ಸುಳ್ಯ ಕ್ಷೇತ್ರ ಪರಿಚಯ: ಸೋಲಿಲ್ಲದ ಸರದಾರ ಅಂಗಾರಗೆ ಈ ಬಾರಿಯೂ ಗೆಲುವು?
ಸುಳ್ಯ ದಕ್ಷಿಣ ಕನ್ನಡದಲ್ಲಿರುವ ಪರಿಶಿಷ್ಟ ಜಾತಿ ಪಂಗಡಕ್ಕೆ ಮೀಸಲಾದ ಏಕೈಕ ಕ್ಷೇತ್ರ. ಕುಕ್ಕೆ ಸುಬ್ರಮಣ್ಯ ದೇವಸ್ಥಾನ, ಕುಮಾರಧಾರಾ ನದಿ, ಕುಮಾರ ಪರ್ವತ, ಕುರುಂಜಿ ಶಿಕ್ಷಣ ಸಂಸ್ಥೆ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಬರುತ್ತವೆ.
ಸ್ಥಳೀಯ ಗೌಡ ಸಮುದಾಯದವರು ಹೆಚ್ಚಾಗಿ ಬಳಸುವ ಅರೆಕನ್ನಡ ಭಾಷೆಯನ್ನು ವಿಶೇಷವಾಗಿ ಇಲ್ಲಿ ಗಮನಿಸಬಹುದು.
ಇಲ್ಲಿನ ರಾಜಕೀಯ ಇತಿಹಾಸಕ್ಕೆ ಬರುವುದಾದರೆ 1983ರಲ್ಲೇ ಸುಳ್ಯದಲ್ಲಿ ಬಿಜೆಪಿ ಖಾತೆ ತೆರೆದಿತ್ತು. ಕರ್ನಾಟಕದಲ್ಲಿ ಅವತ್ತು ಬಿಜೆಪಿ ಗೆದ್ದಿದ್ದ 18 ಕ್ಷೇತ್ರಗಳಲ್ಲಿ ಸುಳ್ಯ ಕೂಡ ಒಂದು. ಸರಳ ಜೀವಿ ಬಾಕಿಲ ಹುಕ್ರಪ್ಪ (ಶಾಸಕರಾಗಿಯೂ ಕೂಲಿ ಕೆಲಸ ಮಾಡುತ್ತಿದ್ದ ಅವರು ಇತ್ತೀಚೆಗೆ ನಿಧನರಾಗಿದ್ದಾರೆ) ಎಂಬವರು ಅವತ್ತು ಇಲ್ಲಿಂದ ಬಿಜೆಪಿಯ ಖಾತೆ ತೆರೆದಿದ್ದರು.

ಮುಂದೆ ಎರಡು ಚುನಾವಣೆಗಳಲ್ಲಿ ಅಂದರೆ 1985, 89ರಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತಾದರೂ 1994ರಲ್ಲಿ ಮರಳಿ ಕ್ಷೇತ್ರ ಬಿಜೆಪಿ ತೆಕ್ಕೆಗೆ ಬಂತು. ನಂತರ ಒಮ್ಮೆಯೂ ಇಲ್ಲಿ ಬಿಜೆಪಿ ಸೋತಿದ್ದಿಲ್ಲ.
ಇಲ್ಲಿ 1994, 99, 2004, 2008, 2013 ಹೀಗೆ ಸತತ 5 ಚುನಾವಣೆಗಳಲ್ಲಿ ಬಿಜೆಪಿಯ ಎಸ್ ಅಂಗಾರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅದರಲ್ಲೂ 2013ರಲ್ಲಿ ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳನ್ನು ಬಿಜೆಪಿ ಸೋತಾಗ ಗೆದ್ದ ಏಕೈಕ ಕೇಸರಿ ಪಕ್ಷದ ಅಭ್ಯರ್ಥಿ ಅಂದರೆ ಅದು ಎಸ್ ಅಂಗಾರ. ಈ ಮೂಲಕ ಜಿಲ್ಲೆಯಲ್ಲಿ ಅವರು ಬಿಜೆಪಿಯ ಮರ್ಯಾದೆ ಉಳಿಸಿದ್ದರು.
ಆದರೆ ವರ್ಷದಿಂದ ವರ್ಷಕ್ಕೆ ಗೆಲುವಿನ ಅಂತರ ಕಡಿಮೆಯಾಗುತ್ತಿರುವುದು ಬಿಜೆಪಿ ಪಾಲಿಗೆ ಎಚ್ಚರಿಕೆಯ ಗಂಟೆ. 2004ರಲ್ಲಿ 17 ಸಾವಿರ ಮತಗಳಿಂದ ಗೆದ್ದಿದ್ದ ಅಂಗಾರ ಗೆಲುವಿನ ಅಂತರ 2008ರಲ್ಲಿ 5 ಸಾವಿರಕ್ಕೆ ಕುಸಿದಿತ್ತು. ಅದರಲ್ಲೂ 2013ರಲ್ಲಿ ಕೇವಲ ಒಂದೂವರೆ ಸಾವಿರ ಮತಗಳಿಂದ ಅಂಗಾರ ಅವರು ಪ್ರಯಾಸದ ಜಯ ಸಾಧಿಸಿದ್ದರು.
ಕಳೆದ ಮೂರು ಚುನಾವಣೆಗಳಲ್ಲಿ ಇಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ನ ಡಾ.ಬಿ. ರಘು ನಿರಂತರವಾಗಿ ಮತಗಳಿಗೆ ಹೆಚ್ಚಿಸುತ್ತಾ ಬಂದಿದ್ದಾರೆ. ಒಂದೊಮ್ಮೆ ಅವರಿಗೆ ಈ ಬಾರಿಯೂ ಟಿಕೆಟ್ ಸಿಕ್ಕಿ, ತಮ್ಮ ೀ ಹಿಂದಿನ ಪ್ರಯತ್ನವನ್ನು ಅವರು ಮುಂದುವರಿಸಿದರೆ ಈ ಬಾರಿ ಗೆಲ್ಲಲೂಬಹುದು.
ಕ್ಷೇತ್ರದಲ್ಲಿ ಅಂಗಾರ ಬಗ್ಗೆ ಒಳ್ಳೆಯ ಅಭಿಪ್ರಾಯ ಇರುವುದರಿಂದ ಅವರು ಈ ಬಾರಿಯೂ ಗೆದ್ದರೆ ಅಚ್ಚರಿಯೇನಿಲ್ಲ.












Click it and Unblock the Notifications