸನ್ನ ಕುಮಾರ್ 293, ನಿರಂಜನ್ 772 ಮತಗಳನ್ನು ಪಡೆದರು. ಈ ಸಮೀಕ್ಷೆಯಲ್ಲಿ ಈಶ್ವರಪ್ಪ ಮತ್ತು ನಿರಂಜನ್ ನಡುವೆ ತೀವ್ರ ಪೈಪೋಟಿ ನಡೆಯಿತು.