ಬಳ್ಳಾರಿ ಗ್ರಾಮೀಣ ಕದನ: ರೆಡ್ಡಿ ಬಣಕ್ಕೆ ಕಾಂಗ್ರೆಸ್ ಸವಾಲು
ಕಳೆದ ಚುನಾವಣೆಯಲ್ಲಿ ಇಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು ಕಾಂಗ್ರೆಸ್ಸಿನ ಎನ್.ವೈ. ಗೋಪಾಲಕೃಷ್ಣ. ಇವರು ಮೂಲತಃ ಮೊಳಕಾಲ್ಮೂರು ಕ್ಷೇತ್ರದ ನಾಯಕ. ಚಿತ್ರದುರ್ಗದಲ್ಲಿ ಹಿಂದೆ ಸಂಸದರಾಗಿದ್ದ ಎನ್.ವೈ. ಹನುಮಂತಪ್ಪ ಅವರ ಸಹೋದರ.
2013ರ ವಿಧಾನಸಭೆ ಚುನಾವಣೆಗೂ ಮುನ್ನ ಇಲ್ಲಿ ಶ್ರೀರಾಮುಲು ಅವರೇ ಶಾಸಕರಾಗಿದ್ದರು. ಇಡೀ ರೆಡ್ಡಿ ಬಣ ಈಗ ಬಿಜೆಪಿ ಪಾಳಯಕ್ಕೆ ಹಿಂದಿರುಗಿರುವುದರಿಂದ ಶ್ರೀರಾಮುಲು ಅವರ ಬೆಂಬಲಿತ ಅಭ್ಯರ್ಥಿಗೆ ಗೆಲುವು ಖಾತ್ರಿ ಎಂದು ಸುಲಭಕ್ಕೆ ಹೇಳಲಾಗದು. ಕಳೆದ ಬಾರಿ ಬಿಜೆಪಿ ಓಬಳೇಶ್ ಅವರು ನಿಂತು ಸೋಲು ಕಂಡಿದ್ದರು.
ಬಳ್ಳಾರಿಯಿಂದ ಸ್ಪರ್ಧೆ, ಬಿಜೆಪಿಯಿಂದ ಅಚ್ಚರಿಯ ಹೆಸರು
ಆದರೆ, ಕಳೆದ ಚುನಾವಣೆ ವೇಳೆ, ಅವರು ಬಿಎಸ್ ಆರ್ ಕಾಂಗ್ರೆಸ್ ಮೂಲಕ ಸಂಸತ್ ಚುನಾವಣೆಗೆ ನಿಂತಿದ್ದರಿಂದಾಗಿ, ಬಿಜೆಪಿ ಪರವಾಗಿ ಎಸ್ ಟಿ ನಾಯಕರಲ್ಲೊಬ್ಬರನ್ನೇ (ಆಗ ಅದು ಎಸ್ ಟಿ ಮೀಸಲು ಕ್ಷೇತ್ರವಾಗಿತ್ತು) ಕಣಕ್ಕಿಳಿಸಬೇಕಿದ್ದರಿಂದಾಗಿ ಶ್ರೀರಾಮುಲು ಅವರು ಎನ್.ವೈ. ಗೋಪಾಲ ಕೃಷ್ಣ ಅವರನ್ನು ಕಣಕ್ಕಿಳಿಸಿದ್ದರು. ಹಾಗಾಗಿ, ಇಲ್ಲಿ ಎನ್.ವೈ. ಗೋಪಾಲ ಕೃಷ್ಣ ಅವರು ಗೆಲುವು ಸಾಧಿಸಿದ್ದರು.
ಶ್ರೀರಾಮುಲು, ನಾಗೇಂದ್ರ ಮುಖಾಮುಖಿ?
ಇದೀಗ, ಸಂಸದ ಶ್ರೀರಾಮುಲು ಅವರು ರಾಜ್ಯ ರಾಜಕೀಯಕ್ಕೆ ಮರಳಲು ನಿರ್ಧರಿಸಿರುವುದರಿಂದ, ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. ಹಾಗಾಗಿ, ಈ ಕ್ಷೇತ್ರದಲ್ಲಿ ಅವರ ಪ್ರಾಬಲ್ಯ ಹೆಚ್ಚಾಗಿರುವುದು ಹಾಗೂ ಇಡೀ ರೆಡ್ಡಿ ಬಣ ಈಗ ಬಿಜೆಪಿ ಪಾಳಯಕ್ಕೆ ಹಿಂದಿರುಗಿರುವುದರಿಂದ ಶ್ರೀರಾಮುಲು ಅವರು ಇಲ್ಲಿ ಗೆಲವು ಸಾಧಿಸುವುದು ದಿಟ ಎಂದು ಹೇಳಲಾಗುತ್ತಿದೆ. ಆದರೆ, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಿ. ನಾಗೇಂದ್ರ ಅವರು ಸ್ಪರ್ಧೆ ಮಾಡುವ ಸಾಧ್ಯತೆಯಿದ್ದು, ಶ್ರೀರಾಮುಲು ಬದಲಿಗೆ ಬಿಜೆಪಿಯಿಂದ ಸಣ್ಣ ಫಕೀರಪ್ಪ ನಿಲ್ಲುವ ನಿರೀಕ್ಷೆಯೂ ಇದೆ. ಹೀಗಾಗಿ, ಕದನ ಕುತೂಹಲ ಕೆರಳಿಸಿದೆ.