ಶಿಕ್ಷಣ ಇಲಾಖೆಯ ಒಂದು ಆದೇಶದಿಂದ ಖಾಸಗಿ ಶಾಲೆಗಳಿಗೆ ದುಃಸ್ಥಿತಿ
ಬೆಂಗಳೂರು, ಆ. 17: ಒಂದೆಡೆ ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆ ತೆರೆಯಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮತ್ತೊಂದೆಡೆ ಶಾಲಾ ಶುಲ್ಕ ವಿಚಾರವಾಗಿ ಖಾಸಗಿ ಶಾಲೆಗಳು ಹಾಗೂ ಪೋಷಕರ ನಡುವೆ ಘರ್ಷಣೆಗೆ ನಾಂದಿ ಹಾಡುವ ಆದೇಶವನ್ನು ಶಿಕ್ಷಣ ಇಲಾಖೆ ಹೊರಡಿಸಿದೆ. ಇದು ಮತ್ತೆ ರಾಜ್ಯದಲ್ಲಿ ಶಾಲಾ ಶುಲ್ಕ ವಿವಾದಕ್ಕೆ ನಾಂದಿ ಹಾಡಿದೆ.
ಖಾಸಗಿ ಶಾಲೆಗಳಲ್ಲಿ ಓದಿರುವ ಮಕ್ಕಳಿಗೆ ಶಾಲ ಶುಲ್ಕ ಪಾವತಿ ಮಾಡದಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವರ್ಗಾವಣೆ ಪತ್ರ ಪಡೆಯಲು ಅವಕಾಶ ಕಲ್ಪಿಸಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದಾರೆ. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರ ಈ ಸೂಚನೆ ಮತ್ತೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.
ಖಾಸಗಿ ಶಾಲೆಗಳಲ್ಲಿ ಓದಿರುವ ಮಕ್ಕಳಿಗೆ ಅವರು ಬಯಸಿದರೆ ಕಡ್ಡಾಯವಾಗಿ ವರ್ಗಾವಣೆ ಪತ್ರವನ್ನು ಕೊಡಬೇಕು. ಶಾಲಾ ಶುಲ್ಕ ಬಾಕಿ ಉಳಿಸಿಕೊಂಡಿದ್ದರೆ, ಪೊಲೀಸ್ ದೂರು ಕೊಟ್ಟು ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ವಸೂಲಿ ಮಾಡಲಿ. ಆದರೆ ವರ್ಗಾವಣೆ ಪತ್ರವನ್ನು ಬಯಸಿದರೆ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಕೊಡಬೇಕು ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವರ್ಗಾವಣೆ ಪತ್ರ ಪಡೆದು ಶಾಲಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ಕೊಡುವ ಪ್ರಕ್ರಿಯೆ ಸದ್ದಿಲ್ಲದೆ ಆರಂಭವಾಗಿದೆ. ಶಿಕ್ಷಣ ಇಲಾಖೆಯ ಈ ಆದೇಶದ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು ತಿರುಗಿ ಬಿದ್ದಿವೆ.

ನಿಯಮ ಬಾಹಿರ ಆದೇಶದಿಂದ ಅರ್ಥಿಕ ದಿವಾಳಿ
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿದ್ಯಾರ್ಥಿಗಳ ವರ್ಗಾವಣೆ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನೀಡುವುದಾದರೆ ಖಾಸಗಿ ಶಾಲೆಗಳು ಏಕೆ ಬೇಕು? ಪ್ರಧಾನ ಕಾರ್ಯದರ್ಶಿಗಳು ನೀಡಿರುವ ಸೂಚನೆ ಖಾಸಗಿ ಶಾಲೆಗಳನ್ನು ಆರ್ಥಿಕ ದಿವಾಳಿ ಮಾಡಲಿವೆ. ಕೊರೊನಾವೈರಸ್ ಸೋಂಕುನಿಂದ 2019ನೇ ಶೈಕ್ಷಣಿಕ ಸಾಲಿನಿಂದಲೂ ಪೋಷಕರು ಶಾಲಾ ಶುಲ್ಕ ಪಾವತಿ ಮಾಡಿಲ್ಲ. ಕಳೆದ ವರ್ಷವೂ ಶುಲ್ಕ ಪಾವತಿ ಮಾಡಿಲ್ಲ.
ವರ್ಗಾವಣೆ ಪತ್ರವನ್ನು ಸರ್ಕಾರವೇ ಕೊಟ್ಟು ಕಳಿಸುವುದಾದರೆ, ಶಾಲಾ ಶುಲ್ಕ ವಸೂಲಿ ಹೇಗೆ ಮಾಡಬೇಕು? ಖಾಸಗಿ ಶಾಲೆಗಳು ಶಾಲಾ ಶುಲ್ಕ ಇಲ್ಲದೇ ನಡೆಸಲು ಸರ್ಕಾರ ಏನಾದರೂ ಅನುದಾನ ನೀಡುತ್ತದೆಯೇ? ಶಾಲಾ ಶುಲ್ಕ ವಿಚಾರವಾಗಿ ಪೋಷಕರ ವಿರುದ್ಧ ಶಾಲಾ ಆಡಳಿತ ಮಂಡಳಿಗಳು ಪೊಲೀಸ್ ಠಾಣೆಗೆ ದೂರು ಕೊಡಲು ಸಾಧ್ಯವೇ? ಶಿಕ್ಷಣ ಇಲಾಖೆಯ ಜವಾಬ್ದಾರಿ ಏನು ಎಂಬುದನ್ನು ಹಿರಿಯ ಅಧಿಕಾರಿಗಳು ಆದೇಶ ಮಾಡುವ ಮುನ್ನ ಅರ್ಥ ಮಾಡಿಕೊಳ್ಳಬೇಕು. ಈ ಆದೇಶದಿಂದ ಮತ್ತೆ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಘರ್ಷಣೆ ಉಂಟಾಗಲಿದೆ. ಇದರ ವಿರುದ್ಧ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುರೇಶ್ ಕುಮಾರ್ ಹಾದಿಯಲ್ಲಿ ಹೊಸ ಶಿಕ್ಷಣ ಮಂತ್ರಿ
ಇನ್ನು ಶಾಲಾ ಶುಲ್ಕ ಪಾವತಿ ವಿಚಾರವಾಗಿ ನೂತನ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಕೂಡ ನಿನ್ನೆ ಸ್ಪಷ್ಟನೆ ನೀಡಿದ್ದಾರೆ. ಪಾಲಕ ಪೋಷಕರು ಶಾಲೆಗಳಿಗೆ ಗ್ರಾಹಕರು ಅಲ್ಲ. ಶಾಲಾ ಶುಲ್ಕ ವಿಚಾರವಾಗಿ ಯಾರೂ ಪೀಡಿಸಬಾರದು ಎಂದು ಹಳೇ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ದಾಟಿಯಲ್ಲಿಯೇ ಹೇಳಿಕೆ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ರಾಜ್ಯದಲ್ಲಿ ಮತ್ತೆ ಶಾಲಾ ಶುಲ್ಕ ಪಾವತಿ ವಿಚಾರದಲ್ಲಿ ಗೊಂದಲ ಏರ್ಪಟ್ಟಿದೆ. ಶಿಕ್ಷಣ ಇಲಾಖೆಯ ಈ ನೀತಿಗಳು ಕೇವಲ ರಾಜ್ಯ ಪಠ್ಯ ಕ್ರಮದ ಶಾಲೆಗಳು ಬಾಗಿಲು ಮುಚ್ಚುವಂತಹ ವಾತಾವರಣ ನಿರ್ಮಾಣವಾಗುತ್ತಿವೆ.

ಕೇಂದ್ರ ಪಠ್ಯ ಕ್ರಮದ ಶಾಲೆಗಳ ಬಗ್ಗೆ ಸೊಲ್ಲೆತ್ತಲ್ಲ
ಸಿಬಿಎಸ್ಇ, ಐಸಿಎಸ್ಇ ಕೇಂದ್ರ ಪಠ್ಯ ಕ್ರಮದ ಕಾರ್ಪೋರೇಟ್ ಶಾಲೆಗಳು ರಾಜ್ಯ ಸರ್ಕಾರದ ಒಂದು ನಿಯಮವನ್ನು ಪಾಲಿಸಿಲ್ಲ. ಶಾಲಾ ಶುಲ್ಕದಲ್ಲಿ ಐದು ರೂಪಾಯಿ ಕೂಡ ಕಡಿಮೆ ಮಾಡಲಿಲ್ಲ. ಅದೇ ರಾಜ್ಯ ಪಠ್ಯ ಕ್ರಮದ ಶಾಲೆಗಳು ಕೇವಲ ಟ್ಯೂಷನ್ ಶುಲ್ಕ ಮಾತ್ರ ಪಡೆಯಬೇಕು. ಅದರಲ್ಲಿ ಶೇ. 30 ರಷ್ಟು ಶುಲ್ಕ ಕಡಿಮೆ ಮಾಡಬೇಕು ಎಂದು ಮಾಜಿ ಶಿಕ್ಷಣ ಮಂತ್ರಿ ಆದೇಶ ಹೊರಡಿಸಿದ್ದರು. ಇದು ರಾಜ್ಯದಲ್ಲಿ ದೊಡ್ಡ ವಿವಾದಕ್ಕೆ ನಾಂದಿ ಹಾಡಿತು. ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿ ದೊಡ್ಡ ತಿಕ್ಕಾಟಕ್ಕೆ ಕಾರಣವಾಗಿತ್ತು.ಈ ಗೊಂದಲದ ನಡುವೆ ಬಹುತೇಕರು ಶಾಲಾ ಶುಲ್ಕ ಪಾವತಿ ಮಾಡಿರಲಿಲ್ಲ.

ವಿಷ ಕೊಟ್ಟರೂ ಕುಡಿತೀವಿ
ಕಳೆದ ಮೂರು ವರ್ಷದಿಂದ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಒಳಗಾಗಿವೆ. ಅದರಲ್ಲೂ 200 ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳನ್ನು ನಿರ್ವಹಣೆ ಮಾಡಲಾಗದೇ ನೂರಾರು ರಾಜ್ಯ ಪಠ್ಯ ಕ್ರಮದ ಶಾಲೆಗಳು ಮುಚ್ಚಿವೆ. ಶಾಲಾ ಶುಲ್ಕ ವಿಚಾರವಾಗಿ ಸರ್ಕಾರ ನಡೆದುಕೊಂಡ ರೀತಿಗೆ ಪಾಲಕರು ಮತ್ತು ಶಿಕ್ಷಣ ಸಂಸ್ಥೆಗಳು ಘರ್ಷಣೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ಬಹುತೇಕರು ಶಾಲಾ ಶುಲ್ಕವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಇದೀಗ ವರ್ಗಾವಣೆ ಪತ್ರಗಳನ್ನು ಶಿಕ್ಷಣ ಇಲಾಖೆ ಕೊಡುವುದಾದರೆ ಖಾಸಗಿ ಶಾಲೆಗಳ ಪರಿಸ್ಥಿತಿ ಏನಾಗಬೇಕು. ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ವೇತನ ಹೇಗೆ ಪಾವತಿ ಮಾಡಬೇಕು ಎಂದು ಖಾಸಗಿ ಶಾಲೆಯ ಮುಖ್ಯಸ್ಥರಾದ ಶ್ರೀಧರ್ ಪ್ರಶ್ನಿಸುತ್ತಾರೆ.

ಹಾವೂ ಸಾಯಬಾರದು- ಕೋಲು ಮುರಿಯಬಾರದು
ಕೊರೊನಾ ಬಳಿಕ ರಾಜ್ಯ ಶಿಕ್ಷಣ ಇಲಾಖೆ ಹೊರಡಿಸುತ್ತಿರುವ ಅದೇಶಗಳು ಖಾಸಗಿ ಶಿಕ್ಷಣ ಕ್ಷೇತ್ರದ ವ್ಯವಸ್ಥೆಯನ್ನೇ ಬುಡಮೇಲು ಮಾಡಲುವಂತಿವೆ. ಕೇವಲ ಖಾಸಗಿ ಶಾಲೆಗಳಿಗೆ ಸೀಮಿತಗೊಳಿಸಿ ಅಗ್ನಿ ಸುರಕ್ಷತೆ ಮತ್ತು ಕಟ್ಟಡ ಸುರಕ್ಷತೆ ನಿಯಮ ಕಡ್ಡಾಯ ಪಾಲನೆ ಎಂದು ಆದೇಶಿಸಲಾಗಿದೆ. ಈ ಸುರಕ್ಷತಾ ನಿಯಮ ಪಾಲಿಸದಿದ್ದರೆ ಶಾಲೆ ಪರವಾನಗಿ ನವೀಕರಣ ಮಾಡಲ್ಲ ಎಂಬ ಷರತ್ತು ವಿಧಿಸಿತ್ತು. ಇದು ಭ್ರಷ್ಟಾಚಾರಕ್ಕೆ ನಾಂದಿ ಹಾಡಿ ಅನೇಕ ಶಾಲೆಗಳು ಅನಿವಾರ್ಯವಾಗಿ ಲಂಚ ಕೊಟ್ಟು ಪರವಾನಗಿ ಪಡೆಯುವಂತಾಯಿತು. ಶಾಲೆ ತೆರೆಯುವ ವಿಚಾರದಲ್ಲಿ ಸಹ ಶಿಕ್ಷಣ ಸಚಿವರು ಗೊಂದಲಾತ್ಮಕ ತೀರ್ಮಾನಗಳನ್ನು ಪ್ರಕಟಿಸಿದರು.

ಎಸ್ಎಸ್ಎಲ್ ಸಿ ಪಠ್ಯ ಕ್ರಮ ಕಡಿತ ವಿಚಾರ
ಎಸ್ಎಸ್ಎಲ್ ಸಿ ಪಠ್ಯ ಕ್ರಮ ಕಡಿತ ವಿಚಾರದಲ್ಲಿ ಕಾಲಮಿತಿಯಲ್ಲಿ ನಿರ್ಧಾರ ಪ್ರಕಟಿಸಲಿಲ್ಲ. ಪರೀಕ್ಷೆ ಮುಂದೂಡಿಕೆ ವಿಚಾರದಲ್ಲಿ ನಾನಾ ಆದೇಶಗಳು ಹೊರ ಬಿದ್ದವು. ಹೀಗಾಗಿ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶಗಳಿಂದ ಖಾಸಗಿ ಶಿಕ್ಷಣ ಕ್ಷೇತ್ರ ಹೈರಾಣ ಆಗಿದೆ. ಇದೀಗ ಖಾಸಗಿ ಶಾಲೆಗಳ ವರ್ಗಾವಣೆ ಪ್ರಮಾಣ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಕೊಡಲು ಅವಕಾಶ ಕಲ್ಪಿಸಿದೆ. ಶುಲ್ಕ ಪಾವತಿಸದೇ ವರ್ಗಾವಣೆ ಪತ್ರಗಳನ್ನು ಸರ್ಕಾರ ಕೊಡುವುದಾದರೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಇರುವುದೇಕೆ? ಕೊರೊನಾ ಕಷ್ಟ ಕಾಲದಲ್ಲಿ ಅವರ ಪರಿಸ್ಥಿತಿ ಏನಾಗಬೇಕು ಎಂಬ ಪ್ರಶ್ನೆ ಎದ್ದಿದೆ.












Click it and Unblock the Notifications