ಕ್ಷೇತ್ರ ಪರಿಚಯ : ಮಾನ್ವಿಯಲ್ಲಿ ಗೆಲ್ಲುವವರು ಯಾರು?
ಮಾನವಿ ಅಥವ ಮಾನ್ವಿ ರಾಯಚೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. ಜಿಲ್ಲಾ ಕೇಂದ್ರ ರಾಯಚೂರಿನಿಂದ ಸುಮಾರು 50 ಕಿ.ಮೀ.ದೂರದಲ್ಲಿದೆ. ಶ್ರೀಹರಿ ಕಥಾಮೃತಸಾರ ರಚಿಸಿದ ಶ್ರೀ ಜಗನ್ನಾಥ ದಾಸ ಅವರ ಹುಟ್ಟೂರು ಮಾನ್ವಿ.
ಮಾನ್ವಿಯಲ್ಲಿರುವ ಪುರಾತನ ಕೋಟೆ ಪಟ್ಟಣದ ಪ್ರಮುಕ ಆಕರ್ಷಣೆಯಾಗಿದೆ. ತಾಲೂಕಿನಲ್ಲಿ ನಡೆಯುವ ಯಲ್ಲಮ್ಮ ದೇವಿ ಜಾತ್ರೆಗೆ ನೂರಾರು ಜನರು ಆಗಮಿಸುತ್ತಾರೆ.
ಮಾನ್ವಿ ಬಯಲು ಸೀಮೆಗೆ ಸೇರಿದ್ದರೂ ತುಂಗಭದ್ರಾ ಎಡದಂಡೆ ನೀರಾವರಿ ಯೋಜನೆಯಿಂದಾಗಿ ಕ್ಷೇತ್ರದಕ್ಕೆ ನೀರಿನ ಲಭ್ಯತೆ ಸಿಕ್ಕಿದೆ. ಭತ್ತ ಮತ್ತು ಹತ್ತಿಯನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ.

ರಾಜ್ಯ ಹೆದ್ದಾರಿ 23 ಮಾನ್ವಿ ಮೂಲಕ ಹಾದು ಹೋಗುತ್ತದೆ. ಆದ್ದರಿಂದ, ಸಾರಿಗೆ ಸಂಚಾರದ ಸಮಸ್ಯೆ ಇಲ್ಲ. ಹೈದರಾಬಾದ್, ಹುಬ್ಬಳ್ಳಿ, ಮಂತ್ರಾಲಯಗಳಿಗೆ ನೇರ ಬಸ್ ಸೌಕರ್ಯವಿದೆ. ರಾಯಚೂರಿಗೆ ಹೋದರೆ ರೈಲ್ವೆ ಸೇವೆ ಲಭ್ಯವಾಗಲಿದೆ.
ರಾಜಕೀಯವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಎಂಎಲ್ಸಿ ಎನ್.ಎಸ್.ಬೋಸರಾಜು ಅವರ ಕಾರ್ಯಕ್ಷೇತ್ರ ಮಾನ್ವಿ. ಕಳೆದ ಎರಡು ಚುನಾವಣೆಗಳಿಂದ ಕಾಂಗ್ರೆಸ್ನ ಹಂಪಯ್ಯ ನಾಯಕ ಕ್ಷೇತ್ರದಲ್ಲಿ ಜಯಗಳಿಸುತ್ತಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಹಂಪಯ್ಯ ಬದಲು ಎಂ.ಈರಣ್ಣ ಅವರು ಟಿಕೆಟ್ ಪಡೆಯುವ ಸಾಧ್ಯತೆ ಇದೆ. ಗುತ್ತಿಗೆದಾರರಾದ ಈರಣ್ಣ ಅವರು ಕ್ಷೇತ್ರದಲ್ಲಿ ಆಗಲೇ ಜನಪ್ರಿಯತೆಗಳಿಸಲು ಅನೇಕ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಹಂಪಯ್ಯ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದು ಅನುಮಾನ. ತಮ್ಮ ಸೊಸೆಯನ್ನು ಕಣಕ್ಕಿಳಿಸಬಹುದು ಎಂಬುದು ಸದ್ಯದ ಸುದ್ದಿ. ಕಾಂಗ್ರೆಸ್ ಟಿಕೆಟ್ ತಪ್ಪಿದರೆ ಜೆಡಿಎಸ್ ಸೇರಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ. ಬೋಸರಾಜು ಅವರು ಯಾರ ಕಡೆ ವಾಲುತ್ತಾರೋ ಅವರಿಗೆ ಟಿಕೆಟ್ ಖಚಿತ.
ಬಿಜೆಪಿಯಿಂದ ಗಂಗಾಧರ ನಾಯಕ, ಸುಜಾತಾ ವಿ.ಪಾಟೀಲ ಟಿಕೆಟ್ ಆಕಾಂಕ್ಷಿಗಳು. ಲಿಂಗಾಯತರು, ಕುರಬರ ಮತ ಕ್ಷೇತ್ರದಲ್ಲಿ ನಿರ್ಣಾಯಕ. ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ.
2013ರ ಚುನಾವಣೆಯಲ್ಲಿ ಹಂಪಯ್ಯ ಅವರು 50,619 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ನ ರಾಜಾವೆಂಕಟಪ್ಪ ನಾಯಕ್ 43,632 ಮತ, ಬಿಜೆಪಿಯ ಅಯ್ಯಮ್ಮ ನಾಯಕ್ 2,935 ಮತಗಳನ್ನು ಪಡೆದಿದ್ದಾರೆ.











Click it and Unblock the Notifications