ಕೋಲಾರ ಕ್ಷೇತ್ರ: ಡಿಕೆ ರವಿ ಸಾವಿನ ವಿಚಾರವೂ ಚುನಾವಣೆ ಪ್ರಚಾರವೂ
ದಲಿತ ಹೋರಾಟಗಳ ಕರ್ಮಭೂಮಿ ಕೋಲಾರ. ಮಣ್ಣಿನ ನಂಟಿರುವ ಇಲ್ಲಿನ ಜನರಿಗೆ ತೆಲುಗು ಭಾಷೆಯ ಪ್ರೀತಿ ಕೂಡ ಸೋಕಿದೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವು ಹಾಗೂ ಅದರ ಸುತ್ತ ಹರಡಿ ಹಬ್ಬಿದ್ದ ಸುದ್ದಿ ಕೆಲಸ ಮಾಡುವ ಎಲ್ಲ ಸಾಧ್ಯತೆ ಇದೆ. ಶಾಶ್ವತ ನೀರಾವರಿ ಯೋಜನೆ ಅನುಷ್ಠಾನದ ವಿಚಾರದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಸಮಾನ ದುಃಖಿಗಳು.
ಬೆಂಗಳೂರಿನಿಂದ ಅರವತ್ತೈದು ಕಿಲೋಮೀಟರ್ ದೂರದಲ್ಲಿರುವ ಕೋಲಾರದ ಮೇಲೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದೆ. ಆದರೆ ನಗರದೊಳಗಿನ ರಸ್ತೆಗಳು ಆ ದೇವರಿಗೇ ಪ್ರೀತಿ. ಆದರೆ ಇಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ಇದೆ. ಎಪಿಎಂಸಿ ಇದೆ. ನಂದಿನಿ ಡೇರಿ ಇದೆ. ಮತ್ತು ಇವೆಲ್ಲ ವಾಣಿಜ್ಯವಾಗಿಯೂ ಜೀವಂತವಾಗಿವೆ. ಹಾಲು, ರೇಷ್ಮೆ, ಟೊಮೆಟೊ ಇಲ್ಲಿನ ಜನರ ಪಾಲಿನ ಆದಾಯ ಮೂಲ.
ಬಿಜೆಪಿ ಟಿಕೆಟ್ ರಾಜಕಾರಣ: ಕೆಜಿಎಫ್ನಲ್ಲಿ ಕೇಂದ್ರ ಸಚಿವರಿಗೇ ಮುತ್ತಿಗೆ
ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ನಿಂತು, ಇಲ್ಲಿಂದ ಗೆದ್ದು ಬಂದವರು ವರ್ತೂರ್ ಪ್ರಕಾಶ್. ಈ ಬಾರಿ ತಮ್ಮದೇ ಸ್ವಂತ ಪಕ್ಷ ಕಟ್ಟುವುದಾಗಿ ಘೋಷಿಸಿದ್ದಾರೆ. ಇನ್ನು ಇವರಿಗೆ ಎದುರಾಳಿಯಾಗಿ ನಿಂತು ಸೋತವರು ಶ್ರೀನಿವಾಸ್ ಗೌಡ. ಕಳೆದ ಬಾರಿ ಜೆಡಿಎಸ್ ನಿಂದ, ಅದಕ್ಕೂ ಮುಂಚೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋತಿದ್ದಾರೆ. ಈ ಬಾರಿಯೂ ಇವರಿಬ್ಬರ ಮಧ್ಯೆಯೇ ಜಟಾಪಟಿ ಎಂಬಂತೆ ಇತ್ತು. ಇದೀಗ ಡಿ.ಕೆ.ರವಿ ಅವರ ತಾಯಿ ಈ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುವ ಸುದ್ದಿ ಇದೆ.
ಕುರುಬ, ಒಕ್ಕಲಿಗ, ಪರಿಶಿಷ್ಟ ಜಾತಿ ಮತಗಳು ಇಲ್ಲಿ ಪ್ರಮುಖವಾದವು. ಮುಸ್ಲಿಮ್ ಮತಗಳು ನಿರ್ಣಾಯಕವಾದವು. ಹಾಲಿ ಶಾಸಕ ವರ್ತೂರ್ ಪ್ರಕಾಶ್ ಇನ್ನೇನು ಕಾಂಗ್ರೆಸ್ ಸೇರಿಯೇಬಿಟ್ಟರು ಅಂತಲೂ ಸುದ್ದಿಯಾಗಿತ್ತು. ಆದರೆ ಜಿಲ್ಲೆಯಲ್ಲಿ ಪ್ರಭಾವಿ ನಾಯಕರಾದ ಕೆ.ಆರ್.ರಮೇಶ್ ಕುಮಾರ್ ಅಂಥವರಿಗೆ ಅದು ಇಷ್ಟವಿಲ್ಲ. ಇನ್ನು ವೇದಿಕೆಯೊಂದರಲ್ಲಿ ರಮೇಶ್ ಕುಮಾರ್ ಅವರು ಪ್ರಕಾಶ್ ಗೆ ಸಿಕ್ಕಾಪಟ್ಟೆ ಬಯ್ದಿದ್ದರು.
ಕಳೆದ ವಿಧಾನಸಭೆ ಚುನಾವಣೆ ವೇಳೆ ಲಾಂಗ್ ಹಿಡಿದು ಕೆಲವರು ನಡೆದಾಡಿದ್ದರಿಂದ ಇಲ್ಲಿ ಭಾರೀ ಸುದ್ದಿಯಾಗಿತ್ತು. ಈ ಜಿಲ್ಲೆಯ ವಿಶೇಷವೋ ಅಥವಾ ಅಗತ್ಯವೋ ಎರಡೆರಡು ಪೊಲೀಸ್ ಜಿಲ್ಲೆಗಳಿವೆ. ಅಂದರೆ ಕೆಜಿಎಫ್ ಪೊಲೀಸ್ ಜಿಲ್ಲೆ ಹಾಗೂ ಕೋಲಾರ ಪೊಲೀಸ್ ಜಿಲ್ಲೆ ಇದ್ದು, ಎರಡಕ್ಕೂ ಪ್ರತ್ಯೇಕವಾಗಿ ವರಿಷ್ಠಾಧಿಕಾರಿ (ಎಸ್.ಪಿ) ಇದ್ದಾರೆ.
ಕನ್ನಡ 'ಎನ್ನಡ' ಎನ್ನುವ ಕೆಜಿಎಫ್ ಭಾಗದ ಉಡಾಫೆ ರಾಜಕಾರಣಿಗಳು
ಇಲ್ಲಿನ ಆದಿಮ ಸಾಂಸ್ಕೃತಿಕ ಸಂಘಟನೆ, ಆರ್.ಎಲ್.ಜಾಲಪ್ಪ ಆಸ್ಪತ್ರೆ, ಅಂತರಗಂಗೆ ಬೆಟ್ಟ, ಕೋಲಾರಮ್ಮನ ದೇವಸ್ಥಾನ ಈ ಕ್ಷೇತ್ರದ ಹೆಗ್ಗುರುತು. ಇಲ್ಲಿನ ಜನಪದ, ಸಿನಿಮಾ ಪ್ರೀತಿ, ವ್ಯವಸಾಯದ ಬಗೆಗಿನ ಒಲವು ಕೂಡ ಅದ್ಭುತ. ಹೋಂಡಾ ಕಂಪನಿಯಿಂದ ಇಲ್ಲಿ ಘಟಕ ಆರಂಭವಾಗಿದ್ದು, ಯುವ ಜನರ ಪಾಲಿಗೆ ಉದ್ಯೋಗಕ್ಕೆ ಭರವಸೆಯಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ನರಸಾಪುರ ಕೈಗಾರಿಕೆ ವಲಯ ಕೂಡ ಉದ್ಯೋಗ ಸೃಷ್ಟಿಸುತ್ತಿದೆ. ಇಲ್ಲಿನ ಹೆದ್ದಾರಿ ಅದರಲ್ಲೂ ನರಸಾಪುರದ ಬಳಿ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅದಕ್ಕೆ ಕಾರಣ ಹಾಗೂ ಪರಿಹಾರ ಕಂಡುಕೊಳ್ಳಬೇಕಿದೆ.