ಕ್ಷೇತ್ರ ಪರಿಚಯ : ಉತ್ತರ ಕರ್ನಾಟಕದ ಹೆಬ್ಬಾಗಿಲಲ್ಲಿ ಯಾರಿಗೆ ಜಯ?
ಹಾವೇರಿ ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿರುವ ತಾಲೂಕು ಕೇಂದ್ರ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹಾವೇರಿ ಹೆಬ್ಬಾಗಿಲು ಎಂದು ಪ್ರಸಿದ್ಧಿ ಪಡೆದಿದೆ. ಹಾವೇರಿ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ.
ಸಂತ ಶಿಶುನಾಳ ಶರೀಫ, ವರಕವಿ ಸರ್ವಜ್ಞ, ಕಾದಂಬರಿ ಪಿತಾಮಹ ಗಳಗನಾಥರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿನಾಯಕ ಕೃಷ್ಣ ಗೋಕಾಕರು ಮುಂತಾದ ಮಹನಿಯರಿಗೆ ಜನ್ಮನೀಡಿದ ಕ್ಷೇತ್ರ ಹಾವೇರಿ.
ಹಾವೇರಿ ಜಿಲ್ಲೆಯು ಗದಗ ಜಿಲ್ಲೆಯನ್ನು ಒಳಗೊಂಡಂತೆ ಮೊದಲು ಧಾರವಾಡ ಜಿಲ್ಲೆಯ ಭಾಗವಾಗಿತ್ತು. ಜನರ ಬೇಡಿಕೆಯಂತೆ ಬಹುದಿನಗಳ ಹೋರಾಟದ ನಂತರ ಧಾರವಾಡ ಜಿಲ್ಲೆಯಿಂದ ವಿಭಜನೆ ಮಾಡಿ 1997ರಲ್ಲಿ ಹಾವೇರಿ ಜಿಲ್ಲೆ ರಚನೆ ಮಾಡಲಾಯಿತು.
ಸಾಕಷ್ಟು ಐತಿಹಾಸಿಕ ಹಿನ್ನೆಲೆಯನ್ನು ಹಾವೇರಿ ಹೊಂದಿದೆ. ತುಂಗಭದ್ರಾ ಮತ್ತು ವರದಾ ನದಿ ಪಾತ್ರದಲ್ಲಿ ಜಿಲ್ಲೆಯಿದೆ. ರಾಜಕೀಯವಾಗಿ ಜಿಲ್ಲೆ ಬಿಜೆಪಿಯ ವಶದಲ್ಲಿತ್ತು.
2008ರ ಚುನಾವಣೆಯಲ್ಲಿ ಜಿಲ್ಲೆಯ 6 ಕ್ಷೇತ್ರಗಳ ಪೈಕಿ ಐದನ್ನು ಬಿಜೆಪಿ ಗೆದ್ದಿತ್ತು.
2013ರ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಮತ ವಿಭಜನೆ ಕಾರಣ ಕಾಂಗ್ರೆಸ್ 4 ಸ್ಥಾನಗಳಲ್ಲಿ ಜಯಗಳಿಸಿತು. ಬಿ.ಎಸ್.ಯಡಿಯೂರಪ್ಪ ಕೆಜೆಪಿ ಪಕ್ಷವನ್ನು ಸ್ಥಾಪನೆ ಮಾಡಿದ್ದು ಹಾವೇರಿಯಲ್ಲಿಯೇ. ಆದ್ದರಿಂದ, ಜಿಲ್ಲೆಯಲ್ಲಿ ಯಡಿಯೂರಪ್ಪ ಅವರ ವರ್ಚಸ್ಸು ಹೆಚ್ಚಿದೆ.
ಹಾವೇರಿ ಕ್ಷೇತ್ರದ ಶಾಸಕರು ಕಾಂಗ್ರೆಸ್ನ ರುದ್ರಪ್ಪ ಲಮಾಣಿ. 83,119ಮತಗಳನ್ನು ಪಡೆದು ಅವರು ಜಯಗಳಿಸಿದ್ದಾರೆ. ಸಂಪುಟ ಪುನಾರಚನೆ ಸಂದರ್ಭದಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ.
ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ನೆಹರು ಓಲೆಕರ್ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬುದು ಸದ್ಯದ ಸುದ್ದಿ. ರುದ್ರಪ್ಪ ಲಮಾಣಿ ಅವರಿಗೆ ಮತ್ತೊಮ್ಮೆ ಟಿಕೆಟ್ ಸಿಗುವುದು ಖಾತ್ರಿಯಾಗಿದೆ.
2013ರ ಚುನಾವಣೆಯಲ್ಲಿ ರುದ್ರಪ್ಪ ಲಮಾಣಿ ಅವರು 83,119 ಮತಗಳನ್ನು ಪಡೆದಿದ್ದರು. ಕೆಜೆಪಿಯಿಂದ ಸ್ಪರ್ಧಿಸಿದ್ದ ನೆಹರು ಓಲೇಕರ್ 52,911 ಮತ, ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ಮಲ್ಲೇಶ್ವಪ್ಪ ಹರಿಜನ್ 5,153 ಮತ, ಜೆಡಿಎಸ್ನ ಪರಮೇಶ್ವರ ತಿಪ್ಪಣ್ಣ 1461 ಮತಗಳನ್ನು ಪಡೆದಿದ್ದರು.