ಪುಲಕೇಶಿನಗರ ಪರಿಚಯ: ಶ್ರೀನಿವಾಸಮೂರ್ತಿಗೆ ಪ್ರಸನ್ನ ಕುಮಾರ್ ಸವಾಲ್
ಬೆಂಗಳೂರು ನಗರದಲ್ಲಿರುವ ಬಹುಪಾಲು ಕೊಳಗೇರಿ ಪ್ರದೇಶಗಳನ್ನು ಹೊಂದಿರುವ ಕ್ಷೇತ್ರ ಪುಲಕೇಶಿನಗರ. ಇದು ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರವಾಗಿದೆ. ಡಿ.ಜೆ.ಹಳ್ಳಿ, ಎಸ್.ಕೆ. ಗಾರ್ಡನ್, ದೊಡ್ಡಣ್ಣನಗರ, ಕಾವಲ್ ಬೈರಸಂದ್ರ, ಭಾರತನಗರ ಸೇರಿ ಹಲವು ಕೊಳೆಗೇರಿ ಪ್ರದೇಶಗಳು ಇಲ್ಲಿವೆ.
ಇಲ್ಲಿ 2008ರಲ್ಲಿ ಕಾಂಗ್ರೆಸ್ ಬಿ. ಪ್ರಸನ್ನಕುಮಾರ್ ಜಯಶಾಲಿಯಾಗಿದ್ದರು. ಈ ಚುನಾವಣೆಯಲ್ಲಿ ಅವರು ಜೆಡಿಎಸ್ ನ ಅಖಂಡ ಶ್ರೀನಿವಾಸಮೂರ್ತಿಯವರನ್ನು ಸುಮಾರು 19 ಸಾವಿರ ಮತಗಳಿಂದ ಸೋಲಿಸಿದ್ದರು.
ಆದರೆ 2013ರಲ್ಲಿ ಅಖಂಡ ಶ್ರೀನಿವಾಸಮೂರ್ತಿ ಸೇಡು ತೀರಿಸಿಕೊಂಡರು. ಈ ಚುನಾವಣೆಯಲ್ಲಿ 48,995 ಮತಗಳನ್ನು ಪಡೆದ ಅವರು ಕಾಂಗ್ರೆಸಿನ ಬಿ. ಪ್ರಸನ್ನಕುಮಾರ್ ಅವರನ್ನು 10 ಸಾವಿರ ಮತಗಳ ಅಂತರದಿಂದ ಸೋಲಿಸಿದರು.

ನಂತರ ಅಖಂಡ ಶ್ರೀನಿವಾಸಮೂರ್ತಿ ದೇವೇಗೌಡರ ಜೊತೆ ಮುನಿಸಿಕೊಂಡು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಅವರು ಈ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದಾರೆ. ಅವರ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಬಿ ಪ್ರಸನ್ನಕುಮಾರ್ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಅವರು ಜೆಡಿಎಸ್ ಗೆ ಬಂದು ಇಲ್ಲಿ ಅಭ್ಯರ್ಥಿಯಾಗಿದ್ದಾರೆ.
ಇಲ್ಲಿ ಬಿಜೆಪಿ ಸುಶೀಲಾ ದೇವರಾಜ್ ಅವರಿಗೆ ಟಿಕೆಟ್ ನೀಡಿದೆ. ಆದರೆ ಕ್ಷೇತ್ರದಲ್ಲಿ ಬಿಜೆಪಿಗೆ ಯಾವುದೇ ನೆಲೆ ಇಲ್ಲ. ಕಳೆದ ಬಾರಿ ಇಲ್ಲಿ ಬಿಜೆಪಿ ಕೇವಲ 4,589 ಮತಗಳನ್ನು ಪಡೆದಿತ್ತು. ಬಿಜೆಪಿಗಿಂತ ಜಾಸ್ತಿ ಎಸ್.ಡಿ.ಪಿ.ಐ ಅಭ್ಯರ್ಥಿ ಹೇಮಲತಾ 5,431 ಮತಗಳನ್ನು ಪಡೆದಿದ್ದರು.
ಲೆಕ್ಕಾಚಾರ
ಪುಲಕೇಶಿನಗರದಲ್ಲಿ 2.28 ಲಕ್ಷ ಮತಗಳಿವೆ. ಇದರಲ್ಲಿ 1.11 ಲಕ್ಷ ಮಹಿಳಾ ಮತದಾರರು ಮತ್ತು 1.16 ಲಕ್ಷ ಪುರುಷ ಮತದಾರರಿದ್ದಾರೆ.
ಕ್ಷೇತ್ರದಲ್ಲಿ ದಲಿತರು, ಮುಸ್ಲಿಂ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವುಗಳೇ ಫಲಿತಾಂಶದಲ್ಲಿ ನಿರ್ಣಾಯಕವಾಗಿವೆ.
ಪುಲಕೇಶಿನಗರದಲ್ಲಿ ಒಟ್ಟು 7 ವಾರ್ಡ್ ಗಳಿದ್ದು 2 ವಾರ್ಡ್ ಗಳಲ್ಲಿ ಜೆಡಿಎಸ್ ಸದಸ್ಯರಿದ್ದಾರೆ. 4 ರಲ್ಲಿ ಕಾಂಗ್ರೆಸ್ ಹಾಗೂ ಒಂದು ವಾರ್ಡ್ ನ್ನು ಪಕ್ಷೇತರ ಸದಸ್ಯರು ಪ್ರತಿನಿಧಿಸುತ್ತಿದ್ದಾರೆ.
ಮೇಯರ್ ಸಂಪತ್ ರಾಜ್ ಅವರ ದೇವರ ಜೀವನಹಳ್ಳಿ ವಾರ್ಡ್ ಇದೇ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಮೇಯರ್ ಸಂಪತ್ ರಾಜ್ ಕಾರ್ಯವೈಖರಿ ಬಗ್ಗೆ ಜನರಿಗೆ ತೃಪ್ತಿಯಿದ್ದು, ಇನ್ನುಳಿದ ಕಾಂಗ್ರೆಸ್ ಸದಸ್ಯರ ಕೆಲಸ ಮತ್ತು ಜನರೊಂದಿಗಿನ ಸಂಪರ್ಕದ ಬಗ್ಗೆ ಕ್ಷೇತ್ರದಲ್ಲಿ ಉತ್ತಮ ಅಭಿಪ್ರಾಯವಿಲ್ಲ. ಜೆಡಿಎಸ್ ಕಾರ್ಪೊರೇಟರ್ ಗಳ ಕಥೆಯೂ ಇದೇ ಆಗಿದೆ.
ಶಾಸಕ ಆರ್. ಅಖಂಡ ಶ್ರೀನಿವಾಸಮೂರ್ತಿ ಕ್ಷೇತ್ರದ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಿಸುತ್ತಿಲ್ಲ. ಕ್ಷೇತ್ರದ ಹೆಚ್ಚಿನ ಭಾಗಗಳು ಕೊಳಗೇರಿಗಳಾಗಿದ್ದು ನೀರು ಸೇರಿದಂತೆ ಮೂಲಸೌಕರ್ಯಗಳೇ ಇಲ್ಲ. ಒಳಚರಂಡಿ ವ್ಯವಸ್ಥೆಯೂ ಸರಿಯಾಗಿಲ್ಲ. ಹೀಗಾಗಿ ಇವೆಲ್ಲಾ ಚುನಾವಣೆ ಮೇಲೆ ಪರಿಣಾಮ ಬೀರಲಿವೆ.
ಏನೇ ಪರಿಣಾಮ ಬೀರಿದರೂ ಇದೀಗ ಕಾಂಗ್ರೆಸ್ ಗೆ ಬಂದಿರುವ ಅಖಂಡ ಶ್ರೀನಿವಾಸಮೂರ್ತಿ ತಮ್ಮ ಬಲವನ್ನು ಮತ್ತಷ್ಟು ವೃದ್ಧಿಸಿಕೊಂಡಿದ್ದಾರೆ. ಅವರ ವಿರುದ್ಧ ಕಳೆದ ಬಾರಿ ಸೋತ ಬಿ ಪ್ರಸನ್ನಕುಮಾರ್ ಸೇಡು ತೀರಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.












Click it and Unblock the Notifications