ಕ್ಷೇತ್ರ ಪರಿಚಯ: ಹಾಸನ-ಒಕ್ಕಲಿಗರ ಓಲೈಕೆಯಲ್ಲಿ ಗೆದ್ದವರಿಗೆ ಗೆಲುವು
ಹಾಸನ ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಧಾನವಾಗಿರುವ ಹಾಸನ ಅಸೆಂಬ್ಲಿ ಕ್ಷೇತ್ರವು ನಗರ ಹಾಗೂ ಗ್ರಾಮೀಣ ಭಾಗಗಳನ್ನು ಹೊಂದಿದೆ. ಹೆದ್ದಾರಿಗಳನ್ನು ಹೊಂದಿದ್ದರೂ ನಗರದ ರಸ್ತೆಗಳ ಪಾಡು ಹೇಳುವಂತಿಲ್ಲ.
ರಾಜ್ಯದಲ್ಲೇ ಅತ್ಯಂತ ದೊಡ್ಡ ಬಸ್ ನಿಲ್ದಾಣವನ್ನು ಹೊಂದಿರುವ ಹಾಸನದಲ್ಲಿ ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳಿವೆ. ಇಸ್ರೋದ ಮಾಸ್ಟರ್ ಕಂಟ್ರೋಲ್ ಕೇಂದ್ರವಿದೆ.
ಐಟಿಐ ಕಾಲೇಜು ಅಭಿವೃದ್ಧಿಗೆ ಮತ್ತೆ ಬೇಡಿಕೆ ಬಂದಿದೆ. ನಗರ ಸಾರಿಗೆ ಇನ್ನಷ್ಟು ಉತ್ತಮಗೊಳ್ಳಬೇಕಿದ್ದು, ವಿದ್ಯಾರ್ಥಿಗಳು ಹಾಗೂ ಕಚೇರಿಗೆ ಹೋಗಿ ಬರುವ ಉದ್ಯೋಗಸ್ಥರಿಗೆ ಅನುಕೂಲವಾಗಲಿದೆ.
ಹಾಸನದಲ್ಲಿ ಈ ಬಾರಿಯೂ ಜೆಡಿಎಸ್ ನ ಎಚ್ಎಸ್ ಪ್ರಕಾಶ್ ಹಾಗೂ ಕಾಂಗ್ರೆಸ್ಸಿನ ಎಚ್ .ಕೆ ಮಹೇಶ್ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.
ಒಕ್ಕಲಿಗ ಹಾಗೂ ಒಕ್ಕಲಿಗ ಉಪಜಾತಿ ಮತಗಳನ್ನು ನೆಚ್ಚಿಕೊಂಡಿರುವ ಜೆಡಿಎಸ್ ಗೆ ಆಘಾತ ನೀಡಲು ಸಿದ್ದರಾಮಯ್ಯ ಅವರ ಸಂಪುಟದ ಸಚಿವ ಅರಕಲಗೂಡು ಮಂಜು ಅವರು ಭಾರಿ ಪ್ರಯತ್ನ ನಡೆಸಿದ್ದಾರೆ. ಜತೆಗೆ ಲಿಂಗಾಯತ ಹಾಗೂ ಜೈನ ಮತಗಳನ್ನು ಸೆಳೆಯುವ ಯತ್ನವೂ ನಡೆದಿದೆ. ಗೆಲುವು ಸಾಧ್ಯವಾಗದಿದ್ದರೂ ಪ್ರಕಾಶ್ ಗೆ ಸಿಗುವ ಮತಗಳನ್ನು ತಪ್ಪಿಸಲು ಬಿಜೆಪಿ ಕೂಡಾ ಯತ್ನಿಸುತ್ತಿದೆ.
ಸಂಚಾರ ಸಂರ್ಪಕ ಕೊರತೆ, ಜಾತಿ ಆಧಾರಿತ ಮತಗಳ ವಿಂಗಡಣೆಯಾಗಿದ್ದು ಇದು ಅಭ್ಯರ್ಥಿಯ ಹಣೆಬರಹ ನಿರ್ಧರಿಸಲಿವೆ. ಮೂಲ ಸೌಕರ್ಯಗಳ ಕೊರತೆಯುಳ್ಳ ನಗರ ಇನ್ನೂ ಆಧುನಿಕತೆಗೆ ಮೈಯೊಡ್ಡಿಲ್ಲ, ಅನೇಕ ಸಮಸ್ಯೆಗಳ ನಿರ್ವಹಣೆಯಲ್ಲಿ ನಗರ ಪಾಲಿಕೆ ಸೋತಿದೆ.