ಕರ್ನಾಟಕ ಚುನಾವಣೆ : ಆಮ್ ಆದ್ಮಿ ಪಕ್ಷದ ಪ್ರಣಾಳಿಕೆ ಮುಖ್ಯಾಂಶಗಳು
ಬೆಂಗಳೂರು, ಮೇ 09 : ವಿಧಾನಸಭೆ ಚುನಾವಣೆಗೆ 3 ದಿನಗಳು ಇರುವಾಗ ಆಮ್ ಆದ್ಮಿ ಪಕ್ಷ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. 18 ಪುಟಗಳ ಪ್ರಣಾಳಿಕೆಯಲ್ಲಿ ಹಲವಾರು ಭರವಸೆಗಳನ್ನು ನೀಡಲಾಗಿದೆ.
ಬುಧವಾರ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಡೆದ ಸಮಾರಂಭದಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿಯಾದ ಪಂಕಜ್ ಗುಪ್ತಾ ಅವರು ಆಮ್ ಆದ್ಮಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತವೆ. ಆದರೆ, ಚುನಾವಣೆಯ ನಂತರ ಪ್ರಣಾಳಿಕೆಯನ್ನು ಮರೆತು ಬಿಡುತ್ತವೆ. ಆದರೆ ಆಮ್ ಆದ್ಮಿ ಪಕ್ಷದ ಪಾಲಿಗೆ ಪ್ರಣಾಳಿಕೆ ಎಂಬುದು ಒಂದು ಬಾಂಡ್ ಪೇಪರ್ನಂತೆ ಎಂದು ಪಕ್ಷ ಹೇಳಿದೆ.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಅವಧಿಗೆ ಮುನ್ನವೇ ಈಡೇರಿಸಿದ್ದು, ಆಡಳಿತಾತ್ಮಕ ಕ್ರಾಂತಿಯನ್ನೇ ಮಾಡಿದೆ. ಸಂಪೂರ್ಣ ರಾಜ್ಯದ ಮೇಲೆ ಗಮನವಿದ್ದರೂ ಕೂಡ ಒಂದೊಂದೂ ಕ್ಷೇತ್ರದ ಬೇಡಿಕೆಗಳು, ಸಮಸ್ಯೆಗಳು ಭಿನ್ನವಾಗಿ ಇರುವುದನ್ನು ಅರಿತು, ಸಂಪೂರ್ಣ ರಾಜ್ಯಕ್ಕೆ ಒಂದು ಪ್ರಣಾಳಿಕೆ ಮತ್ತು ಅಯಾಯ ಕ್ಷೇತ್ರಗಳಿಗೆ ಪ್ರತ್ಯೇಕ ಕ್ಷೇತ್ರವಾರು ಪ್ರಣಾಳಿಕೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಪಕ್ಷ ಹೇಳಿದೆ.

ಎಲ್ಲರಿಗೂ ಗೌರವ, ಸಮಾನ ಅವಕಾಶ
ಲಂಚ ಮುಕ್ತ ಆಡಳಿತ, ಭ್ರಷ್ಟಾಚಾರ ನಿಗ್ರಹ ದಳ ಇನ್ನಷ್ಟು ಸ್ವತಂತ್ರ ಮತ್ತು ಬಲಶಾಲಿಯಾಗಬೇಕು.

ಜನತೆಗೆ ಅಧಿಕಾರ
ರಾಜ್ಯವನ್ನು 6 ರಿಂದ 8 ಪ್ರಾದೇಶಿಕ ಆಡಳಿತ ವಲಯವನ್ನಾಗಿ ವಿಂಗಡಿಸುವುದು. 40ಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವುದು.

ಸಣ್ಣ ರೈತರಿಗೆ ಭೂ ಹಕ್ಕು ಪತ್ರ ನೀಡಲಾಗುತ್ತದೆ
ಜೀವನೋಪಾಯಕ್ಕಾಗಿ ಬಗರ್ ಹುಕುಂ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ಸಣ್ಣ ರೈತರಿಗೆ ಭೂ ಹಕ್ಕು ಪತ್ರವನ್ನು ನೀಡಲಾಗುತ್ತದೆ.

ಉದ್ಯೋಗ ಮತ್ತು ಜೀವನೋಪಾಯ
ಪ್ರತಿ ವ್ಯಕ್ತಿಗೂ ತನ್ನ ಕುಶಲತೆ ಅಭಿವೃದ್ಧಿ ಪಡಿಸಿಕೊಳ್ಳಲು ಪ್ರತಿ 10 ವರ್ಷಕ್ಕೆ ರೂ. 50 ಸಾವಿರ ಸಾಲ ನೀಡಬೇಕು.

ಸರ್ಕಾರದ ಹಣ ಎಲ್ಲರಿಗೂ ಸಮಾನವಾಗಿ ಹಂಚಿಕೆ
ಎಲ್ಲಾ ಸಂವಿಧಾನಾತ್ಮಕ ಸಂಸ್ಥೆಗಳಲ್ಲಿ ಕನಿಷ್ಠ ಮೂರನೆಯ ಒಂದು ಭಾಗ ಮಹಿಳೆಯರಿಗೆ ಮೀಸಲಾಗಿರಬೇಕು.

ಸರ್ಕಾರಿ ಗುತ್ತಿಗೆಯಲ್ಲಿ ಆದ್ಯತೆ
ಬೇಧಬಾವ ರಹಿತ, ಪೌರ ಹಕ್ಕುಗಳನ್ನು ಒಳಗೊಂಡ ಸೂಕ್ತ ಕಾಯಿದೆ ರಚನೆಯಾಗಬೇಕು. ಆರ್ಥಿಕ ಪ್ರಗತಿಯ ಲಾಭ ದೊರಕಿಸಿಕೊಡಲು, ಮೀಸಲು ನಿಧಿಯ ಸದ್ಬಳಕೆ ಮತ್ತು ಸರ್ಕಾರಿ ಗುತ್ತಿಗೆಯಲ್ಲಿ ಆದ್ಯತೆ ದೊರಕಬೇಕು.

ಪ್ರತಿ ಸಾವಿರ ಮನೆಗೆ ಒಂದು ಶೌಚಾಲಯ
ಪ್ರತಿ ಸಾವಿರ ಮನೆಗೆ ಒಂದು ಶೌಚಾಲಯ ನಿರ್ಮಾಣ, ಬಯಲು ಪ್ರದೇಶವನ್ನು ಶೇ 40ರಷ್ಟು ಹೆಚ್ಚಿಸುವುದು.

ಕಸ ವಿಂಗಡನೆ ಕಡ್ಡಾಯಗೊಳಿಸುವುದು
ಮೂಲದಲ್ಲೇ ಕಸ ವಿಂಗಡನೆ ಕಡ್ಡಾಯಗೊಳಿಸುವುದು. ಸಮುದಾಯದ ವತಿಯಿಂದ ಎಲ್ಲಾ ಉದ್ಯಾನ ಮತ್ತು ಕೆರೆಗಳ ನಿರ್ವಹಣೆ.

ಆರೋಗ್ಯ ಮತ್ತು ನೈರ್ಮಲ್ಯ
24*7 ಕೆಲಸ ಮಾಡುವ ನಗರ ಆರೋಗ್ಯ ಕೇಂದ್ರಗಳು, ಅಪಘಾತ ಮತ್ತು ಶಸ್ತ್ರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸ ತಕ್ಕದ್ದು.












Click it and Unblock the Notifications