ಹೆಬ್ಬಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ವೈ ಎ.ನಾರಾಯಣಸ್ವಾಮಿ ಸಂದರ್ಶನ
Recommended Video

2013ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದ ಬಿಜೆಪಿ ಅಭ್ಯರ್ಥಿ ಜಗದೀಶ್ ಕುಮಾರ್ ಅವರು ಅಕಾಲಿಕ ಮರಣಕ್ಕೆ ತುತ್ತಾದ ನಂತರ 2016ರಲ್ಲಿ ಉಪಚುನಾವಣೆ ನಡೆದು, ಬಿಜೆಪಿಯ ಡಾ. ವೈ ಎ.ನಾರಾಯಣಸ್ವಾಮಿ ಜಯಭೇರಿ ಬಾರಿಸಿದ್ದರು.
ಶಾಸಕರಾಗಿ ಆಯ್ಕೆಯಾಗಿ ಇದ್ದ ಅಲ್ಪ ಸಮಯದಲ್ಲೇ ಜನಸ್ನೇಹಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎನ್ನುವ ಹೆಗ್ಗಳಿಕೆಯ ನಾರಾಯಣಸ್ವಾಮಿ ಅವರು ಪುನರ್ ಆಯ್ಕೆ ಬಯಸಿದ್ದು, ಕಾಂಗ್ರೆಸ್ನಿಂದ ಭೈರತಿ ಸುರೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ಜೆಡಿಎಸ್ ನಿಂದ ಹನುಮಂತೇ ಗೌಡ್ರು ಕಣದಲ್ಲಿದ್ದಾರೆ.
ಕ್ಷೇತ್ರದ ಸಮಸ್ಯೆ ಮತ್ತು ಪ್ರಸಕ್ತ ಚುನಾವಣೆಯ ಬಗ್ಗೆ ನಾರಾಯಣಸ್ವಾಮಿ, 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಂತಿದೆ..
ಪ್ರ: ಚುನಾವಣಾ ಆಖಾಡ ಸಿದ್ದವಾಗಿದೆ, ಹೇಗಿದೆ ಹೆಬ್ಬಾಳದ ರಾಜಕೀಯ, ಕಳೆದ ಬಾರಿಗೆ ಹೋಲಿಸಿದರೆ, ಪ್ರಭಲ ಎದುರಾಳಿ ಇದ್ದಾರಲ್ಲಾ?
ನಾ.ಸ್ವಾಮಿ: ಹೆಬ್ಬಾಳದಲ್ಲಿ ಜನ ರಾಜಕೀಯ ಅಂತ ಯಾವತ್ತೂ ಭಾವಿಸಿಯೇ ಇಲ್ಲ. ಕ್ಷೇತ್ರದ ಮತದಾರರು ಸಂಭಾವಿತರು, ಸಜ್ಜನರು, ವಿದ್ಯಾವಂತರು ಮತ್ತು ಶಾಂತಿಪ್ರಿಯರು. ಹೆಬ್ಬಾಳದ ಜನ ಒಳ್ಳೆಯ ಅಭ್ಯರ್ಥಿಯನ್ನೇ ಆಯ್ಕೆ ಮಾಡಲು ಯಾವಾಗಲೂ ಆಸೆ ಪಡುತ್ತಾರೆ.

2016ರಲ್ಲಿ ನಡೆದ ಉಪಚುನಾವಣೆಯಲಿ ಗೆಲುವು
ಪ್ರ: 2016ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಅಂತರ ಹೆಚ್ಚಿತ್ತು. ಇದು ಜಗದೀಶ್ ಕುಮಾರ್ ಅವರ ಅಕಾಲಿಕ ನಿಧನದ ಅನುಕಂಪದ ಅಲೆಯಾ?
ನಾ.ಸ್ವಾಮಿ: 2016ರ ಚುನಾವಣೆಯಲ್ಲಿ ಇಪ್ಪತ್ತು ಸಾವಿರ ಮತಗಳ ಅಂತರದಿಂದ ನಾವು ಗೆದ್ದಿದ್ದೆವು. ನರೇಂದ್ರ ಮೋದಿಯವರ ಪ್ರಭಾವ, ದೇಶದ ಪ್ರಗತಿ, ಕಾಂಗ್ರೆಸ್ ಸರಕಾರ ಆ ಮೂರು ವರ್ಷದಲ್ಲಿ ನೀಡಿದ ದುರಾಡಳಿತದಿಂದ ಜನ ರೊಚ್ಚಿಗೆದ್ದಿದ್ದರು.
ಇಡೀ ಸರಕಾರ ಹೆಬ್ಬಾಳದಲ್ಲಿ ಬಂದು ಠಿಕಾಣಿ ಹೂಡಿದರೂ, ಕಾಂಗ್ರೆಸ್ ಅಭ್ಯರ್ಥಿಯನ್ನು ರಿಜೆಕ್ಟ್ ಮಾಡಿ, ಬಿಜೆಪಿಯನ್ನು ಬೆಂಬಲಿಸಲು ಮತದಾರ ಮಾನಸಿಕವಾಗಿ ಸಜ್ಜಾಗಿದ್ದರು. ಅದಕ್ಕೋಸ್ಕರ ಅಷ್ಟು ಮಾರ್ಜಿನ್ ಜಾಸ್ತಿ ಆಗಿದ್ದು.

ಜನ ವಸತಿ ಪ್ರದೇಶದ ಬಳಿಯಿಂದಲೇ ಹಾದು ಹೋಗುವ ರೈಲ್ವೆ ಹಳಿ
ಪ್ರ: ಕ್ಷೇತ್ರದ ಪ್ರಮುಖ ಸಮಸ್ಯೆ, ಸ್ವಚ್ಚತೆ, ಜನ ವಸತಿ ಪ್ರದೇಶದ ಬಳಿಯಿಂದಲೇ ರೈಲ್ವೆ ಹಳಿ ಹಾದು ಹೋಗುವುದು, ಇದಕ್ಕೆ ಪ್ಲ್ಯಾನ್ ಏನಾದ್ರೂ ನೀವು ಸಿದ್ದಪಡಿಸಿಕೊಂಡಿದ್ದೀರಾ?
ನಾ.ಸ್ವಾಮಿ: ನನಗೆ ಸ್ವಚ್ಚ, ಸುಂದರ, ಸಾಂಸ್ಕೃತಿಕ ಮತ್ತು ಸುರಕ್ಷಿತ ಹೆಬ್ಬಾಳ ಆಗಬೇಕೆನ್ನುವುದು ಆಸೆ. ಆ ನಿಟ್ಟಿನಲ್ಲಿ ಸ್ವಚ್ಚತೆಗೆ ಹೆಚ್ಚಿನ ಒತ್ತನ್ನು ಕೊಟ್ಟಿದ್ದೇವೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಿಜೆಪಿ ಕಾರ್ಪೋರೇಟರ್ ಇರುವ ವಾರ್ಡುಗಳಲ್ಲಿ ಕಸವಿಂಗಡಣೆ ಮತ್ತು ವಿಲೇವಾರಿಗೆ ಆದ್ಯತೆಯನ್ನು ನೀಡಲಾಗಿದೆ.
ಆದರೆ, ಕೆಲವೊಂದು ವಾರ್ಡುಗಳಲ್ಲಿ ಅದಕ್ಕೆ ಹೆಚ್ಚಿನ ಒತ್ತು ನೀಡದೇ ಇರುವುದರಿಂದ ಸಮಸ್ಯೆಯಿದೆ. ಪ್ರತೀ ರಸ್ತೆ ಕ್ಲೀನ್ ಆಗಬೇಕು, ಪ್ರತೀ ಮನೆಯಲ್ಲೂ ಕಸ ವಿಂಗಡಣೆಯಾಗಬೇಕು ಎನ್ನುವ ಸೂಚನೆಯನ್ನು ನೀಡಿದ್ದೇನೆ. ಇಲ್ಲಿನ ಕಸ ವಿಲೇವಾರಿ ಪದ್ದತಿಯನ್ನು scientific ಆಗಿ ತರಬೇಕು ಎನ್ನುವ ಆಸೆಯಿದೆ. solid waste management ಅನ್ನು ವೈಜ್ಞಾನಿಕವಾಗಿ ಜಾರಿಗೆ ತರಬೇಕು ಎನ್ನುವ ಗುರಿಯಿದೆ. ಅದನ್ನು ಮಾಡೇ ಮಾಡುತ್ತೇನೆ.

25 ತಿಂಗಳು ಶಾಸಕನಾಗಿ ಸೇವೆ ಸಲ್ಲಿಸಿದ್ದೇನೆ
ಪ್ರ: ಈ ಬಾರಿಯ ಚುನಾವಣೆಯಲ್ಲಿ ಮತದಾರರ ಮುಂದೆ ಹೋಗಲು ನಿಮಗಿರುವ ಪ್ರಮುಖ ಅಸ್ತ್ರ ಯಾವುದು?
ನಾ.ಸ್ವಾಮಿ: ನಾನು 25 ತಿಂಗಳು ಶಾಸಕನಾಗಿ ಸೇವೆ ಸಲ್ಲಿಸಿದ್ದೇನೆ, ಈ ಅವಧಿಯಲ್ಲಿ ಹೆಬ್ಬಾಳವನ್ನು ಅಭಿವೃದ್ದಿ ಮಾಡಿದ ರೀತಿ, ನನ್ನ ಕ್ಷೇತ್ರದ ನಾಲ್ಕು ಬಿಜೆಪಿ ಕಾರ್ಪೋರೇಟರುಗಳ ಕೆಲಸ, ಜೊತೆಗೆ ಬಿಜೆಪಿ ಶಾಸಕರು ಇಲ್ಲಿ ಇದ್ದಾಗ (ಕಟ್ಟಾ ಸುಬ್ರಮಣ್ಯ ನಾಯ್ಡು, ಜಗದೀಶ್ ಕುಮಾರ್) ಅಲ್ಲಿಂದ ಇಲ್ಲಿಯ ತನಕದ ಅಭಿವೃದ್ದಿಯ ಕೆಲಸ. 2008ರಿಂದ ಈಚೆಗೆ ಮಾತ್ರ ಹೆಬ್ಬಾಳ ಕ್ಷೇತ್ರದಲ್ಲಿ ಆಗಿರುವಂತದ್ದು.
ನಮ್ಮ ಬಳಿ ಬಹಳ ಅಸ್ತ್ರಗಳಿವೆ, ನಾನು ನೆಗೆಟಿವ್ ಮಾತನಾಡೋಲು ಹೋಗುವುದಿಲ್ಲ. ಪಾಸಿಟಿವ್ ಆಗಿ ನಾವು ಮಾಡಿದ ಒಳ್ಳೆಯ ಕೆಲಸಗಳನ್ನು ಹೇಳಲು ದಿನಗಳೇ ಸಾಲದು. ಅದನ್ನೆಲ್ಲಾ ಮುಂದಿಟ್ಟುಕೊಂಡು ನಾನು ಚುನಾವಣೆಗೆ ಹೋಗುತ್ತೇವೆ. ಒಳ್ಲೆಯ ಮನಸ್ಥಿತಿಯ ಹೆಬ್ಬಾಳ ಕಟ್ಟಬೇಕು ಎನ್ನುವುದು ನನ್ನ ಆಸೆ.

ಸಿದ್ದರಾಮಯ್ಯ ಕೌಂಟ್ ಡೌನ್ ಶುರು: ಬಿಜೆಪಿ ಅಭ್ಯರ್ಥಿ ಸಂದರ್ಶನ
ಪ್ರ: ಮುಖ್ಯಮಂತ್ರಿಗಳು ಎರಡು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ, ಪ್ರತಿಪಕ್ಷದ ಶಾಸಕರಾಗಿ ನಿಮ್ಮ ಅಭಿಪ್ರಾಯವೇನು?
ನಾ.ಸ್ವಾಮಿ: 1999ರಲ್ಲಿ ಎಸ್ ಎಂ ಕೃಷ್ಣ ಅಧಿಕಾರಕ್ಕೆ ಬಂದರು ಮತ್ತು 2004ಕ್ಕೆ ಅವರ ಅಧಿಕಾರ ಅಂತ್ಯವಾಯಿತು. ಮದ್ದೂರಿನಿಂದ ಚಾಮರಾಜಪೇಟೆಗೆ ಬಂದರು, ಕಾಂಗ್ರೆಸ್ಸಿನ ಗತಿ ಏನಾಯಿತು, ಇಡೀ ರಾಜ್ಯಕ್ಕೆ ಗೊತ್ತು. ಅದೇ ಗತಿ ಸಿದ್ದರಾಮಯ್ಯನವರ ಕಾಂಗ್ರೆಸ್ ಶಾಸಕರಿಗೆ ಬರುತ್ತೆ.
ಸಿದ್ದರಾಮಯ್ಯನವರು ಯಾವಾಗ ಎರಡು ಕ್ಷೇತ್ರಗಳಲ್ಲಿ ನಿಲ್ಲುವ ನಿರ್ಧಾರಕ್ಕೆ ಬಂದರೋ, ಅದು ಅವರ ನೈತಿಕ ಸ್ಥೈರ್ಯ ಕುಸಿದು ಹೋಗಿರುವ ಸಂಕೇತ. ಎಲ್ಲೂ ಗೆಲ್ಲುವುದಿಲ್ಲ ಎನ್ನುವ ಭಯ ಅವರಿಗೆ ಕಾಡುತ್ತಿದೆ. ಇದು ಬಿಜೆಪಿಗೆ ಬಹಳ ಒಳ್ಳೆಯ ಬೆಳವಣಿಗೆ. ಬಿಜೆಪಿ ಸರಕಾರ ರಚಿಸುತ್ತದೆ, ಬಾದಾಮಿಯಲ್ಲಿ ನಾಮಿನೇಶನ್ ಸಿಎಂ ಫೈಲ್ ಮಾಡಿದ ಮೇಲೆ, ಕಾಂಗ್ರೆಸ್ಸಿಗರ ಕೌಂಟ್ 50ಕ್ಕಿಂತ ಕಮ್ಮಿ ಬಂದರೆ ಆಶ್ಚರ್ಯವಿಲ್ಲ.
ವೀರಪ್ಪ ಮೊಯ್ಲಿಯವರ ಸಿಎಂ ಅವಧಿ ಮುಗಿದು ಹೋದಾಗ ಕಾಂಗ್ರೆಸ್ಸಿಗೆ ಬರೀ 36 ಸೀಟು ಗೆಲ್ಲಿಸಿ ಹೋಗಿದ್ದರು. ಸಿದ್ದರಾಮಯ್ಯನವರ ದೌರ್ಜನ್ಯ ನೋಡಿದರೆ, ವೀರಪ್ಪ ಮೊಯ್ಲಿಯವರಿಗೆ ಆದ ಸ್ಥಿತಿಯೇ ಸಿದ್ದರಾಮಯ್ಯನವರಿಗೆ ಆಗಲಿದೆ.

ಅದ್ಯಾವ ಆಟನೂ ಹೆಬ್ಬಾಳದಲ್ಲಿ ನಡೆಯೋದಿಲ್ಲ, ಇಲ್ಲಿನ ಮತದಾರ ಸ್ವಾಭಿಮಾನಿ.
ಪ್ರ: ಈ ಬಾರಿ ಚುನಾವಣೆಯಲ್ಲಿ ಹಣದ ಪ್ರಭಾವ ಮೇಲುಗೈ ಸಾಧಿಸಬಹುದಾ?
ನಾ.ಸ್ವಾಮಿ: ಕಾಂಗ್ರೆಸ್ ಅಭ್ಯರ್ಥಿಯ ಆಸ್ತಿ 2012ರಲ್ಲಿ 116 ಕೋಟಿ, 2018ರಲ್ಲಿ ಮುನ್ನೂರು ಕೋಟಿ ಜಾಸ್ತಿಯಾಗಿದೆ. ಇದಕ್ಕೆ ಕಾರಣ, ಸಿದ್ದರಾಮಯ್ಯನವರ ಸರಕಾರ ಕಾರಣ. ಯಾಕೆಂದರೆ ಅವರು ಸಿಎಂ ಅವರ ಆಪ್ತ, ಕಿಚನ್ ಕ್ಯಾಬಿನೆಟ್ ಸದಸ್ಯ.
ಇದು ಅವರ ವೈಯಕ್ತಿಕ ದುಡ್ಡು ಅಲ್ಲ, ಸರಕಾರದ ಪ್ರಭಾವವನ್ನು ಬಳಸಿಕೊಂಡು ಮಾಡಿರುವಂತಹ ಲೂಟಿ. ಈ ದುಡ್ಡಿನಿಂದ ರಾಜ್ಯದ ಎಲ್ಲಾ ಕಡೆ ಚುನಾವಣೆ ಗೆಲ್ಲಲು ಬಳಸಿಕೊಳ್ಳಲಾಗುತ್ತದೆ. ಏನಾದರೂ ಮಾಡಿ, ಎಷ್ಟಾದರೂ ಖರ್ಚು ಮಾಡಿ ಚುನಾವಣೆ ಗೆದ್ದು ಬನ್ನಿ ಎಂದು ಖುದ್ದು ಸಿದ್ದರಾಮಯ್ಯನವರೇ ಹೇಳಿದ್ದಾರೆನ್ನುವ ವಿಚಾರ ನಮಗೆ ಗೊತ್ತಾಗಿದೆ. ಅದ್ಯಾವ ಆಟನೂ ಹೆಬ್ಬಾಳದಲ್ಲಿ ನಡೆಯೋದಿಲ್ಲ, ಇಲ್ಲಿನ ಮತದಾರ ಸ್ವಾಭಿಮಾನಿ.

ಮತದಾನದ ಪ್ರಾಮುಖ್ಯತೆಯ ಅರಿವು ಮೂಡಿಸುವ ಕೆಲಸ
ಪ್ರ: ಸೆಕೆಂಡ್ ಸಾಟರ್ಡೇ ಚುನಾವಣೆ ನಡೆಯುತ್ತಿದೆ. ಮತದಾನದ ಪ್ರಾಮುಖ್ಯತೆಯ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆಯಾ?
ನಾ.ಸ್ವಾಮಿ: ನಾವು ಮತ್ತು ಚುನಾವಣಾ ಆಯೋಗವೂ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಊರಿಗೆ ಹೋಗುವವರಿಗೆ ಮನವೊಲಿಸಿ, ಬೆಳಗ್ಗೆ ಏಳು ಗಂಟೆಗೆ ಚುನಾವಣೆ ಆರಂಭವಾಗುತ್ತದೆ. ಮತ ಚಲಾಯಿಸಿ ನಿಮ್ಮನಿಮ್ಮ ಕೆಲಸಗಳನ್ನು ಮಾಡಿ ಎಂದು ಮನವಿ ಮಾಡುತ್ತಿದ್ದೇವೆ. ಜನರೂ ಉತ್ಸಾಹದಿಂದ ಇದ್ದಾರೆ. ನನ್ನ ಕ್ಷೇತ್ರದಲ್ಲಿ ಶೇ. 60 ಮತದಾನ ಆಗಬಹುದು ಎನ್ನುವುದು ನನ್ನ ಲೆಕ್ಕಾಚಾರ.

ಹಿರಿಯರ ತೀರ್ಮಾನ ಸರಿಯಾಗಿಯೇ ಇದೆ, ಅದನ್ನೆಲ್ಲಾ ನಿಭಾಯಿಸುವ ಶಕ್ತಿ ಬಿಜೆಪಿಗಿದೆ
ಪ್ರ: ವರುಣಾ ಕ್ಷೇತ್ರದ ವಿದ್ಯಮಾನ, ಬಿಜೆಪಿಗೆ ಹಿನ್ನಡೆಯಾಗುತ್ತದಾ?
ನಾ.ಸ್ವಾಮಿ: ಇದರ ಪರಿಣಾಮ ಎಲ್ಲೂ ಬೀರುವುದಿಲ್ಲ, ನಮ್ಮ ಹಿರಿಯರ ತೀರ್ಮಾನ ಸರಿಯಾಗಿಯೇ ಇದೆ. ಅದನ್ನೆಲ್ಲಾ ನಿಭಾಯಿಸುವ ಶಕ್ತಿ ಬಿಜೆಪಿಗಿದೆ.
ಪ್ರ: ಈ ಬಾರಿ ಮೋದಿ, ಅಮಿತ್ ಶಾ, ಬಿಎಸ್ವೈ ಎಲ್ಲಾ ಇದ್ದಾರೆ, ಬಿಜೆಪಿಗೆ ಪೂರಕ ವಾತಾವರಣವಿದೆಯಾ?
ನಾ.ಸ್ವಾಮಿ: 2013ರಲ್ಲಿ ಬಿಜೆಪಿ ಮೂರು ಭಾಗವಾಗಿತ್ತು. ನಾವೆಲ್ಲರೂ ಒಟ್ಟಿಗಿದ್ದರೆ, ಸಿದ್ದರಾಮಯ್ಯನವರು ಜನ್ಮದಲ್ಲಿ ಸಿಎಂ ಆಗುತ್ತಿರಲಿಲ್ಲ. ನಾವು ಮಾಡಿದ ತಪ್ಪಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈ ಸಲ ಎಲ್ಲರೂ ಒಟ್ಟಾಗಿದ್ದೇವೆ, ಒಗ್ಗಟ್ಟಾಗಿದ್ದೇವೆ, ವಿಶ್ವಾಸದಿಂದಿದ್ದೇವೆ. ಜಾತ್ಯಾತೀತವಾಗಿ ನಮಗೆ ಮತದಾರ ಆಶೀರ್ವದಿಸಲಿದ್ದಾನೆ. ಯಡಿಯೂರಪ್ಪ ಸಿಎಂ ಆಗಲಿದ್ದಾರೆ.

ಪ್ರ: ಹೆಬ್ಬಾಳದ ಮತದಾರರಿಗೆ ನಿಮ್ಮ ಮನವಿ?
ನಾ.ಸ್ವಾಮಿ: ಕಳೆದ 25 ತಿಂಗಳು ನಿಮ್ಮ ಮನೆಯ ಹುಡುಗನಾಗಿ ಕೆಲಸ ಮಾಡಿದ್ದೇನೆ. ಹಿರಿಯರಿಗೆ ಕಿರಿಯನಾಗಿ, ಸ್ನೇಹಿತನಾಗಿ ದುಡಿದಿದ್ದೇನೆ. ಮತದಾರರ ಖುಣ ನನ್ನ ತಲೆಯ ಮೇಲಿದೆ. ನನ್ನ ಖುಣ ನಿಮ್ಮ ಮನೆಯಲ್ಲಿದೆ. ದಯವಿಟ್ಟು ನಾನು ಮಾಡಿದ ಕೆಲಸವನ್ನು ಪರಿಗಣಿಸಿ ಕೂಲಿ ಕೊಡಿ.
ಪ್ರ: ಬಿಪ್ಯಾಕ್ ನಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದೀರಾ?
ನಾ.ಸ್ವಾಮಿ: ಬಿಪ್ಯಾಕ್ ಒಂದು ಪ್ರತಿಷ್ಟಿತ ಸಂಸ್ಥೆ. ಮೋಹನ್ ದಾಸ್ ಪೈ, ನಂದನ್ ನಿಲೇಕಣಿ, ಕಿರಣ ಮಜುಂದಾರ್ ಶಾ ಮುಂತಾದವರು ಇದನ್ನು ಹುಟ್ಟುಹಾಕಿದ್ದಾರೆ. ಈ ಸಮೀಕ್ಷೆಯಲ್ಲಿ ಬೆಂಗಳೂರಿನ 28 ಶಾಸಕರ ಪೈಕಿ ನನಗೆ ಎರಡನೇ ಸ್ಥಾನ, ಬಿಜೆಪಿ ಅಭ್ಯರ್ಥಿಗಳ ಪೈಕಿ ನಂಬರ್ ಒನ್ ಆಗಿದ್ದೇನೆ. ಶೇ. 78ರಷ್ಟು ಮತ ನನಗೆ ಬಂದಿದೆ.












Click it and Unblock the Notifications