ಕೊಪ್ಪಳ ಕ್ಷೇತ್ರ ಪರಿಚಯ: ಭತ್ತದ ಕಣಜದಲ್ಲಿ ಗೆಲುವು ಯಾರಿಗೆ?
'ಭತ್ತದ ಕಣಜ' ಎಂದೇ ಖ್ಯಾತಿ ಪಡೆದಿರುವ ಕೊಪ್ಪಳ ಜಿಲ್ಲೆಯನ್ನು 1997ರಲ್ಲಿ ರಚಿಸಲಾಯಿತು. 7,190 ಚದರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿರುವ ಕೊಪ್ಪಳದಲ್ಲಿ ಹಲವು ಪ್ರವಾಸಿ, ಐತಿಹಾಸಿಕ ಸ್ಥಳಗಳಿವೆ.
ಫ್ರೆಂಚರ ಸಹಾಯ ಪಡೆದು ಟಿಪ್ಪು ಸುಲ್ತಾನ್ ನಿರ್ಮಿಸಿದ ಕೊಪ್ಪಳ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಜೈನರ ಗುಹಾ ದೇವಾಲಯ ಬಹದ್ದೂರ್ ಬಂಡಿ, 12ನೇ ಶತಮಾನದ ಐತಿಹಾಸಿಕ ಗ್ರಾಮ ಗುಂಡ್ಲವಡ್ಡಿಗೆರಿ, ಮದನೂರು ದೇವಸ್ಥಾನ, ಗವಿಮಠ ಇಲ್ಲಿದೆ.
ಇಲ್ಲಿನ ಕಿನ್ನಾಳ ಗ್ರಾಮದಲ್ಲಿ ತಯಾರಾಗುವ ಕಿನ್ನಾಳ ಆಟಿಕೆಗೂ ಕೊಪ್ಪಳ ಪ್ರಸಿದ್ಧವಾಗಿದೆ. ಕೊಪ್ಪಳದಲ್ಲಿ ಒಂದಷ್ಟು ಸಮಸ್ಯೆಗಳೂ ಇವೆ. ನೀರಾವರಿ ಮತ್ತು ಶೈಕ್ಷಣಿಕೆ ಸಮಸ್ಯೆ ಇಲ್ಲಿನ ಪ್ರಮುಖ ತೊಂದರೆಗಳಾಗಿವೆ.
ಕೊಪ್ಪಳದ ರಾಜಕೀಯ ವಿಚಾರಕ್ಕೆ ಬರುವುದಾದರೆ ಕಾಂಗ್ರೆಸ್ ಪಕ್ಷದ ಕೆ. ರಾಘವೇಂದ್ರ ಬಸವರಾಜ್ ಹಿಟ್ನಾಳ್ ಇಲ್ಲಿನ ಹಾಲಿ ಶಾಸಕರು.

ಅವರ ತಂದೆ ಬಸವರಾಜ್ ಭೀಮಪ್ಪ ಹಿಟ್ನಾಳ್ ಕೂಡ ಇಲ್ಲಿನ ಶಾಸಕರಾಗಿದ್ದರು. 2013ರ ಚುನಾವಣೆಯಲ್ಲಿ ರಾಘವೇಂದ್ರ ಹಿಟ್ನಾಳ್ 81,062 ಮತಗಳನ್ನು ಪಡೆದು ನಾಲ್ಕು ಬಾರಿಯ ಶಾಸಕ ಬಿಜೆಪಿಯ ಕರಡಿ ಸಂಗಣ್ಣರನ್ನು ಬರೋಬ್ಬರಿ 27 ಸಾವಿರ ಮತಗಳಿಂದ ಸೋಲಿಸಿದ್ದರು.
ಕರಡಿ ಸಂಗಣ್ಣ ಅವರಿಗೂ ಕ್ಷೇತ್ರದ ಜೊತೆಗೆ ಉತ್ತಮ ನಂಟು ಇದೆ. ಅವರು ಇಲ್ಲಿ 1994, 99, 2008 ಮತ್ತು 2011ರ ಉಪಚುನಾವಣೆ ಸೇರಿ ನಾಲ್ಕು ಬಾರಿ ಗೆದ್ದಿದ್ದರು. 2008ರಲ್ಲಿ ಜೆಡಿಎಸ್ ನಿಂದ ಗೆದ್ದಿದ್ದ ಅವರು ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿ ಕೈ ಹಿಡಿದಿದ್ದರು. ನಂತರ 2011ರಲ್ಲಿ ನಡೆದ ಉಪಚುನಾವಣೆಯಲ್ಲೂ ಗೆದ್ದಿದ್ದರು. ಆದರೆ 2013ರಲ್ಲಿ ಮಾತ್ರ ಅವರು ಸೋಲಬೇಕಾಯಿತು.
ಈ ಬಾರಿಯೂ ಇಲ್ಲಿ ರಾಘವೇಂದ್ರ ಹಿಟ್ನಾಳ್ ಕಾಂಗ್ರೆಸಿನಿಂದ ಕಣಕ್ಕಿಳಿದಿದ್ದಾರೆ. ಅವರ ವಿರುದ್ಧ ಬಿಜೆಪಿಯಿಂದ ಸಿವಿ ಚಂದ್ರಶೇಖರ್ ಕಣಕ್ಕಿಳಿದಿದ್ದಾರೆ. ಈ ಬಾರಿ ಕರಡಿ ಸಂಗಣ್ಣರಿಗೆ ಟಿಕೆಟ್ ನೀಡದೆ ಚಂದ್ರಶೇಖರ್ ಅವರನ್ನು ಕಮಲ ಪಕ್ಷ ಅಖಾಡಕ್ಕಿಳಿಸಿದೆ.
2013ರ ಚುನಾವಣೆಯಲ್ಲಿ 6,811 ಮತಗಳನ್ನು ಪಡೆದಿದ್ದ ಜೆಡಿಎಸ್ ಈ ಬಾರಿ ಸೈಯದ್ ರನ್ನು ಕಣಕ್ಕಿಳಿಸಿದೆ.
ಕೊಪ್ಪಳದ ವಿಚಾರಕ್ಕೆ ಬಂದಾಗ ಇಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಹಾಗಾಗಿ ಕೈ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ್ ಈ ಬಾರಿಯೂ ಗೆದ್ದರೆ ಅಚ್ಚರಿಯೇನಿಲ್ಲ.












Click it and Unblock the Notifications