ಕ್ಷೇತ್ರ ಪರಿಚಯ: ಅಫಜಲ್ಪುರಕ್ಕೆ ಗುತ್ತೇದಾರ್ ಅವರೇ 'ಮಾಲಿಕ'ರು
ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆ ಕಲಬುರಗಿ (ಗುಲ್ಬರ್ಗಾ)ಯ 7 ತಾಲೂಕುಗಳಲ್ಲಿ ಒಂದು ಅಫಜಲ್ಪುರ. ಕಲಬುರಗಿ ಪಟ್ಟಣದಿಂದ 55 ಕಿಲೋ ಮೀಟರ್ ದೂರದಲ್ಲಿದೆ. ತಾಲೂಕು ಕೇಂದ್ರವೂ ಆಗಿರುವ ಅಫಜಲ್ಪುರ ಸಣ್ಣ ಪಟ್ಟಣವಾಗಿ ಗುರುತಿಸಿಕೊಂಡಿದೆ.
ಜೀವನದಿ ಭೀಮಾ ಮತ್ತು ಅಮರ್ಜಾ ನದಿಗಳು ಈ ತಾಲೂಕಿನಲ್ಲಿ ಹರಿಯುತ್ತವೆ. ಕಬ್ಬು, ತೊಗರಿ, ಜೋಳ, ಸೂರ್ಯಕಾಂತಿ, ಕುಸುಬೆ, ಕಡಲೆ, ಶೇಂಗಾ, ಹೆಸರು ಕಾಳನ್ನು ಈ ತಾಲೂಕಿನಲ್ಲಿ ಬೆಳೆಯಲಾಗುತ್ತದೆ. ಪ್ರಮುಖ ಸಕ್ಕರೆ ಕಾರ್ಖಾನೆಗಳೂ ತಾಲೂಕಿನಲ್ಲಿವೆ.
ಇಲ್ಲಿನ ಭೀಮಾ ಮತ್ತು ಅಮರ್ಜಾ ನದಿಗಳ ಸಂಗಮದಲ್ಲಿರುವ ಮರ್ಜಿ ಪೀರ್ ದರ್ಗಾ, ನಂದರ್ಗಾದ ರೇವಣ ಸಿದ್ದೇಶ್ವರ ದೇವಾಲಯ, ಅಫಜಲ್ಪುರದ ಸಿದ್ದರಾಮೇಶ್ವರ ಜಾತ್ರೆ, ಅಫ್ಜಲ್ ಖಾನ್ ಮಸೀದಿ ಪ್ರಸಿದ್ಧಿಯನ್ನು ಪಡೆದಿದೆ.

ಈ ಕ್ಷೇತ್ರದಲ್ಲಿ ಕಳೆದ ಮೂರಕ್ಕೂ ಹೆಚ್ಚು ದಶಕಗಳಿಂದ ಅಂದರೆ 1985ರಿಂದಲೂ ಮಾಲಿಕಯ್ಯ ಗುತ್ತೇದಾರ್ ತಮ್ಮ ಪಾರುಪತ್ಯವನ್ನು ಉಳಿಸಿಕೊಂಡಿದ್ದಾರೆ. ಚಾಣಾಕ್ಷ ರಾಜಕಾರಣಿ ಮಾಲಿಕಯ್ಯ ಗುತ್ತೇದಾರ್ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಗೆ ಬಂದು ಸದ್ಯ ಕಾಂಗ್ರೆಸ್ ನಲ್ಲಿ ನೆಲೆ ನಿಂತಿದ್ದಾರೆ. ಮೂರು ಪಕ್ಷಗಳಲ್ಲಿ ಗೆದ್ದ ಸಾಧನೆ ಅವರದ್ದು.
1985, 89ರಲ್ಲಿ ಕಾಂಗ್ರೆಸ್ ನಿಂದ ಗೆದ್ದ ಮಾಲಿಕಯ್ಯ ಗುತ್ತೇದಾರ್, 1994ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರು. 1999ರಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದು ಇಲ್ಲಿ ಗುತ್ತೇದಾರ್ 4ನೇ ಬಾರಿಗೆ ಗೆಲುವು ಸಾಧಿಸಿದ್ದರು.
ಆದರೆ, 2004ರಲ್ಲಿ ಮಾತ್ರ ಅವರಿಗೆ ಸೋಲು ಕಾದಿತ್ತು. ಆ ಚುನಾವಣೆಯಲ್ಲಿ ಮಾಲಿಕಯ್ಯ ಗುತ್ತೇದಾರ್ ಕಾಂಗ್ರೆಸ್ ಗೆ ಮರಳಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕಳೆದುಕೊಂಡ ಎಂ. ವೈ. ಪಾಟೀಲ್ ಜೆಡಿಎಸ್ ನಿಂದ ಸ್ಪರ್ಧಿಸಿ ಮಾಲಿಕಯ್ಯ ಗುತ್ತೇದಾರ್ ಗೆ ಸೋಲುಣಿಸಿದರು.
ಇದೊಂದು ಚುನಾವಣೆ ಬಿಟ್ಟರೆ ಮಾಲಿಕಯ್ಯ ಗುತ್ತೇದಾರರ ಸಾಮ್ರಾಜ್ಯವನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಾಗಿಲ್ಲ. 2008ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಎಂ.ವೈ ಪಾಟೀಲ್ ರನ್ನು ಸೋಲಿಸಿ ಮತ್ತೆ ಮಾಲಿಕಯ್ಯ ಗುತ್ತೇದಾರ್ ಗೆಲುವು ಸಾಧಿಸಿದ್ದರು.
ಕಳೆದ ಚುನಾವಣೆಯಲ್ಲೂ ಮಾಲಿಕಯ್ಯ ಗುತ್ತೇದಾರ್ 38 ಸಾವಿರ ಮತಗಳನ್ನು ಪಡೆದು ಆರು ಸಾವಿರ ಮತಗಳಿಂದ ಕೆಜೆಪಿಯಿಂದ ಕಣಕ್ಕಿಳಿದಿದ್ದ ಎಂ. ವೈ. ಪಾಟೀಲ್ ರನ್ನು ಸೋಲಿಸಿದ್ದರು. ಆದರೆ ಇದೇ ವೇಳೆ ಬಿಜೆಪಿ ಅಭ್ಯರ್ಥಿ 10 ಸಾವಿರ ಮತಗಳನ್ನು ಪಡೆದಿದ್ದರು ಎಂಬುದನ್ನು ಮರೆಯುವಂತಿಲ್ಲ.
ಕೆಜೆಪಿ ಬಿಜೆಪಿಯಲ್ಲಿ ವಿಲೀನವಾಗಿರುವುದರಿಂದ ಈ ಬಾರಿ ಎರಡೂ ಪಕ್ಷಗಳು ಮತಗಳು ಒಟ್ಟಾದರೆ ಮಾಲಿಕಯ್ಯ ಗುತ್ತೇದಾರ್ ಗೆ ವಿಜಯ ಮಾಲೆ ಧರಿಸುವುದು ಕಷ್ಟವಾಗಬಹುದು. ಆದರೆ ಚಾಣಾಕ್ಷ ರಾಜಕಾರಣಿ ಗುತ್ತೇದಾರ್ ಅಷ್ಟು ಸುಲಭಕ್ಕೆ ಸೋಲೊಪ್ಪಿಕೊಳ್ಳುವವರಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ನ್ನು ಕೂಡ ನಿರ್ಲಕ್ಷಿಸುವಂತಿಲ್ಲ. ಹೀಗಾಗಿ ಇಲ್ಲಿ ತ್ರಿಕೋನ ಸ್ಪರ್ಧೆ ಇದೆ.












Click it and Unblock the Notifications