ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಗೆಲುವು ಇನ್ನೂ ಖಚಿತವಾಗಿಲ್ಲ!
ಬೆಂಗಳೂರು, ಮೇ 15: ಇವಿಎಂ-ವಿವಿ ಪ್ಯಾಟ್ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಚುನಾವಣಾ ಫಲಿತಾಂಶದ ಪ್ರಕಟಣೆಯನ್ನು ಚುನಾವಣಾ ಆಯೋಗ ತಡೆಹಿಡಿದಿದೆ.
ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಜಗದೀಶ್ ಶೆಟ್ಟರ್ ಅಧಿಕ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಅವರು ಗೆಲುವು ಸಾಧಿಸಿದ್ದಾರೆ ಎಂದೇ ವರದಿಗಳು ಪ್ರಸಾರವಾಗಿದ್ದವು. ಆದರೆ, ಮತಯಂತ್ರಗಳಲ್ಲಿ ದೋಷ ಕಂಡುಬಂದಿರುವುದರಿಂದ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.
ಚಲಾವಣೆಯಾದ ಒಟ್ಟು ಮತಗಳಿಗಿಂತ 207 ಮತಗಳನ್ನು ಹೆಚ್ಚುವರಿಯಾಗಿ ಮತಯಂತ್ರ ತೋರಿಸಿದೆ. ಇವಿಎಂ-ವಿವಿ ಪ್ಯಾಟ್ನಲ್ಲಿನ ದೋಷದಿಂದ ಈ ಸಮಸ್ಯೆ ಉಂಟಾಗಿರಬಹುದು ಎಂದು ಚುನಾವಣಾ ಅಧಿಕಾರಿಗಳು ತೀರ್ಮಾನಿಸಿದ್ದು, ಫಲಿತಾಂಶ ಪ್ರಕಟಿಸಲು ಮುಂದಾಗಿಲ್ಲ.

ಇದುವರೆಗಿನ ಮತಗಳ ಲೆಕ್ಕಾಚಾರದ ಪ್ರಕಾರ ಜಗದೀಶ್ ಶೆಟ್ಟರ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ನ ಡಾ. ಮಹೇಶ್ ನಾಲ್ವಾಡ್ ಅವರಿಗಿಂತ 21,762 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರು 17,754 ಮತಗಳಿಂದ ಗೆಲುವು ಸಾಧಿಸಿದ್ದರು.
ವಿಧಾನಸಭೆಯ ಉಳಿದ ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, 222 ಕ್ಷೇತ್ರಗಳ ಪೈಕಿ ಬಿಜೆಪಿ 103 ಸ್ಥಾನಗಳನ್ನು ಗೆದ್ದುಕೊಂಡಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಫಲಿತಾಂಶದಲ್ಲಿ ಜಗದೀಶ್ ಶೆಟ್ಟರ್ ಅವರೇ ಜಯಗಳಿಸಿದರೆ 104ಕ್ಕೆ ತಲುಪಲಿದೆ.












Click it and Unblock the Notifications