ಯಮಕನಮರಡಿ ಕ್ಷೇತ್ರ: ಸತೀಶ್ ಜಾರಕಿಹೊಳಿಗಿಲ್ಲ ಸೋಲಿನ ಭಯ
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರ ಯಮಕನಮರಡಿ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿಗೆ ಸೇರಿದ ಪುಟ್ಟ ಗ್ರಾಮವಿದು. ಇದೇ ಈಗ ಇಲ್ಲಿ ವಿಧಾನಸಭಾ ಕ್ಷೇತ್ರವಾಗಿದೆ. 2008ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಬಳಿಕ ಹೊಸದಾಗಿ ಈ ಯಮಕನಮರಡಿ ಕ್ಷೇತ್ರವನ್ನು ರೂಪಿಸಲಾಯಿತು.
ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಸತೀಶ್ ಜಾರಕಿಹೊಳಿ ಇಲ್ಲಿನ ಹಾಲಿ ಶಾಸಕರು. ಮಾನವ ಬಂಧುತ್ವ ವೇದಿಕೆ, ಮೂಢನಂಬಿಕೆ ವಿರೋಧಿ ಹೋರಾಟ, ಬುದ್ಧ-ಬಸವ-ಅಂಬೇಡ್ಕರ್ ತತ್ವಗಳನ್ನು ಜಪಿಸುತ್ತಾ ಸೈದ್ಧಾಂತಿಕ ರಾಜಕಾರಣವನ್ನು ಮಾಡುತ್ತಾ ಬಂದಿರುವವರು ಸತೀಶ್ ಜಾರಕಿಹೊಳಿ. ಅವರಿಲ್ಲಿ 2008 ಮತ್ತು 2013ರಲ್ಲಿ ಜಯಶಾಲಿಯಾಗಿದ್ದಾರೆ.
2008ರಲ್ಲಿ 46,132 ಮತಗಳನ್ನು ಪಡೆದ ಅವರು ಜೆಡಿಎಸ್ ಅಭ್ಯರ್ಥಿಯನ್ನು ಸುಮಾರು 17 ಸಾವಿರ ಮತಗಳಿಂದ ಸೋಲಿಸಿದ್ದರು. 2013ರ ಚುನಾವಣೆಯಲ್ಲಿ ಜಾರಕಿಹೊಳಿ 70,726 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿಯನ್ನು ಸುಮಾರು 24 ಸಾವಿರ ಮತಗಳಿಂದ ಸೋಲಿಸಿದ್ದರು. ಇದಾದ ನಂತರ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಅಬಕಾರಿ ಸಚಿವರೂ ಆಗಿದ್ದರು.

ಕ್ಷೇತ್ರದ ಮೇಲೆ ಜಾರಕಿಹೊಳಿ ಎಷ್ಟರಮಟ್ಟಿಗೆ ಹಿಡಿತ ಹೊಂದಿದ್ದಾರೆ ಎಂದರೆ, 'ನನಗೆ ಕ್ಷೇತ್ರಕ್ಕೆ ಹೋಗಬೇಕಾಗಿಯೇ ಇಲ್ಲ. ಜನರೇ ಗೆಲ್ಲಿಸುತ್ತಾರೆ' ಎಂದು ತುಂಬು ಆತ್ಮವಿಶ್ವಾಸದಿಂದ ನುಡಿಯುತ್ತಾರೆ. ಜೊತೆಗೆ ಸಿದ್ದರಾಮಯ್ಯ ಗೆಲುವಿಗಾಗಿ ಅವರು ಬಾದಾಮಿಗೆ ಬಂದು ಪ್ರಚಾರ ಮಾಡುತ್ತಿದ್ದಾರೆಯೇ ವಿನಃ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿಲ್ಲ.
ಇಲ್ಲಿ ಈ ಬಾರಿ ಜಾರಕಿಹೊಳಿ ವಿರುದ್ಧ ಬಿಜೆಪಿಯ ಮಾರುತಿ ಮಲ್ಲಪ್ಪ ಮತ್ತು ಜೆಡಿಎಸ್ ನಿಂದ ಶಂಕರ್ ಭರಮಗಸ್ತಿ ಸ್ಪರ್ಧಿಸುತ್ತಿದ್ದಾರೆ. ಯಾರೇ ಸ್ಪರ್ಧಿಸಿದರೂ ಇಲ್ಲಿ ಜಾರಕಿಹೊಳಿ ಕುದುರೆಗೆ ಲಗಾಮು ಹಾಕುವುದು ಕಷ್ಟ ಎಂಬ ಪರಿಸ್ಥಿತಿ ಇದೆ.












Click it and Unblock the Notifications