ಚುನಾವಣಾ ಕಣದಲ್ಲಿ ಜಗ್ಗೇಶ, ಶಶಿ, ಸಾಯಿ, ಕುಮಾರ, ಉಮಾಶ್ರೀ ಇನ್ನಿತರ ತಾರೆಗಳು
ಬೆಂಗಳೂರು, ಏಪ್ರಿಲ್ 22: ಕರ್ನಾಟಕ ವಿಧಾನಸಭೆಗಾಗಿ ಪ್ರಮುಖ ಮೂರು ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಕೊನೆಗೂ ಪ್ರಕಟಿಸಿವೆ. ಈ ಪೈಕಿ ಕನ್ನಡ ಸಿನಿಮಾರಂಗದ ಅನೇಕರಿಗೂ ಟಿಕೆಟ್ ಭಾಗ್ಯ ಸಿಕ್ಕಿದೆ,
ಕನ್ನಡ ಸಿನಿಮಾ ರಂಗಕ್ಕೂ ರಾಜಕೀಯ ಕ್ಷೇತ್ರಕ್ಕೂ ಬಲವಾದ ನಂಟು ಹಿಂದಿನಿಂದ ಬೆಳೆದುಕೊಂಡು ಬಂದಿದೆ. ಈ ಎರಡು ಕ್ಷೇತ್ರಗಳಲ್ಲೂ ಸಕ್ರಿಯವಾಗಿ ತೊಡಗಿಕೊಂಡವರು, ಪಾರ್ಟ್ ಟೈಮ್ ರಾಜಕಾರಣಿಯಾದವರು, ಪಾರ್ಟ್ ಟೈಂ ಸಿನಿಮಾಗಳಲ್ಲಿ ನಟಿಸಿದವರು, ಹೀಗೆ ಸಿನಿಮಾ, ಟಿವಿ ಹಾಗೂ ರಾಜಕೀಯ ಕ್ಷೇತ್ರದ ಸೆಲೆಬ್ರಿಟಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪಟ್ಟಿ ಇಲ್ಲಿದೆ
ಕಳೆದ ಬಾರಿ ಕಾಂಗ್ರೆಸ್ ನಲ್ಲಿ ಆರು, ಜೆಡಿಎಸ್ ಹಾಗೂ ಕೆಜೆಪಿಯಲ್ಲಿ ತಲಾ ಐದು, ಬಿಎಸ್ಆರ್ ಕಾಂಗ್ರೆಸ್ ನಲ್ಲಿ ಮೂರು ಮಂದಿ ಕಣದಲ್ಲಿದ್ದರು. ಆದರೆ, ಈ ಪೈಕಿ ಅನೇಕ ಮಂದಿ ಸೋಲಿನ ಕಹಿಯುಂಡಿದ್ದರು.
ಈ ಬಾರಿ ನಿರ್ಮಾಪಕ ಆನಂದ್ ಅಪ್ಪುಗೋಳ್, ನಿರ್ಮಾಪಕ, ನಟ ರವಿಕರಣ್, ನಟಿ ಪೂಜಾಗಾಂಧಿ, ರಾಜು ತಾಳಿಕೋಟೆ, ಮಯೂರ್ ಪಟೇಲ್, ವಿ ನಾಗೇಂದ್ರ ಪ್ರಸಾದ್ ಅವರು ಈ ಬಾರಿ ಸ್ಪರ್ಧಿಸುತ್ತಿಲ್ಲ. ಟಿಕೆಟ್ ಬಯಸಿದ್ದ ಶಿಲ್ಪಾ ಗಣೇಶ್ ಹಾಗೂ ಮಾಳವಿಕಾ ಅವಿನಾಶ್ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಮಿಕ್ಕಂತೆ ಯಾರೆಲ್ಲ ಕಣದಲ್ಲಿದ್ದಾರೆ ಮುಂದೆ ಓದಿ...

ಬಿ. ಸಿ ಪಾಟೀಲ್- ಹಿರೇಕೆರೂರು
ಕೌರವ, ಪೂರ್ಣ ಸತ್ಯ, ಎಲ್ಲರಂತಲ್ಲ ನನ್ನ ಗಂಡ, ಅಸ್ತ್ರ, ನಿಷ್ಕರ್ಷ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದ ಬಿ.ಸಿ.ಪಾಟೀಲ್ ಅವರಿಗೆ 2013ರಲ್ಲಿ ಮುಖಭಂಗವಾಗಿತ್ತು. ಕೆಜೆಪಿಯ ಯು.ಬಿ.ಬಣಕಾರ್ ವಿರುದ್ಧ ಅವರು ಸೋತಿದ್ದರು. ಕೆಜೆಪಿಯ ಯು.ಬಿ.ಬಣಕಾರ್ ಮತಗಳು 52,623, ಕಾಂಗ್ರೆಸ್ಸಿನ ಬಿಸಿ ಪಾಟೀಲ್ ಮತಗಳು 50,017 ಗಳಿಸಿದ್ದರು. ಈ ಬಾರಿ ಸ್ಪರ್ಧೆಗಿಳಿಯಲು ಉತ್ಸುಕರಾಗಿದ್ದು, ಮತ್ತೊಮ್ಮೆ ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ.

ಮುನಿರತ್ನ -ರಾಜರಾಜೇಶ್ವರಿನಗರ
2018ರಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಪಡೆದು ಮತ್ತೆ ಕಣಕ್ಕಿಳಿಯುತ್ತಿರುವ ನಿರ್ಮಾಪಕ ಮುನಿರತ್ನ ನಾಯ್ಡು ಅವರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ.
2013ರ ಫಲಿತಾಂಶ: ಮುನಿರತ್ನಗೆ ಗೆಲುವು, ಜೆಡಿಎಸ್ ನ ಕೆ.ಎಲ್.ತಿಮ್ಮನಂಜಯ್ಯ ಗೆ ಎರಡನೇ ಸ್ಥಾನ, ಬಿಜೆಪಿಯ ಎಂ ಶ್ರೀನಿವಾಸ್ ಗೆ ಮೂರನೇ ಸ್ಥಾನ ಲಭಿಸಿತ್ತು. ಕೆಜೆಪಿಯ ವೆಂಕಟೇಶ್ ಗೌಡ ಇದೇ ಕ್ಷೇತ್ರದ ಇತರೆ ಅಭ್ಯರ್ಥಿಗಳಾಗಿದ್ದರು.

ಉಮಾಶ್ರೀ- ತೇರದಾಳ
2013ರ ಚುನಾವಣೆ ಫಲಿತಾಂಶ : ಕಾಂಗ್ರೆಸ್ ಅಭ್ಯರ್ಥಿ ಉಮಾಶ್ರೀ ಅವರು ಭರ್ಜರಿ ಗೆಲುವು(70,189 ಮತಗಳು) ದಾಖಲಿಸಿದ್ದರು. ತಮ್ಮ ಸಮೀಪದ ಸ್ಪರ್ಧಿ ಭಾರತೀಯ ಜನತಾ ಪಕ್ಷದ ಸಿದ್ದು ಸವದಿ(67,590 ಮತಗಳು) ವಿರುದ್ಧ ಜಯಭೇರಿ ಭಾರಿಸಿದ್ದರು. 2018ರಲ್ಲಿ ಇದೇ ಕ್ಷೇತ್ರದಿಂದ ಉಮಾಶ್ರೀ ಸ್ಪರ್ಧಿಸುತ್ತಿದ್ದಾರೆ.

ಬೀದರ್ ದಕ್ಷಿಣ - ಅಶೋಕ್ ಖೇಣಿ
2013ರ ಚುನಾವಣೆ ಫಲಿತಾಂಶ: ಅಶೋಕ್ ಖೇಣಿಗೆ ಗೆಲುವು, ಎರಡನೇ ಸ್ಥಾನ ಜೆಡಿಎಸ್ ನ ಬಂಡೇಪ್ಪ ಕಾಶೆಂಪೂರ್ ಗೆ ಸೋಲು, ಮೂರನೇ ಸ್ಥಾನಕ್ಕೆ ಬಿ ಎಸ್ ಪಿಯ ಅಬ್ದುಲ್ ಮನ್ನನ್ ಬಂದಿದ್ದರು. ಬಿಜೆಪಿಗೆ 7ನೇ ಸ್ಥಾನ, ಕಾಂಗ್ರೆಸ್ 5ನೇ ಸ್ಥಾನಗಳಿಸಿತ್ತು. 2018ರಲ್ಲಿ ಪಕ್ಷ ಬದಲಾವಣೆ ಮಾಡಿಕೊಂಡಿರುವ ಖೇಣಿ ಅವರು ಈ ಬಾರಿ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಎರಡು ಕ್ಷೇತ್ರ
2018 ಚುನಾವಣೆಯಲ್ಲಿ ಚನ್ನಪಟ್ಟಣ ಹಾಗೂ ರಾಮನಗರ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು ಕನ್ನಡ ಚಿತ್ರರಂಗದ ನಿರ್ಮಾಪಕರಾಗಿ ಹೆಸರು ಮಾಡಿದವರು. ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮರಿದೇವರು, ಬಿಜೆಪಿಯಿಂದ ಕೆ.ಎಸ್.ಶಿವಮಾಧು, ಎಸ್ ಡಿಪಿಐನಿಂದ ಫಿರೋಜ್ ಅಲಿ ಖಾನ್, ಕೆಜೆಪಿಯಿಂದ ಎಸ್.ಆರ್.ನಾಗರಾಜ್ ಕಣದಲ್ಲಿದರು.
2013ರ ಚುನಾವಣೆ ಫಲಿತಾಂಶ: ಎಚ್.ಡಿ.ಕುಮಾರಸ್ವಾಮಿಗೆ ಗೆಲುವು, ಕಾಂಗ್ರೆಸ್ಸಿನ ಮರಿದೇವರು ಎರಡನೇ ಸ್ಥಾನ.

ಮಹಾಲಕ್ಷ್ಮಿಲೇಔಟ್- ನರೇಂದ್ರ ಬಾಬು
2018ರಲ್ಲಿ ನರೇಂದ್ರಬಾಬು ಅವರಿಗೆ ಟಿಕೆಟ್ ಸಿಗುವುದೇ ಅನುಮಾನ ಎನಿಸಿತ್ತು. ಆದರೆ, ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸುತ್ತಿದ್ದಾರೆ.
ನೆ.ಲ.ನರೇಂದ್ರ ಬಾಬು ಅವರು ಕಿರುತೆರೆ ಹಾಗೂ ಬೆಳ್ಳಿಪರದೆ ಮೇಲೆ ಹಲವಾರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾಲಕ್ಷ್ಮಿಲೇಔಟ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಪಿಯ ಎಸ್ ಹರೀಶ್, ಜೆಡಿಎಸ್ ನ ಗೋಪಾಲಯ್ಯ, ಕೆಜೆಪಿಯ ವೀರೇಶ್ ಕುಮಾರ್ ಇದೇ ಕ್ಷೇತ್ರದ ಸ್ಪರ್ಧಿಗಳು.
2013ರ ಫಲಿತಾಂಶ: ಜೆಡಿಎಸ್ ನ ಗೋಪಾಲಯ್ಯಗೆ ಗೆಲುವು, 16 ಸಾವಿರ ಮತಗಳಿಂದ ನರೇಂದ್ರ ಬಾಬುಗೆ ಸೋಲು.

ಸಿಪಿ ಯೋಗೇಶ್ವರ್-ಚನ್ನಪಟ್ಟಣ
2018ರಲ್ಲಿ ಸಿಪಿ ಯೋಗೇಶ್ವರ್ ಅವರು ಚನ್ನಪಟ್ಟಣದಿಂದ ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡು ಕಣಕ್ಕಿಳಿಯುತ್ತಿದ್ದಾರೆ.
ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಈ ಬಾರಿ ಕಣದಲ್ಲಿದ್ದರು. ಜೆಡಿಎಸ್ ನ ಅನಿತಾ ಕುಮಾರಸ್ವಾಮಿ, ಕಾಂಗ್ರೆಸ್ ನ ಸಾದತ್ ಅಲಿ ಖಾನ್, ಬಿಜೆಪಿಯ ರವಿಕುಮಾರ್ ಗೌಡ ಪ್ರಬಲ ಸ್ಪರ್ಧಿಗಳಾಗಿದ್ದರು.
2013ರ ಚುನಾವಣೆ ಫಲಿತಾಂಶ: ಸಿಪಿ ಯೋಗೇಶ್ವರ್ ಗೆ ಗೆಲುವು, ಮೊದಲ ಬಾರಿಗೆ ಖಾತೆ ತೆರೆದ ಸಮಾಜವಾದಿ ಪಕ್ಷ, ಜೆಡಿಎಸ್ ನ ಅನಿತಾ ಕುಮಾರಸ್ವಾಮಿಗೆ ಎರಡನೇ ಸ್ಥಾನ.

ಸೊರಬ- ಮಧು ಬಂಗಾರಪ್ಪ
2018ರಲ್ಲಿ ಸೊರಬದಿಂದಲೆ ಸ್ಪರ್ಧಿಸಲು ಮಧು ಸಿದ್ಧರಾಗಿದ್ದಾರೆ. ಮಧು ಬಂಗಾರಪ್ಪ ಅಭಿನಯದ ದೇವಿ ಎಂಬ ಚಿತ್ರ ಇನ್ನೂ ಬಿಡುಗಡೆ ಕಂಡಿಲ್ಲ. ಈ ಹಿಂದೆ ಅವರು ಪುರುಷೋತ್ತಮ ಎಂಬ ಚಿತ್ರವನ್ನು ನಿರ್ಮಿಸಿದ್ದರು. ಈಗ ಜೆಡಿಎಸ್ ಅಭ್ಯರ್ಥಿಯಾಗಿ ಅಣ್ಣನ ವಿರುದ್ಧ ಸೊರಬದಲ್ಲಿ ಕಣಕ್ಕಿಳಿದಿದ್ದಾರೆ. ಬಿಜೆಪಿಯ ಕುಮಾರ ಬಂಗಾರಪ್ಪ ಅವರೇ ಮಧು ಅವರಿಗೆ ಪ್ರಬಲ ಸ್ಪರ್ಧಿ. 2013ರಲ್ಲಿ ಮಧು ಬಂಗಾರಪ್ಪ ಗೆಲುವು ಸಾಧಿಸಿದ್ದರು. ಕೆಜೆಪಿಯ ಹರತಾಳು ಹಾಲಪ್ಪ ಎರಡನೇ ಸ್ಥಾನ ಹಾಗೂ ಮಧು ಅವರ ಅಣ್ಣ, ಕಾಂಗ್ರೆಸ್ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

ಬಿಜೆಪಿಯಿಂದ ಸೊರಬದಲ್ಲಿ ಕುಮಾರ್
ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲು ಕಂಡಿದ್ದ ಕುಮಾರ ಬಂಗಾರಪ್ಪ ಅವರು ಈ ಬಾರಿಯ ಬಿಜೆಪಿ ಅಭ್ಯರ್ಥಿ. ಇವರ ವಿರುದ್ಧ ಅವರ ಸಹೋದರ ಮಧು ಬಂಗಾರಪ್ಪ ಕಣಕ್ಕಿಳಿದಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಮತ್ತೆ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ. ಕಾಂಗ್ರೆಸ್ಸಿನಿಂದ ಅಭ್ಯರ್ಥಿಯಾಗಿ ರಾಜು ತಲ್ಲೂರ್ ಕಣದಲ್ಲಿದ್ದಾರೆ.

ಅಂಬರೀಶ್ ಸ್ಪರ್ಧಿಸುತ್ತಾರಾ?
ಯಾವ ಕಾಲಕ್ಕೂ ಕುತೂಹಲ ಕೆರಳಿಸಿರುವ ಕ್ಷೇತ್ರ ಮಂಡ್ಯ. ರೆಬೆಲ್ ಸ್ಟಾರ್ ಅನುಭವಿ ರಾಜಕಾರಣಿ ಅಂಬರೀಶ್ ಅವರು ಈ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಬಿಜೆಪಿಯ ಟಿ.ಎಲ್.ರವಿಶಂಕರ್, ಜೆಡಿಎಸ್ ನ ಎಂ.ಶ್ರೀನಿವಾಸ್, ಕೆಜೆಪಿಯ ವೆಂಕಟೇಶ್ ಆಚಾರ್ ಈ ಕಣದಲ್ಲಿರುವ ಇತರೆ ಸ್ಪರ್ಧಿಗಳಾಗಿದ್ದರು. 2013ರ ಫಲಿತಾಂಶ: ಅಂಬರೀಷ್ ಗೆ ಗೆಲುವು, ಜೆಡಿಎಸ್ ನ ಎಂ. ಶ್ರೀನಿವಾಸ್ ಗೆ ಸೋಲು. ಈ ಬಾರಿ ಮತ್ತೆ ಕಣಕ್ಕಿಳಿಯುವ ಸಾಧ್ಯತೆಯಿದ್ದರೂ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸುತ್ತಾರಾ? ಎಂಬ ಅನುಮಾನ ಇನ್ನೂ ಇದ್ದೇ ಇದೆ. ನಾಳೆ ಈ ಬಗ್ಗೆ ಉತ್ತರಿಸುವೆ ಎಂದು ಅಂಬರೀಷ್ ಹೇಳಿದ್ದಾರೆ.

ಸಿ.ಆರ್ ಮನೋಹರ್ - ಬಾಗೇಪಲ್ಲಿ
ಕನ್ನಡದ ದೊಡ್ಡ ನಿರ್ಮಾಪಕ ಎನಿಸಿಕೊಂಡಿರುವ ಸಿ.ಆರ್ ಮನೋಹರ್ ಬಾಗೇಪಲ್ಲಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಯಾಗಿ ಮನೋಹರ್ ಚುನಾವಣೆ ಕಣದಲ್ಲಿದ್ದಾರೆ. ಇವರಿಗೆ ಬಿಜೆಪಿ ಅಭ್ಯರ್ಥಿ ನಟ ಸಾಯಿಕುಮಾರ್ ಎದುರಾಳಿ.

ಶಶಿಕುಮಾರ್ -ಹೊಸದುರ್ಗ
ಬಿಜೆಪಿ ತೊರೆದು ಜೆ.ಡಿ.ಎಸ್ ಪಕ್ಷ ಸೇರ್ಪಡೆಗೊಂಡಿರುವ ನಟ ಶಶಿಕುಮಾರ್ ಹೊಸದುರ್ಗದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸದ್ಯ, ಶಶಿಕುಮಾರ್ ಅವರು ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಸಾಯಿ ಕುಮಾರ್ -ಬಾಗೇಪಲ್ಲಿ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಬಿಜೆಪಿಯಿಂದ ಡೈಲಾಗ್ ಕಿಂಗ್ ನಟ ಸಾಯಿ ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಸಾಯಿಕುಮಾರ್ ಅವರು ಮತ್ತೊಮ್ಮೆ ಬಾಗೇಪಲ್ಲಿ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದಾರೆ. 2008ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಾಯಿಕುಮಾರ್ ಅವರು ಸುಮಾರು 6 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು.

ಹುಚ್ಚ ವೆಂಕಟ್ -ರಾಜರಾಜೇಶ್ವರಿ ನಗರ
ಹಾಲಿ ಶಾಸಕ ಮುನಿರತ್ನ ಅವರು ಮತದಾರರನ್ನು ಸೆಳೆಯಲು ಆಮಿಷ ಒಡ್ಡುತ್ತಿದ್ದಾರೆ. ಕುಕ್ಕರ್, ಮಿಕ್ಸಿ ಕೊಟ್ಟು ಮತದಾರರನ್ನು ಓಲೈಸುತ್ತಿದ್ದಾರೆ ಎಂದು ಆರೋಪಿಸಿರುವ
ಇಂದಿರಾನಗರದ ನಿವಾಸಿ ನಟ, ನಿರ್ದೇಶಕ ಹುಚ್ಚ ವೆಂಕಟ್ ಅವರುರಾಜರಾಜೇಶ್ವರಿ ನಗರದಿಂದ ಸ್ಪರ್ಧಿಸುತ್ತಿದ್ದಾರೆ.

ಯಶವಂತಪುರ-ಜಗ್ಗೇಶ
ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಜಗ್ಗೇಶ್ ಸ್ಪರ್ಧಿಸುವುದು ಖಚಿತವಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಜವರೇಗೌಡ ಹಾಗೂ ಕಾಂಗ್ರೆಸ್ಸಿನಿಂದ ಎಸ್. ಟಿ ಸೋಮಶೇಖರ್ ಅವರು ಕಣದಲ್ಲಿದ್ದಾರೆ. ಸೋಮಶೇಖರ್ ಅವರು ಹಾಲಿ ಶಾಸಕರಾಗಿದ್ದು, ಸದ್ಯಕ್ಕೆ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. 2008ರಲ್ಲಿ ಕಾಂಗ್ರೆಸ್ಸಿನಿಂದ ತುರುವೇಕೆರೆಯಲ್ಲಿ ಸ್ಪರ್ಧಿಸಿದ್ದ ಜಗ್ಗೇಶ್ 47,849 ಮತಗಳನ್ನು ಗಳಿಸಿದರೆ, ಬಿಜೆಪಿಯ ಎಂ. ಡಿ ಲಕ್ಷ್ಮಿನಾರಾಯಣ (ಅಣ್ಣಯ್ಯ) ಅವರು 30776 ಮತ ಗಳಿಸಿ ಸೋಲು ಕಂಡಿದ್ದರು.












Click it and Unblock the Notifications