ಆಡ್ವಾಣಿ ಹೇಳಿದ್ದರೆ ಅನಂತುಗೇ ಅಧಿಕಾರ ಬಿಟ್ಕೊಡ್ತಿದ್ದೆ
ಶಿವಮೊಗ್ಗ, ಏ.3: ತಮ್ಮ ಎರಡನೆಯ ತವರೂರಿನಲ್ಲಿ ಮಂಗಳವಾರ ನಡೆದ ಕೆಜೆಪಿ ಜಿಲ್ಲಾ ಕಾರ್ಯಕರ್ತರ ಸಮಾವೇಶದಲ್ಲಿ ಕೆಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸಾಕಷ್ಟು ಲೆಕ್ಕಚುಕ್ತಾ ಮಾಡಿದ್ದಾರೆ. ಜತೆಗೆ ಒಂದಷ್ಟು ಪಂಥಾಹ್ವಾನ, ತಮ್ಮ ಭವಿಷ್ಯದ ಬಗ್ಗೆಯೂ ಎಂದಿನಂತೆ ಭಾವುಕರಾಗಿ ಹೇಳಿಕೊಂಡಿದ್ದಾರೆ.
ನೇರವಾಗಿ ತಮ್ಮ ವಿರೋಧಿಗಳತ್ತ ಅದರಲ್ಲೂ ಈಶ್ವರಪ್ಪ ಮತ್ತು ಅನಂತ್ (ಪರೋಕ್ಷವಾಗಿ ಆಡ್ವಾಣಿ ಸಹ) ಅವರತ್ತ ತಮ್ಮ ಬಂದೂಕನ್ನು ತಿರುಗಿಸಿ ಕೋಪೋದ್ರಿಕ್ತರಾಗಿ ಯಡಿಯೂರಪ್ಪ ಸಿಡಿಸುತ್ತಿದ್ದ ಮದ್ದುಗುಂಡು ಗುರಿ ತಲುಪುತ್ತಿದ್ದವು. ಈಶ್ವರಪ್ಪನವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದು ವಿಶೇಷವಾಗಿತ್ತು. ಇದನ್ನು ಕೇಳಿ ಅಣ್ಣ-ತಮ್ಮಂದಿರಂತೆ ಓಡಾಡಿಕೊಂಡಿದ್ದವರು ಹೀಗ್ಯಾಕಾಗ್ಬಿಟ್ಟರು ಎಂದು ಶಿವಮೊಗ್ಗದ ಜನ ಕೇಳತೊಡಗಿದ್ದಾರೆ.
ಈ ಮಧ್ಯೆ, ಇನ್ನೂ ಎರಡು ಚುನಾವಣೆ ಎದುರಿಸುತ್ತೇನೆ. ಯಾವುದೇ ಕಾರಣಕ್ಕೂ ಬೆನ್ನು ತೋರಿಸಿ ಓಡಿ ಹೋಗೊಲ್ಲ. ತಮ್ಮ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದು ದೇಶಕ್ಕೆ ಮಾದರಿಯನ್ನಾಗಿಸುತ್ತೇನೆ' ಎಂದೂ ಬೆದರಿಕೆಯ ದನಿಯಲ್ಲಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆತ್ಮವಿಶ್ವಾಸದ ಬಿರುನುಡಿಗಳು ಹೀಗಿವೆ:

ಈಶ್ವರಪ್ಪ ಜತೆ ಬಹಿರಂಗ ಚರ್ಚೆಗೆ ಸಿದ್ಧ:
ಶಿವಮೊಗ್ಗದಲ್ಲಿತಮ್ಮ ಭಾಷಣದುದ್ದಕ್ಕೂ ಉಪಮುಖ್ಯಮಂತ್ರಿ ಕೆಎಸ್. ಈಶ್ವರಪ್ಪರನ್ನು ತರಾಟೆಗೆ. ನಾನು ಮುಖ್ಯಮಂತ್ರಿಯಾದ ಒಂದು ವರ್ಷದಲ್ಲೇ ಮೂರು ಬಾರಿ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಸಂಚು ರೂಪಿಸಲಾಯಿತು. ಇದಕ್ಕೆ ಕಾರಣಕರ್ತ ಈಶ್ವರಪ್ಪ. ಮೇ 8ರಂದು ಚುನಾವಣಾ ಫಲಿತಾಂಶ ಬಂದ ಮೇಲೆ ಇದೇ ವೇದಿಕೆಯಲ್ಲಿ ಈಶ್ವರಪ್ಪ ಜತೆ ಬಹಿರಂಗ ಚರ್ಚೆಗೂ ಸಿದ್ಧ.

ಷಡ್ಯಂತ್ರಿ ಈಶ್ವರಪ್ಪ:
ಯಡಿಯೂರಪ್ಪನವರಿಗೆ ಬಂದ ಸ್ಥಿತಿ ನನಗೆ ಬಂದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಎನ್ನುತ್ತಾರೆ ಈಶ್ವರಪ್ಪ. ಆದರೆ ತಮಗೆ ಈ ಪರಿಸ್ಥಿತಿ ಬರಲು ಹಾಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಆತ್ಮೀಯ ಸ್ನೇಹಿತ ಈಶ್ವರಪ್ಪನೇ ಕಾರಣ. ಕಳೆದ ಬಾರಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿವೈ ರಾಘವೇಂದ್ರ ಗೆಲ್ಲಬಾರದು ಎಂದು ನಾನಾ ರೀತಿ ಷಡ್ಯಂತ್ರವನ್ನು ಇದೇ ಈಶ್ವರಪ್ಪ ನಡೆಸಿದರು. ಅದಕ್ಕೆ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಕೈಜೋಡಿಸಿದರು. ಆದರೂ ರಾಘವೇಂದ್ರ ಗೆದ್ದುಬಂದರು. ಆಗಲೂ ಚುನಾವಣೆ ಗೆದ್ದಿಲ್ಲ ಎಂದು ಈಶ್ವರಪ್ಪ ದೆಹಲಿಗೆ ಹೋಗಿ ದೂರು ಕೊಟ್ಟು ಬಂದರು

ಸಂತೋಷ್ ಹೆಗ್ಡೆ ಮೂಲಕ ವ್ಯವಸ್ಥಿತ ಪಿತೂರಿ
ಅಕ್ರಮ ಗಣಿಗಾರಿಕೆ ಕುರಿತಂತೆ ತಮ್ಮ ಅಧಿಕಾರಾವಧಿ ಸೇರಿದಂತೆ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳ ಅವಧಿಯಲ್ಲಿ ನಡೆದ ಗಣಿಗಾರಿಕೆ ತನಿಖೆ ನಡೆಸುವಂತೆ ಅಂದಿನ ಲೋಕಾಯುಕ್ತರಾದ ಸಂತೋಷ್ ಹೆಗ್ಡೆಯವರಿಗೆ ಹೇಳಿದರೆ, ಈಶ್ವರಪ್ಪನವರು ಎಸ್ಎಂ ಕೃಷ್ಣ, ಧರಂಸಿಂಗ್, ಎಚ್ ಡಿ ಕುಮಾರಸ್ವಾಮಿ ಅವಧಿಯದ್ದನ್ನು ಬಿಟ್ಟು, ಜಿಂದಾಲ್ ಸಂಸ್ಥೆಯವರು ಪ್ರೇರಣಾ ಟ್ರಸ್ಟ್ಗೆ ಹಣ ನೀಡಿರುವುದು ಅನುಮಾನಾಸ್ಪದ ಎಂದರು. ಒಟ್ಟಾರೆ ಸಂತೋಷ್ ಹೆಗ್ಡೆ ಮೂಲಕ ವ್ಯವಸ್ಥಿತ ಪಿತೂರಿಯನ್ನು ಈಶ್ವರಪ್ಪ ನಡೆಸಿದರು. ಆ ಮೂಲಕ ನನ್ನನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದರು.

ಶಿವಮೊಗ್ಗದ ತ್ರಿಮೂರ್ತಿಗಳು ತಿಂದುಂಡಿದ್ದು:
ಮಾತಿನ ನಡುವೆ ತ್ರಿಮೂರ್ತಿಗಳು: ಒಂದು ಕಾಲದಲ್ಲಿ ಈಶ್ವರಪ್ಪ, ಯಡಿಯೂರಪ್ಪ ಮತ್ತು ಶಂಕರಮೂರ್ತಿ ಶಿವಮೊಗ್ಗದ ತ್ರಿಮೂರ್ತಿಗಳು. ಎಲ್ಲವನ್ನೂ ಹಂಚಿಕೊಂಡು ತಿಂದುಂಡುತ್ತಿದ್ದರು. ಆದರೆ ಬದಲಾದ ಕಾಲ ಮಾನದಲ್ಲಿ ಈಗ ಯಡಿಯೂರಪ್ಪ ಹೇಳೋದೇನು ಅಂದರೆ
'ಡಿಎಚ್ ಶಂಕರಮೂರ್ತಿಯವರಿಂದ 5 ಸಾವಿರ ರೂ ಪಡೆದಿದ್ದರು ಎಂದು ಈಶ್ವರಪ್ಪ ನನ್ನ ಮೇಲೆ ಆರೋಪ ಮಾಡಿದ್ದಾರೆ. ಹೌದು, ನಾನು ಬಡವ. ಆಗ ಪಕ್ಷ ಕಟ್ಟಲು ಶಂಕರಮೂರ್ತಿ ಸೇರಿದಂತೆ ಹಲವರ ಬಳಿ ಹಣ ಪಡೆದಿದ್ದೇನೆ. ಹೀಗಾಗಿಯೇ ಪಕ್ಷ ಅಧಿಕಾರಕ್ಕೆ ಬಂದಿತು. ಆದರೆ ಅದರ ಫಲಾನುಭವಿಯಾಗಿ ಈಶ್ವರಪ್ಪ ಗೂಟದ ಕಾರಿನಲ್ಲಿ ಓಡಾಡುವಂತಾಯಿತು'.

ಶಿವಮೊಗ್ಗ ಜನತೆಯನ್ನುದ್ದೇಶಿಸಿಯೂ ಮಾತನಾಡಿದರು:
ಭಾಷಣದುದ್ದಕ್ಕೂ ತಮ್ಮ ರಾಜಕೀಯ ವಿರೋಧಿಗಳ ಬಗ್ಗೆಯೇ ಮಾತನಾಡಿದ ಯಡಿಯೂರಪ್ಪನವರು ಕೊನೆಗೆ ಶಿವಮೊಗ್ಗದ ಜನತೆಯನ್ನುದ್ದೇಶಿಸಿಯೂ ಮಾತನಾಡಿದರು - ಇಡೀ ರಾಜ್ಯದಲ್ಲಿ ಜನ ನನ್ನನ್ನು ಬೆಂಬಲಿಸುತ್ತಿದ್ದಾರೆ. ಶಿವಮೊಗ್ಗದ ಜನತೆ ಕೂಡ ನನ್ನ ಕೈಹಿಡಿಯಬೇಕು. ತವರಿನವರು ನೀವೇ ಕೈ ಹಿಡಿಯದಿದ್ದರೆ ನಾನೆಲ್ಲಿ ಹೋಗಬೇಕು. ಶಿವಮೊಗ್ಗವನ್ನು ಅಭಿವೃದ್ಧಿಯಲ್ಲಿ ಮುಳುಗಿಸಿದ್ದೇನೆ. ಇದನ್ನು ನೆನಪಿಟ್ಟುಕೊಂಡು ನನ್ನನ್ನು ಬೆಂಬಲಿಸಿ ಎಂದರು.
ಏಪ್ರಿಲ್ 10ರಂದು ಕೆಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಪ್ರಕಟಿಸಿದ ಯಡಿಯೂರಪ್ಪ 15ಕ್ಕೆ ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದರು.

ಅನಂತುಗೆ 24 ಗಂಟೆಯಲ್ಲಿ ಅಧಿಕಾರ:
ಬಿಜೆಪಿ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಎಲ್ ಕೆ ಆಡ್ವಾಣಿ ಅವರು ಒಂದು ಮಾತು ಹೇಳಿದ್ದರೆ ಕೇವಲ 24 ಗಂಟೆಯಲ್ಲಿ ನಾನೇ ಮುಖ್ಯಮಂತ್ರಿ ಸ್ಥಾನವನ್ನು ಆಡ್ವಾಣಿಯವರ ಮಾನಸ ಪುತ್ರ ಅನಂತ್ ಕುಮಾರ್ ಅವರಿಗೆ ಧಾರೆಯೆರೆದುಕೊಡುತ್ತಿದೆ ಎಂದು ಯಡಿಯೂರಪ್ಪ ಕುಟುಕಿದರು.












Click it and Unblock the Notifications